ಉಡುಪಿ: ಹೂಡೆಯಲ್ಲಿ ಸಮುದ್ರ ಪಾಲಾಗಿದ್ದ ಮಣಿಪಾಲ ವಿದ್ಯಾರ್ಥಿಯ ಮೃತದೇಹ ಪತ್ತೆ
ಮಲ್ಪೆ, ಸೆ.26: ಹೂಡೆ ಬೀಚ್ ನಲ್ಲಿ ರವಿವಾರ ಸಂಜೆ ಸಮುದ್ರ ಪಾಲಾಗಿದ್ದ ಮಣಿಪಾಲ ವಿದ್ಯಾರ್ಥಿಯ ಮೃತದೇಹ ಇಂದು ಬೆಳಗಿನ ಜಾವ ಅಲ್ಲೇ ಸಮೀಪದಲ್ಲಿ ಪತ್ತೆಯಾಗಿದೆ.
ಮೃತರನ್ನು ಹೈದರಾಬಾದ್ ಮೂಲದ ವಿದ್ಯಾರ್ಥಿ ಶ್ರೀಕರ್ (21) ಎಂದು ಗುರುತಿಸಲಾಗಿದೆ.
ರವಿವಾರ ಸಂಜೆ ಮಣಿಪಾಲದ ಐಸಿಎಎಸ್ ನ ಒಟ್ಟು 15 ಮಂದಿ ವಿದ್ಯಾರ್ಥಿ ಗಳು ಹೂಡೆ ಬೀಚ್ ಗೆ ಬಂದಿದ್ದರು. ಈ ವೇಳೆ ಸಮುದ್ರದಲ್ಲಿ ಆಡುತ್ತಿದ್ದಾಗ ಅಲೆಗಳ ಅಬ್ಬರಕ್ಕೆ ಮೂವರು ವಿದ್ಯಾರ್ಥಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋದರೆ ಎನ್ನಲಾಗಿದ್ದು, ಅದರಲ್ಲಿ ಬೆಂಗಳೂರು ಮೂಲದ ನಿಶಾಂತ್(21) ಹಾಗೂ ಷಣ್ಮುಗ (21) ಎಂಬವರನ್ನು ಮೇಲಕ್ಕೆ ತರಲಾಯಿತು. ತೀವ್ರ ಅಸ್ವಸ್ಥಗೊಂಡು ಗಂಭೀರ ಸ್ಥಿತಿಯಲ್ಲಿದ್ದ ಅವರು ಇಬ್ಬರು ಮಣಿಪಾಲ ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ಮೃತಪಟ್ಟರು.
ನಾಪತ್ತೆಯಾದ ವಿದ್ಯಾರ್ಥಿಗಾಗಿ ಹುಡುಕಾಟ ತಡರಾತ್ರಿವರೆಗೂ ಮುಂದುವರಿಸಲಾಗಿತ್ತು. ಇಂದು ಬೆಳಗ್ಗೆ ಅಲ್ಲೇ ಸಮೀಪ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