ಪಠಾಣ್ಕೋಟ್ ವಾಯುನೆಲೆಗೆ ಉಗ್ರರ ದಾಳಿ: 5 ಉಗ್ರರು, 3 ಯೋಧರ ಸಾವು
ಪಂಜಾಬ್ನ ಪಠಾಣ್ಕೋಟ್ನಲ್ಲಿ ಘಟನೆ
ಪಠಾಣ್ಕೋಟ್, ಜ.2: ಪಂಜಾಬ್ನ ಪಠಾಣ್ಕೋಟ್ ಜಿಲ್ಲೆಯಲ್ಲಿರುವ ವಾಯುಪಡೆ ನೆಲೆಯ ಮೇಲೆ ಶನಿವಾರ ಬೆಳಗ್ಗೆ ದಾಳಿ ನಡೆಸಿದ ಐವರು ಭಯೋತ್ಪಾದಕರನ್ನು ಭದ್ರತಾ ಪಡೆಗಳು ಕೊಂದು ಹಾಕಿವೆ. ಇದೇ ವೇಳೆ ಭಯೋತ್ಪಾದಕರ ವಿರುದ್ಧದ ಹೋರಾಟದಲ್ಲಿ ಭಾರತೀಯ ವಾಯುಪಡೆಯ ಮೂವರು ಯೋಧರು ಹುತಾತ್ಮರಾಗಿದ್ದಾರೆ ಹಾಗೂ ಆರು ಮಂದಿ ಗಾಯಗೊಂಡಿದ್ದಾರೆ.
ಸೇನಾ ಸಮವಸ್ತ್ರ ಧರಿಸಿದ್ದ 4-5 ಮಂದಿಯ ತಂಡವೊಂದು ನಸುಕಿನ 3:30ರ ವೇಳೆಗೆ ವಾಯುನೆಲೆಯ ಮೇಲೆ ದಾಳಿ ನಡೆಸಿತು. ಅವರು ಜೈಷೆ ಮುಹಮ್ಮದ್ ಭಯೋತ್ಪಾದಕ ಗುಂಪಿನ ಸದಸ್ಯರೆಂಬುದಾಗಿ ಶಂಕಿಸಲಾಗಿದೆ. ಪಠಾಣ್ಕೋಟ್ ಜಿಲ್ಲೆಯ ನದಿ ದಂಡೆ ಮೂಲಕ ಭಯೋತ್ಪಾದಕರು ಪಾಕಿಸ್ತಾನದಿಂದ ಭಾರತಕ್ಕೆ ನುಸುಳಿದ್ದಾರೆ ಎನ್ನಲಾಗಿದೆ. ಆತ್ಮಹತ್ಯಾ ದಾಳಿ ನಡೆಸಲು ಬಂದಿದ್ದ ಅವರು, ಪಠಾಣ್ಕೋಟ್ ವಾಯುಪಡೆ ನೆಲೆಗೆ ಹೋಗಲು ವಾಹನಗಳನ್ನು ಅಪಹರಿಸಿದ್ದರು. ರಕ್ಷಣಾ ನೆಲೆಯ ಮೇಲೆ ದಾಳಿ ನಡೆಸುವುದು ಅವರ ಗುರಿಯಾಗಿತ್ತು.
‘‘ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವಿನ ಗುಂಡಿನ ಕಾಳಗ ಶನಿವಾರ ಬೆಳಗ್ಗೆ ಸುಮಾರು 8 ಗಂಟೆಯ ವೇಳೆಗೆ ಕೊನೆಗೊಂಡಿತು’’ ಎಂದು ಪಂಜಾಬ್ ಪೊಲೀಸ್ನ ಹೆಚ್ಚುವರಿ ಮಹಾನಿರ್ದೇಶಕ ಎಚ್.ಎಸ್. ಧಿಲ್ಲೋನ್ ತಿಳಿಸಿದರು.
‘‘ಆದಾಗ್ಯೂ, ಶೋಧ ಕಾರ್ಯಾಚರಣೆ ಮುಂದುವರಿಯುತ್ತಿದೆ’’ ಎಂದು ಅವರು ಹೇಳಿದರು.
