ವಿದ್ಯುತ್ ದರ ಹೆಚ್ಚಳ ವಾಪಾಸು ಪಡೆಯಲು ಸಿಪಿಎಂ ಆಗ್ರಹ
ಉಡುಪಿ, ಸೆ.25: ಬಿಜೆಪಿ ರಾಜ್ಯ ಸರಕಾರ ಅನೈತಿಕವಾಗಿ ಅಧಿಕಾರಕ್ಕೆ ಬಂದ ಮೇಲೆ ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು ಇದೀಗ ಅಕ್ಟೋಬರ್ ತಿಂಗಳಿಂದ ವಿದ್ಯುತ್ ಬೆಲೆ ಹೆಚ್ಚಳ ಮಾಡಲಾಗುತ್ತಿದೆ ಎಂದು ಸಿಪಿಐಎಂ ಉಡುಪಿ ಜಿಲ್ಲಾ ಸಮಿತಿ ತೀವ್ರವಾಗಿ ವಿರೋಧಿಸಿದೆ.
ಕಳೆದ ಜುಲೈ ತಿಂಗಳಲ್ಲಿ ದರ ಹೆಚ್ಚಳ ಮಾಡಿದ ಸರಕಾರ ಪುನ: ಹೆಚ್ಚಳ ಮಾಡುತ್ತಿದ್ದು ದಸರಾ ಮತ್ತು ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಡಬಲ್ ಧಮಾಕ ’ಉಡುಗೊರೆ’ ನೀಡುತ್ತಿದೆ ಎಂದು ಸಿಪಿಐಎಂ ವ್ಯಂಗ್ಯವಾಡಿದೆ
ಉಡುಪಿ ಜಿಲ್ಲೆಯವರೇ ಆಗಿರುವ ಇಂಧನ ಸಚಿವರು ಅಧಿಕಾರ ವಹಿಸಿ ಕೊಳ್ಳುವಾಗಲೆ ಪ್ರಿಪೈಡ್ ಮೀಟರ್ ಅಳವಡಿಸಬೇಕು ಎಂದು ಸಲಹೆ ನೀಡಿದ್ದರು. ಅಂದರೆ ವಿದ್ಯುತ್ ಕ್ಷೇತ್ರವನ್ನು ಖಾಸಗಿಯವರಿಗೆ ವಹಿಸಿಕೊಡುವ ಹುನ್ನಾರ ವ್ಯಕ್ತಪಡಿಸಿದ್ದರು. ದರ ಏರಿಕೆಯೂ ಅದರ ಒಂದು ಭಾಗ ಎಂದು ಸಿಪಿಐಎಂ ಅಭಿಪ್ರಾಯ ಪಟ್ಟಿದೆ.
ವಿದ್ಯುತ್ ದರ ಏರಿಕೆಯಿಂದ ಪ್ರಧಾನಿ ಮೋದಿಯವರ ಸ್ನೇಹಿತ ಅದಾನಿ ಯವರು ಹೇರಳ ಲಾಭ ಗಳಿಸಲಿದ್ದಾರೆ. ಅನೇಕ ಕಲ್ಲಿದ್ದಲು ಗಣಿಗಳ ಮಾಲಿಕ ರಾದ ಅದಾನಿ, ವಿದ್ಯುತ್ ಉತ್ಪಾದನೆಯಲ್ಲೂ ತೊಡಗಿದ್ದಾರೆ ಎಂಬುದನ್ನು ಸಾರ್ವಜನಿಕರು ಗಮನಿಸಬೇಕು. ದರ ಹೆಚ್ಚಳವನ್ನು ಕೂಡಲೇ ವಾಪಾಸು ಪಡೆಯಬೇಕೆಂದು ಸಿಪಿಐಎಂ ಜಿಲ್ಲಾ ಕಾರ್ಯದರ್ಶಿ ಬಾಲಕೃಷ್ಣ ಶೆಟ್ಟಿ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.