ಉಚ್ಚಿಲ ದಸರಾ: ಹೆಲಿಕಾಪ್ಟರ್ನಲ್ಲಿ ಪುಷ್ಪವೃಷ್ಟಿ, ಶೋಭಾಯಾತ್ರೆಗೆ ಚಾಲನೆ
ಕಾಪು, ಅ.5: ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನವರಾತ್ರಿ ಉತ್ಸವವದ ಪ್ರಯುಕ್ತ ಚೊಚ್ಚಲ ಉಚ್ಚಿಲ ದಸರಾ ಉತ್ಸವ-2022 ಇದರ ಶೋಭಾಯಾತ್ರೆಗೆ ಬುಧವಾರ ಉಚ್ಚಿಲ ದೇವಳದ ಮುಂಭಾಗದಲ್ಲಿ ಚಾಲನೆ ನೀಡಲಾಯಿತು.
ಶೋಭಾಯಾತ್ರೆಯ ಆರಂಭದಲ್ಲಿ ಹೆಲಿಕಾಪ್ಟರ್ ಮೂಲಕ ಶ್ರೀಶಾರದಾ ಮಾತೆ ಹಾಗೂ ನವದುರ್ಗೆಯರಿಗೆ ಪುಷ್ಪವೃಷ್ಟಿ ಮಾಡಲಾಯಿತು. ರಾಷ್ಟ್ರೀಯ ಹೆದ್ದಾರಿ 66ರ ಸುಮಾರು 26 ಕಿ.ಮೀ. ದೂರ ಸಾಗಿದ ಬೃಹತ್ ಶೋಭಾಯಾತ್ರೆ ಯಲ್ಲಿ ದಶವಿಗ್ರಹಗಳನ್ನೊಳಗೊಂಡ 10 ವಿಶೇಷ ಟ್ಯಾಬ್ಲೋಗಳೊಂದಿಗೆ ವಿವಿಧ ಭಜನಾ ತಂಡಗಳು, ವಿವಿಧ ವೇಷ ಭೂಷಣಗಳು, ಹುಲಿ ವೇಷಗಳು ಸೇರಿದಂತೆ 100ಕ್ಕೂ ಅಧಿಕ ಟ್ಯಾಬ್ಲೋಗಳು ಆಕಷರ್ಣೀಯವಾಗಿದ್ದವು.
ಶ್ರೀಕ್ಷೇತ್ರ ಉಚ್ಚಿಲದಿಂದ ಹೊರಟ ಶೋಭಾಯಾತ್ರೆ ಎರ್ಮಾಳ್- ಪಡುಬಿದ್ರಿ -ಹೆಜಮಾಡಿ ಟೋಲ್ಗೇಟ್ವರೆಗೆ ಸಾಗಿ ಅಲ್ಲಿಂದ ಮರಳಿ ರಾಷ್ಟ್ರೀಯ ಹೆದ್ದಾರಿ ಮೂಲಕ ಪಡುಬಿದ್ರಿ- ಎರ್ಮಾಳ್- ಉಚ್ಚಿಲ- ಮೂಳೂರು- ಕೊಪ್ಪಲಂಗಡಿ ಯಿಂದ ಮಾರ್ಗವಾಗಿ ಸಾಗಿ ಕಾಪು ದೀಪಸ್ತಂಭದ ಬಳಿ ಆಗಮಿಸಿ, ತಡರಾತ್ರಿ ಸಮುದ್ರದಲ್ಲಿ ವಿಸರ್ಜನೆಗೊಳ್ಳಲಿದೆ.
ಶೋಭಾಯಾತ್ರೆ ಸಾಗುವ ಮಾರ್ಗದಲ್ಲಿ ಹೆಜಮಾಡಿ- ಪಡುಬಿದ್ರಿ- ಉಚ್ಚಿಲ- ಕೊಪ್ಪಲಂಗಡಿ ಕ್ರಾಸ್-ಕಾಪು ಬೀಚ್ನಲ್ಲಿ ಸಂಗೀತ ರಸಮಂಜರಿ ಮತ್ತು ಮನೋರಂಜನಾ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ದ.ಕ. ಮೊಗವೀರ ಮಹಾಜನ ಸಂಘ ಗೌರವ ಸಲಹೆಗಾರ ಡಾ.ಜಿ.ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್, ಶಾಸಕ ಲಾಲಾಜಿ ಮೆಂಡನ್, ಹರಿಕೃಷ್ಣ ಪುನರೂರು, ಉಪಾಧ್ಯಕ್ಷ ಸುಭಾಷ್ಚಂದ್ರ, ಕಾರ್ಯದರ್ಶಿ ಸುಧಾಕರ ಕುಂದರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್, ದೇವಳದ ಕ್ಷೇತ್ರಾ ಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿಎಸ್.ಸಾಲ್ಯಾನ್, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಮೊದಲಾದ ವರು ಉಪಸ್ಥಿತರಿದ್ದರು.