“ನೀವು ನ್ಯಾಯವನ್ನು ಖರೀದಿಸಲು ಸಾಧ್ಯವಿಲ್ಲ”: ರಾಜಿಗೆ ಒಪ್ಪದ ಮುಝಫ್ಫರ್ ನಗರ ದಂಗೆ ಅತ್ಯಾಚಾರ ಸಂತ್ರಸ್ತೆಯ ದೃಢಸಂಕಲ್ಪ
ಹೊಸದಿಲ್ಲಿ, ಸೆ.25: ಎಂಟು ವರ್ಷಗಳ ಹಿಂದೆ ನಡೆದಿದ್ದ ಮುಝಫ್ಫರ್ ನಗರ ಕೋಮು ದಂಗೆಗಳ ನೆನಪು ಇನ್ನೂ ಹಸಿರಾಗಿದೆ. ದಂಗೆ ಸಂದರ್ಭದಲ್ಲಿ ಮೂವರು ದುಷ್ಕರ್ಮಿಗಳಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾಗಿದ್ದ ಅಫ್ರೀನ್ (ಹೆಸರು ಬದಲಿಸಲಾಗಿದೆ) ಇಂದಿಗೂ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸುತ್ತಿದ್ದಾರೆ. ನ್ಯಾಯಕ್ಕಾಗಿ ತನ್ನ ಹೋರಾಟದಲ್ಲಿ ಯಾವುದೇ ಆಮಿಷ, ಒತ್ತಡಗಳಿಗೆ ಅವರು ಮಣಿದಿಲ್ಲ. ‘ನೀವು ನ್ಯಾಯವನ್ನು ಖರೀದಿಸಲು ಸಾಧ್ಯವಿಲ್ಲ ’ಎನ್ನುವ ಅಫ್ರೀನ್ ನ್ಯಾಯಕ್ಕಾಗಿ ದೃಢ ಸಂಕಲ್ಪವನ್ನು ಹೊಂದಿದ್ದಾರೆ. ಸುದ್ದಿ ಜಾಲತಾಣ ‘The Quint’ನ ತಂಡವು ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿನ ಅಫ್ರೀನ್ ನಿವಾಸದಲ್ಲಿ ಆಕೆಯನ್ನ್ನು ಭೇಟಿಯಾಗಿ ಆಕೆಯ ಹೋರಾಟ, ಆಕೆ ಎದುರಿಸುತ್ತಿರುವ ಸಂಕಷ್ಟಗಳ ಬಗ್ಗೆ ವರದಿ ಮಾಡಿದೆ.
2013ರ ಕೋಮು ದಂಗೆಗಳ ಬಳಿಕ ಏಳು ಮಹಿಳೆಯರು ತಮ್ಮ ಮೇಲೆ ಅತ್ಯಾಚಾರವೆಸಗಲಾಗಿದೆ ಎಂದು ದೂರುಗಳನ್ನು ಸಲ್ಲಿಸಿದ್ದರು. ಕೆಲವೇ ದಿನಗಳಲ್ಲಿ ಓರ್ವ ಮಹಿಳೆ ತನ್ನ ದೂರನ್ನು ಹಿಂದೆಗೆದುಕೊಂಡಿದ್ದರು. ಆರೋಪಿ ತನ್ನ ಮಗನನ್ನು ಕೊಲ್ಲುವುದಾಗಿ ಬೆದರಿಕೆಯೊಡ್ಡಿದ್ದು ಇದಕ್ಕೆ ಕಾರಣವಾಗಿದೆ ಎಂದು ಮಹಿಳೆ ಹೇಳಿದ್ದರೆ, ಆಕೆ ಆರೋಪಿಯಿಂದ ಹಣ ಪಡೆದುಕೊಂಡು ರಾಜಿಯಾಗಿದ್ದಾಳೆ ಎಂದು ಗ್ರಾಮಸ್ಥರು ಹೇಳಿದ್ದರು.
