-

ಸಂತ್ರಸ್ತರನ್ನೇ ಅಪರಾಧಿಗಳಂತೆ ಬಿಂಬಿಸುವ ವ್ಯವಸ್ಥೆ

-

ವಿಚಾರಣೆಯ ನೆಪದಲ್ಲಿ ಸಂತ್ರಸ್ತ ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಅವರ ಪೋಷಕರನ್ನೇ ಅಪರಾಧಿಗಳು ಎನ್ನುವಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಸಾಮಾಜಿಕವಾಗಿ ಕಳಂಕಿತರಾಗಿ, ಮಾನಸಿಕವಾಗಿ ಕುಸಿದು ಹೋಗಿರುವ ಪೋಷಕರು ಇಡೀ ವ್ಯವಸ್ಥೆಯಲ್ಲೇ ನಂಬಿಕೆ ಕಳೆದುಕೊಂಡು ದಯಾ ಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು, ಮಾನವಂತರೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರ. 

ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಅಪರಾಧಗಳಿಗೆ ಸಾಮಾನ್ಯವಾಗಿ ಮಕ್ಕಳು ಸುಲಭದ ತೊತ್ತಾಗುತ್ತಾ ಬಂದಿದ್ದಾರೆ. ತಮ್ಮ ಮೇಲಿನ ದೌರ್ಜನ್ಯಗಳನ್ನು ಬಹುತೇಕ ಮಕ್ಕಳು ಪ್ರತಿರೋಧಿಸದೆ ತಮ್ಮ ನೋವನ್ನು ಒಳನುಂಗಿಕೊಂಡು ಆಂತರ್ಯದಲ್ಲೇ ನರಳುತ್ತಿರುತ್ತಾರೆ. ಗಂಡು ಮಕ್ಕಳು ಹಾಗೂ ಹೆಣ್ಣು ಮಕ್ಕಳು ಲಿಂಗಭೇದವಿಲ್ಲದೆ ಪರಿಚಿತರಿಂದ, ಅಪರಿಚಿತರಿಂದ, ಸಂಬಂಧಿಕರಿಂದ ಮತ್ತು ಕೆಲವೊಮ್ಮೆ ಕುಟುಂಬದ ಸದಸ್ಯರಿಂದಲೇ ಲೈಂಗಿಕ ಶೋಷಣೆಗೆ ಒಳಗಾಗುತ್ತಾರೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದಂತೆ ಪ್ರಬಲವಾದ ಕಾನೂನು ನಮ್ಮ ದೇಶದಲ್ಲಿ ಜಾರಿಗೊಳ್ಳಬೇಕು ಎನ್ನುವ ಸಾರ್ವತ್ರಿಕ ಅಭಿಪ್ರಾಯಕ್ಕೆ ಮನ್ನಣೆ ನೀಡಿ, ಕೇಂದ್ರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ನೇತೃತ್ವದಲಿ, ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯ್ದೆ-2012 ಸಂಸತ್ತಿನ ಅನುಮೋದನೆಯೊಂದಿಗೆ ಜಾರಿಗೆ ಬಂದಿರುವುದೀಗ ಇತಿಹಾಸ. ಸದರಿ ಕಾಯ್ದೆ ಪೊಕ್ಸೊ ಕಾಯ್ದೆ ಎಂದೇ ಪ್ರಚಲಿತದಲ್ಲಿದೆ. ಪೊಕ್ಸೊ ಪ್ರಕರಣಗಳ ತ್ವರಿತ ವಿಚಾರಣೆ ಮತ್ತು ವಿಲೇವಾರಿಗಾಗಿ ವಿಶೇಷ ನ್ಯಾಯಾಲಯಗಳು ಕೂಡ ಅಸ್ತಿತ್ವಕ್ಕೆ ಬಂದಿವೆ. ವಿಶೇಷ ನ್ಯಾಯಾಲಯಗಳು ಅಸ್ತಿತ್ವದಲ್ಲಿಲ್ಲದ ಕಡೆ ಮ್ಯಾಜಿಸ್ಟ್ರೇಟ್ ನ್ಯಾಯಲಯಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಯುತ್ತದೆ. ಪ್ರಕರಣದ ವಿಚಾರಣೆ ಒಂದು ವರ್ಷದೊಳಗೆ ಮುಗಿದು ಅಂತಿಮ ತೀರ್ಪು ಹೊರಬರಬೇಕೆನ್ನುವುದು ಈ ಕಾಯ್ದೆಯ ಆಶಯ. ಪೊಕ್ಸೊ ಕಾಯ್ದೆ ಅಡಿಯಲ್ಲಿ ಇತ್ತೀಚೆಗಿನ ದಿನಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಈ ಕಾಯ್ದೆಯ ಬಾಹುಗಳಿಂದ ಅಪರಾಧಿಗಳು ಸುಲಭವಾಗಿ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವ ಅಪರಾಧಿಗಳ ಪ್ರಕರಣದ ತೀವ್ರತೆಯ ಆಧಾರದ ಮೇಲೆ 3ರಿಂದ 10 ವರ್ಷಗಳವರೆಗೆ ಆರೋಪಿಗಳಿಗೆ ಶಿಕ್ಷೆ ವಿಧಿಸಲಾಗುತ್ತದೆ. ಈ ಕಾಯ್ದೆಯ ಸೆಕ್ಷನ್ 4ರ ಪ್ರಕಾರ 16 ವರ್ಷದೊಳಗಿನ ಮಕ್ಕಳ ಮೇಲೆ ಆಕ್ರಮಣಕಾರಿ ಲೈಂಗಿಕ ಕೃತ್ಯ ನಡೆದರೆ 20 ವರ್ಷಕ್ಕಿಂತ ಕಡಿಮೆಯಿಲ್ಲದೆ ಹಾಗೂ 16ರಿಂದ 18 ವಯೋಮಾನದ ಮಕ್ಕಳ ಮೇಲೆ ಆಕ್ರಮಣಕಾರಿ ಲೈಂಗಿಕ ಅಪರಾಧ ನಡೆದರೆ 20 ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಅಪರಾಧಿಗೆ ಶಿಕ್ಷೆ ವಿಧಿಸಬಹುದಾಗಿದೆ. ಈ ಕಾಯ್ದೆಯ ಆಶಯದಂತೆ ಆರೋಪಿಗಳಿಗೆ ಶಿಕ್ಷೆಯಾಗಬೇಕಾದರೆ, ಇದರ ಅನುಷ್ಠಾನದ ಪಾಲುದಾರ ಸಂಸ್ಥೆಗಳಾದ ಮಕ್ಕಳ ಕಲ್ಯಾಣ ಸಮಿತಿ, ಪೊಲೀಸ್ ಇಲಾಖೆ, ವೈದ್ಯಕೀಯ ಸಂಸ್ಥೆಗಳು ಹಾಗೂ ನ್ಯಾಯಾಂಗ ಪರಸ್ಪರ ಬದ್ಧತೆಯಿಂದ ಮಕ್ಕಳ ಸ್ನೇಹಿ ದೃಷ್ಟಿಕೋನದಿಂದ ಸಮನ್ವಯತೆ ಸಾಧಿಸಬೇಕಾಗುತ್ತದೆ. 

ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳು ಪೊಕ್ಸೊ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನದ ಕುರಿತು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಪೊಕ್ಸೊದಂತಹ ಪ್ರಬಲವಾದ ಕಾಯ್ದೆಯ ಅಡಿಯಲ್ಲಿ ಪ್ರಕರಣಗಳು ದಾಖಲಾದಾಗ ಕೆಲವೊಮ್ಮೆ ಆರೋಪಿಗಳನ್ನು ರಕ್ಷಿಸುವ ಪ್ರಯತ್ನಗಳು ವ್ಯವಸ್ಥಿತವಾಗಿ ನಡೆಯುತ್ತವೆ. ಆಗ, ಮಕ್ಕಳಿಗೆ ರಕ್ಷಣೆ ಮತ್ತು ನ್ಯಾಯ ಒದಗಿಸಬೇಕಾದ ಬಹುತೇಕ ಪಾಲುದಾರ ಸಂಸ್ಥೆಗಳು ಮಕ್ಕಳ ಸ್ನೇಹಿಯಾಗಿ ನಡೆದುಕೊಳ್ಳುವುದಿಲ್ಲ. ಅಂತಹವುಗಳಲ್ಲಿ ಚಿತ್ರದುರ್ಗದ ಮುರುಘಾ ಮಠದ ಶಿವಮೂರ್ತಿ ಸ್ವಾಮಿಗಳ ಪ್ರಕರಣವೂ ಒಂದು. ಸಾಮಾಜಿಕ ಮತ್ತು ಆರ್ಥಿಕ ಕಾರಣಗಳಿಗಾಗಿ ಸದರಿ ಮಠದ ವಸತಿ ನಿಲಯದಲ್ಲಿ ವಾಸವಿದ್ದ ದುರ್ಬಲ ಸಮುದಾಯಗಳ ಅಪ್ರಾಪ್ತ ವಯಸ್ಕ ಹೆಣ್ಣು ಮಕ್ಕಳ ಮೇಲೆ ಒಬ್ಬ ಮಹಿಳಾ ವಾರ್ಡನ್ ಸುಪರ್ದಿಯಲ್ಲಿ ಮಕ್ಕಳು ತಮ್ಮ ತಂದೆಗೂ ಮಿಗಿಲಾದ ಗೌರವವಿಟ್ಟುಕೊಂಡಿದ್ದ ವ್ಯಕ್ತಿಯೇ ಲೈಂಗಿಕ ಅತ್ಯಾಚಾರವೆಸಗಿದಾಗ, ತಮಗಾದ ದೈಹಿಕ ಮತ್ತು ಮಾನಸಿಕ ಘಾಸಿಯನ್ನೂ ಮರೆತು ಸಂತ್ರಸ್ತ ಮಕ್ಕಳು ದೂರು ಕೊಡಲು ಹೋದಾಗ ಬಾಲನ್ಯಾಯ ಕಾಯ್ದೆ-2015ರ ಅಡಿಯಲ್ಲಿ ರಚನೆ ಆಗಿರುವ ಚಿತ್ರದುರ್ಗದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅವರ ನೆರವಿಗೆ ಧಾವಿಸಬೇಕಿತ್ತು. ಅವರಿಗೆ ಅಗತ್ಯವಾದ ವೈದ್ಯಕೀಯ ತಪಾಸಣೆ, ಕೌನ್ಸಿಲಿಂಗ್ ಮಾಡಿಸಿ ಸೂಕ್ತ ವಸತಿ ಮತ್ತು ರಕ್ಷಣೆ ಒದಗಿಸಬೇಕಿತ್ತು. ಆದರೆ, ಸದರಿ ಪ್ರಕರಣದಲ್ಲಿ ಸಂತ್ರಸ್ತ ಮಕ್ಕಳು ಮೈಸೂರು ಜಿಲ್ಲೆಯ ಒಡನಾಡಿ ಸಂಸ್ಥೆ ನೆರವು ಪಡೆದು, ಅಲ್ಲಿನ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಮೂಲಕ ಪ್ರಕರಣ ದಾಖಲಿಸಬೇಕಾಯಿತು. ಪ್ರಕರಣ ದಾಖಲಾದ ಸುಮಾರು ಒಂದು ವಾರದವರೆಗೆ ಆರೋಪಿಯ ಬಂಧನವಾಗಲೇ ಇಲ್ಲ. ಸಾಲದ್ದಕ್ಕೆ ಆಡಳಿತ ಪಕ್ಷದ ಕೆಲ ಪ್ರಬಲ ಸಮುದಾಯದ ರಾಜಕಾರಣಿಗಳು ಆರೋಪಿಯ ಪರ ಹೇಳಿಕೆ ಕೊಟ್ಟರು. ವಿರೋಧ ಪಕ್ಷಗಳೂ ಗಟ್ಟಿ ಧ್ವನಿಯಲ್ಲಿ ಪ್ರಕರಣವನ್ನು ಖಂಡಿಸಲಿಲ್ಲ. ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಮತ್ತು ಉನ್ನತ ಹಂತದ ಅಧಿಕಾರಿಗಳು ಸಂತ್ರಸ್ತರ ಅಳಲಿಗೆ ಕಿವಿಗೊಡಲಿಲ್ಲ. ಪೊಲೀಸರು ಪೊಕ್ಸೊ ಪ್ರಕರಣದ ಪ್ರಕ್ರಿಯೆಗನುಗುಣವಾಗಿ ತ್ವರಿತ ತನಿಖೆ ಕೈಗೊಳ್ಳದಿರುವುದರಿಂದ ಸಾಕ್ಷನಾಶವಾಗಿರುವ ಸಾಧ್ಯತೆಯಿದೆ. ದಲಿತ ಮತ್ತು ಪ್ರಗತಿಪರ ಸಂಘಟನೆಗಳ ಪ್ರತಿಭಟನೆ, ಮಾಧ್ಯಮಗಳ ನಿರಂತರ ಅನುಸರಣೆ, ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಪ್ರವೇಶ ಹಾಗೂ ಸ್ಥಳೀಯ ನ್ಯಾಯಾಧೀಶರ ತೀರ್ಪಿನಿಂದ ಅನಿವಾರ್ಯವಾಗಿ ಪೊಲೀಸರು ಆರೋಪಿಯನ್ನು ಬಂಧಿಸುವಂತಾಯಿತು.

