ಮೈಸೂರು ಸಂಸ್ಥಾನದಲ್ಲಿ ಮುಸ್ಲಿಮರಿಗೆ ರಾಜಕೀಯ ಮೀಸಲಾತಿ: ಒಂದು ಜಿಜ್ಞಾಸೆ
-
ಮೀಸಲಾತಿ ಚರ್ಚೆಗಳಲ್ಲಿ, ಹಳೆಯ ಮೈಸೂರು ಸಂಸ್ಥಾನ ರಾಜಕೀಯದಲ್ಲಿ ಮುಸ್ಲಿಮರಿಗೆ ನೀಡಿದ ಮೀಸಲಾತಿ ಮತ್ತದರ ಸುತ್ತ ಮುತ್ತ ನಡೆದ ಚರ್ಚೆಗಳು ಮುನ್ನೆಲೆಗೆ ಬರುವುದೇ ಇಲ್ಲ. ಇದು ಇತಿಹಾಸದ ಭಾಗವಾಗಿರುವುದರಿಂದ ಸ್ವಾಭಾವಿಕವಾಗಿ ಇದರ ಕುರಿತು ಚರ್ಚೆಯಾಗುವುದಿಲ್ಲ. ವಾಸ್ತವವಾಗಿ ಪ್ರಜಾಪ್ರತಿನಿಧಿ ಸಭೆ ಮತ್ತು ಪ್ರಜಾ ಮಂಡಲಿಯಲ್ಲಿ ಮೀಸಲಾತಿಯನ್ನು ನೀಡಿದ ಮೊದಲ ಸಂಸ್ಥಾನ ಮೈಸೂರು. ಮೀಸಲಾತಿಯನ್ನು ಮುಸ್ಲಿಮರಿಗೆ ವಿಸ್ತರಿಸುವ ಕಾಲಘಟ್ಟದಲ್ಲಿ ಕೋಮುವಾದ ರಾಷ್ಟ್ರೀಯ ಮಟ್ಟದಲ್ಲಿ ಪರಾಕಾಷ್ಠೆಗೆ ಹೋಗಿತ್ತು. ಪೂನಾ ಒಪ್ಪಂದ, ಮಿಂಟೋ-ಮೊರ್ಲೆ ಸುಧಾರಣೆ, ಮೊಂಟಿಗೊ-ಚೇಮ್ಸ್ಫರ್ಢ್ ಸುಧಾರಣೆ, ಕೋಮು ಆಧಾರಿತ ಚುನಾವಣಾ ಕ್ಷೇತ್ರಗಳು ಭಾರತವನ್ನು ತಲ್ಲಣಗೊಳಿಸಿದ್ದವು ಮತ್ತು ಧ್ರುವೀಕರಣಗೊಳಿಸಿದ್ದವು. ಇವುಗಳ ನಡುವೆ ಯಾವುದೇ ಸಂಘರ್ಷಗಳಿಗೆ ಮತ್ತು ಕೋಮುವಾದಕ್ಕೆ ಬಲಿ ಬೀಳದೆ ಮೀಸಲಾತಿಯನ್ನು ಜಾರಿ ಗೊಳಿಸಿದ ಮೈಸೂರು ಸಂಸ್ಥಾನ ಒಂದು ಆದರಣೀಯ ಸಂಸ್ಥಾನವೆಂದರೂ ತಪ್ಪಲ್ಲ. ಬೆಂಗಳೂರಿನಲ್ಲಿ 1928ರ ಸುಮಾರಿಗೆ ನಡೆದ ಒಂದು ಚಿಕ್ಕ ಕೋಮು ಸಂಘರ್ಷದ ಘಟನೆಯನ್ನು ಹೊರತು ಪಡಿಸಿದರೆ ಇತಿಹಾಸದಲ್ಲಿ ಎಲ್ಲಿಯೂ ಕೋಮು ಸಂಘರ್ಷ ನಡೆದ ದಾಖಲೆಗಳು ಮೈಸೂರು ಸಂಸ್ಥಾನದಲ್ಲಿ ದೊರೆಯುವುದಿಲ್ಲ. ಇದೇ ಸ್ಥಿತಿ ಜವಾಬ್ದಾರಿ ಸರಕಾರದ ಬೇಡಿಕೆಯ ಸಂದರ್ಭದಲ್ಲೂ ಕಂಡುಬರುತ್ತದೆ. ವಿಚಿತ್ರವೆಂದರೆ ಈ ರಾಜಕೀಯ ಮೀಸಲಾತಿ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿ ರಲಿಲ್ಲ, ಅದು ವಿವಿಧ ಸಾಮಾಜಿಕ ವರ್ಗಗಳಿಗೆ, ಅದರಲ್ಲೂ ಹಿಂದುಳಿದ ವರ್ಗಗಳಿಗೆ ಸಾಮಾಜಿಕ ನ್ಯಾಯ ದೊರಕಿಸುವ ಯೋಜನೆಯ ಭಾಗವಾಗಿತ್ತು.
1881ರಲ್ಲಿ ಬ್ರಿಟಿಷರಿಂದ ಅಧಿಕಾರವನ್ನು ಮತ್ತೊಮ್ಮೆ ಪಡೆದ ನಂತರ ಪ್ರಜಾಪ್ರತಿನಿಧಿ ಸಭೆಯನ್ನು ಸ್ಥಾಪಿಸಿದ ಮೊದಲ ಸಂಸ್ಥಾನವೆಂಬ ಹೆಗ್ಗಳಿಕೆ ಮೈಸೂರಿಗಿದೆ. ಪ್ರತೀ ವರ್ಷ ದಸರಾ ಮಹೋತ್ಸವದ ಸಂದರ್ಭದಲ್ಲಿ ಸಭೆಯನ್ನು ಕರೆಯುವ ವಾಡಿಕೆಯೊಂದಿಗೆ ಪ್ರತಿನಿಧಿ ಸಭೆ ಹುಟ್ಟಿತ್ತು. ಆರಂಭದಲ್ಲಿ ಅದರ ಸದಸ್ಯರೆಂದರೆ ದೊಡ್ಡ ದೊಡ್ಡ ಭೂಮಾಲಕರು ಮತ್ತು ವ್ಯಾಪಾರಸ್ಥರು. 1890ರಲ್ಲಿ ಈ ಪಟ್ಟಿಯಲ್ಲಿ ಭೂ ಮಾಲಕರಲ್ಲದೆ ಮುನ್ಸಿಪಾಲಿಟಿಗಳ ಪ್ರತಿನಿಧಿಗಳು, ಸ್ಥಾನೀಯ ಬೋರ್ಡ್ನ ಸದಸ್ಯರು, ಸಂಘ ಸಂಸ್ಥೆಗಳನ್ನು ಸೇರಿಸಲಾಯಿತು. ತದನಂತರ ಕೆಲವು ಆಸಕ್ತ ಗುಂಪುಗಳಿಗೆ ಮತ್ತು ಅಲ್ಪಸಂಖ್ಯಾತರಿಗೆ ಮೀಸಲಾತಿಯನ್ನು ನೀಡುವ ಹೊಸ ಪ್ರಕ್ರಿಯೆ ಆರಂಭಗೊಂಡಿತ್ತು. ಪ್ರತಿನಿಧಿ ಸಭೆಯ ಒಟ್ಟು ಸಂಖ್ಯೆಯನ್ನು ಹೆಚ್ಚಿಸಲಾಯಿತಲ್ಲದೆ ಅಲ್ಪಸಂಖ್ಯಾತರಿಗೂ ನಿರ್ದಿಷ್ಟ ಪ್ರಮಾಣದಲ್ಲಿ ಪ್ರತಿನಿಧಿತ್ವವನ್ನು ಮೀಸಲಾಗಿಡಲಾಗಿತ್ತು.
ಲೆಸ್ಲಿ ಮಿಲ್ಲರ್ ಸಮಿತಿ 1918ರಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿಯನ್ನು ಘೋಷಿಸುವ ಸಂದರ್ಭದಲ್ಲಿ ಮುಸ್ಲಿಮರನ್ನು ಅವಗಣಿಸಲಿಲ್ಲ. ಪ್ರಜಾಪ್ರತಿನಿಧಿಯ ಮುಸ್ಲಿಮ್ ಸದಸ್ಯರು ಕೂಡ ಮೀಸಲಾತಿಯನ್ನು ಬೆಂಬಲಿಸಿದ್ದರು. ಲೆಸ್ಲಿ ಮಿಲ್ಲರ್ ಸಮಿತಿ ಬಹು ಮುಖ್ಯವಾದ ಎರಡು ಶಿಫಾರಸುಗಳನ್ನು ಮಾಡಿತ್ತು. ಇನ್ನಷ್ಟು ಆಂಗ್ಲೋ-ಹಿಂದುಸ್ಥಾನಿ ಶಾಲೆಗಳ ಸ್ಥಾಪನೆ ಮತ್ತು ಆಂಗ್ಲೋ-ಕನ್ನಡ ಶಾಲೆಗಳಲ್ಲಿ ಹಿಂದುಸ್ಥಾನಿ ವಿಭಾಗದ ಆರಂಭ. ಈ ನಡುವೆ ಮುಸ್ಲಿಮರು ಉರ್ದು ಶಾಲೆಗಳ ಸ್ಥಾಪನೆಗೆ ಒತ್ತಾಯಿಸಿದ್ದರು.
