ಆ.18ರಂದು 15 ಚಿತ್ರಮಂದಿರಗಳಲ್ಲಿ ಅಬತರ ತುಳು ಸಿನಿಮಾ ಬಿಡುಗಡೆ
ಉಡುಪಿ: ಬೊಳ್ಳಿ ಮೂವೀಸ್ ಮತ್ತು ಅವಿಕ ಪ್ರೊಡಕ್ಷನ್ನಡಿಯಲ್ಲಿ ಅರ್ಜುನ್ ಕಾಪಿಕಾಡ್ ನಿರ್ದೇಶನದಲ್ಲಿ ತಯಾರಾದ ಬಹು ನಿರೀಕ್ಷೆಯ ತುಳು ಸಿನಿಮಾ ಅಬತರ ಆ.18ರಂದು ಕರಾವಳಿ ಜಿಲ್ಲೆಯಾದ್ಯಂತ ತೆರೆಕಾಣಲಿದೆ ಎಂದು ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಬತರ ಸಿನಿಮಾ ಮಂಗಳೂರು, ಮೂಡಬಿದ್ರೆ, ಬೆಳ್ತಂಗಡಿ, ಸುರತ್ಕಲ್, ಉಡುಪಿ, ಮಣಿಪಾಲ, ಕಾರ್ಕಳ, ಪುತ್ತೂರು, ಸುಳ್ಯ ಸೇರಿದಂತೆ ಒಟ್ಟು 15 ಚಿತ್ರ ಮಂದಿರಗಳಲ್ಲಿ ಸಿನಿಮಾ ಏಕಕಾಲಕ್ಕೆ ತೆರೆ ಕಾಣಲಿದೆ. ಮುಂದೆ ಮುಂಬೈ, ಬೆಂಗಳೂರು, ಕಾಸರಗೋಡು, ಮುಳ್ಳೇರಿಯ, ಸಕಲೇಶಪುರ, ಶುಂಠಿಕೊಪ್ಪ, ತೀರ್ಥಹಳ್ಳಿ, ಕುಂದಾಪುರ, ಶಿವಮೊಗ್ಗ ಮೊದಲಾದ ಕಡೆಗಳಲ್ಲಿ ಸಿನಿಮಾ ಬಿಡುಗಡೆಗೊಳ್ಳಲಿದೆ ಎಂದರು.
ಆ.17ರಂದು ಉಡುಪಿ, ಪಡುಬಿದ್ರೆ ಮೊದಲಾದ ಅನಾಥಶ್ರಮದಲ್ಲಿರುವ ಮಕ್ಕಳಿಗೆ ಸಿನಿಮಾವನ್ನು ಮಣಿಪಾಲದ ಬಿಗ್ ಸಿನೆಮಾದಲ್ಲಿ ಉಚಿತವಾಗಿ ಪ್ರದರ್ಶಿಸಲಾಗುವುದು. ಈ ಸಿನಿಮಾಕ್ಕೆ ಮಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಾಗಿದೆ. ಪ್ರೇಕ್ಷಕರು ಇಷ್ಟ ಪಡುವಂತೆ ಇದು ಸಂರ್ಪೂ ಹಾಸ್ಯ ಚಿತ್ರದ ಪ್ಯಾಕೇಜ್. ಸಮಾಜಕ್ಕೆ ಒಂದು ಒಳ್ಳೆಯ ಸಂದೇಶವನ್ನೂ ನೀಡಲಾಗಿದೆ ಎಂದು ನಟ ಅರ್ಜುನ್ ಕಾಪಿಕಾಡ್ ತಿಳಿಸಿದರು.
ಸಿನಿಮಾದ ಕತೆಯನ್ನು ದೇವದಾಸ್ ಕಾಪಿಕಾಡ್ ರಚಿಸಿ, ಅಭಿನಯಿಸಿ ಅರ್ಜುನ್ ಕಾಪಿಕಾಡ್ ಅಭಿನಯದ ಜೊತೆಗೆ ಮೊಟ್ಟ ಮೊದಲ ಬಾರಿಗೆ ನಿರ್ದೇಶನ ಮಾಡಿದ್ದಾರೆ. ತಾರಾಗಣದಲ್ಲಿ ನವೀನ್ ಡಿ ಪಡಿಲ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿ ಕೃಷ್ಣ, ಶನಿಲ್ ಗುರು, ಚೇತನ್ ರೈ ಮಾಣಿ, ಲಕ್ಷ್ಮೀಶ್, ಸುನಿಲ್ ಚಿತ್ರಾಪುರ ಮತ್ತು ನಾಯಕನಟಿಯಾಗಿ ಗಾನ ಭಟ್, ಕ್ರಿಸ್ಟಿನಾ ನಟಿಸಿದ್ದಾರೆ.