ಶಿರ್ವ ಮಹಿಳಾ ಮಂಡಲದ ವಜ್ರಮಹೋತ್ಸವ ಸಂಪನ್ನ
ಶಿರ್ವ: ಮಹಿಳೆಯರು ಪರಸ್ವರ ಏಕ ಮನಸ್ಸಿನಿಂದ ಕ್ರಿಯಾಶೀಲರಾದಾಗ ಅಲ್ಲಿ ಅಭಿವೃದ್ಧಿ ಕಾಣಬಹುದು. ನಿರ್ಮಲ ಮನಸ್ಸು ಮತ್ತು ಹೊಂದಾಣಿಕೆ ಯಿಂದ ಕೆಲಸ ಮಾಡಿದಾಗ ವಿಶೇಷ ಸಾಧನೆಗಳಾಗುತ್ತಿವೆ. ಸಂಘಟಿತ ಮಹಿಳಾ ಶಕ್ತಿ ಜಾಗೃತಗೊಂಡಾಗ ಪರಿವರ್ತನೆಯೊಂದಿಗೆ ಅಭಿವೃದ್ಧಿ ಸಾಧ್ಯ ಎಂದು ಒಡಿಯೂರು ಶ್ರೀಗುರು ದೇವದತ್ತ ಶ್ರಿಸಂಸ್ಥಾನಂದ ಸಾಧ್ವಿ ಶ್ರೀಮಾತಾನಂದ ಮಯೀ ಹೇಳಿದ್ದಾರೆ.
ಶಿರ್ವ ಮಹಿಳಾ ಮಂಡಲದ 60ರ ಸಂಭ್ರಮದ ವಜ್ರಮಹೋತ್ಸವ ವರ್ಷದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು. ಇಂದು ಪ್ರೀತಿ ಎಂಬ ಎರಡು ಅಕ್ಷರದ ಪದದ ಕೊರತೆ ಇದೆ. ಸದಾ ಧಾವಂತದ ಬದುಕಿನಲ್ಲಿ ನಮಗೆ ಪರಸ್ಪರ ಪ್ರೀತಿಸುವುದಕ್ಕೂ ಸಮಯವಿಲ್ಲ. ಎಲ್ಲಿ ಪ್ರೀತಿ ಇರುತ್ತದೋ ಅಲ್ಲಿ ಸುಖ, ಸಂತಸ, ನೆಮ್ಮದಿ ಸಂಪತ್ತು ಎಲ್ಲವೂ ಇರುತ್ತದೆ. ನಾವೆಲ್ಲರೂ ಪರಸ್ಪರ ದ್ವೇಷವನ್ನು ಬದಿಗಿರಿಸಿ, ಪ್ರೀತಿಯನ್ನು ಹಂಚಿದಾಗ ಆರೋಗ್ಯ ಪೂರ್ಣ ಜೀವನವನ್ನು ಕಾಣಲು ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಮಾಜಿ ಸಚಿವ ವಿನಯಕುಮಾರ್ ಸೊರಕೆ ಮಾತನಾಡಿದರು. ಅಧ್ಯಕ್ಷತೆ ಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಗೀತಾ ವಾಗ್ಳೆ ವಹಿಸಿದ್ದರು. ಹಾಸ್ಯ ಸಾಹಿತಿ ಸಂಧ್ಯಾ ಶೆಣೈ ಉಡುಪಿ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ಮಹಿಳಾ ಮಂಡಲಗಳ ಒಕ್ಕೂಟದ ಅಧ್ಯಕ್ಷೆ ಸರಳಾ ಕಾಂಚನ್, ತಾಲೂಕು ಸಂಘಟನೆಯ ಅಧ್ಯಕ್ಷೆ ಶೀಲಾ ಕೆ.ಶೆಟ್ಟಿ, ಶಿರ್ವ ಗ್ರಾಪಂ ಅಧ್ಯಕ್ಷ ರತನ್ ಶೆಟ್ಟಿ, ಶಿರ್ವ ಸಾರ್ವಜನಿಕ ಶ್ರೀಗಣೇಶೋತ್ಸವ ಸಮಿತಿ ಅಧ್ಯಕ್ಷ ವಿಠಲ್ ಅಂಚನ್, ಮಹಿಳಾ ಮಂಡಲದ ಗೌರವಾಧ್ಯಕ್ಷೆ ಬಬಿತಾ ಅರಸ್ ಉಪಸ್ಥಿತರಿದ್ದರು.
ವಿವಿಧ ಮಹಿಳಾ ಮಂಡಲಗಳ ಸದಸ್ಯರಿಗೆ ಏರ್ಪಡಿಸಿದ ಪ್ರತಿಭಾ ಸ್ಫರ್ಧೆ ಧೀಮಹೀ-2022 ಇದರ ಉದ್ಘಾಟನೆಯನ್ನು ಶ್ರೀಕ್ಷೇತ್ರ ಎಲ್ಲೂರು ಶ್ರೀ ವಿಶ್ವನಾಥ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಗದೀಶ್ ಅರಸ್ ನೆರವೇರಿಸಿದರು. ಸ್ಫರ್ಧೆಯಲ್ಲಿ 12 ತಂಡಗಳು ಭಾಗವಹಿಸಿದ್ದವು.
ಕಾಪು ಮಹಿಳಾ ಮಂಡಲ ಪ್ರಥಮ, ಕೆಮ್ತೂರು ಸಾಧನಾ ಮಹಿಳಾ ಮಂಡಲ ದ್ವಿತೀಯ ಹಾಗೂ ದೊಡ್ಡಣ್ಣಗುಡ್ಡೆ ಮಹಿಳಾ ಮಂಡಲ ತೃತೀಯ ಸ್ಥಾನ ಪಡೆದು ಕೊಂಡವು. ವಿಜೇತ ತಂಡಗಳಿಗೆ ನಗದು ಪುಸ್ಕಾರ, ಪ್ರಶಸ್ತಿ ಪತ್ರ ಹಾಗೂ ಟ್ರೋಫಿ ಗಳನ್ನು ನೀಡಿ ಅಭಿನಂದಿಸಲಾಯಿತು. ಸ್ಫರ್ಧೆಯ ನಿರ್ಣಾಯಕರಾಗಿ ರಮೇಶ್ ಶಾಸ್ತ್ರಿ, ಗೀತಾ ನಾಯಕ್ ಸುಳ್ಯ, ಕಾವ್ಯವಾಣಿ ಕೊಡಗು ಭಾಗವಹಿಸಿದ್ದರು.
ಗೌರವ ಅಧ್ಯಕ್ಷೆ ಬಬಿತಾ ಜಗದೀಶ್ ಅರಸ್ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಕಾರ್ಯದರ್ಶಿ ಡಾ.ಸ್ಪೂರ್ತಿ ಪಿ.ಶೆಟ್ಟಿ ವರದಿ ವಾಚಿಸಿದರು. ಐರಿನ್ ಲುಸ್ರಾದೊ ದಾನಿಗಳನ್ನು ಪರಿಚಯಿಸಿದರು. ಶಾಲಿನಿ ಶೆಟ್ಟಿ ಸ್ಫರ್ಧಾ ವಿಜೇತರ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಜೆಸಿಂತಾ ಮರಿಯಾ ಪುರ್ಟಾಡೊ ವಂದಿಸಿದರು. ಸುಪ್ರೀತಾ ಹಾಗೂ ಸುಮತಿ ಜಯಪ್ರಕಾಶ್ ಸುವರ್ಣ ಕಾರ್ಯಕ್ರಮ ನಿರೂಪಿಸಿದರು.