ಕಾರ್ಕಳ: ಜಿ.ಕೆ. ಭಂಡಾರಿ ಟ್ರಸ್ಟ್ನಿಂದ ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ
ಕಾರ್ಕಳ : ಹೆತ್ತ ತಾಯಿ, ಬೋಧಿಸಿದ ಗುರುಗಳು, ಕಲಿತ ಶಾಲೆ, ಹುಟ್ಟೂರ ಋಣ ಪೂರೈಸುವುದು ಮಾನವ ಧರ್ಮವಾಗಿದೆ. ಗಳಿಕೆಯ ಒಂದಿಷ್ಟು ಭಾಗ ಇಂತಹ ಅವಕಾಶಗಳಿಗೆ ಬಳಸಿದಾಗ ನಮ್ಮ ಋಣ ಸಂದಾಯ ವಾಗುವುದು ಎಂದು ಮುಂಬಯಿ ಉದ್ಯಮಿ ಹಾಗೂ ಗುಲಾಬಿ ಕೃಷ್ಣ ಭಂಡಾರಿ ಚಾರಿಟೇಬಲ್ ಟ್ರಸ್ಟ್ನ ಸಂಸ್ಥಾಪಕ ಡಾ.ಶಿವರಾಮ ಕೆ. ಭಂಡಾರಿ ತಿಳಿಸಿದ್ದಾರೆ.
ಇತ್ತೀಚೆಗೆ ತಾನು ಕಲಿತ ಅತ್ತೂರು ಸಂತ ಲೋರೆನ್ಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿ ಪಾಲಕ ಶಿಕ್ಷಕರ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅವರು ತನ್ನ ಶಾಲಾ ದಿನಗಳನ್ನು ಮೆಲುಕು ಹಾಕಿದರು.
ಶಾಲಾ ಸಂಚಾಲಕ, ಪವಿತ್ರ ಅತ್ತೂರು ಧರ್ಮ ಕೇಂದ್ರದ ಧರ್ಮಗುರುಗಳಾದ ವಂ. ಆಲ್ಬನ್ ಡಿಸೋಜ ಸಭಾಧ್ಯಕ್ಷತೆ ವಹಿಸಿ ಮಾತನಾಡಿ, ಶಾಲಾ ಮಕ್ಕಳ ಶಿಕ್ಷಣಕ್ಕೆ ನೀಡುವ ಸಹಕಾರ ದೇವರಿಗೆ ಅರ್ಪಿತವಾದಂತೆ ಎಂದರು. ಇದೇ ವೇಳೆ ದಾನಿಗಳಾದ ಶಿವರಾಮ ಭಂಡಾರಿ ಮತ್ತು ಮಂಜುನಾಥ ನಾಯಕ್ ಜೋಡುರಸ್ತೆ ಇವರನ್ನು ಸನ್ಮಾನಿಸಲಾಯಿತು.
ಗುಲಾಬಿ ಕೃಷ್ಣ ಭಂಡಾರಿ ಟ್ರಸ್ಟ್ ನೀಡಿದ ಸಮವಸ್ತ್ರ, ಮಂಜುನಾಥ ನಾಯಕ್ ಜೋಡುರಸ್ತೆ ಇವರು ನೀಡಿರುವ ಬರವಣಿಗೆ ಪುಸ್ತಕ ಹಾಗೂ ಶಾಲಾ ಹಳೆ ವಿದ್ಯಾರ್ಥಿನಿ ಸುಷ್ಮಾ ಹೆಗ್ಡೆ ಒದಗಿಸಿದ ಐಡಿ ಕಾರ್ಡುಗಳನ್ನು ಶಾಲೆಯ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಸಂತ ಲೋರೆನ್ಸ್ ಹಿ.ಪ್ರಾ.ಶಾಲೆಯ ನಿವೃತ್ತಿ ಶಿಕ್ಷಕಿ ಲೋನಾ ನೊರೋನ್ಹಾ, ಗುಲಾಬಿ ಕೃಷ್ಣ ಟ್ರಸ್ಟ್ನ ಟ್ರಸ್ಟೀ ಅನುಶ್ರೀ ಎಸ್.ಭಂಡಾರಿ, ಶಾಲಾ ಹಳೆ ವಿದ್ಯಾರ್ಥಿ ಗುರುರಾಜ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯ ಪ್ರದೀಪ್ ನಾಯಕ್ ಸ್ವಾಗತಿಸಿ ಪ್ರಸ್ತಾವನೆಗೈದರು. ಪ್ರೌಢ ಶಾಲಾ ಮುಖ್ಯ ಶಿಕ್ಷಕಿ ಸಿ. ಪ್ರೆಸಿಲ್ಲಾ ಮಿನೇಜಸ್ ಶಾಲಾ ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು. ಕನ್ನಡ ಅಧ್ಯಾಪಕ ಸುಬ್ರಹ್ಮಣ್ಯ ಉಪಾ ಧ್ಯಾಯ ಕಾರ್ಯಕ್ರಮ ನಿರೂಪಿಸಿ ವಿಜ್ಞಾನ ಶಿಕ್ಷಕಿ ಎಸ್.ದಿವ್ಯಾ ವಂದಿಸಿದರು.