ರಾಜ್ಯದಲ್ಲಿ ಕುರುಬರಿಗೆ ಕಾಂಗ್ರೆಸ್ನಿಂದ ದಕ್ಕಿದ್ದೆಷ್ಟು?
-

ವಾಸ್ತವಿಕವಾಗಿ ನ್ಯಾಯೋಚಿತವಲ್ಲದ ರೀತಿಯಲ್ಲಿ ೮-೯ ಕ್ಷೇತ್ರಗಳನ್ನು ಬೇರೆ ಬೇರೆ ಕಾರಣಗಳಿಂದ ಕುರುಬ ಸಮುದಾಯ ಕಳೆದುಕೊಳ್ಳುತ್ತಿದೆ. ಇಂಥ ಅಪಸವ್ಯಗಳಿಗೆಲ್ಲ ಕಾರಣ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದೇ ಆಗಿದೆ. ಇಂಥ ಸಂಭವನೀಯ ಕೃತ್ಯಗಳಿಗೆಲ್ಲ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಇಡೀ ಸಮುದಾಯದ ಮುಖಂಡರೆಲ್ಲರೂ ಹೊಣೆಗಾರರೇ ಆಗುತ್ತಾರೆ.
ಇತ್ತೀಚೆಗೆ ಕೆಲವು ದಿನಗಳ ಹಿಂದೆ ಕರ್ನಾಟಕ ರಾಜ್ಯ ಕುರುಬ ಸಂಘದ ಅಧ್ಯಕ್ಷರು ಮೈಸೂರಿನ ಪತ್ರಿಕಾಗೋಷ್ಠಿಯೊಂದರಲ್ಲಿ ಎಲ್ಲ ಪಕ್ಷಗಳು ಕುರುಬ ಸಮುದಾಯಕ್ಕೆ ಮುಂಬರುವ ವಿಧಾನಸಭಾ ಚುನಾವಣೆಗೆ 40 ಸ್ಥಾನಗಳನ್ನು ಹಂಚಿಕೆ ಮಾಡಬೇಕು ಎಂದು ಅಲವತ್ತುಕೊಂಡಿದ್ದಾರೆ. ಕೇಳುವ ಹಕ್ಕು ಅವರಿಗೆ ಖಂಡಿತ ಇದೆ ಬಿಡಿ. ಮಾನ್ಯ ಅಧ್ಯಕ್ಷರು ಆ 40 ಕ್ಷೇತ್ರಗಳು ಯಾವುವು ಎಂದು ಹೇಳಲಿಲ್ಲ. ಹೇಳಿಕೊಂಡಿದ್ದರೆ ಸ್ಪಷ್ಟತೆ ಖಂಡಿತ ಇರುತ್ತಿತ್ತು.
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಾಗಿ ಹಂಚಿಕೆಯಾಗಿರುವ ಒಟ್ಟು ಸ್ಥಾನಗಳ ಸಂಖ್ಯೆ 224. ಅವುಗಳಲ್ಲಿ 36 ಸ್ಥಾನಗಳು ಪರಿಶಿಷ್ಟ ಜಾತಿಗೂ ಮತ್ತು 15 ಸ್ಥಾನಗಳು ಪರಿಶಿಷ್ಟ ಪಂಗಡಕ್ಕೂ ಹಂಚಿಕೆ ಆಗಲೇಬೇಕು (ಅನುಚ್ಛೇದ 330 ಮತ್ತು 332). 2007 ಮತ್ತು 2008ರಲ್ಲಿ ನ್ಯಾ. ಕುಲ್ದೀಪ್ ಸಿಂಗ್ ಆಯೋಗದ ವರದಿ ಆಧಾರದ ಮೇಲೆ ಕರ್ನಾಟಕದ, 2001ರ ಜನಸಂಖ್ಯೆ ಆಧರಿಸಿ ಕ್ಷೇತ್ರ ವಿಂಗಡಣೆ ನಿರ್ಧರಿತವಾಗಿದೆ.
