‘ಮಣ್ಣನ್ನು ಉಳಿಸಿ’ ಜಾಗೃತಿಗಾಗಿ ಬೈಸಿಕಲ್ನಲ್ಲಿ 2,500 ಕಿ.ಮೀ. ದೂರ ಸಂಚರಿಸಿ ಮಣಿಪಾಲಕ್ಕೆ ಬಂದ ಬಿಹಾರದ ಸಾಹಿಲ್ ಝಾ
ಮಣಿಪಾಲ, ಸೆ.29: ಭೂಮಿಯ ಮೇಲಿನ ಮಣ್ಣಿನ ಮಹತ್ವ, ಅದರ ಅಗತ್ಯತೆ, ಅದನ್ನು ಉಳಿಸಬೇಕಾದ ಅನಿವಾರ್ಯತೆಯ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಬಿಹಾರದ 17ರ ಹರೆಯದ ವಿದ್ಯಾರ್ಥಿಯೊಬ್ಬ ಬೈಸಿಕಲ್ನಲ್ಲಿ ದೇಶಾದ್ಯಂತ 2,500 ಕಿ.ಮೀ. ದೂರವನ್ನು ನಾಲ್ಕೂವರೆ ತಿಂಗಳಲ್ಲಿ ಸಂಚರಿಸಿ ಇತ್ತೀಚೆಗೆ ಮಣಿಪಾಲಕ್ಕೆ ಆಗಮಿಸಿದರು.
ಬಿಹಾರ ಮೂಲದ ಸಾಹಿಲ್ ಝಾ ಒಂದು ಒಳ್ಳೆಯ ಉದ್ದೇಶಕ್ಕಾಗಿ ಇಂಥ ಸಾಹಸಕ್ಕೆ ಕೈಹಾಕಿದ ಬಾಲಕ. ಇಶಾ ಫೌಂಡೇಷನ್ನ ಸದ್ಗುರು ಅವರ ‘ಮಣ್ಣು ಉಳಿಸಿ’ ಅಭಿಯಾನದಿಂದ ಸ್ಪೂರ್ತಿ ಪಡೆದ ಈ ಬಾಲಕ ಕೊಲ್ಕೊತ್ತಾದಿಂದ ತನ್ನ ಏಕಾಂಗಿ ಪ್ರಯಾಣವನ್ನು ಪ್ರಾರಂಭಿಸಿ ನಾಲ್ಕೂವರೆ ತಿಂಗಳ ಸತತ ಸಂಚಾರದ ಬಳಿಕ 2500ಕಿ.ಮೀ. ಕ್ರಮಿಸಿ ಮಣಿಪಾಲ ತಲುಪಿದ್ದಾರೆ.
ಮಣಿಪಾಲದಲ್ಲಿ ಸಾಹಿಲ್ ಝಾ ಎಂಐಟಿಗೆ ಭೇಟಿ ನೀಡಿದ್ದು, ಭೇಟಿಯ ನೆನಪಿನಲ್ಲಿ ಗಿಡವೊಂದನ್ನು ನೆಟ್ಟಿದ್ದಾರೆ. ನಾಲ್ಕೂವರೆ ತಿಂಗಳ ತನ್ನ ಪ್ರಯಾಣದ ಅನುಭವವನ್ನು ವಿದ್ಯಾರ್ಥಿಗಳು, ಪ್ರಾಧ್ಯಾಪಕರೊಂದಿಗೆ ಹಂಚಿಕೊಂಡ ಸಾಹಿಲ್ ಝಾ, ಒಟ್ಟು 18 ತಿಂಗಳ ಕಾಲ ದೇಶಾದ್ಯಂತ ಸಂಚರಿಸಿ ಕೊಲ್ಕೊತ್ತಾಕ್ಕೆ ಮರಳುವುದಾಗಿ ತಿಳಿಸಿದ್ದಾರೆ.