ಇವುಗಳ ನಡುವೆ ಹುಟ್ಟಿಕೊಂಡದ್ದು ಪ್ರಜಾ ಮಂಡಲಿ. ಇದು ಬ್ರಿಟಿಷ್ ಪ್ಲಾಂಟರ್ಗಳ ಒತ್ತಾಯದ ಮೇಲೆ ಸ್ಥಾಪಿತವಾಯಿತು. ಅದರ ಸದಸ್ಯತ್ವ ಕೂಡ ಅಷ್ಟು ಸುಲಭವಾಗಿ ದೊರೆಯುತ್ತಿರಲಿಲ್ಲ. ಅದು ನಿರ್ಧಾರಿತವಾದದ್ದು ಭೂ ಮಾಲಕತ್ವ, ಶಿಕ್ಷಣ ಮತ್ತು ಪದವಿ, ಕಟ್ಟುವ ಕರ, ಆದಾಯದ ಮೇಲಿನ ತೆರಿಗೆ, ಸಮುದಾಯ ಮತ್ತು ಧಾರ್ಮಿಕ ಹಿನ್ನೆಲೆಯ ಮೇಲೆ.
1923ರಲ್ಲಿ ಮೀಸಲಾತಿ ಕುರಿತಂತೆ ಮೈಸೂರು ಸಂಸ್ಥಾನ ಬ್ರಿಜೇಂದ್ರನಾಥ್ ಸೀಲ್ ನೇತೃತ್ವದಲ್ಲಿ ಸಮಿತಿಯೊಂದನ್ನು ನೇಮಿಸಿತ್ತು. ಸಮಿತಿಯ ವರದಿಯನ್ನು ಅದೇ ವರ್ಷ ಮೈಸೂರು ಸಂಸ್ಥಾನ ಜಾರಿಗೆ ತಂದರೂ, ಅದು ಮಾಡಿದ ಶಿಫಾರಸುಗಳನ್ನು, ಸಮಿತಿಯೊಳಗೆ ನಡೆದ ಚರ್ಚೆಗಳನ್ನು ಮತ್ತು ಮುಸ್ಲಿಮರ ಒತ್ತಾಸೆಗಳನ್ನು ಗಮನಿಸಬೇಕು. ಸಮಿತಿಗೆ ಮೀಸಲಾತಿ ಹೊರತಾಗಿ ಉಳಿದ ವಿಷಯಗಳ ಬಗ್ಗೆ ಅಸಮಾಧಾನವಿರಲಿಲ್ಲ. ಆಸಕ್ತಿದಾಯಕ ವಿಷಯವೇನೆಂದರೆ ಎಲ್ಲಾ ಸದಸ್ಯರು ಮುಸ್ಲಿಮರ ಪ್ರಾತಿನಿಧ್ಯದ ಪರವಾಗಿದ್ದರು. ಆದರೆ ಅದನ್ನು ಯಾವ ರೂಪದಲ್ಲಿ ಅನುಷ್ಠಾನಗೊಳಿಸಬೇಕು ಎಂಬುದರ ಕುರಿತು ಜಿಜ್ಞಾಸೆ ಇತ್ತು. ಅದನ್ನು ಧರ್ಮಾಧಾರಿತವಾಗಿ ಪ್ರತ್ಯೇಕ ಚುನಾವಣಾ ಕ್ಷೇತ್ರಗಳ ಮೂಲಕ ಅನುಷ್ಠಾನಗೊಳಿಸಬೇಕೆ? ಎಂಬುದರ ಕುರಿತಾಗಿತ್ತು. ಸೀಲ್ ಸಮಿತಿ ಮತ್ತು ಸಂಸ್ಥಾನ ಈ ಬೇಡಿಕೆ ಕೋಮು ಧ್ರುವೀಕರಣಕ್ಕೆ ದಾರಿ ಮಾಡಿಕೊಡಬಹುದು ಎಂಬ ವಾದವನ್ನು ಮುಂದಿಟ್ಟುಕೊಂಡು ನಯವಾಗಿ ತಿರಸ್ಕರಿಸಿತ್ತು. ಇದರ ಮುಂದುವರಿಕೆಯಂತೆ 1923ರ ಸರಕಾರಿ ಆದೇಶ 35 ಹಿಂದುಳಿದ ವರ್ಗಗಳ ಪ್ರಾತಿನಿಧಿತ್ವದಲ್ಲಿ 15 ಸೀಟ್ಗಳನ್ನು ಮುಸ್ಲಿಮರಿಗೆ ಮೀಸಲಾಗಿಟ್ಟಿತ್ತು. ಅದೇ ರೀತಿ ಪ್ರತಿನಿಧಿ ಮಂಡಲಿಯಲ್ಲಿ ಮುಸ್ಲಿಮರ ಪ್ರಾತಿನಿಧಿತ್ವವನ್ನು ಖಾತ್ರಿಗೊಳಿಸಲು ಕನಿಷ್ಠ ಎರಡು ಸೀಟ್ಗಳನ್ನು ಮೀಸಲಾಗಿಟ್ಟಿತ್ತು. ಪ್ರಜಾ ಪ್ರತಿನಿಧಿ ಸಭೆಗೆ ಮುಸ್ಲಿಮರ ಸದಸ್ಯತ್ವದಲ್ಲಿ ಕೊರತೆಯಾದ ಸಂದರ್ಭದಲ್ಲಿ ಕನಿಷ್ಠ 15 ಮುಸ್ಲಿಮರ ಪ್ರಾತಿನಿಧಿತ್ವವನ್ನು ಸಂಸ್ಥಾನ ಖಾತ್ರಿಗೊಳಿಸಿತ್ತು. ಇವುಗಳ ನಡುವೆ ಪ್ರಾತಿನಿಧಿತ್ವವನ್ನು ಖಾತ್ರಿಗೊಳಿಸಲು ಸರಕಾರ ತಾನೇ ಗುರುತಿಸಿದ ಮುಸ್ಲಿಮ್ ಸಂಘಟನೆಗಳಿಂದ ಇಲ್ಲವೇ ನಾಮಕರಣದಿಂದ ಕೂಡಿದ ವಿಧಾನವನ್ನು ಅನುಷ್ಠಾನಕ್ಕೆ ತಂದಿತ್ತು.
ಪ್ರತಿನಿಧಿ ಸಭೆಯಲ್ಲಿ ಸದಸ್ಯತ್ವದ ಸಂಖ್ಯೆಯನ್ನು ನಿರ್ದಿಷ್ಟಗೊಳಿಸಲು 1938ರಲ್ಲಿ ಶ್ರೀನಿವಾಸ್ ಅಯ್ಯಂಗಾರ್ ಸಮಿತಿಯ ರಚನೆಯಾಗುತ್ತದೆ. ಈ ಕಾಲಘಟ್ಟ ಮೈಸೂರಿನಲ್ಲಿ ಸಂವಿಧಾನ ಅಥವಾ ಜವಾಬ್ದಾರಿ ಸರಕಾರದ ಬೇಡಿಕೆಯ ಸಂದರ್ಭ. ಇಲ್ಲಿ ನಡೆದ ಚರ್ಚೆಗಳು ಬಹುಮುಖ್ಯ. ಒಂದು ಚರ್ಚೆ ಮುಸ್ಲಿಮರಿಗೆ ಪ್ರತ್ಯೇಕ ಕ್ಷೇತ್ರಗಳನ್ನು ನಿರ್ಮಿಸಬೇಕೇ ಅಥವಾ ಮುಸ್ಲಿಮರಿಗಾಗಿಯೇ ಸಾಮಾನ್ಯ ಮತ್ತು ಜಂಟಿ ಕ್ಷೇತ್ರಗಳನ್ನು ಸ್ಥಾಪಿಸಬೇಕೇ? ಎಂಬುದರ ಕುರಿತಾಗಿತ್ತು. ಮುಸ್ಲಿಮರ ಪ್ರಕಾರ ಈ ಪ್ರತ್ಯೇಕ ಕ್ಷೇತ್ರ ಅಭಿವೃದ್ಧಿಯನ್ನಾಗಲಿ; ನಾಗರಿಕ ಪ್ರಜ್ಞೆಯನ್ನಾಗಲೀ ಕುಂಠಿತಗೊಳಿಸುವುದಿಲ್ಲ. ಇದನ್ನು ಕೆಲವರು ವಿರೋಧಿಸಿದರೆ ಇನ್ನು ಕೆಲವರು ಈ ಪ್ರಯೋಗವನ್ನು ಕೆಲವು ಸಮಯಕ್ಕೆ ಮಾತ್ರ ಸೀಮಿತಗೊಳಿಸಬೇಕು ಎಂದೆಲ್ಲಾ ವಾದಿಸಿದರು. ಇನ್ನು ಕೆಲವರು ಜಂಟಿ ಕ್ಷೇತ್ರದ ಪ್ರಯೋಗವನ್ನು ಬೆಂಬಲಿಸಿದರು. ಇದಕ್ಕಿಂತ ವಿಭಿನ್ನವಾಗಿದ್ದದು ಇನ್ನೊಂದು ಚರ್ಚೆ: ಯಾವುದೇ ಸರಕಾರದ ರಚನೆಯ ಸಂದರ್ಭದಲ್ಲಿ ಕನಿಷ್ಠ ಒಂದು ಪ್ರಾತಿನಿಧಿತ್ವ ಮುಸಲ್ಮಾನರಿಗೆ ನೀಡಬೇಕು. ಅಲ್ಲದೆ ಮೀಸಲಾತಿಯನ್ನು ಅವರ ಜನಸಂಖ್ಯೆಯ ಅನುಪಾತದಲ್ಲಿ ನೀಡಬೇಕು, ಪ್ರತೀ ಜಿಲ್ಲೆಯಿಂದ ಕನಿಷ್ಠ ಮೂರು ಸೀಟ್ಗಳನ್ನು ಮುಸ್ಲಿಮರಿಗೆ ಮೀಸಲಾಗಿಡಬೇಕು. ಇದೇ ಸಂದರ್ಭದಲ್ಲಿ ಮೈಸೂರು ಸಂಸ್ಥಾನದಲ್ಲಿ ಜವಾಬ್ದಾರಿ ಸರಕಾರದ ಸ್ಥಾಪನೆಯ ಕುರಿತು ಬೇಡಿಕೆಗಳು ತೀವ್ರತರವಾಗಿ ಆರಂಭಗೊಂಡಿದ್ದವು. ವಿಚಿತ್ರವೆಂದರೆ ಮುಸ್ಲಿಮ್ ಸಂಘಟನೆಗಳು ಮತ್ತು ಮೈಸೂರು ಮುಸ್ಲಿಮ್ ಲೀಗ್ ಸಂಸ್ಥಾನದ ಪರವಾಗಿ ನಿಂತಿದ್ದವು.
ಶ್ರೀನಿವಾಸ್ ಅಯ್ಯಂಗಾರ್ ಸಮಿತಿಯ ಪ್ರಮುಖ ಶಿಫಾರಸುಗಳೆಂದರೆೆ ಮುಸ್ಲಿಮರ ಮೀಸಲಾತಿಯನ್ನು ಪ್ರಸ್ತುತವಾಗಿದ್ದ 15ರಿಂದ 18ಕ್ಕೆ ಹೆಚ್ಚಿಸುವುದು. ಒಟ್ಟಾರೆ 68 ಸದಸ್ಯರಿರುವ ಪ್ರಜಾಮಂಡಲಿಯಲ್ಲಿ ನಾಲ್ಕು ಸೀಟ್ ಮುಸ್ಲಿಮರಿಗೆ ಮೀಸಲಾಗಿಡುವುದು. ನಾಮಕರಣದ ಬದಲಿಗೆ ಚುನಾವಣೆಯಲ್ಲಿ ಮುಸ್ಲಿಮ್ ಸದಸ್ಯರು ಆಯ್ಕೆಯಾಗುವಂತೆ ನೋಡಿಕೊಳ್ಳುವುದು.
