ಸಂಸತ್ನಲ್ಲೀಗ ಗುಣಮಟ್ಟದ ಚರ್ಚೆಗಳೇಕೆ ಆಗುತ್ತಿಲ್ಲ?
2021ರ ಚಳಿಗಾಲದ ಅದಿವೇಶನದಲ್ಲಿ ಮಂಡಿಸಲಾದ ಒಟ್ಟು ಮಸೂದೆಗಳ ಪೈಕಿ ಶೇ. 60ರಷ್ಟನ್ನು ಯಾವುದೇ ಸಾರ್ವಜನಿಕ ಸಮಾಲೋಚನೆಯಿಲ್ಲದೆಯೇ ಮಂಡಿಸಲಾಗಿತ್ತು. ಒಂದು ಸಮೀಕ್ಷೆಯ ಪ್ರಕಾರ, 2014 ಜೂನ್ ಮತ್ತು 2019 ಮೇ ನಡುವಿನ ಅವಧಿಯಲ್ಲಿ ಮಂಡನೆಯಾಗಿರುವ ಮಸೂದೆಗಳ ಪೈಕಿ ಶೇ. 76ರ ಬಗ್ಗೆ ಯಾವುದೇ ಸಾರ್ವಜನಿಕ ಸಮಾಲೋಚನೆ ನಡೆದಿಲ್ಲ. ಅದೇ ರೀತಿ, 2019 ಜೂನ್ ಮತ್ತು 2021 ನವೆಂಬರ್ ನಡುವೆ ಮಂಡಿಸಲಾದ ಮಸೂದೆಗಳ ಪೈಕಿ ಶೇ. 73ರ ಬಗ್ಗೆ ಸಾರ್ವಜನಿಕ ಚರ್ಚೆ ನಡೆದಿಲ್ಲ.
ಗುರುವಾರ ಜಗತ್ತಿನಾದ್ಯಂತ ಅಂತರ್ರಾಷ್ಟ್ರೀಯ ಸಂಸದೀಯ ದಿನವನ್ನು ಆಚರಿಸಲಾಯಿತು. ಆದರೆ. ಆರೋಗ್ಯ, ಶಿಕ್ಷಣ, ಹಸಿವೆ, ಹಣದುಬ್ಬರ ಮತ್ತು ಅಸಮಾನತೆ ಮುಂತಾದ ಜನರಿಗೆ ಸಂಬಂಧಿಸಿದ ಮಹತ್ವದ ವಿಷಯಗಳನ್ನು ಸಂಸತ್ತಿನ ಸಭಾಂಗಣದಲ್ಲಿ ಪ್ರಸ್ತಾಪಿಸಲು ಸಂಸದರಿಗೆ ಇರುವ ಅವಕಾಶದ ಕೊರತೆಯೂ ಈ ಸಂದರ್ಭದಲ್ಲಿ ಗಮನ ಸೆಳೆಯಿತು.
ಇತ್ತೀಚಿನ ವರ್ಷಗಳಲ್ಲಿ, ಈ ವಿಷಯಗಳಿಗೆ ಸಂಬಂಧಿಸಿದ ಚರ್ಚೆಗಳಿಗೆ ಸಂಸತ್ನಲ್ಲಿ ಅವಕಾಶ ಲಭಿಸಿದರೂ, ಅವುಗಳಲ್ಲಿ ಭಾಗವಹಿಸುವವರ ಸಂಖ್ಯೆ ತುಂಬಾ ಕಡಿಮೆಯಾಗಿದೆ. ಉದಾಹರಣೆಗೆ; 2019 ಜುಲೈ ತಿಂಗಳಲ್ಲಿ ಮಹಿಳೆಯರು ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ಎಂಬ ವಿಷಯದ ಬಗ್ಗೆ ಚರ್ಚೆಯೊಂದು ನಡೆಯಿತು. ಆ ಚರ್ಚೆಯಲ್ಲಿ ಕೇವಲ 10 ಮಂದಿ ಭಾಗವಹಿಸಿದರು ಹಾಗೂ ಅದು ಒಂದು ಗಂಟೆಯಲ್ಲೇ ಮುಕ್ತಾಯಗೊಂಡಿತು.
