ಪಠ್ಯಪುಸ್ತಕ ಪರಿಷ್ಕರಣೆ, ಶಿಕ್ಷಣ ಸಚಿವರ ಅವಾಂತರ
ತಮ್ಮ ಪಾಡಿಗೆ ತಾವು ವ್ಯಾಸಂಗ ಮಾಡಿಕೊಂಡಿದ್ದ ಮಕ್ಕಳ ಮೆದುಳಿಗೆ ಪಠ್ಯ ಪುಸ್ತಕಗಳ ಪರಿಷ್ಕರಣೆಯ ಮೂಲಕ ಕೋಮುವಾದ ಮತ್ತು ಜಾತಿವಾದದ ವಿಷ ಲೇಪನ ಮಾಡಲು ಯತ್ನಿಸುತ್ತಿರುವ ಶಿಕ್ಷಣ ಸಚಿವರು ವಿವಾದಗಳ ಮೇಲೆ ವಿವಾದಗಳನ್ನು ಸೃಷ್ಟಿಸುತ್ತಿದ್ದಾರೆ. ಇವರ ಕೋಮು ಪ್ರಚೋದಕ ಹುನ್ನಾರಗಳಿಗೆ ನಾಡಿನ ಶಿಕ್ಷಣ ತಜ್ಞರಿಂದ, ಚಿಂತಕರಿಂದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ರವಿವಾರ ನಡೆದ ಟ್ವಿಟರ್ ಅಭಿಯಾನದಲ್ಲೂ ಇದಕ್ಕೆ ವ್ಯಾಪಕ ಆಕ್ಷೇಪ ವ್ಯಕ್ತವಾ ಗಿದೆ. ಇಷ್ಟೆಲ್ಲ ವಿವಾದ ಉಂಟಾಗಿರುವಾಗಲೇ ಇದಕ್ಕೆ ಕಾರಣನಾದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯ ಅಧ್ಯಕ್ಷರನ್ನೇ ಪಿಯುಸಿ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷನನ್ನಾಗಿ ಮಾಡಲು ಮುಂದಾಗಿರುವುದು ಅತ್ಯಂತ ಖಂಡನೀಯವಾಗಿದೆ.
ಬೇರೆ ಪಕ್ಷದ ಶಾಸಕರನ್ನು ಖರೀದಿ ಮಾಡಿ ಇಲ್ಲವೇ ಬೆದರಿಕೆ ಹಾಕಿ ರಾಜ್ಯದ ಅಧಿಕಾರ ಸೂತ್ರ ಹಿಡಿದಿರುವ ಬಿಜೆಪಿ ತನ್ನ ಅಧಿಕಾರ ಮುಗಿಯುವುದರೊಳಗೆ ಎಲ್ಲವನ್ನೂ ಮುಗಿಸಿ ತನ್ನ ವಿನಾಶಕಾರಿ ಅಜೆಂಡಾ ಜಾರಿಗೆ ಹಠ ತೊಟ್ಟಂತೆ ಕಾಣುತ್ತದೆ. ಹಿಂದಿನ ಸರಕಾರ ಬರಗೂರು ರಾಮಚಂದ್ರಪ್ಪನವರ ಅಧ್ಯಕ್ಷತೆಯಲ್ಲಿ ರೂಪಿಸಿದ ಶಿಕ್ಷಣ ತಜ್ಞರ ಸಮಿತಿ ಸಿದ್ಧಪಡಿಸಿದ ಪಠ್ಯಪುಸ್ತಕಗಳನ್ನು ಇಷ್ಟು ತರಾತುರಿಯಲ್ಲಿ ಬದಲಿಸುವ ಅಗತ್ಯವಾದರೂ ಏನಿತ್ತು? ಹೋಗಲಿ ಪಠ್ಯಪುಸ್ತಕಗಳನ್ನು ಪರಿಷ್ಕರಿಸಲು ಸಂಘ ಪರಿವಾರದಲ್ಲಿ ರೋಹಿತ್ ಚಕ್ರತೀರ್ಥರನ್ನು ಬಿಟ್ಟು ಬೇರೆ ಪರಿಣಿತರೇ ಇಲ್ಲವೇ! ಇವರಿಗೂ ಶೈಕ್ಷಣಿಕ ಕ್ಷೇತ್ರಕ್ಕೂ ಏನು ಸಂಬಂಧ? ರಾಷ್ಟ್ರ ಕವಿ ಕುವೆಂಪು ಅವರ ಪದ್ಯವನ್ನು ಲೇವಡಿ ಮಾಡಿ, ಕನ್ನಡ ನಾಡನ್ನು ಅವಮಾನಿಸಿ ಜಾಲತಾಣದಲ್ಲಿ ಬರೆಯುತ್ತಿದ್ದ ಇವರಿಗೆ ಇರುವ ಅರ್ಹತೆಯಾದರೂ ಏನು? ಹೋಗಲಿ ಇದಕ್ಕಾಗಿ ರಚಿಸಲಾದ ಸಮಿತಿಯಲ್ಲಿ ಎಲ್ಲ ಸಮುದಾಯಗಳ ಪರಿಣಿತರಿಗೆ ಪ್ರಾತಿನಿಧ್ಯ ನೀಡಬೇಕಲ್ಲವೇ? ಈ ಸಮಿತಿಯ ಒಬ್ಬರನ್ನು ಬಿಟ್ಟು ಉಳಿದ ಆರು ಮಂದಿ ಒಂದೇ ಜಾತಿಗೆ ಸೇರಿದವರೇಕೆ? ಇದು ಸಂವಿಧಾನದ ಸಾಮಾಜಿಕ ನ್ಯಾಯದ ತತ್ವಕ್ಕೆ ವಿರೋಧವಲ್ಲವೇ?
ಈ ಒಂದು ಜಾತಿಯವರನ್ನು ಮತ್ತು ಒಂದು ಜನಾಂಗ ದ್ವೇಷಿ ವಿಚಾರಧಾರೆ ಯನ್ನು ಹೊಂದಿರುವವರ ಈ ಸಮಿತಿ ಮಾಡಿದ್ದಾದರೂ ಏನನ್ನು? ಪಠ್ಯಪುಸ್ತಕ ಗಳಿಂದ ಬಸವಣ್ಣನವರ ವಚನ ಸಾಹಿತ್ಯ, ನಾರಾಯಣ ಗುರುಗಳ ಮಾನವ ಏಕತ್ವದ ಸಂದೇಶ, ಪೆರಿಯಾರ್ ರಾಮಸ್ವಾಮಿಯವರ ವಿಚಾರವಾದಿ ಸಾಹಿತ್ಯ, ಡಾ.ಜಿ.ರಾಮಕೃಷ್ಣರು ಬರೆದ ಭಗತ್ ಸಿಂಗ್ರ ಸ್ವಾತಂತ್ರ್ಯ ಹೋರಾಟದ ಪುಟಗಳು, ಬುದ್ಧನ ಬಗ್ಗೆ ಅರವಿಂದ ಮಾಲಗತ್ತಿ ಅವರು ಬರೆದ ಪದ್ಯ ಇವುಗಳಿಗೆಲ್ಲ ಕತ್ತರಿ ಪ್ರಯೋಗ ಮಾಡಿತು. ಪಿ. ಲಂಕೇಶ್, ಕೆ. ನೀಲಾ, ಸಾರಾ ಅಬೂಬಕರ್, ಲಲಿತಾ ನಾಯ್ಕಿರ ಬರಹಗಳನ್ನು ತೆಗೆದು ಹಾಕಿತು. ಟಿಪ್ಪು ಸುಲ್ತಾನ್ ಚರಿತ್ರೆಯ ಮಹತ್ವದ ಪುಟಗಳನ್ನು ತಿರಸ್ಕರಿಸಿತು. ಇದನ್ನೆಲ್ಲ ಕಂಡು ಕನ್ನಡಿಗರು ಇನ್ನೂ ಮೌನವಾಗಿರುವುದೇ ಅಚ್ಚರಿದಾಯಕವಾಗಿದೆ.
ಭಾರತ ಹೇಗೋ ಹಾಗೆ ಕರ್ನಾಟಕ ಕೂಡ ಎಲ್ಲ ಜನ ಸಮುದಾಯಗಳಿಗೆ ಸೇರಿದ ರಾಜ್ಯ. ಇಲ್ಲಿ ಆಧುನಿಕ ಶಿಕ್ಷಣ ತಂದವರು ಮತ್ತು ವೈದ್ಯಕೀಯ ವ್ಯವಸ್ಥೆ ಸುಧಾರಣೆ ಮಾಡಿ ಎಲ್ಲೆಡೆ ಆಸ್ಪತ್ರೆಗಳನ್ನು ಆರಂಭಿಸಿದವರು ಕ್ರೈಸ್ತರು. ಕರ್ನಾಟಕಕ್ಕೆ ರೇಶ್ಮೆಯನ್ನು ತಂದವರು ಟಿಪ್ಪುಸುಲ್ತಾನ್. ನಾಡಿನ ಅಭಿವೃದ್ಧಿಗೆ ಬಿಜಾಪುರದ ಆದಿಲ್ಶಾಹಿಗಳ ಕೊಡುಗೆ ಸಾಕಷ್ಟಿದೆ. ದಲಿತರು ಇಲ್ಲಿನ ಮೂಲ ನಿವಾಸಿಗಳು, ಇವರನ್ನೆಲ್ಲ ಕಡೆಗಣಿಸಿ ಮನುವಾದವನ್ನು ವಿಜೃಂಭಿಸುವ ಪಠ್ಯಪುಸ್ತಕ ಕರ್ನಾಟಕಕ್ಕೆ ಬೇಡ.
ಪಠ್ಯಪುಸ್ತಕದಲ್ಲಿ ಭಗತ್ಸಿಂಗ್ ಮತ್ತು ಬಸವಣ್ಣನವರ ಪಾಠ ತೆಗೆದು ಹಾಕಿ ಆರೆಸ್ಸೆಸ್ ಸಂಸ್ಥಾಪಕ ಕೇಶವ ಬಲಿರಾಮ ಹೆಡಗೆವಾರರ ಪಾಠವನ್ನು ಸೇರಿಸಿದ ಉದ್ದೇಶವೇನು? ಕರ್ನಾಟಕಕ್ಕೂ ಹೆಡಗೆವಾರರಿಗೂ ಏನು ಸಂಬಂಧ? ಹೆಡಗೆವಾರ್ ಪಾಠದಿಂದ ಮಕ್ಕಳು ಏನನ್ನು ಕಲಿಯಬೇಕು? ಹೆಡಗೆವಾರ್ ಪಾಠವನ್ನು ಬೇಕಿದ್ದರೆ ತಮ್ಮ ಸಂಘದ ಶಾಖೆಗಳಲ್ಲಿ ಹೇಳಿಕೊಳ್ಳಲಿ. ಪಠ್ಯಪುಸ್ತಕಗಳಲ್ಲಿ ಬೇಡ.
ಇವರ ದುರಾಡಳಿತ ಮತ್ತು ಕೋಮುವಾದಿ ಅವಾಂತರಗಳಿಂದಾಗಿ ಶಾಲೆ ಆರಂಭವಾದರೂ ಮಕ್ಕಳ ಕೈಗೆ ಪಠ್ಯಪುಸ್ತಕಗಳು ಬಂದಿಲ್ಲ. ಸಮವಸ್ತ್ರಗಳು ಬಂದಿಲ್ಲ. ಶಾಲಾ ಕಟ್ಟಡಗಳು ಸುಸ್ಥಿತಿಯಲ್ಲಿ ಇಲ್ಲ. ಇದರ ಕಡೆ ಗಮನ ಹರಿಸುವುದನ್ನು ಬಿಟ್ಟು ಪಠ್ಯಪುಸ್ತಕಗಳಲ್ಲಿ ಕೋಮುವಾದದ ಮತ್ತು ಮನುವಾದದ ವಿಷ ತುಂಬಲು ಇವರಿಗೆ ಇನ್ನಿಲ್ಲದ ಆಸಕ್ತಿ. ಇದಕ್ಕೆ ಅದಕ್ಷ, ಕೋಮುವಾದಿ ಶಿಕ್ಷಣ ಸಚಿವರೇ ಕಾರಣ. ಬಸವರಾಜ ಬೊಮ್ಮಾಯಿಯವರು ಹೆಸರಿಗೆ ಮುಖ್ಯ ಮಂತ್ರಿಯಾಗಿದ್ದಾರೆ. ಈ ಸರಕಾರ ನಡೆಯುತ್ತಿರುವುದು ಸಂವಿಧಾನೇತರ ಶಕ್ತಿಕೇಂದ್ರದ ನಿರ್ದೇಶನದಂತೆ ಅಂದರೆ ಅತಿಶಯೋಕ್ತಿಯಲ್ಲ. ಶಿಕ್ಷಣ ಸಚಿವರು ಆ ಕೇಂದ್ರದ ಆಜ್ಞಾಧಾರಕರು.
