ಸಿಖ್ಖರು ಪಂಜಾಬ್ನಲ್ಲಿ ಅಲ್ಪಸಂಖ್ಯಾತರೇ? ಪರಿಶೀಲನೆಗೆ ಸುಪ್ರೀಂಕೋರ್ಟ್ ನಿರ್ಧಾರ
ಹೊಸದಿಲ್ಲಿ, ಜ.19: ‘ತಮ್ಮ ತವರು ನೆಲ ಪಂಜಾಬ್ನಲ್ಲೇ ಸಿಖ್ಖರು ಅಲ್ಪಸಂಖ್ಯಾತ ಗುಂಪೇ ಎಂದು ಪರಿಶೀಲಿಸಲು ಸುಪ್ರೀಂ ಕೋರ್ಟ್ ಸೋಮವಾರ ಒಪ್ಪಿದೆ. ಇದೊಂದು ಹಾಸ್ಯಾಸ್ಪದ ಸಂಗತಿಯಂತೆ ಭಾಸವಾದರೂ, ಇದು ದೂರಗಾಮಿ ಪ್ರಾಧಾನ್ಯ ಹಾಗೂ ಪರಿಣಾಮಗಳನ್ನು ಹೊಂದಿದೆಯೆಂದು ಅದು ಹೇಳಿದೆ.
ಪಂಜಾಬ್ನಲ್ಲಿ ಸಿಖ್ಖರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸುವಂತೆ ಹಿರಿಯ ವಕೀಲ ರಾಕೇಶ್ ದ್ವಿವೇದಿ ಮಾಡಿದ ಮನವಿಯನ್ನು ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ನ್ಯಾಯಮೂರ್ತಿಗಳಾದ ಎಫ್ಎಂಐ ಖಲೀಫುಲ್ಲಾ, ಎ.ಕೆ. ಸಿಕ್ರಿ, ಎಸ್.ಎ. ಬೊಬ್ಡೆ ಹಾಗೂ ಆರ್. ಭಾನುಮತಿಯವರನ್ನೊಳಗೊಂಡ ಪೀಠ ಮೊದಲು ವಿರೋಧಿಸಿತು. ಜಮ್ಮು-ಕಾಶ್ಮೀರದಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಪರಿಗಣಿಸಬಹುದೇ ಎಂದು ಅದು ಪ್ರಶ್ನಿಸಿತು.
ಅದಕ್ಕಾಗಿ, ನಾಗಾಲ್ಯಾಂಡ್ ಹಾಗೂ ಮೇಘಾಲಯಗಳಲ್ಲಿ ಬಹುಸಂಖ್ಯಾತರಾಗಿರುವ ಕ್ರೈಸ್ತರನ್ನು ಆ ಎರಡು ರಾಜ್ಯಗಳಲ್ಲಿ ಅಲ್ಪಸಂಖ್ಯಾತರೆಂದು ಹೇಳಬಹುದೇ? ಸಿಖ್ಖರು ಇತರ ರಾಜ್ಯಗಳಲ್ಲಿ ಅಲ್ಪಸಂಖ್ಯಾತರಾಗಿರಬಹುದು. ಆದರೆ, ಪಂಜಾಬ್ನಲ್ಲಿ ಅವರನ್ನು ಅಲ್ಪಸಂಖ್ಯಾತ ಗುಂಪೆಂದು ಪರಿಗಣಿಸುವುದು ಸಾಧ್ಯವೇ? ಎಂದು ಸಂವಿಧಾನಪೀಠ ಕೇಳಿತು.
ಆದರೆ ದ್ವಿವೇದಿ, ಆ ಗುಂಪು ಸಂಖ್ಯಾ ದೃಷ್ಟಿಯಿಂದ ಅಲ್ಪಸಂಖ್ಯಾತವೇ ಹಾಗೂ ಅವರನ್ನು ಇತರ ಗುಂಪುಗಳು ಮೀರಿವೆಯೇ ಎಂಬ ಎರಡೂ ಮಾನದಂಡಗಳನ್ನು ಸಮುದಾಯವೊಂದನ್ನು ಅಲ್ಪಸಂಖ್ಯಾತವೆಂದು ಘೋಷಿಸಲು ಇರಿಸಿಕೊಳ್ಳಬೇಕು ಹಾಗೂ ಅಂತಹ ನಿರ್ಧಾರಕ್ಕೆ ರಾಜ್ಯವನ್ನು ಭೌಗೋಳಿಕ ಘಟಕವಾಗಿ ಪರಿಗಣಿಸಬೇಕೆಂಬ ಇನ್ನೊಂದು ಸಂವಿಧಾನ ಪೀಠ ತಪ್ಪಾಗಿ ನಿಗದಿಪಡಿಸಿದೆಯೆಂದು ಬೆಟ್ಟು ಮಾಡಿದರು.
ಒಂದು ರಾಜ್ಯದಲ್ಲಿ ಸಮುದಾಯವೊಂದರ ಸಂಖ್ಯಾಬಲವನ್ನು ಮಾನದಂಡವಾಗಿ ತೆಗೆದುಕೊಳ್ಳಬೇಕೇ ಹೊರತು, ಅವರನ್ನು ಇತರ ಸಮುದಾಯಗಳು ಮೀರಿಸಿವೆಯೇ ಎಂಬುದನ್ನಲ್ಲವೆಂದು ಅವರು ಹೇಳಿದರು.
ಒಂದು ಅಲ್ಪಸಂಖ್ಯಾತ ಸಮುದಾಯವು ರಾಜ್ಯವೊಂದರಲ್ಲಿ ಪ್ರಬಲವಿರಬಹುದು ಹಾಗೂ ಅದು ಬೇರೆ ಗುಂಪುಗಳನ್ನು ಮೀರಿಸದಿರಬಹುದು. ಇದರರ್ಥ ಅವರಿಗೆ ರಕ್ಷಣೆಯ ಹಕ್ಕನ್ನು ನಿರಾಕರಿಸಬಹುದೆಂದಲ್ಲ. ಅಲ್ಲದೆ, ಸಂವಿಧಾನ ಅಲ್ಪಸಂಖ್ಯಾತ ಗುಂಪೊಂದಕ್ಕೆ ಖಾತ್ರಿಪಡಿಸಿರುವ ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಕ್ಕುಗಳನ್ನೂ ನಿರಾಕರಿಸುವಂತಿಲ್ಲ ಎಂದು ದ್ವಿವೇದಿ ವಾದಿಸಿದರು.