ವಿಚಾರಣೆಯ ನೆಪದಲ್ಲಿ ಸಂತ್ರಸ್ತ ಅಪ್ರಾಪ್ತ ವಯಸ್ಸಿನ ಬಾಲಕಿಯರು ಮಾನಸಿಕ ಹಿಂಸೆ ಅನುಭವಿಸುತ್ತಿದ್ದು, ಅವರ ಪೋಷಕರನ್ನೇ ಅಪರಾಧಿಗಳು ಎನ್ನುವಂತೆ ನಡೆಸಿಕೊಳ್ಳಲಾಗುತ್ತಿದೆ. ಇದರಿಂದ ಸಾಮಾಜಿಕವಾಗಿ ಕಳಂಕಿತರಾಗಿ, ಮಾನಸಿಕವಾಗಿ ಕುಸಿದು ಹೋಗಿರುವ ಪೋಷಕರು ಇಡೀ ವ್ಯವಸ್ಥೆಯಲ್ಲೇ ನಂಬಿಕೆ ಕಳೆದುಕೊಂಡು ದಯಾ ಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದಿರುವುದು, ಮಾನವಂತರೆಲ್ಲರೂ ತಲೆ ತಗ್ಗಿಸಬೇಕಾದ ವಿಚಾರ. ಸಂತ್ರಸ್ತ ಅಪ್ರಾಪ್ತ ವಯಸ್ಸಿನ ಬಾಲಕಿಯರ ಪರ ನಿಂತ ಸಂಘಟನೆಗಳು ಸದರಿ ಪ್ರಕರಣದ ತನಿಖೆ ನ್ಯಾಯಾಂಗದ ಮೇಲ್ವಿಚಾರಣೆಯಲ್ಲಿ ನಡೆಯಲಿ ಎಂದು ಪ್ರಾರಂಭದಿಂದಲೂ ಆಗ್ರಹಿಸುತ್ತಿರುವುದು ಈಗಲೂ ಪ್ರಸ್ತುತ ಎನಿಸುತ್ತದೆ. ಸಂತ್ರಸ್ತ ಅಪ್ರಾಪ್ತ ಬಾಲಕಿಯರ ಪೋಷಕರು ರಾಷ್ಟ್ರಪತಿಗಳಿಗೆ ಬರೆದ ಪತ್ರ, ಪೊಕ್ಸೊದಂತಹ ಪ್ರಬಲ ಕಾಯ್ದೆ ಮತ್ತು ನಿಯಮಗಳಿದ್ದರೂ ಕೆಲವು ಪ್ರಬಲರ ಪ್ರಕರಣಗಳಲ್ಲಿ ಸಂತ್ರಸ್ತರೇ ಅಪರಾಧಿಗಳಂತೆ ಬಿಂಬಿಸಲ್ಪಡುತ್ತಾರೆ ಎನ್ನುವುದಕ್ಕೆ ಈ ಪ್ರಕರಣ ನಿದರ್ಶನವಾಗಿದೆ.

