ನ.27ರಂದು ಕಿಶೋರ ಯಕ್ಷಸಂಭ್ರಮ-2022 ಉದ್ಘಾಟನೆ
ಉಡುಪಿ, ನ.25: ಕಿಶೋರ ಯಕ್ಷಗಾನ ಸಂಭ್ರಮ-2022 ನ.27ರ ಅಪರಾಹ್ನ 3:45ಕ್ಕೆ ಉಡುಪಿ ಶ್ರೀ ಕೃಷ್ಣಮಠದ ರಾಜಾಂಗಣದಲ್ಲಿ ಉದ್ಘಾಟನೆಗೊಳ್ಳಲಿದೆ. ಪರ್ಯಾಯ ಕೃಷ್ಣಾಪುರ ಮಠಾಧೀಶ ಶ್ರೀವಿದ್ಯಾಸಾಗರ ತೀರ್ಥರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಯಕ್ಷ ಶಿಕ್ಷಣ ಟ್ರಸ್ಟ್ನ ಅಧ್ಯಕ್ಷರೂ, ಉಡುಪಿ ಶಾಸಕರೂ ಆದ ಕೆ.ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ. ಟ್ರಸ್ಟ್ನ ಉಪಾಧ್ಯಕ್ಷರೂ, ಅಂಬಲಪಾಡಿ ದೇವಳದ ಧರ್ಮದರ್ಶಿಗಳೂ ಆದ ಡಾ.ನಿ.ಬೀ.ವಿಜಯ ಬಲ್ಲಾಳ, ಉದ್ಯಮಿ ಪಿ.ಪುರುಷೋತ್ತಮ ಶೆಟ್ಟಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಪರ್ಯಾಯ ಕೃಷ್ಣಾಪುರ ಮಠದ ದಿವಾನರಾದ ವರದರಾಜ ಭಟ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಟ್ರಸ್ಟ್ನ ಉಪಾಧ್ಯಕ್ಷರಾದ ಯಕ್ಷಗಾನ ಕಲಾರಂಗದ ಅಧ್ಯಕ್ಷ ಎಂ. ಗಂಗಾಧರ ರಾವ್ ಉಪಸ್ಥಿತರಿರುವರು. ಉಡುಪಿ ಸನಿಹದ 30 ಪ್ರೌಢಶಾಲೆಗಳ ಪ್ರದರ್ಶನ ಡಿಸೆಂಬರ್ 11ರ ತನಕ ರಾಜಾಂಗಣದಲ್ಲಿ ನಡೆಯಲಿದೆ. ಉಳಿದ 14 ಪ್ರೌಢ ಶಾಲೆಗಳ ಪ್ರದರ್ಶನ ಡಿಸೆಂಬರ್ 13ರಿಂದ 20ರವರೆಗೆ ಬ್ರಹ್ಮಾವರದಲ್ಲಿ ನಡೆಯಲಿದೆ.
ಪ್ರತೀ ದಿನ 2 ಶಾಲೆಗಳ ಪ್ರದರ್ಶನವಿರುತ್ತದೆ. ಈ ಮಹಾ ಅಭಿಯಾನದಲ್ಲಿ 44 ಶಾಲೆಗಳ ಸುಮಾರು 1,400 ವಿದ್ಯಾರ್ಥಿಗಳು ಪಾಲ್ಗೊಳ್ಳಲಿದ್ದಾರೆ. 27ರಂದು ಉದ್ಘಾಟನೆಯ ಬಳಿಕ ಉಡುಪಿ ವಿದ್ಯೋದಯ ಪಬ್ಲಿಕ್ ಸ್ಕೂಲ್ನ ವಿದ್ಯಾರ್ಥಿಗಳಿಂದ ‘ಮಾಯಾಪುರಿ ಮಹಾತ್ಮೆ’ ಹಾಗೂ ಇಂದಿರಾ ನಗರ ಸರಕಾರಿ ಪ್ರೌಢಶಾಲಾ ವಿದ್ಯಾರ್ಥಿ ಗಳಿಂದ ‘ವಿದ್ಯುನ್ಮತಿ ಕಲ್ಯಾಣ’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ ಎಂದು ಯಕ್ಷಶಿಕ್ಷಣ ಟ್ರಸ್ಟ್ನ ಕಾರ್ಯದರ್ಶಿ ಮುರಲಿ ಕಡೆಕಾರ್ ತಿಳಿಸಿದ್ದಾರೆ.