ಕರ್ನಾಟಕದಲ್ಲಿ ಕುರುಬ ಸಮುದಾಯವು ಪ್ರಸಕ್ತ 45ರಿಂದ 46 ಲಕ್ಷ ಜನಸಂಖ್ಯೆ ಹೊಂದಿರ ಬಹುದಾದ ಸಾಧ್ಯತೆ ಇದೆ. ಹಾಗೆ ನೋಡಿದರೆ ಇದು ಕಡಿಮೆ ಸಂಖ್ಯೆ ಎಂದು ಯಾವ ರೀತಿಯಲ್ಲೂ ಯಾರೂ ಅಲ್ಲಗಳೆಯುವ ಹಾಗಿಲ್ಲ. ಆದರೆ, ಕರ್ನಾಟಕ ರಾಜ್ಯ 1956ರಲ್ಲಿ ಭಾಷಾವಾರು ರಾಜ್ಯ ಪುನರ್ ವಿಂಗಡಣೆ ಆದ ಲಾಗಾಯ್ತಿನಿಂದಲೂ, ಯಾವುದೇ ಸಾರ್ವತ್ರಿಕ ಚುನಾವಣೆಯಲ್ಲಿಯೂ ಕಾಂಗ್ರೆಸ್ ಪಕ್ಷದಿಂದ ಕುರುಬರಿಗೆ ಸ್ಥಾನ ಹಂಚಿಕೆ 15ರ ಆಜು-ಬಾಜಿನಲ್ಲಿಯೇ ಇದೆ. ಕೆಲವೊಮ್ಮೆ ಇದು ಅಪವಾದ ಇರಬಹುದು. ನನಗೆ ತಿಳಿದ ಮಟ್ಟಿಗೆ ಒಂದು ಸಾರ್ವತ್ರಿಕ ಚುನಾವಣೆಯಲ್ಲಿ ಅವರು 16 ಮಂದಿ ಚುನಾಯಿತರಾಗಿದ್ದರೆಂಬ ನೆನಪಿದೆ. ಕಾಂಗ್ರೆಸ್ ಪಕ್ಷದ ಮಟ್ಟಿಗೆ ಹೇಳುವುದಾದರೆ ಇಲ್ಲಿ ಕುರುಬರು ಎಂದಿಗೂ ಇಷ್ಟೇ ಸಂಖ್ಯೆ ಸ್ಥಾನಗಳು ಬೇಕು ಎಂದೂ ಹಠಕ್ಕೆ ಬಿದ್ದವರಲ್ಲ! ಕರ್ನಾಟಕದಲ್ಲಿ ಕರಾವಳಿ ಜಿಲ್ಲೆಗಳನ್ನು ಹೊರತುಪಡಿಸಿದರೆ ಉಳಿದ ಎಲ್ಲಾ ಜಿಲ್ಲೆಗಳಲ್ಲೂ ಕುರುಬರು ಸಾಕಷ್ಟು ಸಂಖ್ಯೆಯಲ್ಲಿಯೇ ಇದ್ದಾರೆ. ಯಾವುದೇ ವಿಧಾನಸಭಾ ಕ್ಷೇತ್ರವನ್ನು ಪರಿಗಣಿಸಿದರೂ ಗರಿಷ್ಠ 50 ಸಾವಿರ, ಕನಿಷ್ಠ 5 ಸಾವಿರವಾದರೂ ಜನಸಂಖ್ಯೆ ಇರುವ ಸಮುದಾಯವಿದು (ಪರಿಶಿಷ್ಟ ವರ್ಗ, ಧಾರ್ಮಿಕ ಅಲ್ಪಸಂಖ್ಯಾತರನ್ನು ಹೊರತುಪಡಿಸಿ). ಅವರಿರುವ ಜನಸಂಖ್ಯೆಗೆ ಅನುಗುಣವಾಗಿ ಕನಿಷ್ಠ 20ರಿಂದ 22 ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸ್ಥಾನ ಹಂಚಿಕೆ ಆಗಬೇಕಾಗಿದೆ. ಇತ್ತೀಚಿನ ದಿನಗಳಲ್ಲಿ ಚುನಾವಣೆ ಒಂದು ಜೂಜು ಆಗಿರುವುದರಿಂದ ಅದು ಕುರುಬರಿಗೂ ಅಥವಾ ಇತರ ಎಲ್ಲಾ ಹಿಂದುಳಿದ ವರ್ಗಗಳ ಜಾತಿಗಳಿಗೂ ಅದು ಅನ್ವಯಿಸುವುದು. ಹಾಗಾಗಿ, ಸಾಕಷ್ಟು ಸಂಪನ್ಮೂಲಗಳನ್ನು ರೂಢಿಸಿಕೊಂಡು ಸ್ಪರ್ಧಿಸಲು ಸಿಗುವ ಕ್ಷೇತ್ರಗಳೆಂದರೆ ಕುರುಬರಿಗೆ 15ರಿಂದ 20 ಎಂದು ಹೇಳಬಹುದು. ಕುರುಬರಿಗೆ ಸ್ಪರ್ಧಿಸಲು ಅವಕಾಶವಿದ್ದರೂ 20 ಸ್ಥಾನಗಳನ್ನು ಕೊಡುವುದು ಅನುಮಾನವೇ ಸರಿ.
ಕುಮಾರಸ್ವಾಮಿಯವರು 2018-19ರಲ್ಲಿ ಮುಖ್ಯಮಂತ್ರಿ ಆಗಿದ್ದ ಸಂದರ್ಭದಲ್ಲಿ ಅವರನ್ನು ಅಧಿಕಾರ ವಂಚಿತಗೊಳಿಸಿ ಬಿಜೆಪಿ ಸರಕಾರವನ್ನು ಯಡಿಯೂರಪ್ಪಅವರ ನೇತೃತ್ವದಲ್ಲಿ ಅಧಿಪತಿಸುವ ಉದ್ದೇಶದಿಂದ ಕಾಂಗ್ರೆಸ್ ಮತ್ತು ಜನತಾದಳ ಈ ಎರಡೂ ಪಕ್ಷಗಳಿಂದ 17 ವಿಧಾನಸಭಾ ಸದಸ್ಯರು ಪಕ್ಷಾಂತರಗೈದರು. ಅವರಲ್ಲಿ ಹೊಸಕೋಟೆಯಿಂದ ಗೆದ್ದಿದ್ದ ಎಂ.ಟಿ.ಬಿ. ನಾಗರಾಜ್, ಕೆ.ಆರ್. ಪುರಂನಿಂದ ಗೆದ್ದಿದ್ದ ಭೈರತಿ ಬಸವರಾಜ್, ಹುಣಸೂರಿನಿಂದ ಗೆದ್ದಿದ್ದ ಎ.ಎಚ್. ವಿಶ್ವನಾಥ್ ಮತ್ತು ರಾಣಿ ಬೆನ್ನೂರಿನ ಪಕ್ಷೇತರ ಶಾಸಕ ಆರ್.ಶಂಕರ್ ಇವರೆಲ್ಲರೂ ಕುರುಬ ಸಮುದಾಯಕ್ಕೆ ಸೇರಿದವರಾಗಿದ್ದರು. ಇವರಲ್ಲಿ ಮರು ಚುನಾವಣೆಯಲ್ಲಿ ಕೆ.ಆರ್. ಪುರಂನ ಬೈರತಿ ಬಸವರಾಜ್ ಒಬ್ಬರೇ ಗೆದ್ದವರು. ಉಳಿದವರು ಯಾರೂ ಗೆಲ್ಲಲಿಲ್ಲ. ಹಾಗೆಯೇ ಸೋತವರು ಕ್ಷೇತ್ರಗಳನ್ನು ಕಳೆದುಕೊಳ್ಳುವ ಸಂಭವವೂ ಇಲ್ಲದಿಲ್ಲ.
ನ್ಯಾ.ಕುಲ್ದೀಪ್ ಸಿಂಗ್ ಆಯೋಗ ಕ್ಷೇತ್ರ ಪುನರ್ ವಿಂಗಡಣೆಯನ್ನು 2001 ಜನಗಣತಿಯನ್ನು ಆಧರಿಸಿ ಮಾಡಿದೆ ಎಂದು ಈಗಾಗಲೇ ಪ್ರಸ್ತಾಪಿಸಲಾಗಿದೆ. ಆ ಪ್ರಕಾರ 2.50 ಲಕ್ಷ ಜನಸಂಖ್ಯೆಗೆ ಒಂದು ವಿಧಾನಸಭಾ ಕ್ಷೇತ್ರವೆಂದು ಅದು ಪರಿಗಣಿಸಿದೆ. ಇತರ ಹಿಂದುಳಿದ ಅಥವಾ ಅತಿ ಹಿಂದುಳಿದ ಜಾತಿಗಳನ್ನು ಹೊರತುಪಡಿಸಿ ಇಲ್ಲಿ ಗಣನೆಗೆ ಕೇವಲ ಕುರುಬರನ್ನು ಮಾತ್ರ ಪರಿಗಣಿಸಲಾಗಿದೆ. ಪ್ರತೀ ಎರಡೂವರೆ ಲಕ್ಷಕ್ಕೆ ಒಂದು ವಿಧಾನಸಭಾ ಕ್ಷೇತ್ರ ಎಂದು ಆಯೋಗ ಪರಿಗಣಿಸಿರುವುದರಿಂದ ಕುರುಬರಿಗೆ ಕನಿಷ್ಠವೆಂದರೂ 20ರಿಂದ 22 ಕ್ಷೇತ್ರಗಳನ್ನು ಹಂಚಿಕೆ ಮಾಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ಕುರುಬರ ಸಂಘದ ಅಧ್ಯಕ್ಷರು ಎಲ್ಲ ಪಕ್ಷಗಳು 40 ಸ್ಥಾನಗಳನ್ನು ಹಂಚಿಕೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಕುರುಬರಿಗಾಗಿ ಪ್ರಸಕ್ತ ಕಾಂಗ್ರೆಸ್ ಹಂಚಿಕೆ ಮಾಡುತ್ತಿರುವ ಕ್ಷೇತ್ರಗಳು ಅಂದಾಜು ಇಂತಿವೆ-1.