ಸರಕಾರದಿಂದ ಸಂವಿಧಾನ ವಿರೋಧಿ ನಿಲುವು: ಶಾಂತರಾಮ್ ಆಕ್ರೋಶ
ಎನ್ಪಿಎಸ್ ರದ್ಧತೆಗೆ ಆಗ್ರಹಿಸಿ ಪಾದಯಾತ್ರೆ- ಬೃಹತ್ ಪ್ರತಿಭಟನೆ
ಉಡುಪಿ, ನ. 23: ಕರ್ನಾಟಕ ರಾಜ್ಯ ಸರಕಾರಿ ಎನ್ಪಿಎಸ್ ನೌಕರರ ಸಂಘದ ಉಡುಪಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಸರಕಾರಿ ನೌಕರರಿಗೆ ಮರಣ ಶಾಸನವಾಗಿರುವ ನೂತನ ಪಿಂಚಣಿ ಯೋಜನೆ(ಎನ್ಪಿಎಸ್) ರದ್ದುಗೊಳಿಸು ವಂತೆ ಒತ್ತಾಯಿಸಿ ಪಾದಯಾತ್ರೆ ಹಾಗೂ ಪ್ರತಿಭಟನೆಯನ್ನು ಬುಧವಾರ ಹಮ್ಮಿ ಕೊಳ್ಳಲಾಗಿತ್ತು.
ಇಂದ್ರಾಳಿಯಿಂದ ಆರಂಭಗೊಂಡ ಬೃಹತ್ ಪಾದಯಾತ್ರೆಯು ನಾಲ್ಕು ಕಿ.ಮೀ. ದೂರ ಸಾಗಿ ಉಡುಪಿ ಜಿಲ್ಲಾಧಿಕಾರಿ ಕಚೇರಿಯ ಎದುರು ಸಮಾಪ್ತಿ ಗೊಂಡಿತು. ಪಾದಯಾತ್ರೆಯಲ್ಲಿ ಜಿಲ್ಲೆಯಾದ್ಯಂತ ಆಗಮಿಸಿದ ಸುಮಾರು ಸಾವಿರಾರು ಮಂದಿ ಸರಕಾರಿ ನೌಕರರು ಪಾಲ್ಗೊಂಡಿದ್ದು, ಎನ್ಪಿಎಸ್ ರದ್ದು ಗೊಳಿಸುವಂತೆ ಒತ್ತಾಯಿಸಿದರು.
ಬಳಿಕ ಜಿಲ್ಲಾಕಾರಿ ಕಚೇರಿ ಮುಂದೆ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಸಂಘದ ರಾಜ್ಯಾಧ್ಯಕ್ಷ ಶಾಂತರಾಮ್, ಸರಕಾರಿ ನೌಕರರು ಶಾಸಕಾಂಗ ರೂಪಿಸುವ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವ ಮೂಲಕ ದೇಶ ಕಟ್ಟುವ ಕೆಲಸ ಮಾಡುತ್ತಿದ್ದಾರೆ. ಈ ವರ್ಗಕ್ಕೆ ಸಂವಿಧಾನ ಬದ್ಧವಾಗಿ ಭದ್ರತೆ ಹಾಗೂ ಗೌರವ ಕೊಡುವುದು ಸಂವಿಧಾನ ಬದ್ಧ ಸರಕಾರದ ಆದ್ಯ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಐದು ವರ್ಷ ಅವಧಿಗೆ ಜನರ ಸೇವೆ ಮಾಡುವ ಶಾಸಕರಿಗೆ ಸರಕಾರ ಪಿಂಚಣಿ ನೀಡುತ್ತದೆ. ಆದರೆ 35-40 ವರ್ಷಗಳ ಕಾಲ ನಾಗರಿಕರಿಗೆ ಸೇವೆ ಒದಗಿಸುವ ಸರಕಾರಿ ನೌಕರರಿಗೆ ಯಾವುದೇ ಪಿಂಚಣಿಯ ಭದ್ರತೆ ಇಲ್ಲವಾಗಿದೆ. ನಮಗೆ ಸಾಮಾಜಿಕ ಹಾಗೂ ಆರ್ಥಿಕವಾದ ಭದ್ರತೆ ನೀಡದಿರುವುದು ಸರಕಾರದ ಸಂವಿಧಾನ ವಿರೋಧಿ ನಿಲುವು ಆಗಿದೆ ಎಂದು ಅವರು ಆರೋಪಿಸಿದರು.
ಈ ಹೋರಾಟ ಕರ್ನಾಟಕದಲ್ಲಿ ಮಾತ್ರವಲ್ಲ ರಾಷ್ಟ್ರಮಟ್ಟದಲ್ಲಿ ನಡೆಯುತ್ತಿದೆ. ಇದರ ಪರಿಣಾಮವಾಗಿ ಮಾನವೀಯ ಕೆಲಸ ಮಾಡುವ ಸರಕಾರಿ ವರ್ಗಕ್ಕೆ ಸಂಧ್ಯಾ ಕಾಲದ ಬದುಕಿಗೆ ಭದ್ರತೆ ಕೊಡುವುದು ಸರಕಾರದ ಜವಾಬ್ದಾರಿ ಎಂಬು ದನ್ನು ಅರಿತು ರಾಜಸ್ತಾನ ಛತ್ತಿಸ್ಗಡ, ಜಾರ್ಖಂಡ, ಪಂಜಾಬ್ ರಾಜ್ಯಗಳಲ್ಲಿ ಎನ್ಪಿಎಸ್ ರದ್ದು ಮಾಡಲಾಗಿದೆ. ಅದೇ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ರದ್ದುಗೊಳಿಸುವಂತೆ ಕಳೆದ ಏಳೆಂಟು ವರ್ಷಗಳಿಂದ ನಿರಂತರ ಹೋರಾಟ ನಡೆಸಲಾಗುತ್ತಿದೆ ಎಂದು ಅವರು ಹೇಳಿದರು.
