ವಿತ್ತಸಚಿವ ಅರುಣ್ ಜೇಟ್ಲಿಯವರ ಭಾಷಣದ ಮುಖ್ಯಾಂಶಗಳು
ಕೇಂದ್ರ ಮುಂಗಡಪತ್ರ 2017
►ಮಂದಗತಿಯಲ್ಲಿರುವ ಜಾಗತಿಕ ಆರ್ಥಿಕತೆಯ ನಡುವೆ ಭಾರತ ಉಜ್ವಲವಾಗಿ ಹೊಳೆಯುತ್ತಿದೆ.
►ಬೆಳವಣಿಗೆ ಮತ್ತು ಉದ್ಯೋಗಾವಕಾಶಗಳ ಲಾಭ ಪಡೆದುಕೊಳ್ಳುವಂತಾಗಲು ಯುವಜನರಿಗೆ ಉತ್ತೇಜನ ನಮ್ಮ ಆದ್ಯತೆಯಾಗಿದೆ
►ಜಾಗತಿಕ ಜಿಡಿಪಿ 2017ರಲ್ಲಿ ಶೇ.3.4ರಷ್ಟು ಬೆಳೆಯಲಿದೆ ಎನ್ನುವದು ಐಎಂಎಫ್ ಅಂದಾಜು.
►ತೈಲ ಬೆಲೆಗಳು, ವೌಲ್ಯವನ್ನು ವರ್ಧಿಸಿಕೊಳ್ಳುತ್ತಿರುವ ಡಾಲರ್ ಮತ್ತು ಸರಕು ಬೆಲೆಗಳಲ್ಲಿ ಏರಿಳಿತ ಭಾರತೀಯ ಆರ್ಥಿಕತೆಗೆ ಅಪಾಯಗಳಾಗಿವೆ.
►ಭಾರತವನ್ನು ಜಾಗತಿಕ ಬೆಳವಣಿಗೆಯ ಚಾಲಕ ಶಕ್ತಿಯೆಂದು ಪರಿಗಣಿಸಲಾಗಿದ್ದು, ಅದು ಕಳೆದೊಂದು ವರ್ಷದಲ್ಲಿ ಐತಿಹಾಸಿಕ ಸುಧಾರಣೆಗಳಿಗೆ ಸಾಕ್ಷಿಯಾಗಿದೆ.
►ನೋಟು ಅಮಾನ್ಯ ದಿಟ್ಟ ಮತ್ತು ನಿರ್ಣಾಯಕ ಕ್ರಮವಾಗಿದೆ. ಹಲವಾರು ದಶಕಗಳಿಂದಲೂ ತೆರಿಗೆ ವಂಚನೆ ಹಲವರ ಜೀವನ ವಿಧಾನವೇ ಆಗಿಬಿಟ್ಟಿತ್ತು.
►ನೋಟು ಅಮಾನ್ಯ ಆರ್ಥಿಕತೆಯ ಮೇಲೆ ಕೇವಲ ತಾತ್ಕಾಲಿಕ ಪರಿಣಾಮ ಬೀರುವ ನಿರೀಕ್ಷೆ.
►‘ಸರಿಯಾದ ಹೋರಾಟವೆಂದೂ ವಿಫಲವಾಗುವುದಿಲ್ಲ ’ಎಂಬ ರಾಷ್ಟ್ರಪಿತ ಮಹಾತ್ಮಾ ಗಾಂಧಿಯವರ ಮಾತು ನನಗೆ ನೆನಪಾಗುತ್ತಿದೆ.
►ನೋಟು ಅಮಾನ್ಯದ ಬಳಿಕ ನಗದು ಪೂರೈಕೆಯ ವೇಗ ಹೆಚ್ಚುತ್ತಿದೆ.
►ನೋಟು ಅಮಾನ್ಯದ ಪರಿಣಾಮ ಮುಂದಿನ ವರ್ಷಕ್ಕೆ ವ್ಯಾಪಿಸುವುದಿಲ್ಲ.
►ಫೆ.1ಕ್ಕೆ ಮುಂಗಡಪತ್ರ ಹಿಂದೂಡಿಕೆಯಿಂದ ಸರಕಾರಿ ಯೋಜನೆಗಳ ಅನುಷ್ಠಾನಕ್ಕೆ ಇಲಾಖೆಗಳಿಗೆ ಸಾಕಷ್ಟು ಸಮಯಾವಕಾಶ ದೊರೆಯುತ್ತದೆ.
