ಜಮ್ಮು-ಕಾಶ್ಮೀರದಲ್ಲಿ ಹಿಂಸಾಚಾರ : ಪ್ರಚೋದಿಸುವ ಶೇ.5 ಮಂದಿ ದೇಶವಿರೋಧಿಗಳು - ಮೆಹಬೂಬಾ ಕಟುನುಡಿ
ಹೊಸದಿಲ್ಲಿ, ಆ.25: ಜಮ್ಮು-ಕಾಶ್ಮೀರದಲ್ಲಿ ಜುಲೈಯಿಂದೀಚೆಗೆ ನಡೆಯುತ್ತಿರುವ ಹಿಂಸಾಚಾರವನ್ನು ಕಾಶ್ಮೀರಿಗಳು 2010ರಲ್ಲಿ ಸಕಾರಣವಾಗಿ ವ್ಯಕ್ತಪಡಿಸಿದ್ದ ಅಸಮಾಧಾನಕ್ಕೆ ಯಾವುದೇ ರೀತಿಯಲ್ಲೂ ಹೋಲಿಸುವಂತಿಲ್ಲವೆಂದು ಜಮ್ಮು-ಕಾಶ್ಮೀರದ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಇಂದು ಸಿಟ್ಟಿನಿಂದ ಒತ್ತಿ ಹೇಳಿದ್ದಾರೆ.
2010ರಲ್ಲಿ ಒಂದು ಕಾರಣವಿತ್ತು. ಶೋಪಿಯನ್ ಘಟನೆ(ಭದ್ರತಾ ಸಿಬ್ಬಂದಿಯಿಂದ ಅತ್ಯಾಚಾರ) ನಡೆದಿತ್ತು. ಭದ್ರತಾಧಿಕಾರಿಗಳು ಅಮಾಯಕರನ್ನು ಗುರಿ ಮಾಡಿದ್ದರು. ಈಗ ರಾಜ್ಯದಲ್ಲಿ ನಡೆಯುತ್ತಿರುವುದನ್ನು ಆಗಿನ ಪರಿಸ್ಥಿತಿಗೆ ಹೋಲಿಸಿ ಗೊಂದಲ ಮಾಡಿಕೊಳ್ಳಬೇಡಿ. ಈಗ ಯುವಕರು ಪೊಲೀಸ್ ಠಾಣೆಯೊಂದಕ್ಕೆ ಬೆಂಕಿ ಹಚ್ಚುವುದನ್ನು, ಯಾವನೋ ಒಬ್ಬ ಪ್ರತಿಭಟನಕಾರ ಹಾಲು ಖರೀದಿಸಲು ಹೊರ ಹೋಗಿದ್ದಾಗ ಗುಂಡಿಗೆ ಬಲಿಯಾದುದಕ್ಕೆ ಹೋಲಿಸಲಾಗದೆಂದು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ರೊಡನೆ ನಡೆಸಿದ ಪತ್ರಿಕಾ ಗೋಷ್ಠಿಯೊಂದರಲ್ಲಿ ಮುಫ್ತಿ ವಿವರಿಸಿದರು.
ಜುಲೈಯಿಂದೀಚೆಗೆ ರಾಜ್ಯದಲ್ಲಿ ಹಿಂಸೆಗೆ ಪ್ರಚೋದನೆ ನೀಡುತ್ತಿರುವ ಶೇ.5ರಷ್ಟು ಕಾಶ್ಮೀರಿಗಳು ‘ದೇಶ ವಿರೋಧಿಗಳಾಗಿದ್ದಾರೆ’. ಅವರು ನ್ಯಾಯಬದ್ಧ ದೂರಿನೊಂದಿಗೆ ಪ್ರತಿಭಟಿಸುತ್ತಿರುವ ನ್ಯಾಯಬದ್ಧ ಪ್ರತಿಭಟನಕಾರರಲ್ಲ. ಮಾತುಕತೆಯನ್ನು ಬಯಸುತ್ತಿರುವವರು ಹಾಗೂ ಕಲ್ಲು ಎಸೆಯಲು ಯುವಕರನ್ನು ಪ್ರಚೋದಿಸುತ್ತಿರುವವರ ನಡುವಿನ ವ್ಯತ್ಯಾಸ ಗಮನಿಸಬೇಕೆಂದು ಅವರು ಹೇಳಿದರು.