ವೈ.ಕೆ.ಮುದ್ದುಕೃಷ್ಣ ಅವರ ‘ಹಾಡು ಹಿಡಿದ ಜಾಡು’ ಕೃತಿ ಬಿಡುಗಡೆ
ಉಡುಪಿ, ಆ.8: ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ತಾಲೂಕು ಘಟಕ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಉಡುಪಿ ಹಾಗೂ ರಂಗಸಂಗಾತಿ ಮಂಗಳೂರು ಆಶ್ರಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಾಜಿ ನಿರ್ದೇಶಕ ಹಾಗೂ ಕನ್ನಡ ಸುಗಮ ಸಂಗೀತ ಪರಿಷತ್ತಿನ ಅಧ್ಯಕ್ಷ ವೈ.ಕೆ. ಮುದ್ದುಕೃಷ್ಣ ಅವರ ಆತ್ಮಕಥನ ‘ಹಾಡು ಹಿಡಿದ ಜಾಡು’ ಕೃತಿ ಅನಾವರಣವು ಶನಿವಾರ ಉಡುಪಿಯ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಶಾಖೆಯಲ್ಲಿ ನಡೆಯಿತು.
ಕೃತಿಯನ್ನು ಬಿಡುಗಡೆಗೊಳಿಸಿದ ರಂಗ ನಿರ್ದೇಶಕ ಕಾಸರಗೋಡು ಚಿನ್ನಾ ಮಾತನಾಡಿ, ಒಬ್ಬ ವ್ಯಕ್ತಿಯ ಜೀವನ ಶೈಲಿ ಸಮಾಜಮುಖಿಯಾಗಿದ್ದು ಆತನ ವ್ಯಕ್ತಿತ್ವ ಇತರರಿಗೆ ಸ್ಫೂರ್ತಿಯಾಗಿ ಆತ ಜನಸಾಮಾನ್ಯರಿಗೆ ಹತ್ತಿರವಾದಾಗ ಅಂತವರ ಜೀವನ ಕಥನವನ್ನು ದಾಖಲೀಕರಿಸಿ ಹೊತ್ತಿಗೆಯ ರೂಪದಲ್ಲಿ ಹೊರತಂದರೆ ಅದು ನಮ್ಮ ಮುಂದಿನ ಯುವ ಜನಾಂಗಕ್ಕೆ ದಾರಿದೀಪವಾಗುತ್ತದೆ ಎಂದು ಹೇಳಿದರು.
ಕೃತಿಕರ್ತ ಡಾ.ನಾ.ದಾಮೋದರ್ ಶೆಟ್ಟಿ ಕೃತಿ ಪರಿಚಯಿಸಿದರು. ನಾಟಕಕಾರ ಶಶಿರಾಜ್ ಕಾವೂರು, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಇದರ ವ್ಯವಸ್ಥಾಪಕ ಹಫೀಝ್ ರಹ್ಮಾನ್, ರಾಘವೇಂದ್ರ ನಾಯ್ಕ್, ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಘಟಕದ ರಾಜೇಶ್ ಭಟ್ ಪಣಿಯಾಡಿ, ರಾಘವೇಂದ್ರ ಪ್ರಭು ಕರ್ವಾಲ್ ಉಪಸ್ಥಿತರಿದ್ದರು.
ವಾಸಂತಿ ಅಂಬಲಪಾಡಿ ಸ್ವಾಗತಿಸಿದರು. ಜನಾರ್ದನ್ ಕೊಡವೂರು ವಂದಿಸಿ ದರು. ಪೂರ್ಣಿಮಾ ಜನಾರ್ದನ್ ಕಾರ್ಯಕ್ರಮ ನಿರೂಪಿಸಿದರು. ಪ್ರಾರಂಭ ದಲ್ಲಿ ವೈ ಕೆ ಮುದ್ದುಕೃಷ್ಣ ಅವರಿಂದ ಭಾವಗೀತೆ ಕಾರ್ಯಕ್ರಮ ನಡೆಯಿತು.