ಕಾಲ್ತೊಡು ಕಾಲುಸಂಕದಿಂದ ಬಿದ್ದು ನೀರುಪಾಲಾದ ಬಾಲಕಿ: ಇನ್ನೂ ದೊರೆಯದ ಸುಳಿವು
ಶೋಧ ಕಾರ್ಯ ಮುಂದುವರಿಕೆ
ಬೈಂದೂರು, ಆ.9: ಶಾಲೆ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲ್ತೋಡು ಗ್ರಾಮದ ಬೀಜಮಕ್ಕಿ ಎಂಬಲ್ಲಿ ಕಾಲುಸಂಕ ದಾಟುವಾಗ ಆಯತಪ್ಪಿ ಬಿದ್ದು ನೀರು ಪಾಲಾದ ವಿದ್ಯಾರ್ಥಿನಿ ಸನ್ನಿಧಿ(7)ಗಾಗಿ ಮಂಗಳವಾರ ಸಂಜೆವರೆಗೂ ಶೋಧ ಕಾರ್ಯ ನಡೆಸಿದ್ದು, ಈವರೆಗೆ ಯಾವುದೇ ಸುಳಿವು ಲಭ್ಯವಾಗಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಬೊಳಂಬಳ್ಳಿಯ ಮಕ್ಕಿಮನೆ ನಿವಾಸಿ ಪ್ರದೀಪ್ ಪೂಜಾರಿ ಹಾಗೂ ಸುಮಿತ್ರಾ ದಂಪತಿಯ ಇಬ್ಬರು ಮಕ್ಕಳಲ್ಲಿ ಮೊದಲನೆಯವಳಾದ ಸನ್ನಿಧಿ, ಚಪ್ಪರಿಕೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 2ನೇ ತರಗತಿಯ ವಿದ್ಯಾರ್ಥಿಯಾಗಿದ್ದಳು. ಸೋಮವಾರ ಮಳೆ ಕಾರಣಕ್ಕಾಗಿ 2.30ರ ಹೊತ್ತಿಗೆ ಶಾಲೆಗೆ ರಜೆ ನೀಡಿ ಪೋಷಕರಿಗೆ ಮಾಹಿತಿ ನೀಡಲಾಗಿತ್ತು. ಸನ್ನಿಧಿ ಇತರ ಐವರು ವಿದ್ಯಾರ್ಥಿಗಳ ಜೊತೆ ಮನೆಗೆ ಬರುವಾಗ ಕಾಲುಸಂಕ ದಾಟುತ್ತಿದ್ದರು. ಈ ವೇಳೆ ಆಯತಪ್ಪಿ ತುಂಬಿ ಹರಿಯುವ ಹಳ್ಳಕ್ಕೆ ಬಿದ್ದ ಸನ್ನಿಧಿ, ನೀರಿನಲ್ಲಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಳು.
ಪರಿಸರದಲ್ಲಿ ನೀರವ ಮೌನ ಆವರಿಸಿದ್ದು, ಮನೆಮಂದಿಯ ಆಕ್ರಂಧನ ಮುಗಿಲು ಮುಟ್ಟಿದೆ. ಪ್ರದೀಪ್ ರಿಕ್ಷಾ ಚಾಲಕರಾಗಿದ್ದು ಸುಮಿತ್ರಾ ಗೃಹಿಣಿಯಾಗಿದ್ದಾರೆ.
ದಿನವಿಡೀ ಶೋಧ ಕಾರ್ಯಮುಂಜಾನೆಯೇ ಆಗಮಿಸಿದ ಕುಂದಾಪುರ ಉಪವಿಭಾಗಾಧಿಕಾರಿ ಕೆ.ರಾಜು, ಬೈಂದೂರು ತಹಶಿಲ್ದಾರ್ ಕಿರಣ್ ಗೌರಯ್ಯ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಸಂತ್ ಕುಮಾರ್, ಬೈಂದೂರು ಉಪ ತಹಶಿಲ್ದಾರ್ ಭೀಮಪ್ಪ, ಕಂದಾಯ ಇಲಾಖೆಯ ರಂಗರಾಜು, ಕಂದಾಯ ನಿರೀಕ್ಷಕ ಮಂಜು, ಗ್ರಾಮ ಲೆಕ್ಕಿಗ ಆಂಜನಪ್ಪಸಹಿತ ತಾಲ್ಲೂಕು ಆಡಳಿತ ತಂಡ ಸ್ಥಳದಲ್ಲಿ ಮೊಕ್ಕಾಂ ಹೂಡಿ ಶೋಧ ಕಾರ್ಯಾಚರಣೆಯ ಉಸ್ತುವಾರಿ ವಹಿಸಿಕೊಂಡಿದೆ.