ಬಾಗಲಕೋಟೆ 2.ಬಾದಾಮಿ 3.ನವಲಗುಂದ 4, ಕುಂದಗೋಳ 5. ಅರಭಾವಿ 6.ಕೊಪ್ಪಳ 7. ಮಾನ್ವಿ 8. ಹರಿಹರ 9.ಹೊನ್ನಾಳಿ 10. ಹೊಸದುರ್ಗ 11. ಹೊಸಕೋಟೆ 12. ಕೆ.ಆರ್. ಪುರಂ 13.ರಾಣಿಬೆನ್ನೂರು 14. ಬ್ಯಾಡಗಿ 15. ಕೆ.ಆರ್. ನಗರ 16.ಚಾಮುಂಡೇಶ್ವರಿ 17. ವರುಣ 18. ತರೀಕೆರೆ 19.ಕಡೂರು 20.ಚಿಕ್ಕಮಗಳೂರು 21. ಕೋಲಾರ. ಕಾಂಗ್ರೆಸ್ ಪಕ್ಷವು ಹಂಚಿಕೆ ಮಾಡಬಹುದಾದ ಈ 21 ಕ್ಷೇತ್ರಗಳಲ್ಲಿ, ಮೈಸೂರು ಜಿಲ್ಲೆಯ 4 ಕ್ಷೇತ್ರಗಳಲ್ಲಿ 1 ಅಥವಾ 2 ಕ್ಷೇತ್ರಗಳು ಕೈ ತಪ್ಪುವಸಂಭವ ಇದೆ ಎಂಬ ಬಲವಾದ ಸುದ್ದಿ ಹಬ್ಬಿದೆ. ಹಾಗೆಯೇ, ಚಿಕ್ಕಮಗಳೂರು, ಕಡೂರು, ತರೀಕೆರೆ, ನವಲಗುಂದ ಮತ್ತು ಕುಂದಗೋಳ ಈ 5 ಕ್ಷೇತ್ರಗಳಲ್ಲಿ ಕೂಡಾ ಕುರುಬರಿಗೆ ಸಿಗುವ ಅವಕಾಶ ಕಡಿಮೆ ಎಂದೇ ಹೇಳಲಾಗಿದೆ. ಕಳೆದ ಕೆಲವಾರು ದಿನಗಳ ಹಿಂದೆ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ಅವರು ಕುಂದಗೋಳಕ್ಕೆ ಭೇಟಿ ನೀಡಿ ಭಾಜಪದ ಬಿರುಸಿನ ಹವಾ ಸೃಷ್ಟಿಸಿ ಹೋಗಿದ್ದಾರೆ. ಪಕ್ಷಾಂತರದ ಕಾರಣ ಈಗಾಗಲೇ ಹೊಸಕೋಟೆ ಮತ್ತು ಕೆ.ಆರ್. ಪುರ ಕೈ ತಪ್ಪಿಹೋಗಿವೆ. 21 ಕ್ಷೇತ್ರಗಳಲ್ಲಿ 9 ಕ್ಷೇತ್ರಗಳು ಕುರುಬ ಸಮುದಾಯಕ್ಕೆ ಸಿಗುವ ಸಂಭವ ಕಡಿಮೆ. ಹೊಸಕೋಟೆ ಕ್ಷೇತ್ರಕ್ಕೆ ಮಾತ್ರ ಯಾರಾದರೂ ಒಬ್ಬರನ್ನು ಪರಿಗಣಿಸಲು ಸಾಧ್ಯವಿದೆ. ಹೀಗಾಗಿ 13 ಕ್ಷೇತ್ರಗಳಿಗೆ ಮಾತ್ರ ಕುರುಬ ಸಮುದಾಯವನ್ನು ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಲು ಅವಕಾಶ ನೀಡಬಹುದೆಂದು ಊಹಿಸಬಹುದು.