►ಪರಿವರ್ತನೆ,ಬಲಪ್ರದಾನ ಮತ್ತು ಸ್ವಚ್ಛ ಭಾರತ-ಇವು ನಮ್ಮ ಮುಂಗಡಪತ್ರದ ಕಾರ್ಯಸೂಚಿ.
►ಗ್ರಾಮೀಣ ಪ್ರದೇಶಗಳಿಗೆ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ಹೆಚ್ಚಿನ ವೆಚ್ಚ ಹಾಗೂ ಆರ್ಥಿಕ ವಿವೇಚನೆಯಿಂದ ಬಡತನ ನಿವಾರಣೆ...ಇದು ಮುಂಗಡಪತ್ರ ತಯಾರಿಕೆಯಲ್ಲಿ ನಾವು ಬಳಸಿದ್ದ ಮಂತ್ರ.
►ಕೃಷಿಕ್ಷೇತ್ರ ಶೇ.4.6ರಷ್ಟು ಬೆಳವಣಿಗೆಯಾಗುವ ನಿರೀಕ್ಷೆ. 10 ಲಕ್ಷ ಕೋಟಿ ರೂ.ಕೃಷಿವೆಚ್ಚದ ಗುರಿ.
►ಎಫ್ಡಿಐ ಹರಿವಿನಲ್ಲಿ ಶೇ.36ರಷ್ಟು ಏರಿಕೆ. ಜನವರಿಯಲ್ಲಿ ವಿದೇಶಿ ವಿನಿಮಯ ಮೀಸಲು ಪ್ರಮಾಣ 361 ಶತಕೋಟಿ ಡಾಲರ್ಗಳಾಗಿದ್ದು, ಇದು 12 ತಿಂಗಳುಗಳ ಅಗತ್ಯಗಳನ್ನು ಪೂರೈಸಲು ಸಾಕು.
►ನರೇಗಾದಡಿ ನಿಗದಿತ ಮೊತ್ತ 38,500 ಕೋ.ರೂ.ನಿಂದ 48,000 ಕೋ.ರೂ. ಗೇರಿಕೆ. ಇದು ಈವರೆಗಿನ ಅತ್ಯಧಿಕ ಮೊತ್ತ.
►2017-18ನೇ ಸಾಲಿಗೆ ಗ್ರಾಮೀಣ, ಕೃಷಿ ಮತ್ತು ಸಂಬಂಧಿತ ಕ್ಷೇತ್ರಗಳಿಗೆ ಒಟ್ಟು ನಿಗದಿತ ಮೊತ್ತ 1,87,223 ಕೋ.ರೂ. ಇದು ಕಳೆದ ವರ್ಷಕ್ಕಿಂತ ಶೇ.24ರಷ್ಟು ಅಧಿಕ.
►2019ರೊಳಗೆ ಬಡವರಿಗಾಗಿ ಒಂದು ಕೋಟಿ ಮನೆಗಳ ನಿರ್ಮಾಣ.
►ಮುಂದಿನ ನಾಲ್ಕು ವರ್ಷಗಳಲ್ಲಿ ಆರ್ಸೆನಿಕ್ ಮತ್ತು ಫ್ಲೋರೈಡ್ ಪೀಡಿತ 28,000 ವಸತಿ ಪ್ರದೇಶಗಳಿಗೆ ಸುರಕ್ಷಿತ ಕುಡಿಯುವ ನೀರಿನ ಸೌಲಭ್ಯ.
►ಪ್ರಧಾನ ಮಂತ್ರಿ ಗ್ರಾಮೀಣ ರಸ್ತೆ ಯೋಜನೆಯಡಿ ಪ್ರತಿದಿನ 133 ಕಿ.ಮೀ.ರಸ್ತೆ ನಿರ್ಮಾಣ. 2011-14ರ ಅವಧಿಯಲ್ಲಿ ಇದು 73 ಕಿ.ಮೀ.ಆಗಿತ್ತು.
►ಹಿರಿಯ ನಾಗರಿಕರಿಗಾಗಿ ಅವರ ಆರೋಗ್ಯದ ಮಾಹಿತಿಯನ್ನು ನೀಡುವ ಆಧಾರ ಕಾರ್ಡ್ಗಳ ಜಾರಿ.
►ಜಾರ್ಖಂಡ್ ಮತ್ತು ಗುಜರಾತ್ಗಳಲ್ಲಿ ಎರಡು ಹೊಸ ಏಮ್ಸ್ಗಳ ಸ್ಥಾಪನೆ.