ಐದು ವರ್ಷಗಳ ಬಳಿಕ 2018ರಲ್ಲಿ ಐವರು ಮಹಿಳೆಯರು ನ್ಯಾಯಾಲಯದಲ್ಲಿ ತಮ್ಮ ಹೇಳಿಕೆಗಳನ್ನು ಬದಲಿಸಿದ್ದರು. ಬೆದರಿಕೆಗಳು, ಒತ್ತಡ ಮತ್ತು ಆಮಿಷಗಳಿಂದ ತುಂಬಿದ್ದ ವಿಳಂಬಿತ ನ್ಯಾಯಾಂಗ ಪ್ರಕ್ರಿಯೆಯ ನಡುವೆ ಈ ಮಹಿಳೆಯರು ತಾವೇ ಸ್ವತಃ ದೂರುಗಳಲ್ಲಿ ಹೆಸರಿಸಿದ್ದ ಪುರುಷರು ತಮ್ಮ ಮೇಲೆಂದೂ ಅತ್ಯಾಚಾರವೆಸಗಿರಲಿಲ್ಲ ಎಂದು ನ್ಯಾಯಾಲಯದಲ್ಲಿ ಹೇಳಿದ್ದರು.
ಪರಿಣಾಮವಾಗಿ ‘ಸಾಮಾಜಿಕ ಸೌಹಾರ್ದ’ದ ಹೆಸರಿನಲ್ಲಿ 22 ಅತ್ಯಾಚಾರ ಆರೋಪಿಗಳು ಆರೋಪಮುಕ್ತರಾಗಿದ್ದರು.
ಕೋಮುದಂಗೆಗಳು ನಡೆದು ಎಂಟು ವರ್ಷಗಳು ಕಳೆದಿದ್ದು, ಮೂವರು ಅತ್ಯಾಚಾರ ಆರೋಪಿಗಳ ವಿರುದ್ಧ ಅಫ್ರೀನ್ ದಾಖಲಿಸಿದ್ದ ಪ್ರಕರಣವು ಮಾತ್ರ ನ್ಯಾಯಾಲಯದಲ್ಲಿ ಮುಂದುವರಿದಿದೆ. ‘ನಾವು ಎಲ್ಲಿಯವರೆಗೆ ಈ ಜನರಿಂದ ದೂರ ಓಡುತ್ತಿರಲು ಸಾಧ್ಯ? ಎಲ್ಲಿಯವರೆಗೆ ನಾವು ಅವರಿಗೆ ಹೆದರಿಕೊಳ್ಳುತ್ತಲೇ ಇರಬೇಕು? ಎಲ್ಲ ಮಹಿಳೆಯರು ಒಟ್ಟಾಗಿ ಪ್ರಕರಣಗಳಲ್ಲಿ ಹೋರಾಡಬೇಕಿತ್ತು ಮತ್ತು ಪರಸ್ಪರ ಬೆಂಬಲಿಸಬೇಕಿತ್ತು ಎಂದು ಈಗಲೂ ನಾನು ಭಾವಿಸಿದ್ದೇನೆ. ಒಂದಲ್ಲ ಒಂದು ಹಂತದಲ್ಲಿ ಆರೋಪಿಗಳಿಗೆ ಖಂಡಿತವಾಗಿಯೂ ಶಿಕ್ಷೆಯಾಗುತ್ತಿತ್ತು. ಅವರೆಲ್ಲ ಒಬ್ಬರ ಬಳಿಕ ಒಬ್ಬರಂತೆ ಪ್ರಕರಣವನ್ನು ಇತ್ಯರ್ಥ ಮಾಡಿಕೊಂಡಿದ್ದಾರೆ ಎನ್ನುವುದು ಗೊತ್ತಾದಾಗ ನಾನು ಅವರಿಂದ ದೂರವಾಗಿದ್ದೆ ಎಂದು ಅಫ್ರೀನ್(32) ಹೇಳಿದರು.