ಸ್ಥಳಕ್ಕೆ ಆಗಮಿಸಿದ ಉಡುಪಿ ಶಾಸಕ ಕೆ.ರಘುಪತಿ ಭಟ್ ಹಾಗೂ ಅಪರ ಜಿಲ್ಲಾಧಿಕಾರಿ ವೀಣಾ ಅವರಿಗೆ ಈ ಕುರಿತ ಮನವಿಯನ್ನು ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಶಾಸಕ ರಘುಪತಿ ಭಟ್ ಮಾತನಾಡಿ, ಈ ಹೋರಾಟಕ್ಕೆ ನನ್ನ ಬೆಂಬಲ ಇದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ಪ್ರಶ್ನೆ ಮಾಡುತ್ತೇವೆ. ಇದಕ್ಕೆ ಭರವಸೆ ಸಿಕ್ಕಿದರೆ ಮುಂದೆ ಭರವಸೆ ಸಮಿತಿಯ ಮೂಲಕ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ದಿ ಮೈಸೂರು ಇಲೆಕ್ಟ್ರೀಕಲ್ ಇಂಡಸ್ಟ್ರೀಸ್ ಅಧ್ಯಕ್ಷ ಉದಯ ಕುಮಾರ್ ಶೆಟ್ಟಿ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ಸಂಘದ ರಾಜ್ಯ ಹಿರಿಯ ಉಪಾಧ್ಯಕ್ಷ ಸಿದ್ಧಪ್ಪ ಸಂಗಣ್ಣನವರ್, ಜಿಲ್ಲಾ ಸಂಚಾಲಕ ರವಿ ಪೂಜಾರಿ, ಹೆಬ್ರಿ ತಾಲೂಕು ಅಧ್ಯಕ್ಷ ಹರೀಶ್ ಪೂಜಾರಿ, ಕುಂದಾಪುರ ತಾಲೂಕು ಅಧ್ಯಕ್ಷ ಹರೀಶ್ ಕುಮಾರ್ ಶೆಟ್ಟಿ, ಕಾರ್ಕಳ ತಾಲೂಕು ಅಧ್ಯಕ್ಷ ಸಂತೋಷ್ ಶೆಟ್ಟಿ, ಉಡುಪಿ ತಾಲೂಕು ಅಧ್ಯಕ್ಷ ರವಿ ಕುಮಾರ್, ಜಿಲ್ಲಾ ಉಪಾಧ್ಯಕ್ಷೆ ಸರಸ್ವತಿ, ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ ನೌಕರರ ಸಂಘದ ಸಂಘಟನಾ ಕಾರ್ಯದರ್ಶಿ ಬಿ.ಎಂ.ಫಯಾಝ್, ಶಿಕ್ಷಕರ ಸಂಘದ ಪದ್ಮಾ ಶೆಟ್ಟಿ, ಸರಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಕಾಪು ತಾಲೂಕು ಸಂಚಾಲಕಿ ಮಾಲಿನಿ, ಪಿಡಿಓ ಸಂಘದ ಅಧ್ಯಕ್ಷ ಮಂಜುನಾಥ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಂಘದ ಜಿಲ್ಲಾಧ್ಯಕ್ಷ ರಾಘವ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಜಿಲ್ಲಾ ಗೌರವ ಸಲಹೆಗಾರ ಪ್ರಶಾಂತ್ ಶೆಟ್ಟಿ ಹಾವಂಜೆ ಕಾರ್ಯಕ್ರಮ ನಿರೂಪಿಸಿದರು.
"ಬಂಡವಾಳಶಾಹಿ ಪರ ಇರುವ ಈ ಎನ್ಪಿಎಸ್ ಎಂಬುದು ದರ್ರಿದ ಯೋಜನೆ ಹಾಗೂ ಸರಕಾರಿ ನೌಕರರಿಗೆ ಮರಣ ಶಾಸನ ಆಗಿದೆ. ಮುಂದಿನ ಬಜೆಟ್ನಲ್ಲಿ ಎನ್ಪಿಎಸ್ ರದ್ದು ಮಾಡಬೇಕು. ಅದಕ್ಕಾಗಿ ಮಾಡು ಇಲ್ಲವೇ ಮಡಿ ಹೋರಾಟವನ್ನು ಕೈಗೆತ್ತಿಕೊಳ್ಳಲಾಗಿದೆ. ನಮ್ಮ ನೋವಿಗೆ ಸರಕಾರ ಸ್ಪಂದಿಸದ ಕಾರಣ ನಾವು ಇಂದು ಬೀದಿಗೆ ಬಂದಿದ್ದೇವೆ. ಇದೇ ರೀತಿ ಮುಂದುವರೆದರೆ ಮುಂದೆ ಸರಕಾರಿ ನೌಕರರಿಗೆ ಪಿಂಚಣಿ ಕೂಡ ಇರುವುದಿಲ್ಲ".
-ರಾಘವ ಶೆಟ್ಟಿ, ಅಧ್ಯಕ್ಷರು, ರಾಜ್ಯ ಸರಕಾರಿ
ಎನ್ಪಿಎಸ್ ನೌಕರ ಸಂಘ, ಉಡುಪಿ ಜಿಲ್ಲೆ