ಆದರೆ, ಆ ಕೂಡಲೇ ಪಠಾಣ್ಕೋಟ್ ವಾಯುಪಡೆ ನೆಲೆಯ ಒಳಗಿನಿಂದ ಬೃಹತ್ ಸ್ಫೋಟಗಳ ಸದ್ದು ಕೇಳಿಬಂತು. ಭಯೋತ್ಪಾದಕರ ವಿರುದ್ಧದ ಕಾಳಗ ಮುಂದುವರಿಯುತ್ತಿದೆ ಎಂದು ಮೂಲಗಳು ತಿಳಿಸಿದವು.
ಜೈಷೆ ಮುಹಮ್ಮದ್ನ ಭಯೋತ್ಪಾದಕರು ಸುಮಾರು ಮೂರು ದಿನಗಳ ಹಿಂದೆ ಪಠಾಣ್ಕೋಟ್ಗೆ ನುಸುಳಿರಬಹುದು ಎಂದು ರಕ್ಷಣಾ ಮೂಲಗಳು ತಿಳಿಸಿವೆ. ಅವರು ಪಾಕಿಸ್ತಾನದ ಪಂಜಾಬ್ ಪ್ರಾಂತದ ಬಹಾವಲ್ಪುರ್ ಪ್ರದೇಶದ ನಿವಾಸಿಗಳಾಗಿದ್ದಾರೆ. ಜೈಷೆ ಮುಹಮ್ಮದ್ ಭಯೋತ್ಪಾದಕರು 2001 ಡಿಸೆಂಬರ್ನಲ್ಲಿ ಸಂಸತ್ ಮೇಲೆ ದಾಳಿ ನಡೆಸಿ 11 ಮಂದಿಯನ್ನು ಕೊಂದಿದ್ದರು.
ರಾಷ್ಟ್ರೀಯ ಭದ್ರತಾ ದಳ (ಎನ್ಎಸ್ಜಿ)ದ 50 ಕಮಾಂಡೋಗಳ ತಂಡವೊಂದು ಪಠಾಣ್ಕೋಟ್ನಲ್ಲಿ ಮುಂಚೂಣಿಯಲ್ಲಿ ನಿಂತು ಭಯೋತ್ಪಾದಕರೊಂದಿಗೆ ಹೋರಾಡಿದೆ ಎಂದು ಉನ್ನತ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದರು.
ಯುದ್ಧ ವಿಮಾನಗಳನ್ನು ಇಡುವ ಮುಂಚೂಣಿಯ ವಾಯು ನೆಲೆಯನ್ನು ನಾಶಪಡಿಸಲು ಭಯೋತ್ಪಾದಕರು ಯೋಜಿಸಿದ್ದರು ಎನ್ನಲಾಗಿದೆ. ‘‘ಭಯೋತ್ಪಾದಕರನ್ನು ವಾಯು ಪಡೆ ನೆಲೆಯ ಒಂದು ಮೂಲೆಯಲ್ಲಿ ತಡೆಹಿಡಿಯಲಾಯಿತು. ಯುದ್ಧ ವಿಮಾನಗಳು ಹಾಗೂ ಇತರ ಸಾಮಗ್ರಿಗಳನ್ನು ಇರಿಸಲಾಗಿರುವ ತಾಂತ್ರಿಕ ವಲಯವನ್ನು ಪ್ರವೇಶಿಸಲು ಅವರಿಗೆ ಸಾಧ್ಯವಾಗಿಲ್ಲ’’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
ಶುಕ್ರವಾರ ಗುರುದಾಸ್ಪುರ ಎಸ್ಪಿ ಸಲ್ವಿಂದರ್ ಸಿಂಗ್ರನ್ನು ಭಯೋತ್ಪಾದಕರು ಅಪಹರಿಸಿ ಥಳಿಸಿದ ಘಟನೆಯ ಬಳಿಕ, ಭದ್ರತಾ ಬೆದರಿಕೆಯ ಹಿನ್ನೆಲೆಯಲ್ಲಿ ರಾತ್ರಿಯೇ ಎನ್ಎಸ್ಜಿ ಕಮಾಂಡೋಗಳನ್ನು ಪಠಾಣ್ಕೋಟ್ಗೆ ಕಳುಹಿಸಿಕೊಡಲಾಗಿತ್ತು. ಎಸ್ಪಿಯನ್ನು ಅಪಹರಿಸಿದ್ದ ಭಯೋತ್ಪಾದಕರು ಭದ್ರತಾ ಪಡೆಗಳಿಗೆ ಚಳ್ಳೆಹಣ್ಣು ತಿನ್ನಿಸಿ ಪರಾರಿಯಾಗಿದ್ದರು.
