ದಕ್ಷಿಣ ಭಾರತ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ಗೆ ಚಾಲನೆ
ಉಡುಪಿ, ಡಿ.9: ಉಡುಪಿ ಮಾಸ್ಟರ್ಸ್ ಅಥ್ಲೆಟಿಕ್ ಅಸೋಸಿಯೇಶನ್ ವತಿಯಿಂದ ಉಡುಪಿ ಅಜ್ಜರಕಾಡುವಿನಲ್ಲಿ ರುವ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಪ್ರಥಮ ದಕ್ಷಿಣ ಭಾರತ ಮುಕ್ತ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಗೆ ಇಂದು ಚಾಲನೆ ನೀಡಲಾಯಿತು.
ಚಾಂಪಿಯನ್ಶಿಪ್ಗೆ ಚಾಲನೆ ನೀಡಿದ ಶ್ರೀಲಂಕಾ ಮಾಸ್ಟರ್ ಅಥ್ಲೆಟಿಕ್ಸ್ ಸಂಸ್ಥೆಯ ಅಧ್ಯಕ್ಷ ತಿಸ್ಸಾ ಸಮರ ಸಿಂಘೆ ಮಾತನಾಡಿ, ಇಂದು ಜಾಗತಿಕ ಮಟ್ಟ ದಲ್ಲಿ ಹಿರಿಯ ಕ್ರೀಡಾಕೂಟಗಳು ನಡೆಯುತ್ತವೆ. ಆಯಾ ದೇಶದ ಸರಕಾರಗಳು ತಮ್ಮ ಮೇಲಿನ ಆರೋಗ್ಯ ಹೊರೆಯನ್ನು ಕಡಿಮೆ ಮಾಡಲು ಈ ರೀತಿಯ ಕ್ರೀಡಾಕೂಟಗಳನ್ನು ನಡೆಸುತ್ತಿದೆ. ಇದರಿಂದ ಹಿರಿಯರಲ್ಲಿ ಮಾನಸಿಕ ಹಾಗೂ ದೈಹಿಕ ಆರೋಗ್ಯ ಉತ್ತಮವಾಗಿರಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮವನ್ನು ವಿದ್ಯಾಲತಾ ಯು.ಶೆಟ್ಟಿ ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಾವರ ಜಿಎಂ ವಿದ್ಯಾನಿಕೇತನ ಪಬ್ಲಿಕ್ ಸ್ಕೂಲ್ನ ಅಧ್ಯಕ್ಷ ಪ್ರಕಾಶ್ಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಶನ್ ಕುಮಾರ್, ಕರುಣಾ ಸಮರ ಸಿಂಘೆ ಉಪಸ್ಥಿತರಿದ್ದರು.
ಅಸೋಸಿಯೇಶನ್ ಉಡುಪಿ ಜಿಲ್ಲಾ ಉಪಾಧ್ಯಕ್ಷ ಸೀತಾನದಿ ವಿಠಲ ಶೆಟ್ಟಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಉದಯ ಕುಮಾರ್ ಶೆಟ್ಟಿ ವಂದಿಸಿದರು.
ಈ ಕ್ರೀಡಾಕೂಟದಲ್ಲಿ ಕೇರಳ, ತೆಲಂಗಾಣ, ಕರ್ನಾಟಕ, ತಮಿಳು ನಾಡು ಹಾಗೂ ಆಂಧ್ರ ಪ್ರದೇಶದ ಒಟ್ಟು ೫೦೩ ಮತ್ತು ಶ್ರೀಲಂಕಾ ದೇಶದ 70 ಹಿರಿಯ ಕ್ರೀಡಾಪಟುಗಳು ಪಾಲ್ಗೊಂಡಿದ್ದರು. ಇದರಲ್ಲಿ 42ರಿಂದ 80ರ ವಯೊಮಿತಿ ವರೆಗೆ ವಿವಿಧ ಸ್ಪರ್ಧೆಗಳು ನಡೆಯಲಿವೆ. ಇಲ್ಲಿ ಆಯ್ಕೆಯಾದವರು ಫೆ.6ರಂದು ಕೊಲ್ಕತ್ತಾದಲ್ಲಿ ನಡೆಯಲಿರುವ ಅಖಿಲ ಭಾರತ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ನಲ್ಲಿ ಭಾಗವಹಿಸಲಿದ್ದಾರೆ.