ಲಿಂಗತ್ವ ಬಜೆಟ್ ಮೂಗಿಗೆ ತುಪ್ಪ ಸವರುವ ತಂತ್ರವೇ?
-

ಹೆಣ್ಣು ಹೆಣ್ಣಾದಡೆ ಗಂಡಿನ ಸೂತಕ
ಗಂಡುಗಂಡಾದಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದಡೆ ತನುವಿನ ಸೂತಕಕ್ಕೆ ತೆರಹುಂಟೆ
ಮುನ್ನಿಲ್ಲದ ಸೂತಕಕ್ಕೆ ಜಗ ಮರುಳಾಯಿತು.
ಚೆನ್ನಮಲ್ಲಿಕಾರ್ಜುನನೆಂಬ ಗರುವಂಗೆ ಜಗವೆಲ್ಲಾ ಹೆಣ್ಣು ನೋಡಾ.
ಅಕ್ಕಮಹಾದೇವಿಯ ಈ ವಚನ ಸ್ಥೂಲವಾಗಿ ಲಿಂಗಭೇದ ನೀತಿಯ ರಾಜಕಾರಣವನ್ನು ವಿಮರ್ಶಿಸುತ್ತದೆ. ಹೆಣ್ಣು, ಗಂಡು ಅಥವಾ ತೃತೀಯ ಲಿಂಗ ಎನ್ನುವುದೆಲ್ಲ ಮನಸ್ಸಿನ ಪರಿಭಾವನೆಗೆ ಅಂಟಿದ್ದೇ ಹೊರತು ನಿಸರ್ಗದ ಚಲನೆಯಲ್ಲಿ ಅದಕ್ಕೆ ತಾವಿಲ್ಲ. ಸೃಷ್ಟಿಯ ನಿರಂತರತೆ ಮತ್ತು ಆಹ್ಲಾದಕತೆಯ ಆಯಾಮಗಳಾದ ಲಿಂಗ ವೈವಿಧ್ಯಗಳು ತರತಮಕ್ಕೆ ಕಾರಣವಾದದ್ದು ಸಾಮಾಜಿಕ ದುರಂತ. ಆದ್ದರಿಂದಲೇ ಹೆಣ್ತನ, ಗಂಡ್ತನಗಳ ಮೇಲು ಕೀಳರಿಮೆಗಳನ್ನು ಅಕ್ಕ ಸೂತಕ ಎಂದಿದ್ದಾಳೆ. ಮನದ ಈ ಕಲ್ಮಷ ಕಳೆದುಕೊಳ್ಳದೆ ಮಾನವ ಪ್ರಪಂಚಕ್ಕೆ ಉಳಿಗಾಲವಿಲ್ಲ. ಲಿಂಗಭೇದ ನಿಲುವು-ನಡೆಗಳ ಕಾರಣಗಳು ಅಸಂಖ್ಯವಾದರೂ ಮಾನವರ ಕೈಗೆಟಕುವ ಸಂಪತ್ತಿನ ಮೇಲಿನ ಒಡೆತನವೇ ಪ್ರಧಾನವಾದುದು ಎಂಬುದರಲ್ಲಿ ಎರಡು ಮಾತಿಲ್ಲ. ಎಂಗೆಲ್ಸ್ ತನ್ನ ‘ಕುಟುಂಬ ಖಾಸಗಿ ಆಸ್ತಿ ಮತ್ತು ಪ್ರಭುತ್ವಗಳ ಉಗಮ’ ಕೃತಿಯಲ್ಲಿ ಸಾಧಾರವಾಗಿ ನಿರೂಪಿಸಿದ್ದಾನೆ.
ಹೀಗಾಗಿ ಮಹಿಳೆಯರು ಕುಟುಂಬ, ವಿವಾಹಾದಿ ಸಂಸ್ಥೆಗಳಿಂದ ವಿಮೋಚನೆಗೊಳ್ಳುವ ದಿಸೆಯಲ್ಲಿ ಆರ್ಥಿಕವಾಗಿ ಸ್ವಾವಲಂಬಿಯಾಗುವುದು ಅದರೊಟ್ಟಿಗೆ ದೇಶದ ಸಂಪತ್ತಿನಲ್ಲಿ ಸಮಾನ ಪಾಲುದಾರಿಕೆ ಹೊಂದುವುದು ಬಹು ಮುಖ್ಯವಾದ ಸಂಗತಿ. ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಹೊಂದಿರುವ ದೇಶಗಳು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಸಾಮಾಜಿಕ ಅಭಿವೃದ್ಧಿ ಮತ್ತು ಆರ್ಥಿಕ ಬೆಳವಣಿಗೆಗೆ ಲಿಂಗಸಮಾನತೆ ಪಾಲಿಸಬೇಕಾದದ್ದು ಅತ್ಯಗತ್ಯ ಎಂಬುದನ್ನು ಸಾಕ್ಷಾತ್ಕರಿಸಿಕೊಂಡಿವೆ. 1966ರಲ್ಲಿ ಪ್ರಥಮ ಬಾರಿಗೆ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಲಿಂಗಾಧಾರಿತ ಬಜೆಟ್ನ ಪರಿಕಲ್ಪನೆ ಮೊಳೆಯಿತು.
ಭಾರತವು ಸ್ವಾತಂತ್ರ್ಯ ಪಡೆದು ಅರ್ಧ ಶತಮಾನ ಕ್ರಮಿಸಿದ ನಂತರ ಸ್ತ್ರೀವಾದಿ ಚಿಂತನೆ-ಚಳವಳಿಗಳ ನಿರಂತರ ಸಂಘರ್ಷಗಳ ತರುವಾಯವೇ 2005ರಲ್ಲಿ ಕೇಂದ್ರ ಸರಕಾರ ಲಿಂಗತ್ವ ಬಜೆಟನ್ನು ಘೋಷಿಸಿತು.ಅಲ್ಲಿಂದ ಅದು ರಾಜ್ಯಗಳಿಗೂ ವಿಸ್ತರಿಸಿಕೊಂಡಿತು. ಕರ್ನಾಟಕದಲ್ಲಿಯೂ ಸರಕಾರ 2007-08ರಲ್ಲಿ ಲಿಂಗತ್ವ ಬಜೆಟನ್ನು ಘೋಷಿಸಿತು. ಅಲ್ಲಿಂದ ಇಲ್ಲಿಯವರೆಗೆ ಪ್ರತೀ ವರ್ಷ ಆಯವ್ಯಯ ಪಟ್ಟಿಯಲ್ಲಿ ಲಿಂಗತ್ವ ಬಜೆಟ್ನ್ನು ಮಂಡಿಸುತ್ತಲೇ ಬರುತ್ತಿದೆ. ಹೀಗೆ ಘೋಷಿಸುವುದು ಮಾತ್ರ ಸಾಕಾಗುವುದಿಲ್ಲ ಎಂಬ ತಥ್ಯವನ್ನು ಈಗ ನಾವು ಮನಗಂಡಿದ್ದೇವೆ. ಬಜೆಟ್ನಲ್ಲಿ ಪ್ರಧಾನವಾಗಿ ಮೂರು ಅಂಶಗಳು ಸೇರ್ಪಡೆ ಆಗಿರುತ್ತವೆ. ಮೊದಲನೆಯದು ನಿರ್ದಿಷ್ಟ ಹಣಕಾಸನ್ನು ಮೀಸಲಿಡುವುದು.
ನಿಗದಿತ ಮೊತ್ತವನ್ನು ಬಿಡುಗಡೆ ಮಾಡುವುದು. ಹೀಗೆ ಬಿಡುಗಡೆ ಆದ ಹಣವನ್ನು ಅದೇ ಉದ್ದೇಶಗಳಿಗಾಗಿ ಪೂರ್ಣ ಪ್ರಮಾಣದಲ್ಲಿ ಬಳಸುವುದು. ಕರ್ನಾಟಕದಲ್ಲಿ ಈ ಮೂರು ಅಂಶಗಳನ್ನು ತಾಳೆ ಮಾಡಿದಾಗ ಒಂದಕ್ಕೊಂದು ಸಂಬಂಧವೇ ಇಲ್ಲದಂತಹ ಸಂಗತಿಗಳು ಗೋಚರವಾಗುತ್ತಿವೆ. ಕೆಲವೊಮ್ಮೆ ಇವು ಅಂಕಿ ಸಂಖ್ಯೆಗಳ ಆಟವಾಗಿಯೇ ಕಾಣಿಸಿಕೊಂಡಿವೆ. ಉದಾಹರಣೆಗಾಗಿ ದಿನಪತ್ರಿಕೆಯೊಂದರಲ್ಲಿ ದಿ:13-12-2022ರಂದು ಪ್ರಕಟವಾದ ‘ನಿರ್ಭಯಾ ನಿಧಿ ಕಡೆಗಣನೆ’ ವರದಿಯನ್ನು ನೋಡಿದರೂ ಸಾಕು ಯಾರಿಗಾದರೂ ಲಿಂಗತ್ವ ಬಜೆಟ್ನ ಬಗೆಗೆ ಸರಕಾರಕ್ಕಿರುವ ನಿರ್ಲಕ್ಷ ಧೋರಣೆ ತಿಳಿಯದೆ ಇರದು.
ಕೇಂದ್ರ, ರಾಜ್ಯ ಸರಕಾರಗಳೇ 2014ರಿಂದ 2022 ಎಪ್ರಿಲ್ವರೆಗೆ ನಿರ್ಭಯಾ ನಿಧಿಗೆಂದು ರೂ. 9,176.65 ಕೋಟಿಯಷ್ಟು ಹಣಕಾಸು ಮೀಸಲಿಟ್ಟರೆ ಕೇಂದ್ರ ಮಂಜೂರು ಮಾಡಿದ್ದು ಕೇವಲ ರೂ. 7,418.46 ಕೋಟಿ. ಅದರಲ್ಲಿ ಬಿಡುಗಡೆಯಾದದ್ದು ರೂ. 4,480.30 ಕೋಟಿ. ಹೀಗೆ ಬಿಡುಗಡೆ ಆದ ಮೊತ್ತದಲ್ಲಿಯೂ ಬಳಕೆಯಾದದ್ದು ಕೇವಲ ರೂ. 3,140 ಕೋಟಿ ಮಾತ್ರ. ಇದರಂತೆಯೇ ಉಳಿದ ಬಾಬ್ತುಗಳು ಇವೆ. ಇದನ್ನು ಗಮನಿಸಿಯೇ 2021-22ರ ಬಜೆಟ್ ಕುರಿತಂತೆ ಸಿಎಜಿಯು ‘‘ಕರ್ನಾಟಕದ ಲಿಂಗ ಬಜೆಟ್ ಕೇವಲ ಹಂಚಿಕೆಯ ವ್ಯಾಯಾಮ’’ ಎಂದೇ ಹೇಳಿದೆ.
ಒಟ್ಟು ಹಂಚಿಕೆಗೆ ವರ್ಗ ‘ಎ’ ಹಂಚಿಕೆಯ ಶೇಕಡಾವಾರು 2017-18 ಮತ್ತು 2019-20 ಅವಧಿಯನ್ನು ಹೊರತುಪಡಿಸಿ ಬೇರೆ ಅವಧಿಯಲ್ಲಿ ಇಳಿಕೆ ಪ್ರವೃತ್ತಿಯನ್ನು ತೋರಿಸಿರುವುದು ಕೋಷ್ಟಕ-1ರಿಂದ ಗಮನಿಸಬಹುದು. (ಆಕರ- ಕರ್ನಾಟಕ ಸರಕಾರದ 2022ನೇ ವರ್ಷದ ಸಿಎಜಿ ವರದಿ ಸಂಖ್ಯೆ-1 ಪುಟ-84) ಕೇಂದ್ರದಲ್ಲಿಯೇ ಈವರೆಗೆ ಒಟ್ಟು ಮೊತ್ತದಲ್ಲಿ ಲಿಂಗಾಧಾರಿತ ಬಜೆಟ್ ಶೇ. 3ರಿಂದ 6 ಮಾತ್ರ ಇಡಲಾಗಿದೆ. ಒಟ್ಟು ಜನಸಂಖ್ಯೆಯ ಅರ್ಧದಷ್ಟಿರುವ ಮಹಿಳೆಯರ ಬದುಕನ್ನು ಎತ್ತರಿಸಲು ಸರಕಾರ ನಿಗದಿಗೊಳಿಸುತ್ತಿರುವ ಮೊತ್ತ ನಗಣ್ಯ. 2020-21ರಲ್ಲಿ ಮೀಸಲಿರಿಸಿದ ಮೊತ್ತಕ್ಕಿಂತ 2021-22ರಲ್ಲಿ 26 ಕಡಿತಗೊಳಿಸಿದೆ. ಕಳೆದ ವರ್ಷ ಕೇಂದ್ರದ ಒಟ್ಟು ಬಜೆಟ್ನಲ್ಲಿ ಲಿಂಗತ್ವ ಅನುದಾನ ಕೇವಲ ಶೇ.4.4 ಮಾತ್ರ. ಇದು ಮೂಗಿಗೆ ತುಪ್ಪಸವರುವುದಲ್ಲದೆ ಇನ್ನೇನು?
