ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟದ ಪರ ಪ್ರಚಾರಕ್ಕೆ ಸಿದ್ದ : ಮುಲಾಯಂ ಸಿಂಗ್
‘ಯು ಟರ್ನ್’ ಹೊಡೆದ ಎಸ್ಪಿ ನಾಯಕ
ಹೊಸದಿಲ್ಲಿ, ಫೆ.6: ಉತ್ತರಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಎಸ್ಪಿ-ಕಾಂಗ್ರೆಸ್ ಮೈತ್ರಿಕೂಟ ತನಗೆ ಒಪ್ಪಿಗೆಯಿಲ್ಲದ ಕಾರಣ ತಾನು ಚುನಾವಣಾ ಪ್ರಚಾರಕ್ಕೆ ಬರುವುದಿಲ್ಲ ಎಂದು ಹೇಳಿಕೊಂಡಿದ್ದ ಮುಲಾಯಂ ಸಿಂಗ್ ಯಾದವ್ ಇದೀಗ ಯು-ಟರ್ನ್ ಹೊಡೆದಿದ್ದು, ತಾನು ಮೈತ್ರಿಕೂಟದ ಪರ ಪ್ರಚಾರಕ್ಕೆ ಸಿದ್ದ ಎಂದು ಹೇಳಿದಾ್ದರೆ.
ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಮುಲಾಯಂ, ಪಕ್ಷದೊಳಗೆ ಯಾವುದೇ ಭಿನ್ನಮತವಿಲ್ಲ . ಸಣ್ಣಪುಟ್ಟ ವಿಷಯಗಳಿಗೆ ಜಗಳವಿಲ್ಲ. ಅಖಿಲೇಶ್ ಅವರೇ ಮುಂದಿನ ಮುಖ್ಯಮಂತ್ರಿ. ನಾಳೆಯಿಂದಲೇ ಮೈತ್ರಿಕೂಟದ ಪರವಾಗಿ ಚುನಾವಣಾ ಪ್ರಚಾರಕ್ಕೆ ತೆರಳುತ್ತಿದ್ದೇನೆ ಎಂದರು. ತನ್ನ ಸೋದರ ಶಿವಪಾಲ್ ಯಾದವ್ ಹೊಸ ಪಕ್ಷ ಸ್ಥಾಪಿಸುವ ಬಗ್ಗೆ ಹೇಳಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಯಾರಿಗೂ ಬೇಸರವಾಗಿಲ್ಲ. ಶಿವಪಾಲ್ ಸಿಟ್ಟಿನಿಂದ ಹಾಗೆ ಹೇಳಿರಬಹುದು. ಆದರೆ ಈ ಕುರಿತು ತನ್ನೊಂದಿಗೆ ಅಥವಾ ಪಕ್ಷದವರೊಂದಿಗೆ ಶಿವಪಾಲ್ ಮಾತಾಡಿಲ್ಲ. ಯಾವುದೇ ಹೊಸ ಪಕ್ಷ ರಚನೆಯಾಗದು ಎಂದರು. ಉತ್ತರಪ್ರದೇಶದಲ್ಲಿ ಫೆ.11ರಿಂದ ಏಳು ಹಂತದ ಮತದಾನ ಪ್ರಕ್ರಿಯೆ ನಡೆಯಲಿದೆ.