ಕೋಡಿ; ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯೋತ್ಸವ
ಕುಂದಾಪುರ, ಆ.16: ಕೋಡಿ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಸೋಮವಾರ ಸಂಭ್ರಮದಿಂದ ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿದ ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಸಯ್ಯದ್ ಮಹಮ್ಮದ್ ಬ್ಯಾರಿ ಮಾತನಾಡಿ, ಅಸಂಖ್ಯಾತ ದೇಶ ಭಕ್ತರ ತ್ಯಾಗ-ಬಲಿದಾನಗಳಿಂದ ನಮಗೆ ಸ್ವಾತಂತ್ರ್ಯ ದೊರೆತಿದೆ. ದೇಶದಲ್ಲಿ ನಿತ್ಯ ಸಂಭ್ರಮಕ್ಕೆ ದಾರಿದೀಪವಾಗಬೇಕಾದವರು ಇಂದಿನ ಯುವಜನತೆ. ಹಿರಿಯರು, ಮಹಾತ್ಮರು ಹಚ್ಚಿಹೋದ ಸ್ವಾತಂತ್ರ್ಯದ ಹಣತೆಗೆ ಕಿರಿಯರು ತೈಲವೆರೆದು ನಿರಂತರವಾಗಿ ಬೆಳಗುವಂತೆ ನೋಡಿಕೊಳ್ಳಬೇಕೆಂದು ಹೇಳಿದರು.
ಬ್ಯಾರೀಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಹಾಜಿ ಕೆ.ಎಂ.ಅಬ್ದುಲ್ ರಹ್ಮಾನ್, ವಿಶ್ವಸ್ಥ ಮಂಡಳಿ ಸದಸ್ಯ ಸಿದ್ದೀಕ್ ಬ್ಯಾರಿ, ಆಡಳಿತ ನಿರ್ದೇಶಕ ದೋಮ ಚಂದ್ರಶೇಖರ್, ಶಿಕ್ಷಣ ಸಂಸ್ಥೆಗಳ ವಿವಿಧ ವಿಭಾಗಗಳ ಮುಖ್ಯಸ್ಥರು, ಶಾಲಾಭಿವೃದ್ಧಿ ಹಾಗೂ ಸಲಹಾ ಮಂಡಳಿ ಅಧ್ಯಕ್ಷರು ಹಾಗೂ ಸದಸ್ಯರು, ಕುಂದಾಪುರ ಪುರಸಭಾ ಸದಸ್ಯರು, ಹಳೆ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕನ್ನಡ ಉಪನ್ಯಾಸಕ ಸಂದೀಪ ಶೆಟ್ಟಿ ಸ್ವಾಗತಿಸಿ, ಡಿ.ಎಡ್ ಪ್ರಾಂಶುಪಾಲೆ ಡಾ.ಫಿರ್ದೋಸ್ ವಂದಿಸಿದರು. ಶಿಕ್ಷಣ ಮಹಾವಿದ್ಯಾಲಯದ ಕನ್ನಡ ಪ್ರಶಿಕ್ಷಕ ಅನಂತ್ ಭಟ್ ಕಾರ್ಯಕ್ರಮ ನಿರ್ವಹಿಸಿದರು.