ಭಾರತದಲ್ಲಿನ ಸುಧಾರಿತ ಆರೋಗ್ಯ ಮೂಲಸೌಕರ್ಯಗಳ ಕುರಿತು ನರೇಂದ್ರ ಮೋದಿ ಹೇಳಿದ್ದು ಎಷ್ಟರ ಮಟ್ಟಿಗೆ ಸತ್ಯ?
ಪ್ರಧಾನಿ ನರೇಂದ್ರ ಮೋದಿಯವರು ಆ.24ರಂದು ಪಂಜಾಬಿನ ಮೊಹಾಲಿಯಲ್ಲಿ ಹೋಮಿ ಭಾಭಾ ಕ್ಯಾನ್ಸರ್ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ವೇಳೆ ದೇಶಕ್ಕೆ ಸಮಾಜದ ಅತ್ಯಂತ ದುರ್ಬಲ ವರ್ಗಗಳನ್ನೂ ತಲುಪುವ ಆರೋಗ್ಯ ವ್ಯವಸ್ಥೆಯ ಅಗತ್ಯವಿದೆ. ಉತ್ತಮ ಆರೋಗ್ಯ ವ್ಯವಸ್ಥೆ ಎಂದರೆ ಕೇವಲ ನಾಲ್ಕು ಗೋಡೆಗಳನ್ನು ನಿರ್ಮಿಸುವುದಲ್ಲ, ಇದಕ್ಕಾಗಿಯೇ ಕಳೆದ ಎಂಟು ವರ್ಷಗಳಲ್ಲಿ ಸಮಗ್ರ ಆರೋಗ್ಯ ರಕ್ಷಣೆಯು ಸರಕಾರದ ಪ್ರಮುಖ ಆದ್ಯತೆಗಳಲ್ಲೊಂದಾಗಿದೆ ಎಂದು ಹೇಳಿದ್ದರು.
ದೇಶದಲ್ಲಿಯ ಮೆಡಿಕಲ್ ಕಾಲೇಜುಗಳು, ಆರೋಗ್ಯ ಕೇಂದ್ರಗಳು, ವೈದ್ಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಕುರಿತು ಕೆಲವು ಹೇಳಿಕೆಗಳನ್ನೂ ಪ್ರಧಾನಿ ನೀಡಿದ್ದರು. Factchecker.in ನಡೆಸಿದ ಅಧಿಕೃತ ದತ್ತಾಂಶಗಳ ವಿಶ್ಲೇಷಣೆಯಂತೆ ಮೋದಿಯವರ ಹೇಳಿಕೆಗಳ ಪೈಕಿ ಎರಡು ನಿಜವಾಗಿವೆ, ಎರಡಕ್ಕೆ ಹೆಚ್ಚುವರಿ ಪೂರ್ವಾಪರ ಸಂದರ್ಭಗಳ ಅಗತ್ಯವಿದೆ ಮತ್ತು ಒಂದು ಹೇಳಿಕೆಯು ದಾರಿ ತಪ್ಪಿಸುವಂಥದ್ದಾಗಿದೆ.
ಹೇಳಿಕೆ 1: ದೇಶದಲ್ಲಿ 1.50 ಲ.ಕ್ಕೂ ಅಧಿಕ ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳನ್ನು ಸ್ಥಾಪಿಸಲಾಗುತ್ತಿದ್ದು, ಈ ಪೈಕಿ 1.25 ಲ.ಕೇಂದ್ರಗಳು ಈಗಾಗಲೇ ಕಾರ್ಯ ನಿರ್ವಹಿಸಲು ಆರಂಭಿಸಿವೆ. ಪಂಜಾಬಿನಲ್ಲಿ 3,000 ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳು ತಮ್ಮ ಸೇವೆಗಳನ್ನು ಒದಗಿಸುತ್ತಿವೆ.
ವಾಸ್ತವ: ನಿಜ
ಆರೋಗ್ಯ ಸಚಿವಾಲಯವು ಲೋಕಸಭೆಯಲ್ಲಿ ಒದಗಿಸಿರುವ ಮಾಹಿತಿಯಂತೆ 2022, ಜೂನ್ ಅಂತ್ಯಕ್ಕೆ ದೇಶದಲ್ಲಿ ಒಟ್ಟು 1,20,112 ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳು ಕಾರ್ಯಾಚರಿಸುತ್ತಿದ್ದವು. ಪಂಜಾಬಿನಲ್ಲಿ 2,934 ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿದ್ದವು.
ಆಯುಷ್ಮಾನ್ ಭಾರತ ಯೋಜನೆಯಡಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ದೇಶಾದ್ಯಂತ ಅಸ್ತಿತ್ವದಲ್ಲಿರುವ 1.5 ಲ.ಉಪ ಆರೋಗ್ಯ ಕೇಂದ್ರಗಳು ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಯುಷ್ಮಾನ್ ಭಾರತ ಆರೋಗ್ಯ ಮತ್ತು ಸ್ವಾಸ್ಥ ಕೇಂದ್ರಗಳನ್ನಾಗಿ ಪರಿವರ್ತಿಸಲು ಬೆಂಬಲವನ್ನು ನೀಡಲಾಗುತ್ತದೆ.
ಹೇಳಿಕೆ 2: ದೇಶದಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಏಮ್ಸ್)ಗಳ ಸಂಖ್ಯೆ 7ರಿಂದ 21ಕ್ಕೇರಿದೆ.
ವಾಸ್ತವ: ದಾರಿ ತಪ್ಪಿಸುವಂಥದ್ದು
ಆರೋಗ್ಯ ಸಚಿವಾಲಯವು 2022, ಜುಲೈನಲ್ಲಿ ಲೋಕಸಭೆಯಲ್ಲಿ ನೀಡಿದ್ದ ಉತ್ತರದಂತೆ ಪ್ರಧಾನ ಮಂತ್ರಿ ಸ್ವಾಸ್ಥ ಸುರಕ್ಷಾ ಯೋಜನೆಯಡಿ 22 ನೂತನ ಏಮ್ಸ್ಗಳ ಸ್ಥಾಪನೆಗೆ ಸರಕಾರವು ಅನುಮೋದನೆಯನ್ನು ನೀಡಿದೆ.
ಆದರೆ ದೇಶದಲ್ಲಿ ಕೇವಲ ಏಳು ಏಮ್ಸ್ಗಳು ಪೂರ್ಣವಾಗಿ ಕಾರ್ಯ ನಿರ್ವಹಿಸುತ್ತಿವೆ. ಇದರಲ್ಲಿ 1956ರಲ್ಲಿ ದಿಲ್ಲಿಯಲ್ಲಿ ಸ್ಥಾಪನೆಗೊಂಡಿದ್ದ ಮೊದಲ ಏಮ್ಸ್ ಹಾಗೂ ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್ಡಿಎ ಸರಕಾರವು ಮಂಜೂರು ಮಾಡಿದ್ದ ಮತ್ತು ಯುಪಿಎ ಆಡಳಿತದ ಅವಧಿಯಲ್ಲಿ ಪೂರ್ಣಗೊಂಡಿದ್ದ ಆರು ಏಮ್ಸ್ಗಳು ಒಳಗೊಂಡಿವೆ.
ಈ ಆರು ಏಮ್ಸ್ಗಳು ಭೋಪಾಲ, ಭುವನೇಶ್ವರ, ಜೋಧಪುರ, ಪಾಟ್ನಾ, ರಾಯಪುರ ಮತ್ತು ಹೃಷಿಕೇಶಗಳಲ್ಲಿ ಸ್ಥಾಪನೆಗೊಂಡಿವೆ. ಉಳಿದಂತೆ ಇತರ ಏಮ್ಸ್ಗಳಲ್ಲಿ ಕೆಲವು ಹೊರರೋಗಿ ವಿಭಾಗ ಮತ್ತು ತರಗತಿಗಳನ್ನು ನಡೆಸುತ್ತಿದ್ದರೆ, ಕೆಲವು ತರಗತಿಗಳನ್ನು ಮಾತ್ರ ನಡೆಸುತ್ತಿವೆ. ಕೆಲವು ಏಮ್ಸ್ಗಳಲ್ಲಿ ಸಿವಿಲ್ ಕಾಮಗಾರಿಗಳು ಬಾಕಿಯಿದ್ದರೆ,ಇನ್ನು ಕೆಲವು ಏಮ್ಸ್ಗಳ ನಿರ್ಮಾಣ ಇನ್ನಷ್ಟೇ ಆರಂಭಗೊಳ್ಳಬೇಕಿದೆ. ಅಲ್ಲದೆ ನೂತನ ಏಮ್ಸ್ಗಳಲ್ಲಿ ಅರ್ಧಕ್ಕೂ ಹೆಚ್ಚಿನ (ಶೇ.51) ಬೋಧಕ ಮತ್ತು ಬೋಧಕೇತರ ಹುದ್ದೆಗಳು ಈಗಲೂ ಖಾಲಿಯಿವೆ.
ಹೇಳಿಕೆ 3: 2014ರ ಮೊದಲು ದೇಶದಲ್ಲಿ 400ಕ್ಕೂ ಕಡಿಮೆ ಮೆಡಿಕಲ್ ಕಾಲೇಜುಗಳಿದ್ದವು. ಕಳೆದ ಎಂಟು ವರ್ಷಗಳಲ್ಲಿ 200ಕ್ಕೂ ಅಧಿಕ ಮೆಡಿಕಲ್ ಕಾಲೇಜುಗಳನ್ನು ಸ್ಥಾಪಿಸಲಾಗಿದೆ.
ವಾಸ್ತವ: ಹೆಚ್ಚುವರಿ ಪೂರ್ವಾಪರ ಸಂದರ್ಭಗಳ ಅಗತ್ಯವಿದೆ.
2014 ಫೆಬ್ರವರಿಯಲ್ಲಿ ಲೋಕಸಭೆಯಲ್ಲಿ ನೀಡಲಾಗಿದ್ದ ಉತ್ತರದಂತೆ ಆಗ ದೇಶದಲ್ಲಿ 387 ಮೆಡಿಕಲ್ ಕಾಲೇಜುಗಳಿದ್ದವು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಒದಗಿಸಿರುವ ಇತ್ತೀಚಿನ ಮಾಹಿತಿಯಂತೆ ಈ ಸಂಖ್ಯೆ 612ಕ್ಕೇರಿದೆ. ಅಂದರೆ ಕಳೆದ ಎಂಟು ವರ್ಷಗಳಲ್ಲಿ ದೇಶದಲ್ಲಿ 225 ನೂತನ ಮೆಡಿಕಲ್ ಕಾಲೇಜುಗಳು ಅಸ್ತಿತ್ವಕ್ಕೆ ಬಂದಿವೆ. 225 ನೂತನ ಕಾಲೇಜುಗಳ ಪೈಕಿ ಶೇ.37 (84) ಖಾಸಗಿ ಒಡೆತನದಲ್ಲಿದ್ದು,ಉಳಿದವು (141) ಸರಕಾರಿ ಕಾಲೇಜುಗಳಾಗಿವೆ.