ಕೋವಿಡ್-19ರ ಮೊದಲ ಅಲೆ ದೇಶವನ್ನು ವ್ಯಾಪಿಸುವ ಕೆಲವೇ ದಿನಗಳ ಮೊದಲು, ಕೇರಳದಲ್ಲಿ ಈ ಸಾಂಕ್ರಾಮಿಕ ಸ್ಫೋಟಗೊಂಡಿರುವ ಬಗ್ಗೆ ಲೋಕಸಭೆಯಲ್ಲಿ ಚರ್ಚೆ ನಡೆಯಿತು. ಆ ಮಹತ್ವದ ಚರ್ಚೆಯಲ್ಲಿ ಕೇವಲ ಮೂರು ಸಂಸದರು ಭಾಗವಹಿಸಿದರು ಹಾಗೂ ಅದು 27 ನಿಮಿಷಗಳಲ್ಲೇ ಮುಕ್ತಾಯಗೊಂಡಿತು. ಕೆಲವು ದಿನಗಳ ಬಳಿಕ, ಅದೇ ಲೋಕಸಭಾ ಅಧಿವೇಶನದಲ್ಲಿ ಕೊರೋನ ವೈರಸ್ ಸಾಂಕ್ರಾಮಿಕದ ಬಗ್ಗೆ ಇನ್ನೊಂದು ಚರ್ಚೆ ನಡೆಯಿತು. ಅದರಲ್ಲಿ 19 ಮಂದಿ ಭಾಗವಹಿಸಿದರು ಹಾಗೂ ಅದು 40 ನಿಮಿಷಗಳಲ್ಲಿ ಕೊನೆಗೊಂಡಿತು.
ಇಂಥ ವಿಷಯಗಳ ಮೇಲಿನ ಚರ್ಚೆಗಳಲ್ಲಿ ಭಾಗವಹಿಸಲು ಸಂಸದರು ನಿರಾಸಕ್ತಿ ತೋರುವುದು ಅವರ ವೈಯಕ್ತಿಕ ಆಯ್ಕೆಯನ್ನು ಮಾತ್ರ ತೋರಿಸುವುದಿಲ್ಲ, ಸಾರ್ವಜನಿಕ ಸಂವಾದಗಳಲ್ಲಿ ಭಾಗವಹಿಸಬೇಕೆನ್ನುವ ಪ್ರೇರಣೆ ವ್ಯವಸ್ಥೆಯಿಂದ ಬರದಿರುವುದೂ ಇದಕ್ಕೆ ಒಂದು ಕಾರಣವಾಗಿದೆ. ಚರ್ಚೆ, ಸಂವಾದ, ಸಮಾಲೋಚನೆ ಮತ್ತು ಸಂಸದೀಯ ಪರಿಶೀಲನೆಗೆ ಸರಕಾರವು ಪೂರಕ ಪರಿಸರವೊಂದನ್ನು ಸೃಷ್ಟಿಸಿದರೆ ಮಾತ್ರ ಇಂತಹ ಪ್ರವೃತ್ತಿಯನ್ನು ತಡೆಗಟ್ಟಬಹುದಾಗಿದೆ. ಇದನ್ನು ಹಲವು ದೇಶಗಳ ಸಂಸತ್ಗಳು ಸಾಬೀತುಪಡಿಸಿವೆ ಕೂಡ.