ಸಮಿತಿ ಮಹಿಳೆಯರ ಎರಡು ಸೀಟ್ಗಳಲ್ಲಿ ಒಂದನ್ನು ಮುಸ್ಲಿಮ್ ಮಹಿಳೆಯರಿಗೆ ಮೀಸಲಿಡಲು ಶಿಫಾರಸು ಮಾಡಿತ್ತಲ್ಲದೆ, ಪ್ರತಿನಿಧಿ ಸಭೆಯಲ್ಲಿ ಖಾತ್ರಿ ಸೀಟ್ಗಳ ಸಂಖ್ಯೆಯನ್ನು ಇಪ್ಪತ್ತಕ್ಕೆ ಹೆಚ್ಚಿಸಲು ಶಿಫಾರಸು ಮಾಡಿತ್ತು. ಈ ಶಿಫಾರಸುಗಳ ಹೊರತಾಗಿಯೂ ಸಂಸ್ಥಾನ ಐದು ಸೀಟುಗಳನ್ನು ಮಂಡಲಿಯಲ್ಲಿ ಮೀಸಲಾಗಿಟ್ಟಿತ್ತು. ಸಂಸ್ಥಾನ ಅಯ್ಯಂಗಾರ್ ಸಮಿತಿಯ ಶಿಫಾರಸುಗಳಲ್ಲಿ ಕೆಲವು ಮಾರ್ಪಾಡು ಮಾಡಿತ್ತು. ಪ್ರತಿನಿಧಿ ಸಭೆಯ ಒಟ್ಟಾರೆ 310 ಸದಸ್ಯರಲ್ಲಿ 30 ಸೀಟ್ಗಳನ್ನು ಮುಸಲ್ಮಾನರಿಗೆ ಮೀಸಲಾಗಿಟ್ಟಿತ್ತು. ಈ ಮೀಸಲಾತಿಗೆ ಸ್ವಲ್ಪಬದಲಾವಣೆ ಬಂದದ್ದು 1940ರ ಹೊಸ ಕಾನೂನು ಜಾರಿಗೊಳಿಸುವ ಸಂದರ್ಭದಲ್ಲಿ. ಈ ಕಾನೂನು ಪ್ರತಿನಿಧಿ ಸಭೆಯ ಮುಸ್ಲಿಮ್ ಸೀಟ್ಗಳಲ್ಲಿ(30) ಯಾವುದೇ ಬದಲಾವಣೆ ಮಾಡದಿದ್ದರೂ, ಮಂಡಲಿಯಲ್ಲಿ ಮೀಸಲಾತಿಯನ್ನು ಕಡಿತಗೊಳಿಸಿ ಬರೀ ಐದು ಸೀಟ್ಗಳಿಗೆ ಸೀಮಿತಗೊಳಿಸಿತ್ತು.
ಅದೇನೇ ಇದ್ದರೂ ಮೀಸಲಾತಿಗೆ ಮೈಸೂರು ಸಂಸ್ಥಾನದ ಪ್ರಬುದ್ಧ ಕೊಡುಗೆಯನ್ನು ನಿರಾಕರಿಸಲು ಸಾಧ್ಯವಿಲ್ಲ. ಸ್ವಾತಂತ್ರ್ಯಾನಂತರ ಬದಲಾದ ಸನ್ನಿವೇಶದಲ್ಲಿ ಈ ಮೀಸಲಾತಿ ನೀತಿ ಸಂಪೂರ್ಣವಾಗಿ ಬದಲಾಯಿತು. ಮುಸ್ಲಿಮರ ಮೀಸಲಾತಿ ಹಿಂದುಳಿದ ವರ್ಗಗಳ ಪಟ್ಟಿಯ ಭಾಗವಾಗುತ್ತಾ ಹೋಯಿತು. ಮುಸ್ಲಿಮರಿಗೆ ರಾಜಕೀಯದಲ್ಲಿ ಮೀಸಲಾತಿಗಿಂತಲೂ ಪ್ರಾತಿನಿಧ್ಯತೆಯ ಕೊರತೆ ತೀವ್ರತರವಾಗಿ ಕಾಡುತ್ತಾಹೋಯಿತು. ಪ್ರಾತಿನಿಧಿತ್ವಕ್ಕಾಗಿ ಸಮುದಾಯ ವ್ಯವಸ್ಥೆಯೊಂದಿಗೆ ತಿಣುಕಾಡುತ್ತಾ ಹೋಗಬೇಕಾಯಿತು. ಇದೊಂದು ದುರಂತವಲ್ಲದೆ ಮತ್ತೇನು?
‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ?
ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request.
Help us delete comments that do not follow these guidelines by informing us (vbwebdesk@gmail.com). Let's work together to keep the conversation civil.
www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು ' ವಾರ್ತಾ ಭಾರತಿ' ಕಾದಿರಿಸಿದೆ.
ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ. ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.