ಆರೋಗ್ಯವಂತ ವಿದ್ಯಾರ್ಥಿಗಳಿಗೆ ಕೊರೋನ ಪರೀಕ್ಷೆ ಕಡ್ಡಾಯವೇಕೆ?
ಕೊರೋನದ ಗೊಂದಲಗಳು ಮುಂದುವರಿದಿವೆ. ಸರಕಾರದ ಆದೇಶಗಳು, ಮುಂಜಾಗೃತಾ ಕ್ರಮಗಳು ಅದೃಶ್ಯ ವ್ಯಕ್ತಿಯ ಜೊತೆಗೆ ನಡೆಸುತ್ತಿರುವ ಕತ್ತಿವರಸೆಯಂತಿದೆ. ದಿನಕ್ಕೊಂದು ಕಾನೂನು, ಆದೇಶಗಳು ಜಾರಿಗೊಳ್ಳುತ್ತಿವೆೆ. ಈಗಾಗಲೇ ರಾಜ್ಯಾದ್ಯಂತ ಮಾಸ್ಕ್ ಕಡ್ಡಾಯಗೊಳಿಸಲಾಗಿದೆ. ಮಾಸ್ಕ್ನ ಹೆಸರಲ್ಲಿ ಬಡ ಕೂಲಿ ಕಾರ್ಮಿಕರಿಂದಲೂ ಪೊಲೀಸರು ಯಾವ ದಯ ದಾಕ್ಷಿಣ್ಯವಿಲ್ಲದೆ ದಂಡ ವಸೂಲಿ ಮಾಡುತ್ತಿದ್ದಾರೆ. ನಿಜಕ್ಕೂ ಮಾಸ್ಕ್ ನಿಂದ ಕೊರೋನವನ್ನು ತಡೆಯಬಹುದೇ ಎನ್ನುವುದರ ಬಗ್ಗೆ ವೈದ್ಯಕೀಯ ವಲಯದಲ್ಲೇ ಅನುಮಾನಗಳಿವೆ. ಕೊರೋನ ಶಂಕಿತರಷ್ಟೇ ಮಾಸ್ಕ್ ಧರಿಸಿದರೆ ಸಾಕು ಎನ್ನುವುದು ಕೆಲವು ವೈದ್ಯರ ವಾದ. ಇದೇ ಸಂದರ್ಭದಲ್ಲಿ ಇಡೀ ದಿನ ಮಾಸ್ಕ್ ಧರಿಸಿದರೆ ಇನ್ನಿತರ ರೋಗಗಳಿಗೆ ಬಲಿಯಾಗುವ ಸಾಧ್ಯತೆಗಳಿವೆ ಎಂದೂ ತಜ್ಞರು ಅಭಿಪ್ರಾಯ ಪಡುತ್ತಾರೆ. ಪೊಲೀಸರಿಗೆ ಹೆದರಿ, ಒಮ್ಮೆ ಬಳಕೆ ಮಾಡಿದ ಮಾಸ್ಕ್ಗಳನ್ನೇ ಮರು ಬಳಕೆ ಮಾಡುವ ಪ್ರವೃತ್ತಿಗಳೂ ಹೆಚ್ಚುತ್ತಿವೆ. ಇದೂ ಬೇರೆ ಬೇರೆ ರೀತಿಯಲ್ಲಿ ರೋಗ ಹರಡುವುದಕ್ಕೆ ಕಾರಣವಾಗುತ್ತಿದೆ.
ಕೊರೋನ ಪರೀಕ್ಷೆ ಜನಸಾಮಾನ್ಯರ ಬದುಕನ್ನು ಇನ್ನಷ್ಟು ಸಂಕಟಗಳಿಗೆ ಒಡ್ಡುತ್ತಿದೆ. ಅಸ್ತಮಾದಂತಹ ಉಸಿರಾಟ ಸಮಸ್ಯೆಗಳಿರುವ ರೋಗಿಗಳಿಗೆ ತಕ್ಷಣ ಚಿಕಿತ್ಸೆ ನೀಡಬೇಕಾದ ಆಸ್ಪತ್ರೆಗಳು ಕೊರೋನ ಪರೀಕ್ಷೆ ಮಾಡದೆ ಚಿಕಿತ್ಸೆ ನೀಡುತ್ತಿಲ್ಲ. ನಿಧಾನಗತಿಯ ಚಿಕಿತ್ಸೆಯಿಂದಲೇ ನೂರಾರು ಜನರು ರೋಗ ಉಲ್ಬಣಿಸಿ ಮೃತಪಟ್ಟದ್ದಿದೆ. ಬಳಿಕ ಸಾವನ್ನು ಕೊರೋನ ತಲೆಗೆ ಕಟ್ಟುವ ಪ್ರವೃತ್ತಿ ಹೆಚ್ಚುತ್ತಿವೆ. ಹಾಗೆಂದು ಕೊರೋನದಿಂದ ಸಾವು ಸಂಭವಿಸುತ್ತಿಲ್ಲ ಎಂದಲ್ಲ. ಆದರೆ ಈ ಸಾವುಗಳನ್ನು ವ್ಯವಸ್ಥಿತವಾಗಿ ತಮ್ಮ ಸ್ವಾರ್ಥಕ್ಕೆ ಬಳಸುವ ಶಕ್ತಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಯಾವುದೇ ರೋಗಲಕ್ಷಣಗಳಿಲ್ಲದಿದ್ದರೂ ಪರೀಕ್ಷಿಸಿ, ಪಾಸಿಟಿವ್ ಬಂದಾಕ್ಷಣ ಆತನನ್ನು ‘ಕ್ವಾರಂಟೈನ್’ಗೆ ತಳ್ಳಿ ಲಕ್ಷಗಟ್ಟಲೆ ದೋಚುತ್ತಿರುವ ಅಥವಾ ವೈದ್ಯರ ಬೇಜವಾಬ್ದಾರಿಯಿಂದ ಆರೋಗ್ಯವಂತ ವ್ಯಕ್ತಿಯೇ ಸಾವಿನಂಚಿಗೆ ತಲುಪಿದ ಪ್ರಕರಣಗಳು ಆಗಾಗ ಮಾಧ್ಯಮಗಳಲ್ಲಿ ವರದಿಯಾಗುತ್ತಿವೆ. ಅಮೆರಿಕದ ಟೆಸ್ಲಾ ಇಂಕ್ ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲಾನ್ ಮಸ್ಕ್, ಕೊರೋನ ಪರೀಕ್ಷೆಯ ವಿಶ್ವಾಸಾರ್ಹತೆಯನ್ನು ಪ್ರಶ್ನಿಸಿದ್ದಾರೆ. ‘‘ನಾನು ಒಂದೇ ದಿನ ನಾಲ್ಕು ಬಾರಿ ಕೊರೋನ ಪರೀಕ್ಷೆಗಳನ್ನು ಮಾಡಿಸಿದೆ. ಅದರಲ್ಲಿ ಎರಡು ಪರೀಕ್ಷೆಗಳು ಕೊರೋನ ಇದೆ ಎಂದು ಹೇಳಿದರೆ, ಇನ್ನೆರಡು ಪರೀಕ್ಷೆಗಳು ಕೊರೋನ ಇಲ್ಲವೆಂದು ಹೇಳಿದೆ’’ ಎಂದು ಆರೋಪಿಸಿದ್ದಾರೆ.
