ಭ್ರಷ್ಟಾಚಾರದಲ್ಲಿ ಭಾರತದ ದಾಖಲೆ
‘ನಾನೂ ತಿನ್ನುವುದಿಲ್ಲ ಇನ್ನೊಬ್ಬರಿಗೂ ತಿನ್ನಲು ಬಿಡುವುದಿಲ್ಲ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಧಿಕಾರ ವಹಿಸಿಕೊಂಡಾಗ ಬಹಿರಂಗವಾಗಿ ಹೇಳಿದ್ದರು. ಭಾರತೀಯರೂ ಮೋದಿಯವರ ಮೇಲೆ ನಂಬಿಕೆ ಇಟ್ಟು ಮತ್ತೆ ಚುನಾವಣೆಯಲ್ಲಿ ಗೆಲ್ಲಿಸಿದರು. ಆದರೆ ಮೋದಿ ಅವರು ಅಧಿಕಾರ ವಹಿಸಿಕೊಂಡ ಏಳು ವರ್ಷಗಳಲ್ಲಿ ಭ್ರಷ್ಟಾಚಾರ ಕಡಿಮೆಯಾಗುವುದು ಒತ್ತಟ್ಟಿಗಿರಲಿ ಮಿತಿ ಮೀರಿ ಹೆಚ್ಚಾಗಿದೆ. ಏಶ್ಯ ಖಂಡದಲ್ಲೇ ಭ್ರಷ್ಟಾಚಾರ ಅತ್ಯಂತ ಹೆಚ್ಚು ತುಂಬಿ ತುಳುಕುತ್ತಿರುವ ದೇಶ ಭಾರತ ಎಂದು ಭ್ರಷ್ಟಾಚಾರದ ಮೇಲೆ ಕಣ್ಗಾವಲು ನಡೆಸುವ ಸಂಸ್ಥೆಯೆಂದು ಹೆಸರಾದ ಟ್ರಾನ್ಸ್ಫರೆನ್ಸಿ ಇಂಟರ್ ನ್ಯಾಶನಲ್ ನಡೆಸಿರುವ ಸಮೀಕ್ಷೆಯಿಂದ ತಿಳಿದು ಬಂದಿದೆ. ಏಶ್ಯ ಖಂಡದ ಹದಿನೇಳು ದೇಶಗಳ ಇಪ್ಪತ್ತು ಸಾವಿರ ಜನರ ಅಭಿಪ್ರಾಯ ಸಂಗ್ರಹಿಸಿ ಈ ವರದಿಯನ್ನು ತಯಾರಿಸಲಾಗಿದೆ. ಭಾರತದಲ್ಲಿ ಎರಡು ಸಾವಿರ ಮಂದಿ ತಮ್ಮ ಅಭಿಪ್ರಾಯ ಹೇಳಿದ್ದಾರೆ.
ಸಮೀಕ್ಷೆಗೆ ಒಳಗಾದವರಲ್ಲಿ ಶೇ.39 ಮಂದಿ ಕಳೆದ ಒಂದು ವರ್ಷದಲ್ಲಿ ಸರಕಾರದ ಕೆಲಸ ಮಾಡಿಸಿಕೊಳ್ಳಲು ಲಂಚ ನೀಡಿದ್ದೇವೆ ಎಂದು ಹೇಳಿದ್ದಾರೆ.
ಭ್ರಷ್ಟಾಚಾರದ ಮೇಲಿನ ಈ ಕಣ್ಗಾವಲು ಸಂಸ್ಥೆ ಈ ಬಾರಿ ಸಮೀಕ್ಷೆಯಲ್ಲಿ ಕೆಲ ಹೊಸ ಅಂಶಗಳನ್ನು ಅಳವಡಿಸಿಕೊಂಡು ಸಮೀಕ್ಷೆ ನಡೆಸಿತು.ಹಣದ ರೂಪದಲ್ಲಿ ಪಡೆಯುವ ಲಂಚ ಮಾತ್ರವಲ್ಲ, ಸರಕಾರದ ಸೌಲಭ್ಯಗಳನ್ನು ಪಡೆಯಲು ಲೈಂಗಿಕ ಶೋಷಣೆ, ವೈಯಕ್ತಿಕ ಸಂಪರ್ಕಗಳ ಬಳಕೆ ಮುಂತಾದ ಅಂಶಗಳನ್ನು ಸೇರಿಸಲಾಗಿತ್ತು. ಅನೇಕರು ಕೆಲಸ ಮಾಡಿಸಿಕೊಂಡದ್ದಕ್ಕಾಗಿ ಹಣ ನೀಡಿಲ್ಲ. ಅಧಿಕಾರಿಗಳ ಒತ್ತಡಕ್ಕೆ ಮಣಿದು ಲಂಚ ನೀಡಿದ್ದಾಗಿ ಹೇಳಿದ್ದಾರೆ. ಅಧಿಕಾರಿಗಳ ಜೊತೆಗಿನ ವೈಯಕ್ತಿಕ ಸಂಬಂಧವನ್ನು ಬಳಸಿಕೊಂಡು ಕೆಲಸ ಮಾಡಿಸಿಕೊಂಡಿದ್ದಾಗಿ ಶೇ.47ರಷ್ಟು ಜನರು ಹೇಳಿದ್ದಾರೆ. ಪ್ರಭಾವಿ ವ್ಯಕ್ತಿಗಳ ಸಂಪರ್ಕವಿರದಿದ್ದರೆ ಸರಕಾರದ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುತ್ತಿರಲಿಲ್ಲ ಎಂದು ಅನೇಕರು ಹೇಳಿದ್ದಾರೆ. ಇದು ನಿಜಕ್ಕೂ ಅತ್ಯಂತ ಆತಂಕಪಡಬೇಕಾದ ಸಂಗತಿ, ಅಂದರೆ ಸ್ವಜನ ಪಕ್ಷಪಾತ ಈ ದೇಶದಲ್ಲಿ ವಿಪರೀತವಾಗಿದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ.
