ಕನ್ಹಯ್ಯ ಅಸ್ವಸ್ಥ; ಆಸ್ಪತ್ರೆಗೆ ದಾಖಲು
ತೀವ್ರಗೊಂಡ ಜೆಎನ್ಯು ವಿದ್ಯಾರ್ಥಿಗಳ ಉಪವಾಸ ಸತ್ಯಾಗ್ರಹ
ಹೊಸದಿಲ್ಲಿ, ಮೇ 5: ಜೆಎನ್ಯು ಕ್ಯಾಂಪಸ್ನಲ್ಲಿ ಕಳೆದೊಂದು ವಾರದಿಂದ ಉಪವಾಸ ಮುಷ್ಕರ ನಡೆಸುತ್ತಿರುವ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕನ್ಹಯ್ಯಾ ಕುಮಾರ್ ಅವರ ದೇಹಸ್ಥಿತಿ ಗುರುವಾರ ಹದಗೆಟ್ಟಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಕನ್ಹಯ್ಯ ಸ್ಥಿತಿ ಹದಗೆಟ್ಟಿದ್ದು, ಅವರು ಅರೆ ಪ್ರಜ್ಞಾವಸ್ಥೆಯಲ್ಲಿದ್ದಾರೆ. ಅವರ ಅಂಗಾಂಗಗಳಿಗೆ ಆಂತರಿಕ ಹಾನಿಯಾಗಿರುವ ಸಾಧ್ಯತೆಯಿದೆ ಎಂದು ಸ್ನೇಹಿತ ಉಮರ್ ಖಾಲಿದ್ ಸುದ್ದಿಗಾರರಿಗೆ ತಿಳಿಸಿದರು.
ಗುರುವಾರ ಬೆಳಗ್ಗೆ ಕನ್ಹಯ್ಯೆ ವಾಂತಿ ಮಾಡಿಕೊಳ್ಳತೊಡಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು ಎಂದರು.
ಫೆ.9ರಂದು ಜೆಎನ್ಯು ಕ್ಯಾಂಪಸ್ನಲ್ಲಿ ನಡೆದಿದ್ದ ವಿವಾದಾತ್ಮಕ ಕಾಶ್ಮೀರ ಕಾರ್ಯಕ್ರಮ ಕುರಿತಂತೆ ತನಿಖೆ ನಡೆಸಿದ್ದ ಉನ್ನತ ಮಟ್ಟದ ಸಮಿತಿಯು ತಮಗೆ ವಿಧಿಸಿರುವ ದಂಡನೆಯನ್ನು ವಿರೋಧಿಸಿ ಕನ್ಹಯ್ಯಾ ಮತ್ತು ಇತರ 19 ವಿದ್ಯಾರ್ಥಿಗಳು ಎ.28ರಿಂದ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುತ್ತಿದ್ದಾರೆ.
ಇತರ ವಿದ್ಯಾರ್ಥಿಗಳ ಆರೋಗ್ಯವೂ ಹದಗೆಡುತ್ತಿದೆ. ಎಲ್ಲರೂ ಸುಮಾರು 4-6 ಕೆಜಿ ತೂಕವನ್ನು ಕಳೆದುಕೊಂಡಿದ್ದಾರೆ. ಉಪವಾಸ ಮುಷ್ಕರ ಎಂಟನೆ ದಿನಕ್ಕೆ ಕಾಲಿರಿಸಿದೆ. ಆದರೂ ಜೆಎನ್ಯು ಆಡಳಿತ ಸ್ಪಂದಿಸಿಲ್ಲ ಎಂದು ಒಂದು ಸೆಮಿಸ್ಟರ್ ಅವಧಿಗೆ ಅಮಾನತುಗೊಂಡಿರುವ ಖಾಲಿದ್ ಆರೋಪಿಸಿದರು.