‘‘ಕೊರೋನ ಪರೀಕ್ಷೆಯ ಹೆಸರಿನಲ್ಲಿ ಮಹಾ ವಂಚನೆಯೊಂದು ನಡೆಯುತ್ತಿದೆ’’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಭಾರತದಲ್ಲೂ ಈ ಕುರಿತು ವ್ಯಾಪಕ ಆರೋಪಗಳಿವೆ. ಬೇರೆ ಬೇರೆ ಲ್ಯಾಬ್ಗಳಲ್ಲಿ ಪರೀಕ್ಷೆ ನಡೆಸಿದಾಗ ಒಂದು ಲ್ಯಾಬ್ನಲ್ಲಿ ಪಾಸಿಟಿವ್ ಬಂದರೆ ಮಗದೊಂದೆಡೆ ನೆಗೆಟಿವ್ ವರದಿ ಬಂದ ಪ್ರಕರಣಗಳಿವೆ. ರೋಗಲಕ್ಷಣವೇ ಇಲ್ಲದವರು ಪರೀಕ್ಷೆ ನಡೆಸುವ ಅಗತ್ಯವಿಲ್ಲ ಎಂದು ನುರಿತ ವೈದ್ಯರು ಹೇಳಿದ್ದಾರೆ. ನೆಗಡಿ, ಕೆಮ್ಮಿನಂತಹ ಲಕ್ಷಣವಿದ್ದರೆ ಮಾಸ್ಕ್ ಧರಿಸಿ ಮನೆಯಲ್ಲೇ ಇದ್ದರೆ ಸಾಕು ಎಂದೂ ಹೇಳಿದ್ದಾರೆ. ಇಷ್ಟಕ್ಕೂ ಕೊರೋನ ಸೋಂಕಿತರೆಂದು ಕರೆಸಿಕೊಂಡ ಲಕ್ಷಾಂತರ ಜನರು ಗುಣಮುಖರಾಗಿದ್ದಾರೆ. ಯಾವುದೇ ಔಷಧಿ ಇನ್ನೂ ಕಂಡು ಹಿಡಿಯದೇ ಇರುವಾಗ, ಅವರು ಗುಣವಾಗಿರುವುದು ಹೇಗೆ? ಎಂಬ ಪ್ರಶ್ನೆಯಲ್ಲೇ ಉತ್ತರಗಳಿವೆ. ಕೊರೋನ ಅತಿ ಶೀಘ್ರವಾಗಿ ಹರಡುವ ಸೋಂಕೇ ಹೊರತು, ಮಾರಣಾಂತಿಕ ಸೋಂಕಲ್ಲ. ಉಸಿರಾಟದಂತಹ ಗಂಭೀರ ಸಮಸ್ಯೆಯಿರುವವರಿಗೆ ಕೊರೋನ ಬಂದಾಗ ಅದು ಅವರನ್ನು ಅಪಾಯಕ್ಕೆ ತಳ್ಳಬಹುದು. ದುರದೃಷ್ಟಕ್ಕೆ ಸಂಪೂರ್ಣ ಆರೋಗ್ಯವಂತರಿಗೂ ಕೊರೋನ ಪರೀಕ್ಷೆ ಕಡ್ಡಾಯಗೊಳಿಸುವ ಪ್ರಯತ್ನ ಹೆಚ್ಚುತ್ತಿದೆ. ನ. 17ರಿಂದ ಕಾಲೇಜು, ಹಾಸ್ಟೆಲ್ಗಳು ಪುನರಾರಂಭಗೊಳ್ಳಲಿವೆ. ಇದೀಗ ನೀವು ಕಾಲೇಜುಗಳಿಗೆ ಪ್ರವೇಶ ಪಡೆಯಬೇಕಾದರೆ ಕಡ್ಡಾಯವಾಗಿ ಕೊರೋನ ಪರೀಕ್ಷೆ ಮಾಡಿಸಿಕೊಳ್ಳಲೇ ಬೇಕು ಎಂದು ಸರಕಾರ ಆದೇಶ ನೀಡಿದೆ.
