ಸಂಧ್ಯಾ ಮುಖರ್ಜಿ ಪದ್ಮಶ್ರೀ ಯಾಕೆ ನಿರಾಕರಿಸಿದರು?
ಮಹಾನ್ ಸಂಗೀತಗಾರರಲ್ಲೊಬ್ಬರಾದ ಉಸ್ತಾದ್ ಗುಲಾಂ ಖಾನ್ ಅವರ ಶಿಷ್ಯೆ, ಪಟಿಯಾಲ ಘರಾನಾದ ಸಂಗೀತ ಕಲಾವಿದೆ ಗೀತೋಶ್ರೀ ಸಂಧ್ಯಾ ಮುಖರ್ಜಿಯವರಿಗೆ ಪದ್ಮಶ್ರೀ ಪ್ರಶಸ್ತಿಯನ್ನು ಘೋಷಿಸಿದಾಗ ಅವರು ಅದನ್ನು ಯಾಕೆ ತಿರಸ್ಕರಿಸಿದರೆಂಬ ಪ್ರಶ್ನೆಯನ್ನು ಈ ಶ್ರೇಷ್ಠ ಗಾಯಕಿಯನ್ನು ಬಲ್ಲ ನನ್ನಂತಹವರಲ್ಲಿ ಕೇಳಬೇಕಾದ ಪ್ರಶ್ನೆಯಾಗಿದೆ.
ಅವರನ್ನು ತಿಳಿಯದೆ ಇದ್ದವರಿಗೆ ನಾನು ಸಾಮಾನ್ಯ ತಿಳುವಳಿಕೆಗಾಗಿ ಮಾಹಿತಿಯ ತುಣುಕೊಂದನ್ನು ನೀಡುತ್ತಿದ್ದೇನೆ. ಲತಾ ಮಂಗೇಶ್ಕರ್ ಅವರಿಗೆ 13 ವರ್ಷ ವಯಸ್ಸಾಗಿದ್ದಾಗ, ಸಂಧ್ಯಾ ಮುಖರ್ಜಿಗೆ ಕೇವಲ 11 ವರ್ಷ ವಯಸ್ಸಾಗಿತ್ತು. ಇವರಿಬ್ಬರು ಅಖಿಲ ಭಾರತ ಮಟ್ಟದ ಗಾಯನ ಸ್ಪರ್ಧೆಯೊಂದರಲ್ಲಿ ಪಾಲ್ಗೊಂಡಿದ್ದರು. ಅದರಲ್ಲಿ ಸಂಧ್ಯಾ ಅವರು ಅತ್ಯುತ್ತಮ ಗಾಯಕಿ ಪ್ರಶಸ್ತಿ ವಿಜೇತರಾಗಿದ್ದರು.
ಉಸ್ತಾದ್ ಅವರ ಬಳಿ ದೀರ್ಘ ಕಾಲದ ತರಬೇತಿ ಪಡೆದಿದ್ದ ಸಂಧ್ಯಾ ಅವರು 17ನೇ ವಯಸ್ಸಿನಲ್ಲಿ ಶಾಸ್ತ್ರೀಯ ಸಂಗೀತ ಕಚೇರಿಗಳಲ್ಲಿ ಹಾಡುತ್ತಿದ್ದರು. 1948ರಲ್ಲಿ ಆಕೆ ಹಿಂದಿ ಚಿತ್ರರಂಗದ ಹಿನ್ನೆಲೆ ಗಾಯಕಿಯಾಗಿ ಗಾಯನವೃತ್ತಿಯನ್ನು ಆರಂಭಿಸಿದರು. 1951ರಲ್ಲಿ ಅವರು, ಲತಾ ಮಂಗೇಶ್ಕರ್ ಜೊತೆ ಹಾಡಿದ್ದ ‘ಕೌನ್ ಮೇರೆ ಚಿತ್ಚೋರ್’ ಹಾಡು ಅಪಾರ ಜನಪ್ರಿಯತೆ ಗಳಿಸಿತ್ತು. ಈ ನಡುವೆ ಸಂಧ್ಯಾ ಅವರು ಬಂಗಾಳಿ ಚಿತ್ರರಂಗದಲ್ಲೂ ಹಿನ್ನೆಲೆ ಗಾಯಕಿಯಾಗಿ ಹಾಡಲು ಆರಂಭಿಸಿದರು. ಆಗಿನ ಕಾಲದ ಬಂಗಾಳಿ ಸೂಪರ್ಸ್ಟಾರ್ ಉತ್ತಮ್ ಕುಮಾರ್ ಅವರ ಅಭಿನಯದ ಪಾತ್ರಗಳ ಹಾಡುಗಳಿಗೆ ಹೇಮಂತ್ ಕುಮಾರ್ ಕಂಠದಾನ ಮಾಡುತ್ತಿದ್ದರೆ, ಸೂಪರ್ಸ್ಟಾರ್ ನಾಯಕಿ ನಟಿಯಾಗಿದ್ದ ಸುಚಿತ್ರಾ ಸೇನ್ಗೆ ಸಂಧ್ಯಾ ಕಂಠದಾನ ಮಾಡುತ್ತಿದ್ದರು. ಹಿಂದಿ ಚಿತ್ರರಂಗದಲ್ಲಿ ನರ್ಗೀಸ್ ಹಾಗೂ ರಾಜ್ಕಪೂರ್ ಅವರು ಸೂಪರ್ಸ್ಟಾರ್ ಜೋಡಿಗಳಾಗಿ ತೆರೆಗೆ ಕಿಚ್ಚು ಹಚ್ಚಿದ್ದರೆ, ಸಂಧ್ಯಾ ಹಾಗೂ ಹೇಮಂತ್ ಕುಮಾರ್ ಬಂಗಾಳಿ ಚಿತ್ರರಂಗದ ಸ್ಟಾರ್ ಹಿನ್ನೆಲೆ ಗಾಯಕ-ಗಾಯಕಿ ಜೋಡಿಯಾಗಿ ಮೋಡಿ ಮಾಡುತ್ತಿದ್ದರು. ಇವರಿಬ್ಬರು ಜೊತೆಯಾಗಿ ಹಲವಾರು ಜನಪ್ರಿಯ ಯುಗಳ ಗೀತೆಗಳನ್ನು ನೀಡಿದ್ದಾರೆ.