ಶಿಕ್ಷಣ ತಜ್ಞರಲ್ಲದ ಈ ಸಮಿತಿ ಸಿದ್ಧಪಡಿಸಿದ ಪಠ್ಯಪುಸ್ತಕಗಳಲ್ಲಿ ದಿನನಿತ್ಯವೂ ಹಿಂಸೆಗೆ ಪ್ರಚೋದನೆ ನೀಡುವ ಬಾಡಿಗೆ ಭಾಷಣಕಾರನೊಬ್ಬನ ಕಳಪೆ ಲೇಖನಕ್ಕೂ ಅವಕಾಶ ನೀಡಲಾಗಿದೆ. ಒಂದೇ ಜಾತಿಗೆ ಸೇರಿದವರ ಬರಹಗಳನ್ನು ತುಂಬಲಾಗಿದೆ.
ಈ ಪಠ್ಯಪುಸ್ತಕಗಳಲ್ಲಿ ಒಂದಲ್ಲ, ಎರಡಲ್ಲ ನೂರಾರು ಲೋಪಗಳಿವೆ. ಕವಿ ಪರಿಚಯ ಎಂಬ ಅಧ್ಯಾಯದಲ್ಲಿ ರಾಷ್ಟ್ರಕವಿ ಕುವೆಂಪು ಬಗ್ಗೆ ಬರೆಯುತ್ತಾ ‘‘ಅನೇಕರ ಪ್ರೋತ್ಸಾಹದಿಂದ ಮುಂದೆ ಪ್ರಖ್ಯಾತ ಕವಿ ಎನಿಸಿಕೊಂಡರು’’ ಎಂದು ವ್ಯಂಗ್ಯವಾಗಿ ಬರೆಯಲಾಗಿದೆ. ಇದಕ್ಕೆ ಕಾರಣ ಪರಿಷ್ಕರಣಾ ಸಮಿತಿಯ ಅಧ್ಯಕ್ಷ ಮತ್ತು ಈ ವ್ಯಕ್ತಿಯನ್ನು ನೇಮಕ ಮಾಡಿದ ಶಿಕ್ಷಣ ಸಚಿವರು.
2022-23ನೇ ಶೈಕ್ಷಣಿಕ ವರ್ಷದ ಪಠ್ಯಪುಸ್ತಕಗಳನ್ನು ಈಗಾಗಲೇ ಸಿದ್ಧಪಡಿಸಲಾಗಿತ್ತು. ಆದರೆ ಸಿದ್ಧಪಡಿಸಿದ ಪುಸ್ತಕಗಳನ್ನು ಮರು ಪರಿಷ್ಕರಣೆಗೆ ಒಳಪಡಿಸಿದ್ದರಿಂದ 2.5 ಕೋಟಿ ರೂಪಾಯಿ ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ. ಈಗಾಗಲೇ ಮುದ್ರಣಗೊಂಡ ಪುಸ್ತಕಗಳು ಗೋದಾಮು ಸೇರಿವೆ. ಇವಕ್ಕೆಲ್ಲ ಕಾರಣವಾದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ತಕ್ಷಣ ರದ್ದುಗೊಳಿಸಬೇಕು. ಶಿಕ್ಷಣ ಸಚಿವರು ತಕ್ಷಣ ರಾಜೀನಾಮೆ ನೀಡಬೇಕಾಗಿದೆ.