ಶಿಕ್ಷಕರು, ಸಿಬ್ಬಂದಿ, ವಿದ್ಯಾರ್ಥಿಗಳು ಕಡ್ಡಾಯ ಆರ್ಟಿಪಿಸಿಆರ್ ಮಾದರಿಯ ಕೋವಿಡ್ ಪರೀಕ್ಷೆ ನಡೆಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯುಕ್ತರು ಆದೇಶಿಸಿದ್ದಾರೆ. ಇದು ಪೂರ್ಣ ಪ್ರಮಾಣದಲ್ಲಿ ಉಚಿತವೋ ಅಥವಾ ಸಂಬಂಧಪಟ್ಟವರು ಶುಲ್ಕ ನೀಡಬೇಕೋ ಎನ್ನುವುದರ ಕುರಿತಂತೆ ಯಾವುದೇ ಮಾಹಿತಿಗಳಿಲ್ಲ. ರಾಜ್ಯಾದ್ಯಂತ ಒಮ್ಮೆಲೆ ಇಷ್ಟು ಪ್ರಮಾಣದಲ್ಲಿ ಪರೀಕ್ಷೆ ನಡೆಸುವುದಕ್ಕೆ ಬೇಕಾದ ಮೂಲಭೂತ ಸೌಕರ್ಯಗಳನ್ನು ಸರಕಾರ ಒದಗಿಸಿದೆಯೇ ಎನ್ನುವುದರ ಕುರಿತಂತೆಯೂ ಸ್ಪಷ್ಟತೆಗಳಿಲ್ಲ. ಕೊರೋನ ಪರೀಕ್ಷೆಯ ಬಗ್ಗೆ ಈಗಾಗಲೇ ಹಲವು ಪ್ರಶ್ನೆಗಳು ಎದ್ದಿರುವುದರಿಂದ, ಯಾವುದೇ ರೋಗ ಲಕ್ಷಣಗಳಿಲ್ಲದ ಆರೋಗ್ಯವಂತ ವಿದ್ಯಾರ್ಥಿಗಳನ್ನು ಕೊರೋನ ಪರೀಕ್ಷೆಗೊಳಪಡಿಸಿ ಅಚಾತುರ್ಯದಿಂದ ಪಾಸಿಟಿವ್ ವರದಿಗಳು ಬಂದರೆ ಆ ವಿದ್ಯಾರ್ಥಿಗಳ ಮಾನಸಿಕ ಸ್ಥಿತಿ ಏನಾಗಬೇಕು? ಆ ವಿದ್ಯಾರ್ಥಿಗಳ ಜೊತೆಗೆ ಇಡೀ ಕುಟುಂಬವೇ ಕೊರೋನ ಪರೀಕ್ಷೆಗೊಳಗಾಗಬೇಕಾಗುತ್ತದೆ. ಹೀಗೆ ಪರೀಕ್ಷೆಯ ಸರಪಣಿ ಹೆಚ್ಚುತ್ತದೆ. ಅಷ್ಟೇ ಅಲ್ಲ, ಎಷ್ಟೋ ಮಕ್ಕಳು ಕಾಲೇಜು ಪ್ರವೇಶಿಸದಂತಹ ಸನ್ನಿವೇಶ ಸೃಷ್ಟಿಯಾಗಬಹುದು. ಕಾಲೇಜು ಪ್ರವೇಶಕ್ಕೆ ಕೊರೋನ ಪರೀಕ್ಷೆ ವರದಿ ಕಡ್ಡಾಯ ಎನ್ನುವ ನಿರ್ಧಾರಕ್ಕೆ ಯಾವುದೇ ತರ್ಕಗಳಿಲ್ಲ. ಕೊರೋನ ಪರೀಕ್ಷೆಯನ್ನು ಒಮ್ಮೆ ಮಾಡಿದಾಕ್ಷಣ ಮತ್ತೆ ಕೊರೋನ ಸೋಂಕು ಆತನ ಬಳಿ ಬರುವುದಕ್ಕೆ ಹೆದರುತ್ತದೆ ಎಂದು ಸರಕಾರ ಭಾವಿಸುತ್ತದೆಯೇ? ಕೊರೋನ ಪರೀಕ್ಷೆ ನಡೆಸಿದ ಬಳಿಕವೂ ವಿದ್ಯಾರ್ಥಿಗಳು ಸಾರ್ವಜನಿಕ ಸ್ಥಳಗಳಲ್ಲಿ, ಬಸ್ಗಳಲ್ಲಿ ಓಡಾಡುತ್ತಾರೆ. ಆಗ ಮತ್ತೆ ಸೋಂಕು ಬರಬಾರದು ಎಂದಿದೆಯೇ? ಅಥವಾ ಪ್ರತಿ ಹದಿನೈದು ದಿನಕ್ಕೊಮ್ಮೆ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಿಬ್ಬಂದಿಯ ಕೊರೋನ ಪರೀಕ್ಷೆಯನ್ನು ಮಾಡುವ ಉದ್ದೇಶವನ್ನು ಸರಕಾರ ಹೊಂದಿದೆಯೇ? ಅದು ಸಾಧ್ಯವಾಗುವ ಮಾತೇ? ಈಗಾಗಲೇ ಶಾಲಾ ಶುಲ್ಕವನ್ನು ಕಟ್ಟಲಾಗದೆ ಹಲವರು ಶಾಲಾ ಕಾಲೇಜು ಪ್ರವೇಶಿಸಲಾಗದಂತಹ ಸ್ಥಿತಿಯಲ್ಲಿದ್ದಾರೆ.