ಕಳೆದ 84 ವರ್ಷಗಳಿಂದ ‘ಗೀತೋಶ್ರೀ’ ಸಂಧ್ಯಾ ಮುಖರ್ಜಿ ಅವರು ಹಿಂದೂಸ್ತಾನಿ ಶಾಸ್ತ್ರೀಯ ಗಾಯನದಲ್ಲಿ ಬಂಗಾಳ ಹಾಗೂ ಭಾರತದ ನೈಟಿಂಗೇಲ್ ಎಂದೇ ಖ್ಯಾತರಾಗಿದ್ದಾರೆ. ಸಂಧ್ಯಾ ಹಾಡಿರುವ ‘ಶಿಲ್ಪಿ’ ಬಂಗಾಳಿ ಚಿತ್ರದ ‘ತುಮಿ ಜೆ ಅಮರ್’ ಹಾಡನ್ನು ಕೇಳಿದ್ದೀರಾದರೆ, ಖಂಡಿತವಾಗಿಯೂ ನೀವು ಗದ್ಗದಿತರಾಗುವಿರಿ ಹಾಗೂ ಇದು ಎಂತಹ ಹಗುರ ಹೃದಯಗಳನ್ನೂ ಪ್ರೀತಿಯ ಭಾವನೆಗಳೊಂದಿಗೆ ಭಾರವಾಗಿಸುತ್ತದೆ. ನಿಮಗೆ ಬಂಗಾಳಿ ಭಾಷೆಯ ಒಂದೇ ಒಂದು ಪದ ತಿಳಿಯದೆ ಇದ್ದರೂ ಒಂದು ಸಲವಾದರೂ ಈ ಹಾಡನ್ನು ಕೇಳಲೇಬೇಕು.
ಆದಾಗ್ಯೂ,
ಲತಾ ಮಂಗೇಶ್ಕರ್ ಹಾಗೂ ಸಂಧ್ಯಾ ಮುಖರ್ಜಿ ಈ ಇಬ್ಬರು ಮಹಾನ್ ಗಾಯಕಿಯರಲ್ಲಿ ಓರ್ವರಿಗೆ ಅತ್ಯುನ್ನತವಾದ ಭಾರತ ರತ್ನ ಪುರಸ್ಕಾರ ನೀಡಿ ಗೌರವಿಸಲಾಗಿದೆೆ, ಇನ್ನೋರ್ವರಿಗೆ ರಾಷ್ಟ್ರೀಯ ಪುರಸ್ಕಾರಗಳ ಪೈಕಿ ತಳಮಟ್ಟದ ಪ್ರಶಸ್ತಿಯಾದ ‘ಪದ್ಮಶ್ರೀ’ ಘೋಷಿಸಿರುವುದು ವಿಪರ್ಯಾಸ.
ಇಂತಹ ವಿವೇಕರಹಿತ ನಡವಳಿಕೆಗಳಿಗೆ ಬಂಗಾಳದಲ್ಲಿ ದಿಟ್ಟವಾದ ಎದಿರೇಟು ನೀಡಲಾಗಿದೆ. ಇಂತಹ ಗಮಾರರಿಗೆ ಅನೇಕ ಮಹಾನ್ ವ್ಯಕ್ತಿಗಳನ್ನು ನೀಡಿರುವಂತಹ ಬಂಗಾಳಿ ಕಲೆ, ಸಂಸ್ಕೃತಿ, ರಾಜಕೀಯದ ಬಗ್ಗೆ ಜ್ಞಾನವಿರುವುದು ಬಿಡಿ, ಅದನ್ನು ಅರಿತುಕೊಳ್ಳಲು ಕೂಡಾ ಸಾಧ್ಯವಾಗಿಲ್ಲ.
