ಕಲ್ಸಂಕ ಜಂಕ್ಷನ್ನಲ್ಲಿ ಫ್ರೀಲೆಫ್ಟ್ ರಸ್ತೆ ಉದ್ಘಾಟನೆ
ಉಡುಪಿ : ವಾಹನ ದಟ್ಟನೆ ಹಾಗೂ ಟ್ರಾಫಿಕ್ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಮಾಂಡವಿ ಬಿಲ್ಡರ್ಸ್ ಸಹಕಾರದೊಂದಿಗೆ ಕಲ್ಸಂಕ ಜಂಕ್ಷನ್ನಲ್ಲಿ ನಿರ್ಮಿಸ ಲಾದ ಫ್ರೀ ಲೆಫ್ಟ್ ರಸ್ತೆಯನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ಬುಧವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ವಾಹನ ದಟ್ಟನೆಯಿಂದ ಕಲ್ಸಂಕ ಜಂಕ್ಷನ್ನಲ್ಲಿ ಟ್ರಾಫಿಕ್ ಸಮಸ್ಯೆ ಎದುರಿಸಲಾ ಗುತ್ತಿತ್ತು. ಅದಕ್ಕಾಗಿ ಗುಂಡಿಬೈಲು ಕಡೆಯಿಂದ ಮಣಿಪಾಲ ಕಡೆಗೆ ಹೋಗಲು ಫ್ರಿಲೆಫ್ಟ್ ಅಗತ್ಯವಾಗಿತ್ತು. ನಮ್ಮ ಮನವಿ ಮೇರೆಗೆ ಮಾಂಡವಿ ಬಿಲ್ಡರ್ಸ್ನವರು ತಮ್ಮ ಜಾಗವನ್ನು ಬಿಟ್ಟುಕೊಟ್ಟು 10 ಲಕ್ಷ ರೂ. ಖರ್ಚು ಮಾಡಿ ರಸ್ತೆ ನಿರ್ಮಿಸಿಕೊಟ್ಟಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಮಾಂಡವಿ ಬಿಲ್ಡರ್ಸ್ನ ಜೆರ್ರಿ ಡಯಸ್, ಗ್ಲೆನ್ ಡಯಾಸ್, ಜೆಸನ್ ಡಯಾಸ್, ಉಡುಪಿ ನಗರಸಭೆ ಸದಸ್ಯರಾದ ಗೀತಾ ಶೇಟ್, ಗಿರೀಶ್ ಅಂಚನ್, ಗಿರಿಧರ್ ಆಚಾರ್ಯ ಕರಂಬಳ್ಳಿ, ಅಶೋಕ್ ನಾಯ್ಕ್, ರಜನಿ ಹೆಬ್ಬಾರ್, ಮಂಜುನಾಥ್ ಮಣಿಪಾಲ್, ಸಂತೋಷ್ ಜತ್ತನ್, ನಾಮ ನಿರ್ದೇಶಿತ ಸದಸ್ಯರಾದ ಅರುಣಾ ಪೂಜಾರಿ, ಪೌರಾಯುಕ್ತ ಉದಯ್ ಶೆಟ್ಟಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಯಶ್ವಂತ್ ಪ್ರಭು, ಉಡುಪಿ ಸಂಚಾರಿ ಪೊಲೀಸ್ ಉಪ ನಿರೀಕ್ಷಕ ಶಕ್ತಿವೇಲು ಉಪಸ್ಥಿತರಿದ್ದರು.