ಪ್ರಸಕ್ತ ಲೋಕಸಭೆಯ ಈ ಮೂರು ವರ್ಷಗಳ ಅವಧಿಯಲ್ಲಿ, ಒಟ್ಟು 134 ಮಸೂದೆಗಳನ್ನು ಮಂಡಿಸಲಾಗಿದೆ. ಅವುಗಳ ಪೈಕಿ 114 ಮಸೂದೆಗಳು ಅಂಗೀಕಾರಗೊಂಡಿವೆ. ಈ ಪೈಕಿ ಕೇವಲ ಶೇ.13 ಮಸೂದೆಗಳನ್ನು ಸಂಸದೀಯ ಸಮಿತಿಗಳ ಪರಿಶೀಲನೆಗೆ ಕಳುಹಿಸಲಾಗಿದೆ. ದೇಶಕ್ಕೆ ಉತ್ತಮ ಕಾನೂನುಗಳು ಮತ್ತು ನೀತಿಗಳು ಲಭಿಸುವಂತೆ ನೋಡಿಕೊಳ್ಳಲು ಮಸೂದೆಗಳನ್ನು ಪರಿಶೀಲಿಸಿ ಅಧ್ಯಯನ ಮಾಡುವುದು ಈ ಸಂಸದೀಯ ಸಮಿತಿಗಳ ಕೆಲಸವಾಗಿದೆ.
ಚರ್ಚೆಯಿಲ್ಲದೇ ಅಂಗೀಕಾರ
ಫೆಬ್ರವರಿಯಲ್ಲಿ ನಡೆದ ಸಂಸತ್ತಿನ ಬಜೆಟ್ ಅಧಿವೇಶನದಲ್ಲಿ, ಕೇಂದ್ರ ಬಜೆಟ್ನ ಸುಮಾರು ಶೇ. 73 ಪ್ರಸ್ತಾವಗಳನ್ನು ಯಾವುದೇ ಚರ್ಚೆಯಿಲ್ಲದೆ ಅಂಗೀಕರಿಸಲಾಯಿತು. ಕಳೆದ ಆರು ವರ್ಷಗಳಿಂದಲೂ ಇದೇ ರೀತಿ ಆಗುತ್ತಿದೆ. ಈ ಅವಧಿಯಲ್ಲಿ ಶೇ. 76 ಬಜೆಟ್ ಪ್ರಸ್ತಾವಗಳನ್ನು ಚರ್ಚೆಯಿಲ್ಲದೆಯೇ ಅಂಗೀಕರಿಸಲಾಗಿದೆ. ಕಳೆದ ಬಜೆಟ್ ಅಧಿವೇಶನದಲ್ಲಿ, ರೈಲ್ವೇಗೆ ನೀಡಲಾಗಿರುವ ಅನುದಾನಗಳ ಬಗ್ಗೆ ಕೇವಲ 13 ನಿಮಿಷ ಮತ್ತು ರಸ್ತೆ ಸಾರಿಗೆಗೆ ಮಾಡಲಾಗುವ ಖರ್ಚಿನ ಬಗ್ಗೆ ಕೇವಲ 11 ನಿಮಿಷ ಚರ್ಚಿಸಲಾಗಿದೆ.
ಇಂಧನ ಬೆಲೆ ಏರಿಕೆ, ಹಣದುಬ್ಬರ ಮತ್ತು ರೈತರ ಬೇಡಿಕೆಗಳ ಬಗ್ಗೆ ಚರ್ಚೆಯೇ ನಡೆದಿಲ್ಲ.
ಭಾರತೀಯ ಜನತಾ ಪಕ್ಷದ ಸರಕಾರದ ಅವಧಿಯಲ್ಲಿ ನಡೆದಿರುವ ಇತರ ಸಂಸದೀಯ ಅಧಿವೇಶನಗಳೂ ಇದೇ ಪ್ರವೃತ್ತಿಯನ್ನು ತೋರಿಸಿವೆ. ಸಂಸತ್ನ ಉಭಯ ಸದನಗಳು ದಾಖಲೆ ಸಂಖ್ಯೆಯ ಮಸೂದೆಗಳನ್ನು ಅಂಗೀಕರಿಸಿವೆ ಮತ್ತು ಸರಕಾರಿ ಅಧ್ಯಾದೇಶಗಳನ್ನು ಅನುಮೋದಿಸಿವೆ. ಆದರೆ, ಆ ಮಸೂದೆಗಳ ಬಗ್ಗೆ ನೈಜ ಸಾರ್ವಜನಿಕ ಚರ್ಚೆ ನಡೆದಿಲ್ಲ, ಪ್ರಶ್ನೆಗಳನ್ನು ಕೇಳಲಾಗಿಲ್ಲ ಮತ್ತು ಸಂಸದೀಯ ಸಮಿತಿಗಳ ಪರಿಶೀಲನೆ ನಡೆದಿಲ್ಲ.
2021ರಲ್ಲಿ ತಲೆದೋರಿದ ವಿನಾಶಕಾರಿ ಎರಡನೇ ಕೋವಿಡ್-19 ಅಲೆಯ ಬಳಿಕ ನಡೆದ ಮುಂಗಾರು ಅಧಿವೇಶನದ ವೇಳೆ, ರಾಜ್ಯಸಭೆಯು ಸಾಂಕ್ರಾಮಿಕದ ನಿರ್ವಹಣೆ ಬಗ್ಗೆ ಕೇವಲ ಐದು ಗಂಟೆಗಳ ಕಾಲ ಚರ್ಚಿಸಿತು. ಚರ್ಚೆಯಲ್ಲಿ ಕೇವಲ 23 ಸಂಸದರು ಭಾಗವಹಿಸಿದರು. ಅಗಾಧ ಸಾವಿನ ಪ್ರಮಾಣ, ಮುಚ್ಚಿದ ಶಾಲೆಗಳು, ಹೆಚ್ಚುತ್ತಿರುವ ಹಸಿವೆ, ಆಹಾರ ಬೆಲೆಯೇರಿಕೆ ಮತ್ತು ನಿರುದ್ಯೋಗ ಮುಂತಾದ ಸಾಂಕ್ರಾಮಿಕ ಸಂಬಂಧಿ ವಿಷಯಗಳ ಚರ್ಚೆಗೆ ಅವಕಾಶವೇ ಸಿಗಲಿಲ್ಲ.
ಅದೂ ಅಲ್ಲದೆ, ಮಸೂದೆಗಳು ಸಂಸತ್ಗೆ ಹೋಗುವ ಮುನ್ನ ನಡೆಯುವ ಸಮಾಲೋಚನಾ ಪ್ರಕ್ರಿಯೆಯನ್ನೂ 2014ರ ಬಳಿಕ ಕನಿಷ್ಠ ಪ್ರಮಾಣದಲ್ಲಿ ಬಳಸಲಾಗಿದೆ. ಕರಡು ಕಾನೂನುಗಳ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಲು ನಾಗರಿಕರು, ನಾಗರಿಕ ಸಮಾಜ, ಎನ್ಜಿಒಗಳು ಮತ್ತು ಪರಿಣಿತರಿಗೆ ಈ ಪ್ರಕ್ರಿಯೆಗಳು ಅವಕಾಶಗಳನ್ನು ಕಲ್ಪಿಸುತ್ತವೆ. ಆದರೆ, 2021ರ ಚಳಿಗಾಲದ ಅದಿವೇಶನದಲ್ಲಿ ಮಂಡಿಸಲಾದ ಒಟ್ಟು ಮಸೂದೆಗಳ ಪೈಕಿ ಶೇ. 60ರಷ್ಟನ್ನು ಯಾವುದೇ ಸಾರ್ವಜನಿಕ ಸಮಾಲೋಚನೆಯಿಲ್ಲದೆಯೇ ಮಂಡಿಸಲಾಗಿತ್ತು. ಒಂದು ಸಮೀಕ್ಷೆಯ ಪ್ರಕಾರ, 2014 ಜೂನ್ ಮತ್ತು 2019 ಮೇ ನಡುವಿನ ಅವಧಿಯಲ್ಲಿ ಮಂಡನೆಯಾಗಿರುವ ಮಸೂದೆಗಳ ಪೈಕಿ ಶೇ. 76ರ ಬಗ್ಗೆ ಯಾವುದೇ ಸಾರ್ವಜನಿಕ ಸಮಾಲೋಚನೆ ನಡೆದಿಲ್ಲ. ಅದೇ ರೀತಿ, 2019 ಜೂನ್ ಮತ್ತು 2021 ನವೆಂಬರ್ ನಡುವೆ ಮಂಡಿಸಲಾದ ಮಸೂದೆಗಳ ಪೈಕಿ ಶೇ. 73ರ ಬಗ್ಗೆ ಸಾರ್ವಜನಿಕ ಚರ್ಚೆ ನಡೆದಿಲ್ಲ.
