ಲಿಬಿಯಾದಲ್ಲಿ ರಕ್ಷಿಸಲ್ಪಟ್ಟ 29 ಭಾರತೀಯರು ತಾಯ್ನಿಡಿಗೆ ವಾಪಸ್
ಹೊಸದಿಲ್ಲಿ, ಮೇ 12: ಹಿಂಸಾಪೀಡಿತ ಲಿಬಿಯಾದಿಂದ ರಕ್ಷಿಸಲ್ಪಟ್ಟ ಕೇರಳ ಹಾಗೂ ತಮಿಳುನಾಡಿನ ಆರು ಕುಟುಂಬದ 29 ಸದಸ್ಯರು ಗುರುವಾರ ಕೊಚ್ಚಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಈ ಪೈಕಿ ಕೇರಳದ 18 ಹಾಗೂ ತಮಿಳುನಾಡಿನ 11 ಮಂದಿ ಇದ್ದಾರೆ. ಇದರಲ್ಲಿ ಮಕ್ಕಳೂ ಸೇರಿದ್ದಾರೆ.
29 ಜನರ ಪೈಕಿ ಕೆಲವರು ಲಿಬಿಯಾದ ಸಬ್ರಥಾ ಪಟ್ಟಣದ ಝಾವಿಯಾ ಆಸ್ಪತ್ರೆಯಲ್ಲಿ ಕಾರ್ಯ ನಿರತರಾಗಿದ್ದರು. ಮಾರ್ಚ್ನಲ್ಲಿ ಸಬ್ರಥಾ ನಗರದ ಮನೆ ಮೇಲೆಯೇ ನಡೆದ ಶೆಲ್ ದಾಳಿಯಲ್ಲಿ ಕೇರಳದ ನರ್ಸ್ ಹಾಗೂ ಆಕೆಯ ಮಗ ಸಾವನ್ನಪ್ಪಿದ್ದರು. ಈ ಘಟನೆಯ ಬಳಿಕ ಲಿಬಿಯಾದಲ್ಲಿ ಕಾರ್ಯನಿರ್ವಹಿಸುತ್ತಿರುವ ಕೇರಳ ನಿವಾಸಿಗಳನ್ನು ತಕ್ಷಣವೇ ಸ್ವದೇಶಕ್ಕೆ ಕರೆಸಿಕೊಳ್ಳುವಂತೆ ಸರಕಾರಕ್ಕೆ ಬೇಡಿಕೆ ಇಡಲಾಗಿತ್ತು.
ಕೇರಳ ಸರಕಾರ ಲಿಬಿಯಾದಲ್ಲಿರುವ ರಾಜ್ಯದ ಜನರನ್ನು ರಕ್ಷಿಸುವಂತೆ ಕೇಂದ್ರ ವಿದೇಶಾಂಗ ಸಚಿವೆ ಸುಶ್ಮಾ ಸ್ವರಾಜ್ಗೆ ಮನವಿ ಮಾಡಿತ್ತು.
ಎರಡು ದಿನಗಳ ಹಿಂದೆ ಕೇರಳದ ತಿರುವನಂತಪುರದಲ್ಲಿ ನಡೆದ ಬಿಜೆಪಿ ಚುನಾವಣಾ ರ್ಯಾಲಿಯೊಂದರಲ್ಲಿ ಭಾಗವಹಿಸಿದ್ದ ಪ್ರಧಾನ ಮಂತ್ರಿ ನರೇಂದ್ರ ಮೋದಿ, ಸಂಕಟಪೀಡಿತ ಲಿಬಿಯಾದಲ್ಲಿರುವ ಕೇರಳ ನಿವಾಸಿಗಳು ಸೇರಿದಂತೆ 29 ಭಾರತೀಯರನ್ನು ಆದಷ್ಟು ಬೇಗನೆ ಕರೆತರಲಾಗುವುದು ಎಂದು ಭರವಸೆ ನೀಡಿದ್ದರು.