►3,500 ಕಿ.ಮೀ.ಉದ್ದದ ರೈಲುಮಾರ್ಗ ನಿರ್ಮಾಣ.
►ಐಆರ್ಸಿಟಿಸಿ ಮೂಲಕ ಬುಕ್ ಮಾಡಲಾಗುವ ರೈಲ್ವೆ ಟಿಕೆಟ್ಗಳ ಮೇಲಿನ ಸೇವಾ ಶುಲ್ಕ ಹಿಂದೆಗೆತ.
►500 ರೈಲು ನಿಲ್ದಾಣಗಳಲ್ಲಿ ಲಿಫ್ಟ್ ಮತ್ತು ಎಸ್ಕಲೇಟರ್ಗಳನ್ನು ಅಳವಡಿಸುವ ಮೂಲಕ ಅಂಗವಿಕಲ ಸ್ನೇಹಿಯಾಗಿ ಅವುಗಳ ಪರಿವರ್ತನೆ.
►ನೂತನ ಮೆಟ್ರೋ ರೈಲು ನೀತಿಯನ್ನು ಪ್ರಕಟಿಸಲಾಗುವುದು,ಇದರಿಂದ ನಮ್ಮ ಯುವಜನತೆಗೆ ಹೊಸ ಉದ್ಯೋಗಗಳ ಸೃಷ್ಟಿ.
►ವಿದೇಶಿ ಹೂಡಿಕೆ ಉತ್ತೇಜನ ಮಂಡಳಿಯನ್ನು ರದ್ದುಗೊಳಿಸಲಾಗುವುದು.
►ಮೂಲಸೂಕರ್ಯ ಅಭಿವೃದ್ದಿಗೆ 3,96,135 ಕೋ.ರೂ.ಗಳ ದಾಖಲೆ ಮೊತ್ತ ನಿಗದಿ.
►ಒಡಿಶಾ ಮತ್ತು ರಾಜಸ್ಥಾನಗಳಲ್ಲಿ ವ್ಯೆಹಾತ್ಮಕ ಕಚ್ಚಾ ತೈಲ ಸಂಗ್ರಹಾಗಾರಗಳ ನಿರ್ಮಾಣ.
►ಡಿಜಿಟಲ್ ಪಾವತಿಗಾಗಿ ಈಗಾಗಲೇ 1.25 ಕೋ.ಜನರಿಂದ ಭೀಮ್ ಆ್ಯಪ್ ಡೌನ್ಲೋಡ್.
►ವ್ಯಾಪಾರಿಗಳಿಗಾಗಿ ಆಧಾರ್ ಪೇ ಆ್ಯಪ್ ಬಿಡುಗಡೆ. 2017,ಸೆಪ್ಟೆಂಬರ್ ವೇಳೆಗೆ 20 ಲಕ್ಷ ಆಧಾರ್ ಆಧರಿತ ಪಿಒಎಸ್ಗಳು ಅಸ್ತಿತ್ವಕ್ಕೆ.
►ದೇಶದಿಂದ ಪರಾರಿಯಾಗುವ ತಪ್ಪಿತಸ್ಥರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊ ಳ್ಳಲು ನೂತನ ಕಾನೂನನ್ನು ತರಲು ಸರಕಾರದ ಚಿಂತನೆ.
►ಪಿಂಚಣಿ ಹೊರತುಪಡಿಸಿ ರಕ್ಷಣಾ ವೆಚ್ಚ 2.74 ಕೋ.ರೂ.
►2017-18ನೇ ಸಾಲಿಗೆ ವಿತ್ತೀಯ ಕೊರತೆ ಜಿಡಿಪಿಯ ಶೇ.3.2ಕ್ಕೆ ನಿಗದಿ.
►ಮುಂದಿನ ಮೂರು ವರ್ಷಗಳಿಗೆ ವಿತ್ತೀಯ ಕೊರತೆಯನ್ನು ಶೇ.3ರ ಮಿತಿಯಲ್ಲಿ ರಿಸುವ ಗುರಿ.
►ಭಾರತದ ತೆರಿಗೆ ಮತ್ತು ಜಿಡಿಪಿ ಅನುಪಾತ ಅತ್ಯಂತ ಕಡಿಮೆಯಾಗಿದೆ. ಹೆಚ್ಚಿನ ಜನರು ತೆರಿಗೆ ಜಾಲದಿಂದ ಹೊರಗಿದ್ದಾರೆ. ಇಂತಹ ಬಹಳಷ್ಟು ಜನರು ತೆರಿಗೆಯನ್ನು ವಂಚಿಸಿದಾಗ ಪ್ರಾಮಾಣಿಕರ ಮೇಲೆ ಹೊರೆ ಬೀಳುತ್ತದೆ.
