ಕರ್ನಾಟಕ ಕಿರಿಯರ ಕ್ರಿಕೆಟ್ ತಂಡಕ್ಕೆ ಉಡುಪಿಯ ಋಷಬ್ ನಾಯಕ್ ಆಯ್ಕೆ
ಉಡುಪಿ, ನ.26: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ವತಿಯಿಂದ ಇದೇ ಡಿ.1ರಿಂದ 23 ರವರೆಗೆ ವಿದರ್ಭದಲ್ಲಿ ಆಯೋಜನೆ ಗೊಂಡಿರುವ 16 ವರ್ಷದೊಳಗಿನವರ ವಿಜಯ ಮರ್ಚಂಟ್ ಕ್ರಿಕೆಟ್ ಟೂರ್ನಿಯಲ್ಲಿ ಭಾಗವಹಿಸುವ ಕರ್ನಾಟಕ ರಾಜ್ಯ ತಂಡಕ್ಕೆ ಉಡುಪಿಯ ಋಷಬ್ ನಾಯಕ್ ಆಯ್ಕೆಯಾಗಿದ್ದಾರೆ.
ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಆಗಿರುವ ಪರ್ಕಳದ ಋಷಬ್ ನಾಯಕ್, ಮಣಿಪಾಲದ ಮಾಧವಕೃಪಾ ಆಂಗ್ಲ ಮಾಧ್ಯಮ ಸ್ಕೂಲ್ನ ವಿದ್ಯಾರ್ಥಿ ಹಾಗೂ ಪರ್ಕಳದ ನೇತಾಜಿ ಸ್ಪೋರ್ಟ್ಸ್ ಕ್ಲಬ್ಬಿನ ಸದಸ್ಯ. ಇವರು ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಪರ್ಕಳದ ಉದ್ಯಮಿ ಬಾಲಕೃಷ್ಣ ನಾಯಕ್ ಮತ್ತು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮಾನವ ಸಂಪನ್ಮೂಲಾಧಿಕಾರಿ ಆಗಿರುವ ಸುಚೇತ ನಾಯಕ್ ದಂಪತಿಯ ಪುತ್ರ.
ರಾಷ್ಟ್ರೀಯ ಮಟ್ಟದಲ್ಲಿ ರಾಜ್ಯ ತಂಡವನ್ನು ಪ್ರತಿನಿಧಿಸಲು ಆಯ್ಕೆಯಾಗಿರುವ ಋಷಬ್ ನಾಯಕ್ ಇವರಿಗೆ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆ ಗೌರವಾಧ್ಯಕ್ಷ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ. ಹೆಚ್. ಎಸ್ ಬಲ್ಲಾಳ್, ಸಂಸ್ಥೆಯ ಅಧ್ಯಕ್ಷ ಡಾ. ಕೃಷ್ಣಪ್ರಸಾದ್, ಕೆಎಸ್ಸಿಎ ಮಂಗಳೂರು ವಲಯದ ಸಂಚಾಲಕ ರತನ್ಕುಮಾರ್ ಅಭಿನಂದಿಸಿ ಶುಭ ಹಾರೈಸಿದ್ದಾರೆ.