ಉಚ್ಚಿಲ ದಸರಾ: ಕಾಪು ಸಮುದ್ರ ಕಿನಾರೆಯಲ್ಲಿ ಜಲಸ್ತಂಭನ
ಕಾಪು, ಅ.6: ದ.ಕ. ಮೊಗವೀರ ಮಹಾಜನ ಸಂಘ ಅಡಳಿತದ ಉಚ್ಚಿಲ ಶ್ರೀಮಹಾಲಕ್ಷ್ಮೀ ದೇವಳದಲ್ಲಿ ನವರಾತ್ರಿ ಉತ್ಸವವದ ಪ್ರಯುಕ್ತ ಉಚ್ಚಿಲ ದಸರಾ ಉತ್ಸವ-2022ರಲ್ಲಿ ಒಂಬತ್ತು ದಿನಗಳ ಕಾಲ ಪೂಜಿಸಲ್ಪಟ್ಟ ನವದುರ್ಗೆಯರ ಮತ್ತು ಶ್ರೀಶಾರದಾ ದೇವಿಯ ವಿಗ್ರಹಗಳನ್ನು ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಕಾಪು ಸಮುದ್ರ ಕಿನಾರೆಯಲ್ಲಿ ಗುರುವಾರ ನಸುಕಿನ ವೇಳೆ ಜಲಸ್ಥಂಭನ ಮಾಡಲಾಯಿತು.
ದೇವಳದಿಂದ ಸಂಜೆ ಆರಂಭಗೊಂಡ ಬೃಹತ್ ಶೋಭಾಯಾತ್ರೆಯು ವಿವಿಧ ಟ್ಯಾಬ್ಲೋಗಳೊಂದಿಗೆ 26 ಕಿ.ಮೀ. ಕ್ರಮಿಸಿ ರಾಷ್ಟ್ರೀಯ ಹೆದ್ದಾರಿ 66ರ ಕೊಪ್ಪಲಂಗಡಿಯಲ್ಲಿ ಸಮಾಪ್ತಿಗೊಂಡಿತು. ಬಳಿಕ ಕಾಪು ಲೈಟ್ ಹೌಸ್ ರಸ್ತೆಯಲ್ಲಿ ನವದುರ್ಗೆಯರ ಮತ್ತು ಶ್ರೀಶಾರದಾ ದೇವಿಯ ವಿಗ್ರಹಗಳನ್ನು ಕೊಂಡೊಯ್ಯ ಲಾಯಿತು. ನಸುಕಿನ ವೇಳೆ 2.30ರ ಸುಮಾರಿಗೆ ಕಾಪು ಸಮುದ್ರ ಕಿನಾರೆಯಲ್ಲಿ ಜಲ ಸ್ತಂಭನಗೊಳಿಸಲಾಯಿತು.
ಕಾಪು ಸಮುದ್ರ ಕಿನಾರೆಯಲ್ಲಿ ವಿಗ್ರಹಗಳ ವಿಸರ್ಜನಾ ಪೂರ್ವದಲ್ಲಿ ಸಹಸ್ರಾರು ಮಹಿಳೆಯರಿಂದ ಕಾಪು ಸಮುದ್ರ ತೀರದಲ್ಲಿ ಸಾಮೂಹಿಕ ಮಂಗಳಾರತಿ ನೆರವೇರಿತು. 10 ಬೃಹತ್ ಗಂಗಾರತಿಯ ಮೂಲಕ ಮಹಾ ಮಂಗಳಾರತಿ ನಡೆಯಿತು. ಜಲಸ್ಥಂಭನ ಹಂತದಲ್ಲಿ ಮೀನುಗಾರಿಕಾ ಬೃಹತ್ ಪರ್ಸೀನ್ ಬೋಟ್ಗಳ ಬೆಳಕು ಸಮುದ್ರ ತೀರವಲ್ಲದೆ ಸಮುದ್ರವನ್ನೇ ಜಗಜಗಿಸಿತು. ಅದಕ್ಕಾಗಿಯೇ ಹಲವು ಪರ್ಸೀನ್ ಬೋಟ್ಗಳನ್ನು ಶೃಂಗರಿಸಲಾಗಿತ್ತು. ಈ ರೀತಿಯ ಜಲಸ್ಥಂಭನವು ಬೇರೆಲ್ಲೂ ನಡೆಯದ ಕಾರಣದಿಂದ ಉಚ್ಚಿಲ ದಸರಾ ಉತ್ಸವವು ವಿನೂತನ ದಾಖಲೆಗೆ ಪಾತ್ರವಾಯಿತು.
ಈ ಸಂದರ್ಭದಲ್ಲಿ ಮೊಗವೀರ ಮಹಾಜನ ಸಂಘ ಗೌರವ ಸಲಹೆಗಾರ ಡಾ.ಜಿ.ಶಂಕರ್, ಅಧ್ಯಕ್ಷ ಜಯ ಸಿ.ಕೋಟ್ಯಾನ್, ಶಾಸಕ ಲಾಲಾಜಿ ಮೆಂಡನ್, ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಆನಂದ ಸಿ.ಕುಂದರ್, ಯಶ್ಪಾಲ್ ಸುವರ್ಣ, ಮಹಾಜನ ಸಂಘ ಉಪಾಧ್ಯಕ್ಷ ಸುಭಾಶ್ಚಂದ್ರ, ಕಾರ್ಯದರ್ಶಿ ಸುಧಾಕರ ಕುಂದರ್, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಗುಂಡು ಅಮೀನ್, ಶ್ರೀಮಹಾಲಕ್ಷ್ಮೀ ದೇವಳದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ವಾಸುದೇವ ಸಾಲ್ಯಾನ್, ಮಹಿಳಾ ಸಂಘದ ಅಧ್ಯಕ್ಷೆ ಅಪ್ಪಿ ಎಸ್.ಸಾಲ್ಯಾನ್, ವ್ಯವಸ್ಥಾಪಕ ಸತೀಶ್ ಅಮೀನ್ ಪಡುಕರೆ ಉಪಸ್ಥಿತರಿದ್ದರು.