ಅಫ್ರೀನ್ ರ ಮೊದಲ ಮದುವೆ ಆಕೆಗೆ ತುಂಬ ಕಹಿ ಅನುಭವವನ್ನು ನೀಡಿತ್ತು. ಮಕ್ಕಳಾಗದ್ದಕ್ಕಾಗಿ ಗಂಡ ಸದಾ ಆಕೆಯನ್ನು ನಿಂದಿಸುತ್ತಿದ್ದ, ಥಳಿಸುತ್ತಿದ್ದ. ಕೊನೆಗೊಮ್ಮೆ ವಿಚ್ಛೇದನ ನೀಡಿ ಮನೆಯಿಂದ ಹೊರದಬ್ಬಿದ್ದ. ಬಳಿಕ ಮುಝಫ್ಫರ್ಪುರ ದಂಗೆಗಳಿಗೆ ಐದು ವರ್ಷಗಳ ಮುನ್ನ ಅಫ್ರೀನ್ ಅಮಾನ್(ಹೆಸರು ಬದಲಿಸಲಾಗಿದೆ) ಎಂಬಾತನನ್ನು ಮದುವೆಯಾಗಿದ್ದರು. ಶಾಮ್ಲಿ ಜಿಲ್ಲೆಯ ಲಾಂಕ್ ಗ್ರಾಮದಲ್ಲಿ ತಮ್ಮ ಬದುಕು ಕಟ್ಟಿಕೊಂಡಿದ್ದ ದಂಪತಿಗೆ ಎರಡು ಮಕ್ಕಳೂ ಆಗಿದ್ದವು. ಅಮಾನ್ ಗ್ರಾಮದಲ್ಲಿ ಅಂಗಡಿಯಿಟ್ಟುಕೊಂಡಿದ್ದರೆ ಅಫ್ರೀನ್ ಮನೆಯಲ್ಲಿ ಹೊಲಿಗೆ ಕೆಲಸ ಮಾಡುತ್ತ ಸಂಸಾರ ನಿರ್ವಹಣೆಯಲ್ಲಿ ಗಂಡನಿಗೆ ನೆರವಾಗಿದ್ದರು. ಆದರೆ ಅವರ ಸಂತಸದ ಬದುಕು 2013, ಸೆಪ್ಟಂಬರ್ ನಲ್ಲಿ ದಿಢೀರನೆ ಸಂಭವಿಸಿದ ಆಘಾತಕಾರಿ ಘಟನೆಗಳಿಂದ ಮುರುಟಿತ್ತು.
60 ಕಿ.ಮೀ.ದೂರದ ನೆರೆಯ ಮುಝಫ್ಫರ್ನಗರ ಜಿಲ್ಲೆಯ ಕಾವಲ್ ಗ್ರಾಮದಲ್ಲಿ ಗೌರವ ಮತ್ತು ಸಚಿನ್ ಎನ್ನುವವರು ಶಾನವಾಝ್ ಎಂಬಾತನನ್ನು ಹತ್ಯೆ ಮಾಡಿದ್ದು, ಅದರ ಬೆನ್ನಿಗೇ ಉದ್ರಿಕ್ತ ಗುಂಪೊಂದು ಅವರನ್ನು ಹಿಡಿದು ಕೊಂದಿತ್ತು. ಅಲ್ಲಿಂದ ಆರಂಭಗೊಂಡಿದ್ದ ಹಿಂಸಾಚಾರ ಉತ್ತರ ಭಾರತದಲ್ಲಿಯ ಅತ್ಯಂತ ರಕ್ತಸಿಕ್ತ ದಂಗೆಗಳಲ್ಲೊಂದಕ್ಕೆ ಕಾರಣವಾಗಿತ್ತು. 60,000ಕ್ಕೂ ಅಧಿಕ ಜನರು ಸ್ಥಳಾಂತರಗೊಂಡಿದ್ದು, 62 ಜನರು ಕೊಲ್ಲಲ್ಪಟ್ಟಿದ್ದರು. ಹಲವರು ಈಗಲೂ ನಾಪತ್ತೆಯಾಗಿದ್ದಾರೆ. ಹಿಂಸಾಚಾರ ಅನೇಕ ಗ್ರಾಮಗಳಲ್ಲಿ ವ್ಯಾಪಿಸಿದ್ದು, ಅಫ್ರೀನ್ ವಾಸವಾಗಿದ್ದ ಗ್ರಾಮವನ್ನೂ ಅದು ಬಿಟ್ಟಿರಲಿಲ್ಲ. ಪ್ರಾಣವನ್ನುಳಿಸಿಕೊಳ್ಳಲು ಗ್ರಾಮದ ಗದ್ದೆಯ ಬದಿಯಿಂದ ಓಡುತ್ತಿದ್ದ ಅಫ್ರೀನ್ ರನ್ನು ಹಿಡಿದುಕೊಂಡಿದ್ದ ಕುಲದೀಪ್,ಸಿಕಂದರ್ ಮತ್ತು ಮಹೇಶ್ವರ ಎನ್ನುವವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದರು.