ಇನ್ನೂ ಆತಂಕದ ವಿಷಯವೆಂದರೆ ಸರಕಾರದ ಕೆಲಸ ಮಾಡಿಸಿಕೊಳ್ಳಲು ಲೈಂಗಿಕ ಶೋಷಣೆಗೂ ಒಳಗಾಗಿದ್ದೇವೆ ಎಂದು ಶೇ.11 ರಷ್ಟು ಮಂದಿ ಹೇಳಿದ್ದಾರೆ. ಸರಕಾರದಿಂದ ಸಿಗಬೇಕಾದ ಸೌಕರ್ಯಗಳು ಸುಲಭಕ್ಕೆ ಸಿಗದಿದ್ದಾಗ ಅಸಹಾಯಕ ಜನರು ಅನಿವಾರ್ಯವಾಗಿ ಲಂಚದ ಮೊರೆ ಹೋಗುತ್ತಾರೆ. ಯಾರೇ ಅಧಿಕಾರಕ್ಕೆ ಬಂದರೂ ಭ್ರಷ್ಟಾಚಾರದ ಹಾವಳಿಯನ್ನು ನಿವಾರಿಸಲು ಸಾಧ್ಯವಾಗಿಲ್ಲ. ಆರ್ಥಿಕ ನವ ಉದಾರೀಕರಣದ ಈ ಕಾಲದಲ್ಲಿ ಭ್ರಷ್ಟಾಚಾರ, ಮತ್ತು ಸ್ವಜನ ಪಕ್ಷಪಾತಗಳಿಗೆ ಕಡಿವಾಣ ಹಾಕಲು ಸಾಧ್ಯವಾಗುತ್ತಿಲ್ಲ.
ನಮ್ಮ ದೇಶದ ಜನಸಂಖ್ಯೆ 130 ಕೋಟಿಯನ್ನು ದಾಟಿದೆ. ಈ ಜನಸಂಖ್ಯೆ ಯಲ್ಲಿ ಸಹಜವಾಗಿ ಸರಕಾರದ ಸೌಕರ್ಯಗಳನ್ನು ಬಯಸುವ ಬಡವರ ಸಂಖ್ಯೆ ಹೆಚ್ಚು. ಹೀಗಾಗಿ ಲಂಚಗುಳಿತನ, ಭ್ರಷ್ಟಾಚಾರ ಇಲ್ಲಿ ವಿಪರೀತವಾಗಿ ಹಬ್ಬುತ್ತಲೇ ಇದೆ. ಅದರಲ್ಲೂ ಆರೋಗ್ಯ, ಶಿಕ್ಷಣ, ವಸತಿಯಂತಹ ಮೂಲಭೂತ ಸೌಕರ್ಯಗಳನ್ನು ಪಡೆಯಲು ಕೂಡ ಜನರು ಲಂಚ ನೀಡಬೇಕಾದ ಪರಿಸ್ಥಿತಿ ಇದೆ. ಲಂಚ ನೀಡದೆ ಯಾವ ಕೆಲಸವೂ ಆಗುವುದಿಲ್ಲ ಎಂಬುದು ಕಟುವಾದ ಕಹಿ ಸತ್ಯವಾಗಿದೆ. ರಾಜಕಾರಣಿ ಗಳು, ಅಧಿಕಾರಿಗಳು ಮಾತ್ರವಲ್ಲ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಈ ಭ್ರಷ್ಟಾಚಾರ ನಿಗ್ರಹಕ್ಕಾಗಿ ಸರಕಾರ ಕೈಗೊಂಡ ಕ್ರಮಗಳೆಲ್ಲ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಜನರೂ ನಿಧಾನವಾಗಿ ಅದನ್ನು ಒಪ್ಪಿಕೊಳ್ಳುತ್ತಿದ್ದಾರೇನೋ ಎಂಬ ಭಾವನೆ ಸಹಜವಾಗಿ ಮೂಡುತ್ತದೆ.