ಬಾಲಕಿಯ ಪತ್ತೆಗೆ ಬೈಂದೂರು ಅಗ್ನಿಶಾಮಕ ದಳದ ಸಹಾಯಕ ಠಾಣಾಧಿ ಕಾರಿ ಶ್ರೀನಿವಾಸ ಪೂಜಾರಿ, ಕುಂದಾಪುರ ಅಗ್ನಿಶಾಮಕ ದಳದ ಸಹಾಯಕ ಠಾಣಾಧಿಕಾರಿ ಕೆ.ಟಿ.ಗೌಡ, ಬೈಂದೂರು ಪೊಲೀಸರು, ಸ್ಥಳೀಯರು, ಮುಳುಗು ತಜ್ಞರಾದ ದಿನೇಶ್ ಖಾರ್ವಿ ಗಂಗೊಳ್ಳಿ, ಸಂತೋಷ್ ಖಾರ್ವಿ, ವೆಂಕಟೇಶ ಖಾರ್ವಿ, ಸಂದೀಪ್ ಖಾರ್ವಿ, ಸುರೇಶ್ ಖಾರ್ವಿ, ನಾಗಪ್ಪ ಖಾರ್ವಿ, ಪ್ರವೀಶ್ ಖಾರ್ವಿ ದಿನವಿಡಿ ಶೋಧ ಕಾರ್ಯದಲ್ಲಿ ತೊಡಗಿದ್ದರು.ಸ್ಥಳಕ್ಕೆ ಜಿಲ್ಲಾಧಿಕಾರಿ ಭೇಟಿಮೃತ ಬಾಲಕಿಯ ಮನೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಮಂಗಳವಾರ ಬೆಳಗ್ಗೆ ಭೇಟಿ ನೀಡಿ ಸಾಂತ್ವಾನ ಹೇಳಿದ್ದಾರೆ.
ಇದೇ ವೇಳೆ ಕಾಲುಸಂಕ ಇರುವ ಬೀಜಮಕ್ಕಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿ ಸಿದ ಅವರು, ಕಾರ್ಯಾಚರಣೆಯನ್ನು ಇನ್ನಷ್ಟು ತೀವ್ರಗೊಳಿಸುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಬೈಂದೂರು ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕೂಡ ಮೃತ ಬಾಲಕಿ ಮನೆಗೆ ಭೇಟಿ ನೀಡಿ, ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಘಟನಾ ಸ್ಥಳಕ್ಕೆ ಉಡುಪಿ ಹೆಚ್ಚುವರಿ ಎಸ್ಪಿ ಎಸ್.ಟಿ.ಸಿದ್ದಲಿಂಗಪ್ಪ, ಡಿಡಿಪಿಐ ಎನ್.ಕೆ.ಶಿವರಾಜ್, ಕುಂದಾಪುರ ಡಿವೈಎಸ್ಪಿಶ್ರೀಕಾಂತ್ ಕೆ. ಭೇಟಿ ನೀಡಿದ್ದಾರೆ.
