ಉಡುಪಿ ಜಿಲ್ಲೆಯಾದ್ಯಂತ ಸಹಬಾಳ್ವೆಯಿಂದ ಸದ್ಭಾವನಾ ದಿನಾಚರಣೆ
ಉಡುಪಿ: ಸಮಾಜದಲ್ಲಿ ಧ್ವೇಷ ಅಳಿಸಿ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಸಹಬಾಳ್ವೆ ಉಡುಪಿ ಜಿಲ್ಲೆ ಇದರ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ ‘ಸಭ್ಕೋ ಸನ್ಮತಿ ದೇ ಭಗ್ವಾನ್’ ಘೋಷ ವಾಕ್ಯದೊಂದಿಗೆ ಸದ್ಭಾವನಾ ದಿನಾಚರಣೆಯನ್ನು ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಳ್ಳಲಾಗಿದೆ ಎಂದು ಸಹಬಾಳ್ವೆ ಸಂಚಾಲನ ಸಮಿತಿಯ ಪ್ರಶಾಂತ್ ಜತ್ತನ್ನ ತಿಳಿಸಿದ್ದಾರೆ.
ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅ.2ರಂದು ಬೆಳಗ್ಗೆ 10ಗಂಟೆಗೆ ಬನ್ನಂಜೆ ನಾರಾಯಣ ಗುರು ಸಭಾಭವನ ವಠಾರದಿಂದ ಸದ್ಭಾವನಾ ಪಾದಯಾತ್ರೆ ಪ್ರಾರಂಭವಾಗಿ ಜುಮಾ ಮಸೀದಿ, ಮದರ್ ಆಫ್ ಸಾರೋಸ್ ಚರ್ಚ್ ಮೂಲಕವಾಗಿ ಸಾಗಿ ಅಜ್ಜರಕಾಡು ಗಾಂಧಿ ಉದ್ಯಾನವನದಲ್ಲಿ ಸಮಾಪ್ತಿಗೊಳ್ಳಲಿದೆ. ಬಳಿಕ ಸಾರ್ವಜನಿಕ ಸಭೆ ನಡೆಯಲಿದೆ ಎಂದರು.
ಅ.1ರಂದು ಸಂಜೆ 4ಗಂಟೆಯಿಂದ ಕಾಪುವಿನಲ್ಲಿ ಸದ್ಭಾವನಾ ಪಾದಯಾತ್ರೆ ಹಾಗೂ ಬಸ್ ನಿಲ್ದಾಣದಲ್ಲಿ ಸಾರ್ವಜನಿಕ ಸಭೆ, ಅ.2ರಂದು ಬೆಳಗ್ಗೆ 10ಗಂಟೆಗೆ ಬ್ರಹ್ಮಾವರದಲ್ಲಿ ಪಾದಯಾತ್ರೆ ಮತ್ತು ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಸಭೆ, ಸಂಜೆ 4.30ರಿಂದ ಕಾರ್ಕಳದಲ್ಲಿ ಪಾದಯಾತ್ರೆ ಮತ್ತು ಗಾಂಧಿ ಮೈದಾನದಲ್ಲಿ ಸಾರ್ವಜನಿಕ ಸಭೆ, ಸಂಜೆ 6.30ಕ್ಕೆ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಬೆಳಕಿನ ಸಾಲುಗಳ ಸಹಿತ ಸಾರ್ವಜನಿಕ ಸಭೆ ನಡೆಯಲಿದೆ ಎಂದು ಅವರು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಸಹಬಾಳ್ವೆ ಕರ್ನಾಟಕ ಸಂಚಾಲಕರಾದ ಪ್ರೊ.ಫಣಿರಾಜ್, ಯಾಸೀನ್ ಮಲ್ಪೆ, ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಸಾಹೇಬ್ ಕೋಟ, ಕೆಥೋಲಿಕ್ ಸಭಾ ಅಧ್ಯಕ್ಷೆ ಮೇರಿ ಡಿಸೋಜ, ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ತರ್ ಉಪಸ್ಥಿತರಿದ್ದರು.