ಸಂಸತ್ನಲ್ಲಿ ಗುಣಮಟ್ಟದ ಸಂವಾದ ಮತ್ತು ಚರ್ಚೆ ನಡೆಯಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಲವು ಬಾರಿ ಕರೆ ನೀಡಿದ್ದಾರೆ. ಹಾಗೆ ಆಗಬೇಕಾದರೆ, ಸರಕಾರ ಹಲವು ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ.
ಮೊದಲನೆಯದು, ಸರಕಾರ ಸಂಸತ್-ಪೂರ್ವ ಸಮಾಲೋಚನಾ ನೀತಿಯನ್ನು ಪೂರ್ಣ ಪ್ರಮಾಣದಲ್ಲಿ ಜಾರಿಗೊಳಿಸಬೇಕು. ಸಂಸತ್-ಪೂರ್ವ ಸಮಾಲೋಚನೆಯನ್ನು ಕಡ್ಡಾಯಗೊಳಿಸುವ ಖಾಸಗಿ ಮಸೂದೆಯೊಂದನ್ನು ಸಂಸದೆ ಸುಪ್ರಿಯಾ ಸುಳೆ ಈಗಾಗಲೇ ಮಂಡಿಸಿದ್ದಾರೆ.
ಇದು ಕಾನೂನು ರಚನಾ ಪ್ರಕ್ರಿಯೆಯನ್ನು ಮೇಲ್ದರ್ಜೆಗೇರಿಸುವುದಷ್ಟೇ ಅಲ್ಲ, ಭಾರತದ ಸಂಸತ್ತನ್ನು ಜಾಗತಿಕ ಸಂಸತ್ಗಳ ಮಟ್ಟಕ್ಕೆ ಏರಿಸುತ್ತದೆ.
ಎರಡನೆಯದಾಗಿ, ಸಾರ್ವಜನಿಕ ಸಮಾಲೋಚನಾ ಪ್ರಕ್ರಿಯೆಗಳಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಹೆಚ್ಚಿಸಲು ನವೀನ ಹಾಗೂ ತಂತ್ರಜ್ಞಾನ ಕೇಂದ್ರಿತ ವಿಧಾನಗಳನ್ನು ಅಭಿವೃದ್ಧಿಪಡಿಸಬೇಕಾಗಿದೆ. ಕೊರಿಯ ಮತ್ತು ಥಾಯ್ಲೆಂಡ್ಗಳಲ್ಲಿರುವಂತೆ ಸಂಸದೀಯ ದೂರುಗಳು ಮುಂತಾದ ವ್ಯವಸ್ಥೆಗಳು ಆಫ್ಲೈನ್ ಮತ್ತು ಆನ್ಲೈನ್- ಎರಡರ ಮೂಲಕವೂ ನಾಗರಿಕರಿಗೆ ಲಭಿಸುವಂತೆ ಮಾಡಬೇಕು. ಇದಕ್ಕೆ ಸಂಬಂಧಿಸಿದ ಕೆಲವು ವಿಧಿಗಳು ಭಾರತೀಯ ಸಂಸತ್ನಲ್ಲಿ ಈಗಾಗಲೇ ಚಾಲ್ತಿಯಲ್ಲಿವೆ.