►2015-16ರಲ್ಲಿ ತೆರಿಗೆ ರಿಟರ್ನ್ಗಳನ್ನು ಸಲ್ಲಿಸಿದ 3.7 ಕೋಟಿಗೂ ಅಧಿಕ ಜನರ ಪೈಕಿ 10 ಲ.ರೂ.ಗೂ ಅಧಿಕ ಆದಾಯ ತೋರಿಸಿದವರ ಸಂಖ್ಯೆ 24 ಲಕ್ಷ ಮಾತ್ರ.
►ಐದು ಲಕ್ಷ ರೂ.ಗೂ ಅಧಿಕ ಆದಾಯ ತೋರಿಸಿರುವ 76ಲಕ್ಷ ಜನರಲ್ಲಿ 56 ಲಕ್ಷ ಜನರು ವೇತನದಾರ ವರ್ಗಕ್ಕೆ ಸೇರಿದವರಾಗಿದ್ದಾರೆ.
►ವಾರ್ಷಿಕ 50 ಕೋ.ರೂ.ವರೆಗೆ ವಹಿವಾಟು ಹೊಂದಿರುವ ಸಣ್ಣ ವ್ಯಾಪಾರಿಗಳು ಪಾವತಿಸಬೇಕಾದ ತೆರಿಗೆಯ ಪ್ರಮಾಣ ಶೇ.30ರಿಂದ ಶೇ.25ಕ್ಕೆ ಇಳಿಕೆ.
►ಮೂರು ಲಕ್ಷ ರೂ.ಗೂ ಹೆಚ್ಚಿನ ನಗದು ವಹಿವಾಟಿಗೆ ಅವಕಾಶವಿಲ್ಲ.
►ಯಾವುದೇ ರಾಜಕೀಯ ಪಕ್ಷವು ಒಂದು ಮೂಲದಿಂದ 2,000 ರೂ.ಗಳ ಗರಿಷ್ಠ ದೇಣಿಗೆಯನ್ನು ಸ್ವೀಕರಿಸಬಹುದು.
►ರಾಜಕೀಯ ಪಕ್ಷಗಳು ಚೆಕ್ಗಳು ಮತ್ತು ಡಿಜಿಟಲ್ ವಿಧಾನಗಳ ಮೂಲಕ ದೇಣಿಗೆಗಳನ್ನು ಸ್ವೀಕರಿಸಲು ಅರ್ಹ.
►ರಾಜಕೀಯ ಹಣಕಾಸು ನೆರವಿಗಾಗಿ ಚುನಾವಣಾ ಬಾಂಡ್ಗಳ ನೀಡಿಕೆ ಸಾಧ್ಯವಾಗುವಂತೆ ಆರ್ಬಿಐ ಕಾಯ್ದೆಗೆ ತಿದ್ದುಪಡಿಯ ಪ್ರಸ್ತಾವನೆ.
►2.5 ಲ.ರೂ.ಗಳಿಂದ 5 ಲ.ರೂ.ವರೆಗೆ ಆದಾಯದ ಮೇಲಿನ ತೆರಿಗೆ ಶೇ.10ರಿಂದ ಶೇ.5ಕ್ಕೆ ಇಳಿಕೆ.
►ವಾರ್ಷಿಕ 50 ಲ..ರೂ.ನಿಂದ ಒಂದು ಕೋ.ರೂ.ವರೆಗೆ ಆದಾಯ ಹೊಂದಿರುವರಿಗೆ ಶೇ.10 ಸರ್ಚಾರ್ಜ್.
►ಒಂದು ಕೋ.ರೂ.ಗೂ ಅಧಿಕ ಆದಾಯವುಳ್ಳವರಿಗೆ ಶೇ.15 ಸರ್ಚಾರ್ಜ್ ಮುಂದುವರಿಕೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿಗೆ ಶೇ.20ರಷ್ಟು ಅಧಿಕ ಹಂಚಿಕೆ
ಹೊಸದಿಲ್ಲಿ,ಫೆ.1: 2017-18ನೇ ಸಾಲಿನ ಕೇಂದ್ರ ಮುಂಗಡಪತ್ರದಲ್ಲಿ ಮಹಿಳಾ ಮತ್ತು ಮಕ್ಕಳ ಸಚಿವಾಲಯಕ್ಕೆ ಹಂಚಿಕೆಯನ್ನು ಶೇ.20ರಷ್ಟು ಹೆಚ್ಚಿಸಿ 22,095 ಕೋ.ರೂ.ಗೆ ನಿಗದಿಗೊಳಿಸಲಾಗಿದೆ.