ಶಾಲೆ ಬೇಗ ಬಿಡುವ ಬಗ್ಗೆ ಮಾಹಿತಿ ಸಿಕ್ಕಿದಾಗ ಮಕ್ಕಳನ್ನು ಕರೆದುಕೊಂಡು ಬರಲು ಶಾಲೆಗೆ ಹೋಗಿದ್ದೆ. ಶಿಕ್ಷಕರ ಸೂಚನೆಯಂತೆ ಎಲ್ಲ ಮಕ್ಕಳನ್ನು ಕರೆದುಕೊಂಡು ಬಂದು ಸಂಕ ದಾಟಿಸುತ್ತಿದ್ದೆ. ಆಗ ಸನ್ನಿಧಿ ಆಯತಪ್ಪಿಬಿದ್ದಳು. ಒಂದು ಕ್ಷಣ ನಾನು ಏನು ಮಾಡು ಮಾಡಬೇಕು ತಿಳಿಯಲಾಗಿಲ್ಲ. ಜೋರಾಗಿ ಕಿರುಚಿದೆ. ನನ್ನ ಮಗಳ ಆತ್ಮೀಯ ಸ್ನೇಹಿತೆಯಾಗಿದ್ದ ಸನ್ನಿಧಿ ಬೇರೆಯಲ್ಲ ನನ್ನ ಹೊಟ್ಟೆಯಲ್ಲಿ ಹುಟ್ಟಿದ ಮಗಳು ಬೇರೆಯಲ್ಲ. ತುಂಬಾ ನೊಂದಿದ್ದೇನೆ.
-ಭಾರತಿ, ಶಾಲೆಯ ಬಿಸಿಯೂಟ ಸಿಬ್ಬಂದಿ
ಸೋಮವಾರ ಬೆಳಿಗ್ಗೆ ಮಳೆ ಕಮ್ಮಿಯಿದ್ದು ನೀರಿನ ಪ್ರಮಾಣವೂ ಹೆಚ್ಚಿರಲಿಲ್ಲ. ಅಲ್ಲದೆ ಮಂಗಳವಾರ ರಜೆಯಿದ್ದರಿಂದ ನಾನೇ ಮೊಮ್ಮಗಳನ್ನು ಮನೆಯಿಂದ ಶಾಲೆಗೆ ಬಿಟ್ಟು ಬಂದಿದ್ದೆ. ಆದರೆ ಅವಳು ಮತ್ತೆ ಮನೆಗೆ ಬರಲೇ ಇಲ್ಲ. ಸನ್ನಿಧಿ ನೀರಿಗೆ ತುಂಬಾ ಹೆದರುತ್ತಿದ್ದಳು.
-ಸರೋಜ, ಚಿಕ್ಕು, ಸನ್ನಿಧಿ ಅಜ್ಜಿ
ನಮ್ಮ ಗ್ರಾಮಕ್ಕೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ: ಗ್ರಾಮಸ್ಥರ ಆಕ್ರೋಶ
ಸ್ವಾತಂತ್ರ್ಯ ಬಂದು 75 ವರ್ಷವಾಗುತ್ತ ಬಂದರೂ ನಮ್ಮ ಗ್ರಾಮದ ಜನರಿಗೆ ಇನ್ನೂ ಸ್ವಾತಂತ್ರ್ಯ ಸಿಕ್ಕಿಲ್ಲ. ನಮ್ಮ ಊರಿನ ನೆಟ್ವರ್ಕ್, ಕಾಲು ಸಂಕದ ವಿಚಾರದ ಬಗ್ಗೆ ದಶಕಗಳಿಂದಲೂ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಈವರೆಗೂ ಯಾರು ಸ್ಪಂದಿಸಿಲ್ಲ ಎಂದು ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಇದೇ ಕಾಲುಸಂಕದಲ್ಲಿ ಬಂದು ಮತ ಕೇಳುವ ಜನಪ್ರತಿನಿಧಿಗಳು ಚುನಾವಣೆ ಬಳಿಕ ಇತ್ತ ಕಡೆ ತಲೆ ಹಾಕುವುದಿಲ್ಲ. ಪ್ರತಿ ವರ್ಷ ಮಳೆಗಾಲ ಬಂದಾಗ ಕೃಷಿ ಕಾರ್ಯ, ತಿರುಗಾಡುವ ಸಲುವಾಗಿ ಇಲ್ಲಿನ ಜನರು ಕಾಲುಸಂಕ ಮಾಡಿ ಕೊಳ್ಳುತ್ತಿದ್ದಾರೆ. ಈ ದುರ್ಘಟನೆ ನಮ್ಮ ವ್ಯವಸ್ಥೆಯ ನಿಷ್ಕ್ರಿಯತೆ ತೋರಿಸುತ್ತದೆ. ಓಟು ಪಡೆಯುವ ರಾಜಕಾರಣಿಗಳು ಕೋಟಿಗಟ್ಟಲೆ ಅನುದಾನ ಅಗತ್ಯವಿಲ್ಲದೆಡೆ ವಿನಿಯೋಗ ಮಾಡುವ ಬದಲು ಆದ್ಯತೆ ಮೇರೆಗೆ ಇಂತಹ ಸಮಸ್ಯೆ ಬಗೆಹರಿಸ ಬೇಕು ಎಂದು ಸ್ಥಳೀಯರಾದ ಪ್ರದೀಪ್ ಒತ್ತಾಯಿಸಿದರು.
