ಹೆಚ್ಚುವರಿ ಶಿಕ್ಷಕರ ನೇಮಕಾತಿಗೆಅಲ್ಪಸಂಖ್ಯಾತ ಸಂಸ್ಥೆಗೆ ಒತ್ತಾಯಿಸುವಂತಿಲ್ಲ : ಬಾಂಬೆ ಹೈಕೋರ್ಟ್
ನಾಗಪುರ, ಡಿ.12: ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಸಮ್ಮತಿಯ ಹೊರತಾಗಿ ಅವುಗಳ ಮೇಲೆ ಹೆಚ್ಚುವರಿ ಶಿಕ್ಷಕರನ್ನು ಹೇರುವಂತಿಲ್ಲವೆಂದು ಬಾಂಬೆ ಹೈಕೋರ್ಟ್ ಹೇಳಿದೆ.
ಇತರ ಶಾಲೆಗಳ ಹೆಚ್ಚುವರಿ ಶಿಕ್ಷಕರನ್ನು ಅಂತಹ ಸಂಸ್ಥೆಗಳು ನೇಮಿಸಿಕೊಳ್ಳುವಂತೆ ಸರಕಾರವು ನಿರ್ದೇಶನ ನೀಡುವಂತಿಲ್ಲ ಎಂದು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳ ಹಕ್ಕನ್ನು ಎತ್ತಿ ಹಿಡಿಯುವ ವೇಳೆ, ನ್ಯಾಯಮೂರ್ತಿಗಳಾದ ವಸಂತಿ ನಾಯ್ಕಾ ಹಾಗೂ ಸ್ವಪ್ನಾ ನಾಯ್ಕಾರನ್ನೊಳಗೊಂಡ ವಿಭಾಗೀಯ ಪೀಠವೊಂದು ಆದೇಶಿಸಿದೆ.
ಹೆಚ್ಚುವರಿ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಅಲ್ಪಸಂಖ್ಯಾತ ಶಾಲೆಯೊಂದಕ್ಕೆ ಅಮರಾವತಿಯ ಶಿಕ್ಷಣಾಧಿಕಾರಿ ನಿರ್ದೇಶಿಸಿರುವ ಕ್ರಮವನ್ನು ಹೈಕೋರ್ಟ್ ರದ್ದುಗೊಳಿಸಿದೆ.
ಅಮರಾವತಿ ಜಿಲ್ಲೆಯ ಚಂದೂರೆ ಬಝಾರ್ನ ಶ್ರೀ ಬಾಲಮುಕುಂದ ರಥಿ ಶಿಕ್ಷಣ ಸಂಸ್ಥೆ ದಾಖಲಿಸಿದ್ದ ಅರ್ಜಿಯೊಂದನ್ನು ಮಾನ್ಯ ಮಾಡಿದ ಪೀಠವು, ಶಿಕ್ಷಣಾಧಿಕಾರಿ ಹೆಚ್ಚುವರಿಯೆಂದು ಘೋಷಿಸಿದ ಶಿಕ್ಷಕರನ್ನು ನೇಮಿಸಿಕೊಳ್ಳುವಂತೆ ಅಲ್ಪಸಂಖ್ಯಾರಿಂದ ನಡೆಸಲ್ಪಡುವ ಶಿಕ್ಷಣ ಸಂಸ್ಥೆಗೆ ಒತ್ತಡ ಹೇರುವ ಹಕ್ಕು ಅಧಿಕಾರಿಗಳಿಗಿಲ್ಲವೆಂದು ಸ್ಪಷ್ಟಪಡಿಸಿವೆ.