ನ್ಯಾಯವಾದಿಯ ಮೇಲೆ ಪೊಲೀಸರ ಹಲ್ಲೆ: ಉಡುಪಿ ವಕೀಲ ಸಂಘದಿಂದ ತೀವ್ರ ಖಂಡನೆ
ಉಡುಪಿ: ಮಂಗಳೂರಿನ ಯುವ ನ್ಯಾಯವಾದಿ ಕುಲದೀಪ್ ಶೆಟ್ಟಿ ಇವರ ಮೇಲೆ ಬಂಟ್ವಾಳ ಪುಂಜಾಲುಕಟ್ಟೆ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಹಾಗೂ ಇತರ ಪೊಲೀಸರು ಡಿ.೩ರಂದು ನಡೆಸಿದ ಅಮಾನುಷ ಹಲ್ಲೆಯನ್ನು ಉಡುಪಿ ವಕೀಲರ ಸಂಘ ತೀವ್ರವಾಗಿ ಖಂಡಿಸಿದೆ.
ಇಂದು ನಡೆದ ಉಡುಪಿ ವಕೀಲರ ಸಂಘದ ಕಾರ್ಯಕಾರಿ ಸಮಿತಿಯ ತುರ್ತು ಸಭೆಯಲ್ಲಿ ಪೊಲೀಸರ ಈ ಕೃತ್ಯವನ್ನು ತೀವ್ರವಾಗಿ ಖಂಡಿಸಲಾಗಿದ್ದು, ಈ ಬಗ್ಗೆ ತಪ್ಪಿತಸ್ಥ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಗಿದೆ.
ಈ ಬಗ್ಗೆ ಸಂಘದ ಸದಸ್ಯರು ನಾಳೆ ಡಿ.8ರಂದು ಗುರುವಾರ ಬೆಳಗ್ಗೆ 11 ರಿಂದ 11:30ರವರೆಗೆ ನ್ಯಾಯಾಲಯದ ಆವರಣದಲ್ಲಿರುವ ವಕೀಲರ ಸಂಘದ ಎದುರು ಪ್ರತಿಭಟನೆ ನಡೆಸಲು ಸಹ ನಿರ್ಧರಿಸಲಾಗಿದೆ. ಈ ಪ್ರತಿಭಟನೆ ಯಲ್ಲಿ ಸಂಘದ ಎಲ್ಲಾ ಸದಸ್ಯರು ಭಾಗವಹಿಸುವಂತೆ ಕೋರಲಾಗಿದೆ ಎಂದು ಉಡುಪಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ರೆನೋಲ್ಡ್ ಪ್ರವೀಣ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story