2013ರ ಕೋಮುದಂಗೆಗಳ ಬಳಿಕ ಸರ್ವೋಚ್ಚ ನ್ಯಾಯಾಲಯವು ಅತ್ಯಾಚಾರ ಪ್ರಕರಣಗಳ ವಿಚಾರಣೆಯನ್ನು ತ್ವರಿತ ನ್ಯಾಯಾಲಯಗಳಲ್ಲಿ ನಡೆಸಲಾಗುವುದು ಎಂದು ಹೇಳಿತ್ತಾದರೂ ಅಫ್ರೀನ್ ಪ್ರಕರಣದಲ್ಲಿ ವಿಚಾರಣೆ ಆರಂಭವಾಗುವಾಗ ಭರ್ತಿ ಆರು ವರ್ಷಗಳೇ ಕಳೆದಿದ್ದವು. ಈಗ ಕೊನೆಯ ಸಾಕ್ಷಿಯ ಹೇಳಿಕೆಯ ದಾಖಲು ಪ್ರಕ್ರಿಯೆ ನಡೆಯುತ್ತಿದೆ.
ದೂರು ಸಲ್ಲಿಸಿದ ಬಳಿಕ ಅಫ್ರೀನ್ ರನ್ನು ಅಪಹಾಸ್ಯ ಮಾಡಲಾಗಿತ್ತು, ಅವಮಾನಿಸಲಾಗಿತ್ತು ಮತ್ತು ಮಾನಹಾನಿಯನ್ನುಂಟು ಮಾಡಲಾಗಿತ್ತು. ಆಕೆಯ ಗಂಡನಿಗೆ ಹಲ್ಲೆ ನಡೆಸಿ ಬೆದರಿಕೆಗಳನ್ನು ಒಡ್ಡಲಾಗಿತ್ತು. ಅಫ್ರೀನ್ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಿದ ಬಳಿಕ ಕೊನೆಗೂ ಅವರಿಗೆ ರಕ್ಷಣೆಯನ್ನು ಒದಗಿಸಲಾಗಿತ್ತು.
ಆರೋಪಿಗಳು ದಂಪತಿಗೆ ರಾಜಿ ಮಾಡಿಕೊಳ್ಳುವಂತೆ ಇಲ್ಲದಿದ್ದರೆ ಕೊಲ್ಲುವುದಾಗಿ ಬೆದರಿಕೆ ಒಡ್ಡಿದ್ದರು. ನಿರಂತರ ಬೆದರಿಕೆಗಳ ನಡುವೆಯೂ ಅಫ್ರೀನ್ ನಿಲುವಿನಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆರೋಪಿಗಳು ಜೈಲು ಸೇರುವ ದಿನಕ್ಕಾಗಿ ಕಾತರಿಸುತ್ತಿರುವ ಅಫ್ರೀನ್, ‘ಅದು ನನ್ನ ಜೀವನದಲ್ಲಿಯ ಅತ್ಯಂತ ಒಳ್ಳೆಯ ದಿನವಾಗಲಿದೆ. ಅವರಿಗೆ ಶಿಕ್ಷೆಯಾಗುವುದನ್ನು, ನ್ಯಾಯವು ತನ್ನ ಕೆಲಸ ಮಾಡುವುದನ್ನು ನೋಡಲು ಕಾಯುತ್ತಿದ್ದೇನೆ’ ಎಂದು ಹೇಳಿದರು.
ಹಣದಿಂದ ನ್ಯಾಯವನ್ನು ಖರೀದಿಸಲು ಸಾಧ್ಯ ಎನ್ನುವುದನ್ನು ಅಫ್ರೀನ್ ನಂಬುವುದಿಲ್ಲ.
