ಬ್ರಹ್ಮಾವರ: ಜೂ.29ರಂದು ಉಚಿತ ಹೊರರೋಗಿ ಡಯಾಲಿಸಿಸ್ ಕೇಂದ್ರ ಉದ್ಘಾಟನೆ
ಉಡುಪಿ: ಆರೋಗ್ಯ, ಶಿಕ್ಷಣ, ಕೃಷಿ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ನಿರಂತರ ಸೇವೆ ಸಲ್ಲಿಸಲು ಪ್ರಾರಂಭಗೊಂಡಿ ರುವ ಕೊಕ್ಕರ್ಣೆಯ ನಿರಂತರ ಚಾರಿಟೇಬಲ್ ಟ್ರಸ್ಟ್, ಬ್ರಹ್ಮಾವರದ ಪ್ರಣವ್ ಆಸ್ಪತ್ರೆಯಲ್ಲಿ ಸ್ಥಾಪಿಸಿರುವ ಉಚಿತ ಹೊರರೋಗಿ ಡಯಾಲಿಸಿಸ್ ಕೇಂದ್ರ ಜೂ.೨೯ರ ಬುಧವಾರ ಉದ್ಘಾಟನೆಗೊಳ್ಳಲಿದೆ ಎಂದು ಟ್ರಸ್ಟ್ನ ಸ್ಥಾಪಕಾಧ್ಯಕ್ಷ, ಉದ್ಯಮಿ ಕೆ.ನಿರಂಜನ್ ಶೆಟ್ಟಿ ತಿಳಿಸಿದ್ದಾರೆ.
ಸೋಮವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರಂಜನ್ ಶೆಟ್ಟಿ, ಸದ್ಯ ಮೂರು ಡಯಾಲಿಸಿಸ್ ಯಂತ್ರಗಳು ಇಲ್ಲಿ ದಿನದ ೧೨ ಗಂಟೆ ಕಾರ್ಯಾಚರಿಸಲಿವೆ. ಬಡ ಅರ್ಹ ಫಲಾನುಭವಿಗಳಿಗೆ ಇದು ಸಂಪೂರ್ಣ ಉಚಿತವಾಗಿರುತ್ತದೆ. ಮುಂದೆ ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನ ಇದೆ ಎಂದವರು ತಿಳಿಸಿದರು.
ಜೂ.೨೯ರ ಬೆಳಗ್ಗೆ ೧೦:೩೦ಕ್ಕೆ ಕಾರ್ಯಕ್ರಮವನ್ನು ರಾಜ್ಯ ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ಉದ್ಘಾಟಿಸಲಿದ್ದಾರೆ. ಉಡುಪಿ ಶಾಸಕ ಕೆ.ರಘುಪತಿ ಭಟ್ ಯಜಾಲಿಸಿಸ್ ಯಂತ್ರಕ್ಕೆ ಚಾಲನೆ ನೀಡಲಿದ್ದಾರೆ. ಕುಮಟಾ-ಹೊನ್ನಾವರ ಶಾಸಕರಾದ ದಿನಕರ್ ಕೆ.ಶೆಟ್ಟಿ ಅವರು ಮಾಡ್ಯುಲರ್ ಮತ್ತು ಲ್ಯಾಮಿನರ್ ಫ್ಲೋ ಆಪರೇಷನ್ ಥಿಯೇಟರ್ನ್ನು ಉದ್ಘಾಟಿಸಲಿದ್ದಾರೆ.
ಕೆ.ನಿರಂಜನ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಉಡುಪಿ ಡಿಎಚ್ಓ ಡಾ.ನಾಗಭೂಷಣ ಉಡುಪ, ತಾಲೂಕು ಆರೋಗ್ಯಾಧಿಕಾರಿ ಡಾ.ವಾಸುದೇವ ಉಪಾಧ್ಯಾಯ, ಉಡುಪಿ ನಗರಸಭೆ ಆಯುಕ್ತ ಡಾ.ಉದಯ ಶೆಟ್ಟಿ, ಬೆಂಗಳೂರು ಬಂಟರ ಸಂಘದ ಅಧ್ಯಕ್ಷ ಆರ್.ಉಪೇಂದ್ರ ಶೆಟ್ಟಿ, ಬ್ರಹ್ಮಾವರ ಬಂಟರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ ಮೈರ್ಮಾಡಿ, ಕೋಟದ ಉದ್ಯಮಿ ಆನಂದ ಕುಂದರ್ ಹಾಗೂ ಪ್ರಣವ್ ಆಸ್ಪತ್ರೆಯ ಡಾ.ಪ್ರವೀಣ್ಕುಮಾರ್ ಉಪಸ್ಥಿತರಿರುವರು.
ಸದ್ಯ ಬೆಳಗ್ಗೆ ೮ರಿಂದ ರಾತ್ರಿ ೮ರವರೆಗೆ ಡಯಾಲಿಸಿಸ್ ಯಂತ್ರ ಸೇವೆಯಲ್ಲಿರುತ್ತದೆ. ದಿನದಲ್ಲಿ ಸುಮಾರು ೧೦ರಷ್ಟು ಡಯಾಲಿಸಿಸ್ ಮಾಡಬಹುದು. ಮುಂದೆ ಈ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕೊಕ್ಕರ್ಣೆ ಬಾಲಕೃಷ್ಣ ಹೆಗ್ಡೆ, ನವನೀತ ಶೆಟ್ಟಿ ಹಾಗೂ ಕಮಲಾಕ್ಷ ಹೆಬ್ಬಾರ್ ಉಪಸ್ಥಿತರಿದ್ದರು.