ಕಕ್ಕುಂಜೆಯಲ್ಲಿ ಮನೆಗೆ ನುಗ್ಗಿ ಕಳವು ಪ್ರಕರಣ: ಇಬ್ಬರು ಆರೋಪಿಗಳ ಬಂಧನ
ಉಡುಪಿ: ಆರು ತಿಂಗಳ ಹಿಂದೆ ಅಂಬಾಗಿಲು ಕಕ್ಕುಂಜೆಯಲ್ಲಿ ನಡೆದ ಮನೆ ಕಳವು ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಉಡುಪಿ ಪೊಲೀಸರು ಬಂಧಿಸಿ, ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕಕ್ಕುಂಜೆ ಗರಡಿ ದೇವಸ್ಥಾನದ ಹತ್ತಿರ ನಿವಾಸಿ ಸಂತೋಷ್ ಪೂಜಾರಿ (36) ಹಾಗೂ ಕಟಪಾಡಿ ಮಟ್ಟು ನಿವಾಸಿ ರಾಕೇಶ್(37) ಬಂಧಿತ ಆರೋಪಿಗಳು. ಬಂಧಿತರಿಂದ ಒಟ್ಟು 2,18,169 ರೂ. ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿ ಕೊಳ್ಳಲಾಗಿದೆ.
ಕಕ್ಕುಂಜೆಯ ಪ್ರಮೀಳಾ ಬಂಗೇರಾ ಎಂಬವರ ಮನೆಗೆ ಜ.1ರ ರಾತ್ರಿ ವೇಳೆ ನುಗ್ಗಿದ ದುಷ್ಕರ್ಮಿಗಳು, ಒಟ್ಟು 9 ಪವನ್ ತೂಕದ ಚಿನ್ನಾ ಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಈ ಬಗ್ಗೆ ಇವರ ಮನೆಗೆ ಬರುತ್ತಿದ್ದ ಸಂತೋಷ್ನ ಮೇಲೆ ಸಂಶಯ ಇರುವುದಾಗಿ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪತ್ತೆಗಾಗಿ ನಿಯೋಜಿಸಲಾದ ನಗರ ಠಾಣೆಯ ಎಸ್ಸೈ ಪ್ರಸಾದ್ ಕುಮಾರ್ ಹಾಗೂ ಸಿಬ್ಬಂದಿ ಸತೀಶ್ ಬೆಳ್ಳೆ, ಕಿರಣ್ ಅವರ ತಂಡ ಸಂತೋಷ್ ಪೂಜಾರಿಯನ್ನು ಉಡುಪಿ ಕೃಷ್ಣ ಮಠದ ಗೀತಾ ಮಂದಿರ ಬಳಿ ಮತ್ತು ರಾಕೇಶ್ ಪಾಲನ್ನ್ನು ಉಡುಪಿ ಉಜ್ವಲ್ ಬಾರ್ ಎದುರು ಬಂಧಿಸಿ, ಸೊತ್ತುಗಳನ್ನು ವಶಕ್ಕೆ ಪಡೆದುಕೊಂಡಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿದ ಆರೋಪಿಗಳಿಗೆ ನ್ಯಾಯಾಲಯವು 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಿದೆ.