ಭಾರತದ ಸಂವಿಧಾನ ಶ್ರೇಷ್ಠ, ಸಾರ್ವಕಾಲಿಕ: ಬಿ.ನಾಗರಾಜ್
ಉಡುಪಿ : ಯಾವುದೇ ಒಂದು ಕಟ್ಟಡದ ಅಡಿಪಾಯ ಗಟ್ಟಿಯಾಗಿ ದ್ದಾಗ ಕಟ್ಟಡ ಬಹಳ ಕಾಲ ಬಾಳಿಕೆ ಬರುತ್ತದೆ. ಅದೇ ರೀತಿ ನಮ್ಮ ದೇಶದ ಅಡಿಪಾಯ ಸಂವಿಧಾನವಾಗಿದ್ದು ಇದು ಶ್ರೇಷ್ಡವಾದದ್ದು ಮಾತ್ರವಲ್ಲ. ಸಾರ್ವಕಾಲಿಕ ವಾದುದು ಎಂದು ವಕೀಲರ ಸಂಘದ ಅಧ್ಯಕ್ಷ ಬಿ.ನಾಗರಾಜ್ ಹೇಳಿದ್ದಾರೆ.
ಉಡುಪಿಯ ವೈಕುಂಠ ಬಾಳಿಗಾ ಕಾನೂನು ವಿದ್ಯಾಲಯದಲ್ಲಿ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ನಮ್ಮ ಸಂವಿಧಾನ ಒಂದೆರಡು ದಿನದಲ್ಲಿ ಒಂದೆರಡು ಜನರಿಂದ ರಚಿತವಾದುದಲ್ಲ. ಇದಕ್ಕಾಗಿ ನೂರಾರು ಜನ ಹಲವು ದಿನಗಳ ಕಾಲ ಶ್ರಮ ಪಟ್ಟಿದ್ದಾರೆ. ಹಲವು ದೇಶಗಳ ಸಂವಿಧಾನವನ್ನು ಅಭ್ಯಸಿಸಿ ನಮ್ಮ ಸಂವಿಧಾನ ರಚಿಸಲಾಯಿತು. ಇದು ಇನ್ನೂ ನೂರಾರು ಸಾವಿರಾರು ವರ್ಷಗಳಿಗೆ ದೇಶಕ್ಕೆ ಬೇಕಾದ ಭದ್ರ ಅಡಿಪಾಯವನ್ನು ಹಾಕಿಕೊಟ್ಟಿದೆ ಎಂದರು.
ಕಾರ್ಯಕ್ರಮವನ್ನು ಉಡುಪಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಶಾಂತವೀರ ಶಿವಪ್ಪ ಉದ್ಘಾಟಿಸಿದರು. ನ್ಯಾಯಾಧೀಶೆ ಶರ್ಮಿಲಾ ಎಸ್. ಕಾನೂನು ವಿದ್ಯಾರ್ಥಿಗಳಿಗೆ ಸಂವಿಧಾನದ ಪ್ರತಿಜ್ಞಾ ವಿಧಿ ಬೋಧಿಸಿದರು. ಜಿಲ್ಲಾ ನ್ಯಾಯಾ ಲಯದ ನ್ಯಾಯಾಧೀಶರುಗಳು, ಕಾಲೇಜು ಪ್ರಾಂಶುಪಾಲರು ಮತ್ತು ಅಧ್ಯಾಪಕ ವರ್ಗ ಮತ್ತು ಕಾನೂನು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.