ಉಡುಪಿ: ವೃದ್ಧೆಯ ಚಿನ್ನದ ಸರ ಅಪಹರಣ
ಉಡುಪಿ, ಅ.4: ಕಡಿಯಾಳಿ ಮಹಿಷಮರ್ಧಿನಿ ದೇವಸ್ಥಾನಕ್ಕೆ ಹೋಗಿ, ವಾಪಾಸು ಒಬ್ಬರೇ ನಡೆದುಕೊಂಡು ಎಂಜಿಎಂ ಕಾಲೇಜು ಮೈದಾನದ ಸಮೀಪದ ಮನೆಗೆ ಹಿಂದಿರುಗುತಿದ್ದ ವೃದ್ಧೆಯೊಬ್ಬರ 50 ಗ್ರಾಂ ತೂಕದ ಚಿನ್ನದ ಸರವನ್ನು ಅಪರಿಚಿತ ಯುವಕ ಅಪಹರಿಸಿದ ಘಟನೆ ಸೋಮವಾರ ರಾತ್ರಿ ನಡೆದಿದೆ.
ಕುಂಜಿಬೆಟ್ಟು ಎಂಜಿಎಂ ಕ್ರೀಡಾಂಗಣ ಹಿಂಭಾಗದ ಸಾಯಿರಾಧಾ ನೆಸ್ಟ್ ವಸತಿ ಸಂಕೀರ್ಣದ ನಿವಾಸಿ ಪ್ರೇಮಾ ಶೇಣವ (62) ಅವರು ದೇವರ ದರ್ಶನದ ಬಳಿಕ ಒಬ್ಬರೇ ನಡೆದುಕೊಂಡ ಬರುತಿದ್ದಾಗ ಎಂಜಿಎಂ ಕಾಲೇಜು ಗೇಟಿನ ಎದುರು ಘಟನೆ ನಡೆದಿದೆ.
ಸುಮಾರು 25ರಿಂದ 30 ವರ್ಷ ಪ್ರಾಯದ ಯುವಕನೊಬ್ಬ ಏಕಾಏಕಿ ಹಿಂದಿನಿಂದ ಬಂದು ಪ್ರೇಮಾ ಶೇಣವರ ಕೈಗಳನ್ನು ಗಟ್ಟಿಯಾಗಿ ಹಿಡಿದುಕೊಂಡು ಕುತ್ತಿಗೆಗೆ ಕೈ ಹಾಕಿ 50 ಗ್ರಾಂ ತೂಕದ ಚಿನ್ನದ ಸರವನ್ನು ಕಿತ್ತು ಪರಾರಿಯಾಗಿದ್ದಾನೆ ಎಂದು ದೂರಲಾಗಿದೆ.
ಸುಲಿಗೆಯಾದ ಚಿನ್ನದ ಸರದ ಮೌಲ್ಯ 2.30 ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story