ವಾಸ್ತವಿಕವಾಗಿ ನ್ಯಾಯೋಚಿತವಲ್ಲದ ರೀತಿಯಲ್ಲಿ 8-9 ಕ್ಷೇತ್ರಗಳನ್ನು ಬೇರೆ ಬೇರೆ ಕಾರಣಗಳಿಂದ ಕುರುಬ ಸಮುದಾಯ ಕಳೆದುಕೊಳ್ಳುತ್ತಿದೆ. ಇಂಥ ಅಪಸವ್ಯಗಳಿಗೆಲ್ಲ ಕಾರಣ ಯುದ್ಧಕಾಲದಲ್ಲಿ ಶಸ್ತ್ರಾಭ್ಯಾಸ ಮಾಡುವುದೇ ಆಗಿದೆ. ಇಂಥ ಸಂಭವನೀಯ ಕೃತ್ಯಗಳಿಗೆಲ್ಲ ಯಾರನ್ನೂ ದೂಷಿಸಲು ಸಾಧ್ಯವಿಲ್ಲ. ಇಡೀ ಸಮುದಾಯದ ಮುಖಂಡರೆಲ್ಲರೂ ಹೊಣೆಗಾರರೇ ಆಗುತ್ತಾರೆ.
ಕರ್ನಾಟಕದಲ್ಲಿ 199 ಹಿಂದುಳಿದ- ಅತಿ ಹಿಂದುಳಿದ ಮುಖ್ಯ ಜಾತಿಗಳು ಮತ್ತು 567 ಉಪಜಾತಿಗಳಿವೆ. ಇವುಗಳಲ್ಲಿ 1.ಕುರುಬ 2.ದೇವಾಡಿಗ 3.ಬಲಿಜ 4.ಈಡಿಗ 5.ರಜಪೂತ್ 6.ಹಿಂದೂ ಸಾದರು 7. ಗಾಣಿಗ 8. ಅರಸು 9.ತಿಗಳ 10.ರಾಮಕ್ಷತ್ರಿಯ 11. ಸೋಮ ವಂಶ ಸಹಸ್ರಾರ್ಜುನ ಕ್ಷತ್ರಿಯ 12.ಪದ್ಮಶಾಲಿ 13.ಗೊಲ್ಲ 14.ಮೊಗವೀರ 15. ಮಾರಾಠಾ 16.ಉಪ್ಪಾರ 17. ಕುರುಹಿನ ಶೆಟ್ಟಿ 18.ಭಾವಸಾರ ಕ್ಷತ್ರಿಯ 19.ಹಾಲಕ್ಕಿ ಒಕ್ಕಲ್ 20.ವಿಶ್ವಕರ್ಮ 21.ಕುಂಬಾರ 22.ಮಡಿವಾಳ 23.ಸವಿತಾ, ಹಿಂದುಳಿದ - ಅತಿ ಹಿಂದುಳಿದ ಜಾತಿಗಳಿಗೆ ಮಾತ್ರ ಶಾಸನ ಸಭಾ ಮೆಟ್ಟಿಲನ್ನು ಹತ್ತಲು ಅವಕಾಶ ಸಿಕ್ಕಿದೆ. ಇನ್ನೂ 174 ಮುಖ್ಯ ಹತಭಾಗ್ಯ ಜಾತಿಗಳಿಗೆ ಅಂಥ ಅವಕಾಶ ಸಿಕ್ಕಿಲ್ಲದಿರುವುದು ಜಾತಿ ವ್ಯವಸ್ಥೆಯೊಳಗಿನ ಆರ್ಥಿಕ ಅಸಮಾನತೆ ಮತ್ತು ತಮಗೆ ದಕ್ಕಬೇಕಾದ ರಾಜಕೀಯ ಪಾಲನ್ನು ಪಡೆಯಲಿರುವ ಅಸಂಘಟನೆಯ ನಿರಾಸಕ್ತಿಯೂ ಕಾರಣ, ಅಲ್ಲದೇ ಮೇಲ್ಜಾತಿಗಳೊಡನೆ ಹೋರಾಟ ಅಸಾಧ್ಯವೆಂಬುದನ್ನು ಅರಿತು, ಹಣೆಬರಹದ ಕಡೆ ಕೈ ತೋರಿಸಿ ಸುಮ್ಮನಿರುವುದೇ ಆಗಿದೆ!
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.