ವಿಭಜನೆಯ ನಂತರ 2015 ಅತ್ಯಂತ ಧ್ರುವೀಕೃತ ವರ್ಷವಾಗಿತ್ತು : ಚಿದಂಬರಂ
ನವದೆಹಲಿ : ದೇಶದ ವಿಭಜನೆಯ ನಂತರ ಪ್ರಾಯಶಃ ಭಾರತದ ಇತಿಹಾಸದಲ್ಲಿ 2015 ಅತ್ಯಂತ ಧ್ರುವೀಕೃತ ವರ್ಷವಾಗಿತ್ತು ಎಂದು ಮಾಜಿ ಕೇಂದ್ರ ವಿತ್ತ ಸಚಿವ ಪಿ ಚಿದಂಬರಂ ಹೇಳಿದ್ದಾರೆ.
ಶುಕ್ರವಾರ ನಡೆದ ತಮ್ಮ ಲೇಟೆಸ್ಟ್ ಕೃತಿ ‘ಸ್ಟ್ಯಾಂಡಿಂಗ್ ಗಾರ್ಡ್ -ಎ ಇಯರ್ ಇನ್ ಒಪೊಸಿಶನ್’ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
‘‘ಕಳೆದ ವರ್ಷವು ಆರ್ಥಿಕತೆಯ ವ್ಯಾಖ್ಯಾನದೊಂದಿಗೆ ಕೊನೆಗೊಳ್ಳಲಿಲ್ಲ. ಬದಲಾಗಿ ಅಲ್ಲಿ ಅಸಹಿಷ್ಣುತೆ ಹಾಗೂ ಕಲಹಗಳಿದ್ದವು. ಹೆಚ್ಚೆಚ್ಚು ಜನರು ಆತಂಕ ಹಾಗೂ ಅಭದ್ರತೆಯ ಭಾವನೆಯಲ್ಲಿ ನಲುಗಿದ್ದರು,’’ಎಂದು ಚಿದಂಬರಂ ಹೇಳಿದರು.
ವಿಪಕ್ಷದಲ್ಲಿರಲು ತನಗೆ ಹೆಮ್ಮೆಯಿದೆಯೆಂದು ಹೇಳಿದ ಅವರು ಅದರರ್ಥ‘ಸರಕಾರದ ವೈರಿ’ಯಾಗುವುದೆಂದಲ್ಲವೆಂದರು. ಖ್ಯಾತ ತಮಿಳು ಕವಿ ತಿರುವಳ್ಳುವರ್ ಅವರ ವ್ಯಾಖ್ಯಾನವನ್ನು ಉಲ್ಲೇಖಿಸಿದ ಚಿದಂಬರಂ ‘‘ಟೀಕೆಗಳಿಲ್ಲದ ರಾಜ ಕೆಳಕ್ಕುರುಳುತ್ತಾನೆ. ಒಬ್ಬ ರಾಜ ತನ್ನ ಟೀಕಾಕಾರರನ್ನು ಆಲಂಗಿಸಬೇಕು, ಅವರಮಾತುಗಳನ್ನು ಆಲಿಸಬೇಕು. ತನ್ನ ಟೀಕಾಕಾರರಿಲ್ಲದ ದಿನ ಬಂದಾಗ ಭಯಪಡಬೇಕು,’’ ಎಂದು ಹೇಳಿದರು.
ದೇಶದ ವಿಭಜನೆಯಾದಾಗ, 1992ರಲ್ಲಿ ಬಾಬ್ರಿ ಮಸೀದಿ ಧ್ವಂಸವಾದಾಗ ಹಾಗೂ 2015ರಲ್ಲಿ ದೇಶ ಧ್ರುವೀಕೃತಗೊಂಡಿತ್ತು ಎಂದುಹಿರಿಯ ಕಾಂಗ್ರೆಸ್ ನಾಯಕರೂ ಆಗಿರುವ ಚಿದಂಬರಂ ಅಭಿಪ್ರಾಯ ಪಟ್ಟರು.
ದಾದ್ರಿ ಘಟನೆಯನ್ನು ಉಲ್ಲೇಖಿಸುತ್ತಾ, ವ್ಯಕ್ತಿಯೊಬ್ಬ ತನ್ನ ಮನೆಯಲ್ಲಿ ಗೋಮಾಂಸ ಯಾ ಕುರಿಮಾಂಸ ಇಡಬಹುದೇ ಎಂಬುದರಬಗ್ಗೆ ಚರ್ಚಿಸುವ ಬದಲು ಒಬ್ಬ ವ್ಯಕ್ತಿಯ ಮೇಲೆ ಅಮಾನುಷ ಹಲ್ಲೆ ನಡೆಸಲು ಗುಂಪೊಂದಕ್ಕೆ ಅಧಿಕಾರವಿದೆಯೇ ಎಂಬುದರ ಬಗ್ಗೆ ಚರ್ಚೆ ನಡೆಯಬೇಕು, ಎಂದು ಹೇಳಿದ ಚಿದಂಬರಂ ಅದೇ ಸಮಯ ರೋಹಿತ್ ವೇಮುಲಾ ಆತ್ಮಹತ್ಯೆ ಪ್ರಕರಣವನ್ನೂ ಪ್ರಸ್ತಾಪಿಸಿಇಲ್ಲಿ ರೋಹಿತ್ ದಲಿತ ಹೌದೇ ಅಥವಾ ಇಲ್ಲವೇ ಎಂಬುದು ಪ್ರಶ್ನೆಯಲ್ಲ, ಬದಲಾಗಿ ಆತನ ಪ್ರಕರಣವನ್ನು ನಿಭಾಯಿಸುವಾಗ ವಿಶ್ವವಿದ್ಯಾಲಯ ಎಷ್ಟು ಅಸಂವೇದಿಯಾಗಿತ್ತು ಎಂಬುದನ್ನು ಚರ್ಚಿಸಬೇಕು,’’ಎಂದು ಹೇಳಿದರು.