ರಸ್ತೆ ಅಪಘಾತ; ಬೈಕ್ ಸವಾರ ಮೃತ್ಯು
ಮಣಿಪಾಲ : ಬೈಕೊಂದು ಡಿವೈಡರ್ಗೆ ಹೊಡೆದು ರಿಕ್ಷಾಕ್ಕೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮೃತಪಟ್ಟು, ನಾಲ್ವರು ಗಾಯಗೊಂಡ ಘಟನೆ ಜಿಲ್ಲಾಧಿಕಾರಿ ಕಚೇರಿ ರಸ್ತೆಯ ಹಾಟ್ ಆಂಡ್ ಸ್ರೈಸಿ ಹೊಟೇಲಿನ ಎದುರು ಮೇ ೧೪ರಂದು ರಾತ್ರಿ ೯.೧೫ರ ಸುಮಾರಿಗೆ ನಡೆದಿದೆ.
ಮೃತರನ್ನು ಬೈಕ್ ಸವಾರ ಪ್ರಜ್ವಲ್ ಎಂದು ಗುರುತಿಸಲಾಗಿದೆ.
ಜಿಲ್ಲಾಧಿಕಾರಿ ಕಚೇರಿ ಕಡೆಯಿಂದ ಸಿಂಡಿಕೇಟ್ ಸರ್ಕಲ್ ಕಡೆಗೆ ಬರುತ್ತಿದ್ದ ಬೈಕ್, ತಿರಿವಿನಲ್ಲಿ ನಿಯಂತ್ರಣ ತಪ್ಪಿಡಿವೈಡರ್ಗೆ ಡಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಬಳಿಕ ಬೈಕ್ ಡಿವೈಡರ್ ಮೇಲಿಂದ ನೆಗೆದು ಇನ್ನೊಂದು ಬದಿಯಲ್ಲಿ ಸಾಗುತ್ತಿದ್ದ ರಿಕ್ಷಾಕ್ಕೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ.
ಈ ಅಪಘಾತದಿಂದ ಬೈಕ್ ಸವಾರ ಪ್ರಜ್ವಲ್ ಹಾಗೂ ಸಹಸವಾರ ಸುಪ್ರೀತ್ ರಸ್ತೆಗೆ ಬಿದಿದ್ದು, ಇವರಲ್ಲಿ ಗಂಭೀರವಾಗಿ ಗಾಯಗೊಂಡ ಪ್ರಜ್ವಲ್ ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು. ಗಾಯಗೊಂಡ ಸಹಸವಾರ ಸುಪ್ರೀತ್ ಹಾಗೂ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಮಧುಮಿತ, ಸುಶ್ಮಿತಾ ಹಾಗೂ ಸನಿತ್ ಎಂಬವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಇವರೆಲ್ಲ ಮಣಿಪಾಲ ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.