ಇದಲ್ಲದೆ,2014ರ ಉತ್ತರದಲ್ಲಿ ಅಂದಿನ ಯುಪಿಎ ಸರಕಾರವು 200 ಅಥವಾ ಹೆಚ್ಚಿನ ಹಾಸಿಗೆಗಳನ್ನು ಹೊಂದಿರುವ 58 ಜಿಲ್ಲಾಸ್ಪತ್ರೆಗಳನ್ನು ಮೆಡಿಕಲ್ ಕಾಲೇಜುಗಳಾಗಿ ಮೇಲ್ದರ್ಜೆಗೇರಿಸಲು ಈಗಾಗಲೇ ಅನುಮೋದನೆಯನ್ನು ನೀಡಿದೆ ಎಂದು ತಿಳಿಸಲಾಗಿತ್ತು. ಹೀಗಾಗಿ ಹಿಂದೆಯೇ ಅನುಮೋದನೆ ಪಡೆದಿದ್ದ ಈ ಕಾಲೇಜುಗಳ ಪೈಕಿ ಕೆಲವು ಎನ್ಡಿಎ ಆಡಳಿತದಲ್ಲಿ ಪೂರ್ಣಗೊಂಡಿರುವ ಸಾಧ್ಯತೆಯಿದೆ.
ಪ್ರಸ್ತುತ ಸರಕಾರದ ಆಡಳಿತದಲ್ಲಿ ಜಿಲ್ಲಾ ಅಥವಾ ರೆಫರಲ್ ಆಸ್ಪತ್ರೆಗಳನ್ನು ಮೇಲ್ದರ್ಜೆಗೇರಿಸಿ ನೂತನ ಮೆಡಿಕಲ್ ಕಾಲೇಜುಗಳ ಸ್ಥಾಪನೆಗಾಗಿರುವ ಕೇಂದ್ರ ಪ್ರಾಯೋಜಿತ ಯೋಜನೆಯಡಿ 157 ನೂತನ ಮೆಡಿಕಲ್ ಕಾಲೇಜುಗಳಿಗೆ ಅನುಮೋದನೆ ನೀಡಲಾಗಿದೆ. ಈ ಪೈಕಿ 72 ಕಾಲೇಜುಗಳು ಪ್ರಸ್ತುತ ಕಾರ್ಯ ನಿರ್ವಹಿಸುತ್ತಿವೆ.
ಹೇಳಿಕೆ 4: ಸರಕಾರವು ಅಲೋಪತಿ ವೈದ್ಯರಿಗಿರುವ ಮಾನ್ಯತೆಯನ್ನೇ ಐದು ಲ. ಆಯುರ್ವೇದ, ಯೋಗ ಮತ್ತು ನ್ಯಾಚುರೋಪತಿ, ಯುನಾನಿ,ಸಿದ್ಧ ಮತ್ತು ಹೋಮಿಯೋಪತಿ ಅಥವಾ ಆಯುಷ್ ವೈದ್ಯರಿಗೆ ನೀಡಿದೆ. ಇದು ಭಾರತದಲ್ಲಿ ವೈದ್ಯ-ಜನಸಂಖ್ಯೆ ಅನುಪಾತವನ್ನು ಹೆಚ್ಚಿಸಿದೆ.
ವಾಸ್ತವ: ಹೆಚ್ಚುವರಿ ಪೂರ್ವಾಪರ ಸಂದರ್ಭಗಳ ಅಗತ್ಯವಿದೆ.
ಹಿಂದಿನ ಲೇಖನವೊಂದರ ಸಂದರ್ಭ ಭಾರತದಲ್ಲಿ ವೈದ್ಯ-ಜನಸಂಖ್ಯೆ ಅನುಪಾತದಲ್ಲಿ ಆಯುಷ್ ವೈದ್ಯರನ್ನು ವಿಶ್ವಾಸದಿಂದ ಸೇರ್ಪಡೆಗೊಳಿಸಲು ಸಾಧ್ಯವಿಲ್ಲ,ಏಕೆಂದರೆ ಅನುಪಾತವು ತುಲನಾತ್ಮಕ ವೌಲ್ಯಮಾಪನಕ್ಕಾಗಿ ಜಾಗತಿಕವಾಗಿ ಅನ್ವಯಿಸುತ್ತದೆ ಮತ್ತು ಆಯುಷ್ ದೇಶೀಯ ವೈದ್ಯ ಪದ್ಧತಿಯಾಗಿದೆ ಎಂದು ತಜ್ಞರು Factchecker.in ಗೆ ತಿಳಿಸಿದ್ದರು.
