ಪಠಾಣ್ಕೋಟ್ ವಾಯುನೆಲೆ ಶೋಧಕಾರ್ಯ ಅಂತಿಮ ಹಂತದಲ್ಲಿ
ಪಠಾಣ್ಕೋಟ್,ಜ.8: ಕಳೆದ ಶನಿವಾರ ಭಯೋತ್ಪಾದಕರ ದಾಳಿಗೆ ಗುರಿಯಾಗಿದ್ದ ಪಠಾಣ್ಕೋಟ್ ವಾಯುನೆಲೆಯನ್ನು ಆತಂಕಮುಕ್ತಗೊಳಿಸಲು ಎನ್ಎಸ್ಜಿ ಮತ್ತು ಸೇನಾ ಸಿಬ್ಬಂದಿ ಹಾಗೂ ವಾಯುಪಡೆಯ ಗರುಡ ಕಮಾಂಡೋಗಳು ಕಳೆದ ಮೂರು ದಿನಗಳಿಂದ ನಡೆಸುತ್ತಿರುವ ಶೋಧ ಕಾರ್ಯಾಚರಣೆಯು ಅಂತಿಮ ಹಂತದಲ್ಲಿದೆ.ಇಡೀ ಪ್ರದೇಶವನ್ನು ಶೀಘ್ರವೇ ಆತಂಕಮುಕ್ತಗೊಳಿಸಲಾಗುವುದು ಎಂದು ಎಸ್ಎಸ್ಪಿ ಆರ್.ಕೆ.ಬಕ್ಷಿ ಅವರು ಶುಕ್ರವಾರ ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಪಠಾಣ್ಕೋಟ್, ಆಸುಪಾಸಿನ ಗ್ರಾಮಗಳು ಮತ್ತು ಪಟ್ಟಣಗಳಲ್ಲಿ ಎಲ್ಲ ವಾಹನಗಳು ಮತ್ತು ಜನರನ್ನು ಆಮೂಲಾಗ್ರ ತಪಾಸಣೆ ನಡೆಸಲಾಗುತ್ತಿದೆ. ಯಾವುದೇ ಅಪಾಯಕ್ಕೆ ಆಸ್ಪದವಿರದಂತೆ ಕಟ್ಟುನಿಟ್ಟಾಗಿ ಶೋಧ ಕಾರ್ಯಾಚರಣೆಯನ್ನು ನಡೆಸುತ್ತಿದ್ದೇವೆ ಎಂದರು.
ಭಯೋತ್ಪಾದಕರು ಎಲ್ಲಿಯೂ ಅಡಗಿಕೊಂಡಿಲ್ಲ ಮತ್ತು ಜೀವಹಾನಿಗೆ ಕಾರಣವಾಗಬಹುದಾದ ಸ್ಫೋಟಕಗಳು ಇಲ್ಲ ಎನ್ನುವುದನ್ನು ಖಚಿತಪಡಿಸಿಕೊಳ್ಳುವುದು ಈ ಶೋಧ ಕಾರ್ಯಾಚರಣೆಯ ಉದ್ದೇಶವಾಗಿದೆ.
Next Story