ಲಿಂಗತ್ವ ಬಜೆಟ್ ಅನ್ನುವುದೇ ಒಂದು ಹುಸಿ ಭರವಸೆ ಎಂಬುವುದರಲ್ಲಿ ಎರಡು ಮಾತಿಲ್ಲ. ಬಜೆಟ್ ಮಂಡನೆಯಾಗುವಾಗ ಮರಳುಗೊಳಿಸುವ ಅಂಕಿ ಸಂಖ್ಯೆಗಳು, ಜನಸಾಮಾನ್ಯರಿಗೆ ಅರ್ಥವಾಗದ ಅದರ ಒಳಹೇತು ಅರ್ಥ ಶಾಸ್ತ್ರಜ್ಞರನ್ನು ದಿಕ್ಕು ತಪ್ಪಿಸುವಲ್ಲಿ ಪ್ರವೃತ್ತರಾದರೆ ಆಶ್ಚರ್ಯ ಪಡಬೇಕಿಲ್ಲ. ಬಜೆಟ್ನಲ್ಲಿ ಕೆಟಗರಿ ‘ಎ’ನಲ್ಲಿ ಶೇ. 100ರಷ್ಟು ಮೊತ್ತ ನಿಗದಿಯಾದರೆ ಕೆಟಗರಿ ‘ಬಿ’ನಲ್ಲಿ ಕನಿಷ್ಠ ಶೇ. 30ರಿಂದ 99ರಷ್ಟು ಮಾತ್ರ ಇರುತ್ತದೆ. ಕೆಟಗರಿ ‘ಸಿ’ನಲ್ಲಿಯಂತೂ ಶೇ. 30ಕ್ಕಿಂತ ಕಡಿಮೆ. 2022-23 ಸಾಲಿನ ಬಜೆಟ್ನಲ್ಲಿ ಕೆಟಗರಿ ‘ಎ’ಗೆ ಮೀಸಲಿರಿಸಿದ ಮೊತ್ತ ಶೇ.15.04 ಇದ್ದರೆ ಕೆಟಗರಿ ‘ಬಿ’ಗೆ ಶೇ. 84.96 ಅದರಂತೆ 2021-22ರಲ್ಲಿ ಕೆಟಗರಿ ‘ಎ’ಗೆ ಶೇ. 14.31 ಮೀಸಲಿರಿಸಿದರೆ ಕೆಟಗರಿ ‘ಬಿ’ಗೆ ಶೇ. 85.69ರಷ್ಟು ಇಡಲಾಗಿತ್ತು. ಅಂದರೆ ನಿರ್ದಿಷ್ಟವಾಗಿ ಶೇ.100ರಷ್ಟು ವಿನಿಯೋಗ ಇರುವೆಡೆ ಕಡಿಮೆ ಮೊತ್ತ ಇರಿಸಿ ಕನಿಷ್ಠ ಶೇ.30ರಷ್ಟು ಮಾತ್ರ ಅವಕಾಶ ಇರುವ ಬಾಬ್ತಿನಲ್ಲಿ ಹೆಚ್ಚು ತೋರಿಸಿ ಯಾಮಾರಿಸುವುದನ್ನು ಗಮನಿಸಬಹುದು. ಹೀಗೆ ಇಡುವಲ್ಲಿಯೂ ಯಾವ ಲೆಕ್ಕ ಶೀರ್ಷಿಕೆಯಲ್ಲಿ ಎಷ್ಟು ಮೊತ್ತ ನಿಗದಿಗೊಳಿಸಲಾಗಿದೆ ಎಂಬುದನ್ನು ಪರಾಂಬರಿಸಿದರೂ ಸಾಕು ಲಿಂಗ ಸಂವೇದನಾಶೀಲವಲ್ಲದ ನಡೆ ಕಣ್ಣಿಗೆ ರಾಚುತ್ತದೆ. 2021-22ನೇ ಸಾಲಿನಲ್ಲಿ ಕೆಟಗರಿ ‘ಎ’ಯಲ್ಲಿ ಪ್ರಮುಖ ಸಾಮಾಜಿಕ ಸೇವೆಗಳಲ್ಲಿ ಮೀಸಲಿಟ್ಟ ಅನುದಾನ ಕೋಷ್ಟಕ-2ರಲ್ಲಿರುವಂತಿದೆ.