ಆರೋಪಿಗಳು ತಮ್ಮನ್ನು ರಕ್ಷಿಸಿಕೊಳ್ಳಲು ನ್ಯಾಯಾಂಗ ಪ್ರಕ್ರಿಯೆಯನ್ನು ಹಳಿ ತಪ್ಪಿಸಲೂ ಪ್ರಯತ್ನಿಸಿದ್ದಾರೆ. ಅಫ್ರೀನ್ ಜೊತೆ ರಾಜಿಗೆ ಪ್ರಯತ್ನಿಸಿದ್ದನ್ನೂ ಆರೋಪಿಗಳ ಬಂಧುಗಳು ‘The Quint’ತಂಡದೆದುರು ಬಾಯ್ಬಿಟಿದ್ದಾರೆ. ಆದರೆ ಅಫ್ರೀನ್ ಮೇಲೆ ಪ್ರಭಾವ ಬೀರಲು ಸಾಧ್ಯವಾಗದ ಅವರು ಪ್ರಕರಣದಲ್ಲಿಯ ಸಾಕ್ಷಿಗಳ ಮೇಲೆ ಒತ್ತಡ ಹೇರಲೂ ಪ್ರಯತ್ನಿಸಿದ್ದರು.
ಆರೋಪಿಗಳ ಪೈಕಿ ಕುಲ್ದೀಪ್ ವಿಚಾರಣೆ ಸಮಯದಲ್ಲಿ ಮೃತಪಟ್ಟಿದ್ದಾನೆ. ಪ್ರಕರಣದ ವಿಚಾರಣೆಯು ಅಂತಿಮ ಹಂತದತ್ತ ಸಾಗುತ್ತಿದ್ದು, ಆರೋಪಿಗಳೀಗ ಅಧೀರರಾಗಿದ್ದಾರೆ. ತಾವು ಏನೇ ಪ್ರಯತ್ನ ಮಾಡಿದರೂ ಅಫ್ರೀನ್ ಪ್ರಕರಣದಿಂದ ಹಿಂದೆ ಸರಿಯುವುದಿಲ್ಲ ಎನ್ನುವುದು ಅವರಿಗೆ ಕೊನೆಗೂ ಅರ್ಥವಾಗಿದೆ. ಇಷ್ಟಿದ್ದರೂ ಆಕೆಯನ್ನು ಅಪಹಾಸ್ಯ ಮಾಡುವುದನ್ನು ಅವರು ನಿಲ್ಲಿಸಿಲ್ಲ. ಘಟನೆ ನಡೆದ ತಿಂಗಳುಗಳ ಬಳಿಕ ಅಫ್ರೀನ್ ಅತ್ಯಾಚಾರದ ದೂರನ್ನು ದಾಖಲಿಸಿದ್ದರು. ಆಗಿನ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಅತ್ಯಾಚಾರ ಸಂತ್ರಸ್ತೆಯರಿಗೆ ಐದು ಲ.ರು.ಪರಿಹಾರವನ್ನು ಪ್ರಕಟಿಸಿದ ಬಳಿಕವಷ್ಟೇ ಆಕೆ ಹಣದ ಆಸೆಯಿಂದ ದೂರನ್ನು ದಾಖಲಿಸಿದ್ದಳು ಎಂದು ಕುಲದೀಪ್ ನ ಸೋದರ ಪ್ರದೀಪ ವರದಿಗಾರರಿಗೆ ತಿಳಿಸಿದ.
ಅಂದಿನ ಘಟನೆಯನ್ನು ಮರೆಯಲು ತನಗೆ ಸಾಧ್ಯವಾಗುತ್ತಿಲ್ಲ. ತನಗೆ ಯಾವುದೇ ಅವಮಾನವಾಗದ ಬೇರೆ ಯಾವುದೇ ಸ್ಥಳದಲ್ಲಿ ಎಲ್ಲವನ್ನೂ ಮರೆತು ಹೊಸ ಬದುಕನ್ನು ಸಾಗಿಸಲು ಬಯಸಿದ್ದೇನೆ ಎಂದು ಅಫ್ರೀನ್ ತಂಡಕ್ಕೆ ತಿಳಿಸಿದರು.
ಕೃಪೆ: The Quint