'ನನ್ನ ಪತ್ನಿ, ಮಕ್ಕಳಿಗೆ ' ಭಾರತ್ ಮಾತಾಕಿ ಜೈ' ಎಂದೇ ಹೆಸರಿಡುವೆ' ಸಂಘ ಪರಿವಾರಕ್ಕೆ ಕುಟುಕಿದ ಕನ್ಹಯ್ಯ
ಹೊಸದಿಲ್ಲಿ , ಎ . 9: ಸಂಘ ಪರಿವಾರವನ್ನು ಮತ್ತೆ ಕುಟುಕಿರುವ ಜೆ ಎನ್ ಯು ವಿದ್ಯಾರ್ಥಿ ಸಂಘದ ನಾಯಕ ಕನ್ಹಯ್ಯ ಕುಮಾರ್ ತನ್ನ ಭಾವೀ ಪತ್ನಿಗೆ ' ಭಾರತ್ ಮಾತಾಕಿ ಜೈ' ಎಂದೇ ಹೆಸರಿಡುವುದಾಗಿ ಹೇಳಿದ್ದಾರೆ.
ಇಲ್ಲಿನ ಕಾನ್ಸ್ಟ್ ಟ್ಯೂಶನ್ ಕ್ಲಬ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಕನ್ಹಯ್ಯ " ನಾನು ನನ್ನ ಪತ್ನಿಗೆ ' ಭಾರತ್ ಮಾತಾಕಿ ಜೈ ' ಎಂದು ಹೆಸರಿಡಲು ನಿರ್ಧರಿಸಿದ್ದೇನೆ. ನಾನೂ ನನ್ನ ಹೆಸರನ್ನು ' ಭಾರತ್ ಮಾತಾಕಿ ಜೈ ' ಎಂದು ಬದಲಾಯಿಸುತ್ತೇನೆ. ನನ್ನ ಮಕ್ಕಳ ಹೆಸರನ್ನೂ ' ಭಾರತ್ ಮಾತಾಕಿ ಜೈ ' ಎಂದು ಇಡುತ್ತೇನೆ. ಆಗ ನಾನು ನನ್ನ ಪತ್ನಿಯನ್ನು ಕರೆಯುವಾಗ ನಾನು ' ಭಾರತ್ ಮಾತಾಕಿ ಜೈ ' ಎಂದೇ ಹೇಳಬೇಕಾಗುತ್ತೆ. ಶಿಕ್ಷಕರು ನನ್ನ ಮಕ್ಕಳನ್ನು ಕರೆಯುವಾಗ ಅವರೂ ' ಭಾರತ್ ಮಾತಾಕಿ ಜೈ ' ಎಂದೇ ಕರೆಯುತ್ತಾರೆ.
ಅಷ್ಟಕ್ಕೇ ನಿಲ್ಲದ ಕನ್ಹಯ್ಯ " ಆರೆಸ್ಸೆಸ್ ರಾಷ್ಟ್ರೀಯತೆಯನ್ನು ಕೇಸರೀಕರಣ ಗೊಳಿಸಿದೆ. ಇಂದು ಸಂಘರ್ಷ ಸಂಘಿಸ್ತಾನ್ ಹಾಗು ಹಿಂದುಸ್ತಾನ್ ನಡುವೆ ನಡೆಯುತ್ತಿದೆ " ಎಂದು ಹೇಳಿದರು.
ತಾನು ಮೋದಿ ವಿರೋಧಿ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಕನ್ಹಯ್ಯ " ಅವರು ಭ್ರಷ್ಟಾಚಾರ ವಿರೋಧಿಸುವ ಹಾಗು ಪ್ರತಿಯೊಬ್ಬರಿಗೆ 15 ಲಕ್ಷ ನೀಡುವ ಮಾತನಾಡುವಾಗ " ನಾನು ಅವರ ಪ್ರಬಲ ಬೆಂಬಲಿಗನಾಗಿದ್ದೆ " ಎಂದು ಹೇಳಿದರು.
" ನಾನು ದೇಶ ವಿರೋಧಿ ಘೋಷಣೆಗಳನ್ನು ಖಂಡಿಸಿದ್ದೇನೆ. ಆದರೆ ಕೆಲವರ ಘೋಷಣೆಗಳಿಂದ ನಾಶವಾಗುವಷ್ಟು ದುರ್ಬಲವೇ ನಮ್ಮ ದೇಶ ? ಘೋಷಣೆ ಕೂಗುವುದು ದೇಶ ವಿರೋಧಿಯಾಗುತ್ತದೆಯೇ ? ಸಂಸತ್ತಿನಲ್ಲಿ ಕುಳಿತು ಜನರ ಹಿತಾಸಕ್ತಿ ವಿರುದ್ಧ ಕೆಲಸ ಮಾಡುವುದು ದೇಶದ್ರೋಹವಲ್ಲವೇ ? " ಎಂದವರು ಪ್ರಶ್ನಿಸಿದರು.