ಶಿಕ್ಷಣ ಮತ್ತು ಸಮಾಜಕಲ್ಯಾಣ ಕಾರ್ಯಕ್ರಮಗಳಿಗೆ ಅತ್ಯಂತ ಕಡಿಮೆ ಅನುದಾನ ಮೀಸಲಿರಿಸಿದ್ದು ನಿಜಕ್ಕೂ ಲಿಂಗ ಸಮಾನತೆಯನ್ನು ಖಾತ್ರಿಗೊಳಿಸುವುದಿಲ್ಲ.
2021-22ನೇ ಸಾಲಿನಲ್ಲಿ ಪ್ರಮುಖಆರ್ಥಿಕ ಸೇವೆಗಳಲ್ಲಿನ ವರ್ಗ ‘ಎ’ ಅಡಿಯಲ್ಲಿ ಮಹಿಳಾ ಉದ್ದೇಶಿತ ಹಂಚಿಕೆಯ ವಿವರ ಕೋಷ್ಟಕ-3ರಲ್ಲಿ ಗಮನಿಸಬಹುದು.
ಮಹಿಳೆಯರಲ್ಲಿ ಉದ್ಯಮಶೀಲತೆ, ಕೌಶಲ್ಯ ಬೆಳೆಸುವಲ್ಲಿ ಅನುದಾನವೇ ಇಲ್ಲ. ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಅನುವು ಮಾಡಿಕೊಡುವ ಯಾವ ಯೋಜನೆಗಳು ಪರಿಪುಷ್ಟವಾಗಿಲ್ಲ. ಪಶುಸಂಗೋಪನೆಯಲ್ಲಿ ಅತಿ ಹೆಚ್ಚು ಮಹಿಳೆಯರ ಭಾಗಿದಾರಿಕೆ ಇರುವಾಗಲೂ ಕೆಟಗರಿ ‘ಎ’ನಲ್ಲಿ ಏನೇನೂ ಅನುದಾನವಿಲ್ಲ. ಅಷ್ಟಕ್ಕೂ ಹೆಚ್ಚಿನವುಗಳು ರಾಜ್ಯ ವಲಯಕ್ಕೆ ಸೇರಿದವುಗಳು. ಜಿಲ್ಲಾವಾರು ಅನುದಾನದ ಹಂಚಿಕೆ ತುಂಬಾ ಕಡಿಮೆ. ಉತ್ತರ ಕರ್ನಾಟಕ ಅದರಲ್ಲಿಯೂ ಕಲ್ಯಾಣಕರ್ನಾಟಕದ ಜಿಲ್ಲೆಗಳಲ್ಲಿ ಗಂಭೀರವಾಗಿರುವ ಮಹಿಳೆಯರ ಅಪೌಷ್ಟಿಕತೆ, ವಲಸೆ, ದೇವದಾಸಿ ಪದ್ಧತಿ, ಕಿತ್ತುತಿನ್ನುವ ಬಡತನ ಇತ್ಯಾದಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಅನುದಾನ ನೀಡಬೇಕಾದೆಡೆ ಗಮನವೇ ಇಲ್ಲ.