ಇದು ಒಬ್ಬಿಬ್ಬರ ವಿಷಯವಲ್ಲ, ಇಡೀ ವ್ಯವಸ್ಥೆಯೇ ಭ್ರಷ್ಟಗೊಂಡಿದೆ.ಶೇ.30ರಷ್ಟು ಮತ ಪಡೆದು ಅಧಿಕಾರಕ್ಕೆ ಬರುವ ಪಕ್ಷಗಳು ಇಲ್ಲಿವೆ.ಬಹಮತವಿಲ್ಲದಿದ್ದರೂ ಬೇರೆ ಪಕ್ಷಗಳ ಶಾಸಕರನ್ನು ಹಾಡಹಗಲೇ ಖರೀದಿ ಮಾಡಿ ಬಹಮತ ಮಾಡಿಕೊಳ್ಳುವ ಚಾಳಿ ಚಾರಿತ್ರದ ಬಗ್ಗೆ ದೊಡ್ಡದಾಗಿ ಮಾತಾಡುವ ಮೋದಿಯವರ ಪಕ್ಷಕ್ಕೆ ರಕ್ತಗತವಾಗಿದೆ.
ಭಾರತದ ಪ್ರಜಾಪ್ರಭುತ್ವದ ದುರಂತವೆಂದರೆ ಈ ಸಮೀಕ್ಷೆಯ ಪ್ರಕಾರ ಚುನಾವಣೆಗಳಲ್ಲಿ ಶೇ.18ರಷ್ಟು ಜನರು ಹಣ ಪಡೆದು ಮತ ಚಲಾಯಿಸಿದ್ದಾರೆ. ವಾಸ್ತವವಾಗಿ ಈ ಸಮೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಹಣ ಪಡೆದು ಮತ ಚಲಾವಣೆ ಮಾಡಿದ ಪ್ರಕರಣಗಳಿದ್ದರೂ ಅಚ್ಚರಿ ಪಡಬೇಕಾಗಿಲ್ಲ. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ಎರಡು ಮತಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಯಲ್ಲಿ ಮತದಾರರಿಗೆ ಭಾರೀ ಪ್ರಮಾಣದಲ್ಲಿ ಹಣ ಹಂಚಿಕೆಯಾಯಿತೆಂಬುದು ಜನಜನಿತವಾಗಿದೆ. ಇಂತಹ ಪ್ರಕರಣಗಳಲ್ಲಿ ದಂಡನೆಗೆ ಗುರಿಪಡಿಸಿದ ಉದಾಹರಣೆಗಳಿಲ್ಲ. ಮತದಾರನನ್ನೇ ಭ್ರಷ್ಟನನ್ನಾಗಿ ಮಾಡಿ ಅಧಿಕಾರಕ್ಕೆ ಬರುವವರು ಭ್ರಷ್ಟಾಚಾರ ಮುಕ್ತ ವ್ಯವಸ್ಥೆ ನಿರ್ಮಾಣ ಮಾಡುತ್ತಾರೆಂದು ನಿರೀಕ್ಷೆ ಮಾಡುವುದರಲ್ಲಿ ಅರ್ಥವಿಲ್ಲ. ಈ ದೇಶದಲ್ಲಿ ಭ್ರಷ್ಟಾಚಾರದ ವಿರುದ್ಧ ಹಲವಾರು ಹೋರಾಟಗಳು ನಡೆದಿವೆ. ಆದರೆ ಅದನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗಿಲ್ಲ. ಲೋಕಾಯುಕ್ತದಂತಹ ವ್ಯವಸ್ಥೆಯಿಂದ ಭ್ರಷ್ಟಾಚಾರ ನಿಗ್ರಹಕ್ಕೆ ಕೊಂಚ ಉಪಯೋಗವಾಗಿದ್ದರೂ ಅದನ್ನು ಸಂಪೂರ್ಣವಾಗಿ ತೊಲಗಿಸಲು ಸಾಧ್ಯವಾಗಿಲ್ಲ.
ಲಂಗು ಲಗಾಮಿಲ್ಲದೆ ಸಂಪತ್ತನ್ನು ಸಂಗ್ರಹಿಸಲು ಅವಕಾಶವಿರುವ ಸಾಮಾಜಿಕ ವ್ಯವಸ್ಥೆಯ ಲ್ಲಿ ಭ್ರಷ್ಟಾಚಾರ ನಿಗ್ರಹ ಎಂಬುದು ಅಷ್ಟು ಸುಲಭವಲ್ಲ. ಖಾಸಗಿ ಆಸ್ತಿಯ ಹಕ್ಕನ್ನು ರದ್ದು ಪಡಿಸಿದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬಹುದು.ಆದರೆ ಈಗ ಅದು ಸಾಧ್ಯವಿಲ್ಲದ ಮಾತು. ಭ್ರಷ್ಟಾಚಾರದ ವಿರುದ್ಧ ಜನಸಾಮಾನ್ಯರ ನಿರಂತರ ಜಾಗೃತಿಯೊಂದೇ ಉಳಿದ ದಾರಿಯಾಗಿದೆ.