ಶಿಕ್ಷಕರು ವೇತನವಿಲ್ಲದೆ ಕಂಗಾಲಾಗಿದ್ದಾರೆ. ಇದೀಗ ಅವರು ಅನಗತ್ಯವಾಗಿ ಕೊರೋನ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದ ಅನಿವಾರ್ಯತೆಯನ್ನು ಸರಕಾರ ಸೃಷ್ಟಿಸಿದೆ. ರೋಗಲಕ್ಷಣಗಳೇ ಇಲ್ಲದ, ಆರೋಗ್ಯವಂತ ವಿದ್ಯಾರ್ಥಿಗಳಿಗೆ ನಡೆಸುವ ಕೊರೋನ ಪರೀಕ್ಷೆ ಸಮಸ್ಯೆಗಳನ್ನು ಇನ್ನಷ್ಟು ಉಲ್ಬಣಿಸುವಂತೆ ಮಾಡಬಹುದೇ ಹೊರತು ಈ ಮೂಲಕ ಕೊರೋನವನ್ನು ಎದುರಿಸುವುದಕ್ಕೆ ಸಾಧ್ಯವಿಲ್ಲ. ಇದರ ಬದಲಿಗೆ ಎಲ್ಲ ಕಾಲೇಜುಗಳಿಗೂ ಸರಕಾರ ಉಚಿತವಾಗಿ ಮಾಸ್ಕ್, ಸ್ಯಾನಿಟೈಸರ್ ಇತ್ಯಾದಿಗಳನ್ನು ಹಂಚುವ ಕೆಲಸವನ್ನು ಮಾಡಬಹುದು. ನೆಗಡಿ, ಕೆಮ್ಮು ಇರುವಂತಹ ವಿದ್ಯಾರ್ಥಿಗಳು ಕಡ್ಡಾಯವಾಗಿ ಶಾಲೆಗೆ ಆಗಮಿಸಬಾರದು ಎಂದು ಶಿಕ್ಷಕರು ಸೂಚನೆ ನೀಡಬೇಕು. ಉಸಿರಾಟ, ಅಸ್ತಮಾದಂತಹ ತೊಂದರೆಗಳಿರುವ ವಿದ್ಯಾರ್ಥಿಗಳ ಕುರಿತಂತೆ ವಿದ್ಯಾ ಸಂಸ್ಥೆಗಳು ತುಸು ಹೆಚ್ಚು ಕಾಳಜಿ ವಹಿಸಬೇಕು. ಕೊರೋನ ಪರೀಕ್ಷೆಯ ಮೂಲಕವೇ ವಿದ್ಯಾರ್ಥಿಗಳನ್ನು ಕೊರೋನದ ಬಾಯಿಗೆ ತಳ್ಳುವ ಸ್ಥಿತಿ ನಿರ್ಮಾಣವಾಗಬಾರದು.