ಇಂದಿಗೂ ದೇಶದುದ್ದಕ್ಕೂ ಹರಡಿಕೊಂಡಿರುವ ವೇಶ್ಯಾವಾಟಿಕೆಗಳಲ್ಲಿ ಕಲ್ಯಾಣ ಕರ್ನಾಟಕ ಭಾಗದ ಮಹಿಳೆಯರೇ ಹೆಚ್ಚು ಇರುವುದು ಕಾಕತಾಳೀಯವೇನಲ್ಲ. ಈ ಭಾಗದ ಮಹಿಳೆಯರ ಸ್ಥಿತಿಗತಿಯನ್ನು ಅದು ದಿಗ್ದರ್ಶಿಸುತ್ತದೆ. ಇಂತಹ ಸಮಸ್ಯೆಗಳನ್ನು ಪ್ರತ್ಯೇಕವಾಗಿ ಪರಿಗಣಿಸಿ ಅನುದಾನ ನೀಡಲು ಸಾಧ್ಯವಾಗಬೇಕು. ತಾಳಿ ಭಾಗ್ಯದಂಥ ಸಾಂಪ್ರದಾಯಿಕ ಯೋಜನೆಗಳಿಗೆ ಹಣ ನೀಡುವಲ್ಲಿ ಉತ್ಸಾಹ ತೋರಿಸುವ ಸರಕಾರ, ಶಾಲಾ-ಕಾಲೇಜು, ಹಾಸ್ಟೆಲ್ಗಳಲ್ಲಿ ಮತ್ತು ಅಂಗನವಾಡಿ ಕೇಂದ್ರಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಕೊಡುತ್ತಿದ್ದ ಶುಚಿತ್ವ ಪ್ಯಾಡ್ಗಳ ಬಗೆಗೆ ಅಷ್ಟಾಗಿ ತೋರಿಸುವುದಿಲ್ಲ. ಈ ಯೋಜನೆಗೆ 2021ರಲ್ಲಿ ಸಚಿವ ಸಂಪುಟದ ಅನುಮೋದನೆ ಸಿಕ್ಕಿದೆಯಾದರೂ ಈವರೆಗೂ ಅನುಷ್ಠಾನವಾಗಿಲ್ಲ. ಕೇವಲ 49 ಕೋಟಿ ರೂ. ಮೊತ್ತದಲ್ಲಿ ನಿರ್ವಹಿಸಬಹುದಾದ ಉಚಿತ ಸ್ಯಾನಿಟರಿ ಪ್ಯಾಡ್ ಕಾರ್ಯಕ್ರಮವನ್ನು ವಿತ್ತೀಯ ಕೊರತೆ ನೆಪದಲ್ಲಿ ನಿಲ್ಲಿಸಲಾಗಿದೆ.
ಒಟ್ಟಾರೆ ಈವರೆಗಿನ ಬಜೆಟ್ಗಳು ಪೂರ್ಣಮಹಿಳಾ ಪರವಲ್ಲದ ನಿಲುವುಗಳಲ್ಲಿಯೇ ಪರ್ಯಾವಸಾನವಾಗಿವೆ. ಅನುದಾನ ಹಂಚಿಕೆಯಲ್ಲಿಯೇ ಕಂಜೂಸುತನ. ನಿಗದಿಯಾದ ಅನುದಾನ ಪೂರ್ತಿ ಪ್ರಮಾಣದಲ್ಲಿ ಬಿಡುಗಡೆಯೂ ಆಗಿಲ್ಲ. ಬಿಡುಗಡೆಗೊಂಡ ಕಿಂಚಿತ್ ಮೊತ್ತದ ಬಳಕೆಯೂ ಕೆಲವೊಂದೆಡೆ ಆಗಿಲ್ಲ. ಕೆಲವು ಕಾರ್ಯಕ್ರಮಗಳಂತೂ ಕಡತಗಳಲ್ಲಿಯೇ ಉಳಿದು ಅಣಕಿಸುತ್ತಿವೆ. ಇದಕ್ಕೆಲ್ಲ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ಸ್ತ್ರೀ ವಿರೋಧಿ ಮನೋಭಾವವೇ ಕಾರಣ ಎನ್ನದೆ ಗತ್ಯಂತರವಿಲ್ಲ.
ಲಿಂಗ ಸಮಾನತೆ ಎಂಬುದು ತಾತ್ವಿಕ ನಿಲುವು ಹೊರತು ತಾಂತ್ರಿಕ ವ್ಯಾಯಾಮ ಅಲ್ಲ. ಲಿಂಗಾಧಾರಿತ ಬಜೆಟ್ ಭಿಕ್ಷೆ ಅಲ್ಲ. ದೇಶದ ಒಟ್ಟು ಉತ್ಪಾದನೆಯಲ್ಲಿ ಗಣನೀಯ ಭಾಗೀದಾರಿಕೆ ಇರುವ ಮಹಿಳೆಯರ ಹಕ್ಕು ಅದು. ಅವರ ದುಡಿಮೆಯ ಮೊತ್ತವನ್ನು ಅವರಿಗೆ ಸಲ್ಲಿಸುವಲ್ಲಿ ಪ್ರಾಮಾಣಿಕ ಇಚ್ಛಾಶಕ್ತಿ ಮತ್ತು ತಾಯ್ತನ ಬೇಕು. ಸರಕಾರಗಳು ಈ ದಿಶೆಯಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಇಂದು ಅಗತ್ಯವಾಗಿದೆ.
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.