ಅಲ್ಲದೆ ಗ್ರಾಮೀಣ-ನಗರ ಮತ್ತು ಸರಕಾರಿ-ಖಾಸಗಿ ಆಸ್ಪತ್ರೆಗಳಾದ್ಯಂತ ವೈದ್ಯರ ಅನುಪಾತವು ತಿರುಚಿಕೊಂಡಿದೆ. ಹೀಗಾಗಿ ರಾಷ್ಟ್ರವ್ಯಾಪಿ ಅನುಪಾತದ ಬದಲಿಗೆ ವಿಘಟಿತ ದತ್ತಾಂಶಗಳನ್ನು ನೋಡುವುದು ಹೆಚ್ಚು ಉಪಯುಕ್ತವಾಗುತ್ತದೆ ಎಂದೂ ತಜ್ಞರು ಹೇಳಿದ್ದರು. ಇಂತಹುದೇ ಹೇಳಿಕೆಗಳನ್ನು ಸಂಸತ್ತಿನಲ್ಲಿ ಅನೇಕ ಸಲ ನೀಡಲಾಗಿತ್ತು. ಭಾರತದಲ್ಲಿಯ 5.65 ಲ.ಆಯುಷ್ ವೈದ್ಯರನ್ನು ಸಮೀಕರಣಕ್ಕೆ ಸೇರಿಸಿದಾಗ ಭಾರತದ ವೈದ್ಯ-ಜನಸಂಖ್ಯೆ ಅನುಪಾತ (1:834)ವು ವಿಶ್ವ ಆರೋಗ್ಯ ಸಂಸ್ಥೆಯ ಶಿಫಾರಸಿಗಿಂತ (1:1000) ಉತ್ತಮವಾಗಿದೆ ಎಂದು ಹೇಳಲಾಗಿತ್ತು.
ಹೇಳಿಕೆ 5: ಆಯುಷ್ಮಾನ್ ಭಾರತ ಯೋಜನೆಯಡಿ 3.5 ಕೋ.ಫಲಾನುಭವಿಗಳು ಉಚಿತ ಚಿಕಿತ್ಸೆಯನ್ನು ಪಡೆದಿದ್ದಾರೆ.
ವಾಸ್ತವ: ನಿಜ
ಯೋಜನೆಯ ಮೂಲಕ 3.53 ಕೋ.ರೋಗಿಗಳು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಮತ್ತು ಈ ಪೈಕಿ 8.74 ಲ.ರೋಗಿಗಳು ಕಳೆದ 30 ದಿನಗಳಲ್ಲಿ ಆಸ್ಪತ್ರೆಗೆ ದಾಖಲಿಸಲ್ಪಟ್ಟಿದ್ದಾರೆ ಎಂದು ಆಯುಷ್ಮಾನ ಭಾರತ ಪ್ರಧಾನ ಮಂತ್ರಿ ಆರೋಗ್ಯ ಯೋಜನೆಯ ವೆಬ್ಸೈಟ್ನಲ್ಲಿಯ ದತ್ತಾಂಶಗಳು ಸೂಚಿಸುತ್ತಿವೆ.
ಉಚಿತ ಆಸ್ಪತ್ರೆ ದಾಖಲಾತಿಗಳ ಸಂಖ್ಯೆ ಮತ್ತು ಯೋಜನೆಯಡಿ ನೋಂದಾಯಿತ ಆಸ್ಪತ್ರೆಗಳ ಸಂಖ್ಯೆಯ ಪಟ್ಟಿಯಲ್ಲಿ ತಮಿಳುನಾಡು ಅಗ್ರಸ್ಥಾನದಲ್ಲಿದೆ.
ಕೃಪೆ: Factchecker.in