ಪಂಜಾಬ್, ಜಮ್ಮು ಮತ್ತು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶ ಸಂಧಿಸಿರುವ ಪಠಾಣ್ಕೋಟ್ನಲ್ಲಿ ಒಂದು ಸೇನಾ ಕಂಟೋನ್ಮಂಟ್ ಮತ್ತು ಒಂದು ವಾಯುಪಡೆ ನೆಲೆಯಿವೆ. ಇವು ಭಯೋತ್ಪಾದಕರು ಶುಕ್ರವಾರ ಬೆಳಗ್ಗೆ ಗುರುದಾಸ್ಪುರ ಎಸ್ಪಿಯನ್ನು ಅಡ್ಡಗಟ್ಟಿ ಥಳಿಸಿದ ಸ್ಥಳದಿಂದ ಸುಮಾರು 10 ಕಿಲೋಮೀಟರ್ ದೂರದಲ್ಲಿವೆ.
ಎನ್ಎಸ್ಜಿ ಕಮಾಂಡೋಗಳು ಪಂಜಾಬ್ನಲ್ಲಿ ಬಂದಿಳಿದ ಬಳಿಕ,ಅವರನ್ನು ವಾಯುಪಡೆ ನೆಲೆ ಮತ್ತು ಮಮೂನ್ನಲ್ಲಿರುವ ಸೇನಾ ಕಂಟೋನ್ಮಂಟ್ಗೆ ಕಳುಹಿಸಲಾಯಿತು. ಕಮಾಂಡೋಗಳು ಬೃಹತ್ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದರು.
ಭಯೋತ್ಪಾದಕರು ವಾಯುಪಡೆ ನೆಲೆ ಮೇಲೆ ದಾಳಿ ನಡೆಸಿದಾಗ ಕಮಾಂಡೋಗಳು ಯುದ್ಧಕ್ಕೆ ಸಿದ್ಧರಾಗಿದ್ದರು.
ಯುದ್ಧ ವಲಯವಾಗಿ ಪರಿವರ್ತಿತವಾದ ಈ ಪ್ರದೇಶವನ್ನು ಪೊಲೀಸರು ಸಾರ್ವಜನಿಕರಿಗೆ ಮುಚ್ಚಿದರು. ಎನ್ಎಸ್ಜಿ ಕಮಾಂಡೊಗಳ ಜೊತೆ ಜೊತೆಗೇ ಸೇನೆ ಮತ್ತು ವಾಯುಪಡೆ ಯೋಧರೂ ಕಾರ್ಯಾಚರಣೆ ನಡೆಸಿದರು.
ಗುರುದಾಸ್ಪುರ ದಾಳಿಯೊಂದಿಗೆ ಸಾಮ್ಯತೆ
ಪಠಾಣ್ಕೋಟ್, ಜ.2: ಪಂಜಾಬ್ನ ಪಠಾಣ್ಕೋಟ್ ವಾಯುಪಡೆ ನೆಲೆಯ ಮೇಲೆ ಶನಿವಾರ ನಡೆದ ಭಯೋತ್ಪಾದಕ ದಾಳಿಗೂ ಗುರುದಾಸ್ಪುರ ಜಿಲ್ಲೆಯಲ್ಲಿ ಜುಲೈಯಲ್ಲಿ ನಡೆದ ದಾಳಿಗೂ ಹಲವು ಸಾಮ್ಯತೆಗಳಿವೆ.
ಪಾಕಿಸ್ತಾನದೊಂದಿಗೆ ಗಡಿ ಹೊಂದಿರುವ ಗುರುದಾಸ್ಪುರ ಜಿಲ್ಲೆಯಲ್ಲಿ ಜುಲೈ 27ರಂದು ಭಯೋತ್ಪಾದಕರು ಚಲಿಸುತ್ತಿರುವ ಬಸ್ಸಿನ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದರು ಹಾಗೂ ದೀನಾನಗರ್ ಪೊಲೀಸ್ ಠಾಣೆಗೆ ನುಗ್ಗಿದ್ದರು. ಆ ದಾಳಿಯಲ್ಲಿ ಆರು ಮಂದಿ ಪ್ರಾಣ ಕಳೆದುಕೊಂಡಿದ್ದರು ಹಾಗೂ ಎಂಟು ಮಂದಿ ಗಾಯಗೊಂಡಿದ್ದರು. 12 ಗಂಟೆಗಳ ಗುಂಡಿನ ಕಾಳಗದ ಬಳಿಕ ಭಯೋತ್ಪಾದಕರನ್ನು ಗುಂಡಿಟ್ಟು ಕೊಲ್ಲಲಾಗಿತ್ತು. ಅದಾದ ಆರು ತಿಂಗಳ ಬಳಿಕ ಈಗ ಪಠಾಣ್ಕೋಟ್ನಲ್ಲಿ ದಾಳಿ ನಡೆದಿದೆ.
ಭಯೋತ್ಪಾದಕರು ದೀನಾನಗರ್ನಲ್ಲಿ ನಡೆಸಿದ ದಾಳಿಯ ಮಾದರಿಯಲ್ಲೇ ಶನಿವಾರ ವಾಯುಪಡೆ ನೆಲೆಯ ಮೇಲೆ ದಾಳಿ ನಡೆಸಿದರು.
ಜುಲೈಯಲ್ಲಿಯೂ ರಕ್ಷಣಾ ನೆಲೆಯೊಂದರ ಮೇಲೆ ದಾಳಿ ನಡೆಸುವುದು ಭಯೋತ್ಪಾದಕರ ಗುರಿಯಾಗಿದ್ದರೂ ಅಂತಿಮವಾಗಿ ದೀನಾನಗರ ಪೊಲೀಸ್ ಠಾಣೆಯ ಮೇಲೆ ದಾಳಿ ನಡೆಸಿದ್ದರು.
ಭಾರತ ಮತ್ತು ಪಾಕಿಸ್ತಾನಗಳ ಸಂಬಂಧದಲ್ಲಿ ಸುಧಾರಣೆಯಾದ ಬೆನ್ನಿಗೇ ಜುಲೈಯಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಈಗಲೂ ಉಭಯ ದೇಶಗಳ ಪ್ರಧಾನಿಗಳು ಪರಸ್ಪರರನ್ನು ಭೇಟಿಯಾದ ಹಾಗೂ ಅವುಗಳ ನಡುವಿನ ಸಂಬಂಧ ಸುಧಾರಣೆಯಾದ ದಿನಗಳಲ್ಲೇ ಈ ದಾಳಿ ನಡೆದಿದೆ.
ಐಎಸ್ಐ ಏಜೆಂಟ್ನ ಮಾಹಿತಿ ಆಧಾರದಲ್ಲಿ ದಾಳಿ?
ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐಗೆ ಭಾರತೀಯ ವಾಯುಪಡೆಯ ತಂತ್ರಜ್ಞ ರಂಜಿತ್ ಕೆ.ಕೆ. ನೀಡಿರುವ ಮಾಹಿತಿಯ ಆಧಾರದಲ್ಲಿ ಪಠಾಣ್ಕೋಟ್ ವಾಯುನೆಲೆಯ ಮೇಲೆ ದಾಳಿ ನಡೆದಿರುವ ಸಾಧ್ಯತೆಗಳಿವೆ ಎನ್ನಲಾಗಿದೆ.
