ಕಾಪು: ತೋಡಿನ ನೀರಿಗೆ ಬಿದ್ದು ನಿವೃತ್ತ ಮುಖ್ಯ ಶಿಕ್ಷಕ ಮೃತ್ಯು
ಕಾಪು: ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದ ನಿವೃತ್ತ ಮುಖ್ಯ ಶಿಕ್ಷಕ, ಉಡುಪಿ ಮೂಡುಪೆರಂಪಳ್ಳಿಯ ನಿವಾಸಿ ಎಸ್.ರಾಮದಾಸ ಶಿವತ್ತಾಯ (75) ಎಂಬವರು ನ.8ರಂದು ಬೆಳಗ್ಗೆ ಇನ್ನಂಜೆಯಲ್ಲಿ ತೋಡಿನ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ.
ಉಡುಪಿಯ ಮೂಡುಪೆರಂಪಳ್ಳಿಯ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ (ಶಿವತ್ತಾಯರ ಶಾಲೆ) ನಿವೃತ್ತ ಮುಖ್ಯ ಶಿಕ್ಷಕರಾಗಿದ್ದ ಇವರು, ನ.6ರಂದು ಮನೆಗೆ ಬೀಗ ಹಾಕಿ ಹೋದವರು ನಾಪತ್ತೆಯಾಗಿದ್ದರು. ಇನ್ನಂಜೆಯಲ್ಲಿರುವ ತಂಗಿಯ ಮನೆಗೆ ಹೋದವರು ದಾರಿ ತಪ್ಪಿಇನ್ನಂಜೆ ಉಂಡಾರು ವಿಷ್ಣುಮೂರ್ತಿ ದೇವಸ್ಥಾನ ಸಮೀಪದ ತೋಡಿಗೆ ಆಕಸ್ಮಿಕವಾಗಿ ಬಿದ್ದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಯಕ್ಷಗಾನ ಕಲಾರಂಗದ ಸದಸ್ಯರಾಗಿದ್ದ ಇವರ ನಿಧನಕ್ಕೆ ಸಂಸ್ಥೆಯ ಅಧ್ಯಕ್ಷ ಎಂ. ಗಂಗಾಧರಾವ್ ಮತ್ತು ಕಾರ್ಯದರ್ಶಿ ಮುರಳಿ ಕಡೆಕಾರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story