ಗ್ರಾಮಕ್ಕೆ ಭೇಟಿ ನೀಡಿದ ಮಾಜಿ ಶಾಸಕ ಗೋಪಾಲ ಪೂಜಾರಿ ಮಾತನಾಡಿ, ಘಟನೆ ಬಹಳ ನೋವುಂಟು ಮಾಡಿದೆ. ಮಳೆಗಾಲದ ಸಂದರ್ಭದಲ್ಲಿ ಕರಾವಳಿ, ಮಲೆನಾಡು ಭಾಗದಲ್ಲಿ ಶಾಲೆ ವಿದ್ಯಾರ್ಥಿಗಳಿಗೆ ರಕ್ಷಣೆ ನೀಡುವುದು ಕರ್ತವ್ಯ ವಾಗುತ್ತದೆ. ಬೈಂದೂರು ಕ್ಷೇತ್ರದಲ್ಲಿ ಬಹಳಷ್ಟು ನದಿ ಹರಿಯುವ ಕಾರಣದಿಂದಾಗಿ ಕಾಲುಸಂಕ ನಿರ್ಮಾಣದ ಮೂಲಕ ಸಮಸ್ಯೆ ಬಗೆಹರಿಸಲು ಸಾಧ್ಯವಿದೆ. ರಸ್ತೆ ನಿರ್ಮಾಣಕ್ಕಿಂತ ಆದ್ಯತೆ ಇರುವ ಕಡೆಗಳಿಗೆ ಸೇತುವೆ ನಿರ್ಮಿಸಲು ಕ್ರಮಕೈಗೊಳ್ಳ ಬೇಕು ಎಂದು ತಿಳಿಸಿದರು.
‘ನನಗೆ ಈಗ 26 ವರ್ಷ. ನಾನು 8 ವರ್ಷ ವಯಸ್ಸಲ್ಲಿ ಈ ಕಾಲು ಸಂಕ ದಾಟುವಾಗ ಆಯತಪ್ಪಿ ಬಿದ್ದಿದ್ದು ಸಮೀಪ ನಾಟಿ ಕೆಲಸದಲ್ಲಿ ತೊಡಗಿದ್ದವರು ನನ್ನನು ಪಾರು ಮಾಡಿದ್ದರು. ಈಗಲೂ ಇದೇ ಸ್ಥಿತಿ ನಮ್ಮೂರಲ್ಲಿ ಮುಂದು ವರೆದಿರುವುದು ಶೋಚನೀಯ’
-ನಾಗೇಂದ್ರ ಗಾಣಿಗ, ಸ್ಥಳೀಯರು
ಇಂತಹ ದುರ್ಘಟನೆ ಆಗದಂತೆ ಉತ್ತಮ ಸೇತುವೆ ನಿರ್ಮಾಣಕ್ಕಾಗಿ ಸಂಬಂದಪಟ್ಟ ಇಲಾಖೆ ಹಾಗೂ ಸ್ಥಳಿಯಾಡಳಿತದಿಂದ ವರದಿ ಪಡೆದು ಸರಕಾರಕ್ಕೆ ಸಲ್ಲಿಸಲಾಗುವುದು. ಮಳೆಗಾಲದಲ್ಲಿ ಇಂತಹ ಘಟನೆ ಮರುಕಳಿಸದಿ ರಲು ಶಿಕ್ಷಕರು, ಪೋಷಕರು, ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು.
-ಕೆ.ರಾಜು, ಕುಂದಾಪುರ ಸಹಾಯಕ ಕಮಿಷನರ್