ರಂಜಿತ್ನನ್ನು ಕಳೆದ ವಾರ ಬಂಧಿಸಲಾಗಿದೆ. ಬ್ರಿಟನ್ನ ಪ್ರಮುಖ ಪತ್ರಿಕೆಯೊಂದರ ಸಂಪಾದಕಿ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದ ದಾಮಿನಿ ಮೆಕ್ನಾಟ್ ಎಂಬ ಮಹಿಳೆಗೆ ಆತ ನಿಯಮಿತವಾಗಿ ವಾಯುಪಡೆಯ ಮಾಹಿತಿಗಳನ್ನು ಕಳುಹಿಸಿಕೊಡುತ್ತಿದ್ದ. ಆ ಮಾಹಿತಿಗಳು ಐಎಸ್ಐಗೆ ತಲುಪುತ್ತಿದ್ದವು ಎನ್ನಲಾಗಿದೆ.
ಪತ್ರಿಕೆಯ ‘ರಕ್ಷಣಾ ವಿಶ್ಲೇಷಕ’ನಾಗಿ ನಿಮ್ಮನ್ನು ನೇಮಿಸಲಾಗುವುದು ಎಂದು ಮಹಿಳೆಯು ಆತನನ್ನು ನಂಬಿಸಿದ್ದಳು ಹಾಗೂ ಅದಕ್ಕಾಗಿ ಒಳ್ಳೆಯ ಮೊತ್ತದ ಪ್ರತಿಫಲ ನೀಡಲಾಗುತ್ತಿತ್ತು.
ಮಹಿಳೆಯು ರಂಜಿತ್ಗೆ ಪ್ರತಿ ವಾರ ‘ಕೆಲಸ’ ಕೊಡುತ್ತಿದ್ದಳು. ಒಂದು ವಾರ ಆಕೆ ಭಟಿಂಡಾದ ಗೂಗಲ್ ಉಪಗ್ರಹ ನಕ್ಷೆಗಳನ್ನು ನೀಡಿ ಸಮಗ್ರ ವಾಯುಪಡೆ ನೆಲೆ ಕಾಣುವ ಬಹುಮಹಡಿ ಕಟ್ಟಡಗಳು ಸೇರಿದಂತೆ ಪ್ರಮುಖ ಕಟ್ಟಡಗಳನ್ನು ವಿವರವಾಗಿ ಗುರುತಿಸುವಂತೆ ಸೂಚಿಸಿದ್ದಳು. ನೆಲೆಯ ಸುತ್ತಮುತ್ತಲಿರುವ ಪ್ರಮುಖ ಕಟ್ಟಡಗಳನ್ನು ಗುರುತಿಸಲು ಹೇಳಿದ್ದಳು.
ಇನ್ನೊಂದು ವಾರ, ಇನ್ನೊಂದು ನಕ್ಷೆಯನ್ನು ನೀಡಿ ವಾಯು ಸಂಚಾರ ನಿಯಂತ್ರಣ, ವಾಯು ಪಡೆ ನೆಲೆ ಮತ್ತು ಯುದ್ಧ ವಿಮಾನಗಳ ನಿಲುಗಡೆ ತಾಣಗಳನ್ನು ನಿಖರವಾಗಿ ಗುರುತಿಸುವಂತೆ ದಾಮಿನಿ ಹೇಳಿದ್ದಳು.
ಎಲ್ಲ ಯುದ್ಧ ವಿಮಾನಗಳು ಹಾರಾಟ ನಡೆಸುವ ರನ್ವೇಯ ಸಮಗ್ರ ಉದ್ದ ಮತ್ತು ಅಗಲಗಳನ್ನು ಗುರುತಿಸುವಂತೆ ಇನ್ನೊಮ್ಮೆ ಹೇಳಿದ್ದಳು. ಆತ ಒಂದು ವರ್ಷ ಕಾಲ ಈ ರೀತಿಯಾಗಿ ತನಗೆ ಗೊತ್ತಿಲ್ಲದೇ ಐಎಸ್ಐಗೆ ಮಾಹಿತಿ ರವಾನಿಸುತ್ತಿದ್ದ.