ಕೊರೋನ ನಿಯಂತ್ರಣಕ್ಕೆ ಉಡುಪಿ ನಗರದಲ್ಲಿ ವಿಶಿಷ್ಟ ಅಭಿಯಾನ!
ಉಡುಪಿ: ಕೊರೋನ ಮೂರನೇ ಅಲೆಯ ಸೋಂಕು ಸಾರ್ವಜನಿಕ ವಲಯದಲ್ಲಿ ಹರಡದಂತೆ, ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ನಿಟ್ಟಿನಲ್ಲಿ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ವತಿಯಿಂದ ಜನಜಾಗೃತಿ ಮೂಡಿಸುವ ವಿಶಿಷ್ಟ ಅಭಿಯಾನವನ್ನು ಶನಿವಾರ ಉಡುಪಿ ನಗರದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಅಭಿಯಾನಕ್ಕೆ ನಗರದ ಕಲ್ಸಂಕ ಸರ್ಕಲ್ ಬಳಿ ನಗರ ಪೊಲೀಸ್ ಠಾಣೆಯ ಎಎಸ್ಸೈ ಹರೀಶ್ ಚಾಲನೆ ನೀಡಿದರು. ಬಳಿಕ ಅಭಿಯಾನ ಜಾಥವು ಸಿಟಿ ಬಸ್ ನಿಲ್ದಾಣ, ಸರ್ವಿಸ್ ಬಸ್ ನಿಲ್ದಾಣ ಹಾಗೂ ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿತು.
ಕೊರೊನ ವೈರಸ್ನ ಐದು ಅಡಿಯ ಮಾದರಿಯ ತದ್ರೂಪವನ್ನು ರಚಿಸಲಾಗಿತ್ತು. ಅದರೊಳಗೆ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಇದ್ದು, ನಗರದ ಪ್ರಮುಖ ಮಾರ್ಗಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸುವ ಮೂಲಕ ಎಲ್ಲರ ಗಮನ ಸೆಳೆದರು. ಕೊರೋನ ರೋಗಾಣು ಕಲಾಕೃತಿಯನ್ನು ಕಲಾವಿದ ರಾದ ಮಹೇಶ್ ಮತ್ತು ಲೊಕೇಶ್ ರಚಿಸಿದ್ದರು. ಅಭಿಯಾನದಲ್ಲಿ ಕೆ.ಬಾಲ ಗಂಗಾಧರ ರಾವ್, ತಾರಾನಾಥ್ ಮೇಸ್ತ ಶಿರೂರು, ರಾಜೇಶ್ ದೇವಾಡಿಗ ಕಾಪು, ಡೇವಿಡ್ ಕುಕ್ಕಿಕಟ್ಟೆ ಮೊದಲಾದವರಿದ್ದರು.
Next Story