2016-17ನೇ ಸಾಲಿನ 634 ಕೋ.ರೂ.ಗೆ ಹೋಲಿಸಿದರೆ 2017-18ನೇ ಸಾಲಿಗೆ ‘ಇಂದಿರಾ ಗಾಂಧಿ ಮಾತೃತ್ವ ಸಹಯೋಗ ಯೋಜನೆ ’ಗೆ ಮೀಸಲಿರಿಸಿರುವ ಮೊತ್ತವು ನಾಲ್ಕು ಪಟ್ಟು ಜಿಗಿದು 2,700 ಕೋ.ರೂ.ಆಗಿದೆ.
14 ಲಕ್ಷ ಐಸಿಡಿಸಿ ಅಂಗನವಾಡಿಗಳಿಗಾಗಿ 500 ಕೋ.ರೂ.ಗಳ ಹಂಚಿಕೆಯೊಂದಿಗೆ ಗ್ರಾಮ ಮಟ್ಟದಲ್ಲಿ ‘ಮಹಿಳಾ ಶಕ್ತಿ ಕೇಂದ್ರ ’ಗಳ ಸ್ಥಾಪನೆಯನ್ನೂ ವಿತ್ತಸಚಿವ ಅರುಣ್ ಜೇಟ್ಲಿ ಅವರು ತನ್ನ ಮುಂಗಡಪತ್ರ ಭಾಷಣದಲ್ಲಿ ಪ್ರಕಟಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ನೆಚ್ಚಿನ ಯೋಜನೆ ‘ಬೇಟಿ ಬಚಾವೊ,ಬೇಟಿ ಪಢಾವೊ ’ಗಾಗಿ 200 ಕೋ.ರೂ.ಗಳನ್ನು ಮೀಸಲಿರಿಸಲಾಗಿದ್ದು, ಇದು ಕಳೆದ ವರ್ಷದ ಮೊತ್ತದ ಐದು ಪಟ್ಟು ಆಗಿದೆ.
ನಿರ್ಭಯಾ ನಿಧಿಗಾಗಿ 500 ಕೋ.ರೂ.ಗಳನ್ನು ತೆಗೆದಿರಿಸಲಾಗಿದ್ದು, ಕಳೆದ ವರ್ಷಕ್ಕೆ ಹೋಲಿಸಿದರೆ ಮೊತ್ತದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಇದರೊಂದಿಗೆ 2013ರಲ್ಲಿ ಈ ನಿಧಿ ಸ್ಥಾಪನೆಯದಾಗಿನಿಂದ 3,000 ರೂ.ಗಳನ್ನು ಒದಗಿಸಿದಂತಾಗಿದೆ.
ಕಳೆದ ವರ್ಷ 400 ಕೋ.ರೂ.ಗಳನ್ನು ಒದಗಿಸಲಾಗಿದ್ದ ಮಕ್ಕಳ ರಕ್ಷಣಾ ಯೋಜನೆಯು ಸಮಗ್ರ ಮಕ್ಕಳ ಅಭಿವೃದ್ಧಿ ಯೋಜನೆಯಲ್ಲಿ ವಿಲೀನಗೊಂಡಿದ್ದು, ಈ ವರ್ಷದ ಮುಂಗಡಪತ್ರದಲ್ಲಿ 648 ಕೋ.ರೂ.ಗಳನ್ನು ಮೀಸಲಿರಿಸಲಾಗಿದೆ.
ಎಲ್ಲ ಸಚಿವಾಲಯಗಳಿಗೆ ಮಹಿಳೆಯರ ಏಳಿಗೆಗಾಗಿ ಹಣ ಹಂಚಿಕೆಯನ್ನು ಕಳೆದ ವರ್ಷದ 1,56,528 ಕೋ.ರೂ.ಗಳಿಂದ ಈ ವರ್ಷ 1,84,632 ಕೋ.ರೂ.ಗೆ ಹೆಚ್ಚಿಸಲಾಗಿದೆ ಎಂದು ಜೇಟ್ಲಿ ತಿಳಿಸಿದರು.