ಬಂಗಾಳಿ ಸಂಸ್ಕೃತಿಯಲ್ಲಿ ಅಂತರ್ಗತವಾಗಿರುವ ಈ ಹುಮ್ಮಸ್ಸಿ ನಿಂದಾಗಿಯೇ ಪ್ರಾಯಶಃ ಶಾಂತಿಪ್ರಿಯರಾದ ಬಂಗಾಳಿ ‘ಭದ್ರಲೋಕ್’ (ಸಜ್ಜನರು)ಗಳು ವಿದೇಶದಲ್ಲಾಗಲಿ ಅಥವಾ ಭಾರತೀಯ ಉಪಖಂಡದಲ್ಲಾಗಲಿ ಪಾಶ್ಚಾತ್ಯರ ದಬ್ಬಾಳಿಕೆಯ ವಿರುದ್ಧ ಬಂಡೆದ್ದಿದ್ದರು.
ದೇಶವನ್ನಾಳಿದ ಪ್ರಧಾನಿಗಳ ಪೈಕಿ ನಮ್ಮ ಅಚ್ಚುಮೆಚ್ಚಿನ ಇಂದಿರಾ ಗಾಂಧಿಯೊಬ್ಬರೇ ಬಂಗಾಳಿ ಸಂಸ್ಕೃತಿಯನ್ನು ಸಂಪೂರ್ಣವಾಗಿ ಅರಿತುಕೊಂಡಿದ್ದರು. ಯಾಕೆದಂರೆ ಅವರು ಹಲವು ವರ್ಷಗಳನ್ನು ಶಾಂತಿನಿಕೇತನದಲ್ಲಿ ಕಳೆದಿದ್ದರು. ಈ ತಿಳುವಳಿಕೆಯೇ, ಭಾರತವು ಪಾಶ್ಚಾತ್ಯರ ದಮನಕಾರಿ ದಾಹದ ವಿರುದ್ಧ ಸಿಡಿದೇಳುವಂತೆ ಮಾಡಿತು ಹಾಗೂ ಬಂಗಾಳಿಗಳ ಸಂಸ್ಕೃತಿಯನ್ನು ಮರುಸ್ಥಾಪಿಸುವಂತೆ ಮಾಡಿತು ಹಾಗೂ ಬಾಂಗ್ಲಾದೇಶವನ್ನು ಸೃಷ್ಟಿಸುವ ಮೂಲಕ ಅವರ ಹೆಮ್ಮೆ, ಗೌರವ ಹಾಗೂ ಘನತೆಯನ್ನು ಮರುಸ್ಥಾಪಿಸಿತು.
ಬಂಗಾಳಿ ಕಲೆ ಹಾಗೂ ಸಂಸ್ಕೃತಿಯಿಂದ ಪ್ರಭಾವಿತವಾದ ರಾಜಕಾರಣದಿಂದಾಗಿ ಇಸ್ಲಾಮಿಕ್ ರಾಷ್ಟ್ರವಾಗಬಹುದಾಗಿದ್ದ ಬಾಂಗ್ಲಾವು ಎಲ್ಲಾ ಅಡೆತಡೆಗಳನ್ನು ಮೀರಿ ಜಾತ್ಯತೀತ ರಾಷ್ಟ್ರವಾಗಿ ರೂಪುಗೊಂಡಿತು.
ಬಂಗಾಳದ ಮುಖದ ಮೇಲೆ ಬಿಲ್ಲಾ ರಂಗ ಫ್ಯಾಶಿಸ್ಟ್ ಜೋಡಿಯು, ಪದ್ಮಶ್ರೀ ಪುರಸ್ಕಾರದ ರೂಪದಲ್ಲಿ ಬೆನ್ನಹಿಂದಿನಿಂದ ಏಟು ನೀಡಲು ಹೊರಟಿತ್ತೆಂಬುದನ್ನು ಯಾವುದೇ ಬಂಗಾಳಿಯು ಸಾವಿರ ವರ್ಷಗಳವರೆಗೂ ಮರೆಯಲಾರ.
ಸಿಪಿಎಂನ ಮೇರುನಾಯಕ ಹಾಗೂ ಪಶ್ಚಿಮಬಂಗಾಳದ ಮಾಜಿ ಮುಖ್ಯಮಂತ್ರಿ ಬುದ್ಧದೇವ ಭಟ್ಟಾಚಾರ್ಯ ಅವರ ಬಗ್ಗೆ ಹೇಳುವುದಾದರೆ, ಯಾರೂ ಕೂಡಾ ಅವರಿಗೆ ಪದ್ಮಶ್ರೀ ಘೋಷಿಸುವುದಕ್ಕೆ ಮೊದಲು ತಾವು ತಳಮಟ್ಟದ ಈ ರಾಷ್ಟ್ರೀಯ ಪುರಸ್ಕಾರವನ್ನು ಸ್ವೀಕರಿಸಲು ಇತರ ಕಿರಿಯರೊಂದಿಗೆ ಸಾಲುಗಟ್ಟಿ ನಿಲ್ಲುವಿರಾ ಎಂದು ಕೇಳಿಯೂ ಇರಲಿಲ್ಲ.
ಕೃಪೆ : countercurrents.org