ಮೂರನೆಯದು, ಸಂಸತ್ನಲ್ಲಿ ನಡೆಯುವ ಕಲಾಪಗಳನ್ನು ಟಿವಿಯಲ್ಲಿ ಅನಿಯಂತ್ರಿತವಾಗಿ ಪ್ರಸಾರಿಸುವುದು ಮತ್ತು ಕಲಾಪಗಳ ಮುಕ್ತ ವರದಿಗಾರಿಕೆಗೆ ಮಾಧ್ಯಮಗಳಿಗೆ ಅವಕಾಶ ನೀಡುವುದು ಈ ನಿಟ್ಟಿನಲ್ಲಿ ಉತ್ತಮ ಪರಿಹಾರವಾಗಿದೆ. ಇದರಿಂದ ಸಂಸತ್ ಹೇಗೆ ಕೆಲಸ ಮಾಡುತ್ತಿದೆ ಎನ್ನುವುದನ್ನು ನಾಗರಿಕರು ತಿಳಿದುಕೊಳ್ಳಬಹುದಾಗಿದೆ. ಸಂಸತ್ತಿನ ಕಲಾಪಗಳ ಬಗ್ಗೆ ತಿಳಿದುಕೊಳ್ಳಲು ಹೆಚ್ಚಿನ ನಾಗರಿಕರಿಗೆ ಟೆಲಿವಿಶನ್ ಪ್ರಮುಖ ಮಾಧ್ಯಮವಾಗಿದೆ. ಕೋವಿಡ್-19 ಹಿನ್ನೆಲೆಯಲ್ಲಿ ಸಂಸತ್ ಆವರಣ ಮತ್ತು ಪತ್ರಿಕಾ ಗ್ಯಾಲರಿಗೆ ಪ್ರವೇಶಿಸಲು ಪತ್ರಕರ್ತರಿಗೆ ಹಾಕಿರುವ ನಿರ್ಬಂಧಗಳನ್ನು ತೆಗೆದುಹಾಕಬೇಕಾಗಿದೆ.
ಅಂತಿಮವಾಗಿ, ಜನರ ಸಮಸ್ಯೆಗಳು ಮತ್ತು ರಾಷ್ಟ್ರೀಯ ಸವಾಲುಗಳ ಬಗ್ಗೆ ವಿಶಾಲ ವ್ಯಾಪ್ತಿಯಲ್ಲಿ ಸಂವಾದ ಮತ್ತು ಚರ್ಚೆಗಳನ್ನು ನಡೆಸುವುದಕ್ಕಾಗಿ ಸಂಸತ್ ಅಧಿವೇಶನಗಳ ಅವಧಿಯನ್ನು ಹೆಚ್ಚಿಸಬೇಕು. ಬ್ರಿಟನ್ ಮತ್ತು ಅಮೆರಿಕಗಳ ಸಂಸತ್ಗಳ ಮಾದರಿಯಲ್ಲಿ, ಭಾರತೀಯ ಸಂಸತ್ ಕೂಡ ವರ್ಷವೊಂದರಲ್ಲಿ 120ರಿಂದ 150 ದಿನಗಳ ಕಾಲ ಕಾರ್ಯನಿರ್ವಹಿಸಬೇಕು ಎಂಬುದಾಗಿ ರಾಜ್ಯಸಭೆಯ ಮಾಜಿ ಸಭಾಪತಿ ಹಾಗೂ ಮಾಜಿ ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಶಿಫಾರಸು ಮಾಡಿದ್ದಾರೆ.
ಕೃಪೆ: scroll.in