ಕಾರ್ಕಳ: ‘ಅಗ್ನಿಪಥ್ ದೌಡ್’ 75 ಕಿ.ಮೀ. ಮ್ಯಾರಥಾನ್ ಓಟಕ್ಕೆ ಚಾಲನೆ
ಕಾರ್ಕಳ, ಆ.24: ಉಡುಪಿ ಜಿಲ್ಲಾ ರಜತ ಮಹೋತ್ಸವ ಪ್ರಯುಕ್ತ ಹಾಗೂ ಅಗ್ನಿಪಥ್ ಯೋಜನೆ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಉಡುಪಿ ಜಿಲ್ಲೆ ಮತ್ತು ಟೀಮ್ ನೇಶನ್ ಫಸ್ಟ್ ಸಹಭಾಗಿತ್ವದಲ್ಲಿ 75 ಕಿ.ಮೀ. ಮ್ಯಾರಥಾನ್ ಓಟ ‘ಅಗ್ನಿಪಥ್ ದೌಡ್’ ಕಾರ್ಕಳದಲ್ಲಿಂದು ಚಾಲನೆ ನೀಡಲಾಯಿತು.
ಶಾಸಕ ಕೆ.ರಘುಪತಿ ಭಟ್ರ ನೇತೃತ್ವದಲ್ಲಿ ಆಯೋಜಿಸಿದ್ದ ಮ್ಯಾರಥಾನ್ ಓಟಕ್ಕೆ ಕಾರ್ಕಳ ಭುವನೆಂದ್ರ ಕಾಲೇಜಿನಲ್ಲಿ ಇಂಧನ ಸಚಿವ ವಿ. ಸುನೀಲ್ ಲ್ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಕಾರ್ಕಳ ಪುರಸಭೆ ಅಧ್ಯಕ್ಷೆ ಸುಮಾ ಕೇಶವ್, ಕಾರ್ಕಳ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ಕಾರ್ಕಳ ಪುರಸಭೆ ಮುಖ್ಯಾಧಿಕಾರಿ ರೂಪಾ ಡಿ. ಶೆಟ್ಟಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಡಾ.ರೋಷನ್ ಶೆಟ್ಟಿ, ಭುವನೇಂದ್ರ ಕಾಲೇಜು ಪ್ರಾಂಶುಪಾಲ ಮಂಜುನಾಥ್ ಕೋಟ್ಯಾನ್, ಟೀಮ್ ನೇಶನ್ ಫಸ್ಟ್ ಉಡುಪಿ ಅಧ್ಯಕ್ಷ ಸೂರಜ್ ಉಪಸ್ಥಿತರಿದ್ದರು.
ಕಾರ್ಕಳ ಭುವನೆಂದ್ರ ಕಾಲೇಜಿನಿಂದ ಆರಂಭಗೊಂಡು ಸೈಂಟ್ ಲಾರೆನ್ಸ್ ಬಸಿಲಿಕಾ ಚರ್ಚ್ ಅತ್ತೂರು ಬಳಿ ಬಂದಾಗ ಚರ್ಚ್ ಧರ್ಮಗುರುಗಳು, ಸ್ಥಳೀಯ ಜನಪ್ರತಿನಿಧಿಗಳು ಸ್ವಾಗತಿಸಿ ಶುಭ ಹಾರೈಸಿದರು.
ಮಧ್ಯಾಹ್ನ ನಿಟ್ಟೆ ವಿಶ್ವವಿದ್ಯಾನಿಲಯವನ್ನು ಮ್ಯಾರಥಾನ್ ಓಟ ತಲುಪಿದ್ದು, ಅಲ್ಲಿ ನಡೆದ ಕಾರ್ಯಕ್ರಮದಲ್ಲಿ ಮ್ಯಾರಥಾನ್ ಓಟದಲ್ಲಿ ಪಾಲ್ಗೊಂಡವರಿಗೆ ನಿಟ್ಟೆ ವಿವಿ ಕುಲಪತಿ ಎನ್.ವಿನಯ ಹೆಗ್ಡೆ ಶುಭಹಾರೈಸಿದರು.
ಕಾರ್ಕಳ ನಗರವಾಗಿ ನಿಟ್ಟೆ ವಿಶ್ವವಿದ್ಯಾನಿಲಯವನ್ನು ತಲುಪಿದ ‘ಅಗ್ನಿಪಥ್ ದೌಡ್’ ಬೆಳ್ಮಣ್ ಮೂಲಕ ಶಿರ್ವ, ಶಂಕರಪುರ ಕಟಪಾಡಿ, ಉದ್ಯಾವರ ಮೂಲಕ ಸಂಜೆಯ ವೇಳೆ ಉಡುಪಿಯ ಕಿನ್ನಿಮುಲ್ಕಿಗೆ ಆಗಮಿಸಿತು.