ಉದ್ಯಾವರ ಹಿಂದೂ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ
ಉದ್ಯಾವರ, ಸೆ.5: ಉದ್ಯಾವರದ ಹಿಂದೂ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರಕ್ಷಕ ಶಿಕ್ಷಕ ಸಂಘ, ಹಳೆ ವಿದ್ಯಾರ್ಥಿ ಸಂಘ ಮತ್ತು ಶಾಲಾಡಳಿತ ಮಂಡಳಿ ಆಶ್ರಯದಲ್ಲಿ ಶಿಕ್ಷಕರ ದಿನಾಚರಣೆ ಸಮಾರಂಭ ಅರ್ಥಪೂರ್ಣವಾಗಿ ನಡೆಯಿತು.
ಸಮಾರಂಭದಲ್ಲಿ ನಿವೃತ್ತ ಶಿಕ್ಷಕರಾದ ಮ್ಯಾಕ್ಸಿಂ ಡಿ.ಸಿಲ್ವ, ರತ್ನಾವತಿ, ರಾಜೀವಿ ಮತ್ತು ಶಾಲೆಯಲ್ಲಿ ಪ್ರಸ್ತುತ ಶಿಕ್ಷಕರಾಗಿರುವ ಮುಖ್ಯ ಶಿಕ್ಷಕಿ ಹೇಮಲತಾ, ಯು. ವಿಕ್ರಮ ಆಚಾರ್ಯ, ಅನುರಾಧ ಶೆಟ್ಟಿ, ಕಾರ್ತಿಕಾ, ಲಕ್ಷ್ಮೀ ಹರೀಶ್, ನಾಜೀರ, ಪವಿತ್ರಾ, ಪ್ರಮೀಳಾ ಇವರನ್ನು ಸಂಮಾನಿಸಲಾಯಿತು.
ಸಂಮಾನಕ್ಕೆ ಉತ್ತರವಾಗಿ ರತ್ನಾವತಿ ಮತ್ತು ಮುಖ್ಯ ಶಿಕ್ಷಕಿ ಹೇಮಲತಾ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಶಿಕ್ಷಕರಿಗೆ ವಿವಿಧ ಸ್ಪರ್ಧೆಗಳು ನಡೆದು ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.
ಅಧ್ಯಕ್ಷತೆಯನ್ನು ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷೆ ಡಾ.ತ್ರಿವೇಣಿ ವೇಣುಗೋಪಾಲ್ ವಹಿಸಿದ್ದರು. ಸಮಾರಂಭದಲ್ಲಿ ಶಾಲಾ ಸಂಚಾಲಕ ಯು. ಸುರೇಶ್ ಶೆಣೈ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುನಿಲ್ ಕುಮಾರ್ ಕಡೆಕಾರ್, ಶಾಲಾಡಳಿತ ಸಮಿತಿಯ ಸದಸ್ಯ ಉದ್ಯಾವರ ನಾಗೇಶ್ ಕುಮಾರ್, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷ ಗಣೇಶ ಕುಮಾರ್, ಹಳೆ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿ ರವಿಕಿರಣ್, ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಾಜೀವಿ ಉಮೇಶ್ ಕರ್ಕೇರ ಉಪಸ್ಥಿತರಿದ್ದರು.
ಪ್ರಾರಂಭದಲ್ಲಿ ರಕ್ಷಕ ಶಿಕ್ಷಕ ಸಂಘದ ಸದಸ್ಯ ಉಮೇಶ ಕರ್ಕೇರ ಸ್ವಾಗತಿಸಿದರು. ಕೋಶಾಧಿಕಾರಿ ಅಶ್ವಿನಿ ದೇವೇಂದ್ರ ಬಹುಮಾನ ವಿಜೇತರ ಪಟ್ಟಿಯನ್ನು ವಾಚಿಸಿದರೆ, ಹಳೆ ವಿದ್ಯಾರ್ಥಿನಿ ಸುಷ್ಮಾ ದೇವಾಡಿಗ ಕಾರ್ಯಕ್ರಮ ನಿರ್ವಹಿಸಿ ವಂದಿಸಿದರು.