 

‘ವಾರ್ತಾ ಭಾರತಿ’ ನಿಮಗೆ ಆಪ್ತವೇ ? ಇದರ ಸುದ್ದಿಗಳು ಮತ್ತು ವಿಚಾರಗಳು ಎಲ್ಲರಿಗೆ ಉಚಿತವಾಗಿ ತಲುಪುತ್ತಿರಬೇಕೇ? 

ಬೆಂಬಲಿಸಲು ಇಲ್ಲಿ  ಕ್ಲಿಕ್ ಮಾಡಿ

The views expressed in comments published on www.varthabharati.in are those of the comment writers alone. They do not represent the views or opinions of varthabharati.in or its staff, nor do they represent the views or opinions of  Vartha Bharati Group, or any entity of, or affiliated with, Vartha Bharati Group. varthabharati.in reserves the right to take any or all comments down at any time.
 

Refrain from posting comments that are obscene, defamatory or inflammatory, and do not indulge in personal attacks, name calling or inciting hatred against any community. It is obligatory on www.varthabharati.in to provide the IP address and other details of senders of such comments, to the authority concerned upon request. 

Help us delete comments that do not follow these guidelines by informing us (vbwebdesk@gmail.com). Let's work together to keep the conversation civil. 

www.varthabharati.in ನ ಕಮೆಂಟ್ ವಿಭಾಗದಲ್ಲಿ ಪ್ರಕಟವಾಗುವ ಅಭಿಪ್ರಾಯಗಳು ಆ ಕಮೆಂಟ್ ಬರೆದವರ ವೈಯಕ್ತಿಕ ಅಭಿಪ್ರಾಯ ಮಾತ್ರ. ಅವು  www.varthabharati.in ನ ಅಥವಾ ಅದರ ಸಿಬ್ಬಂದಿಯ, ಅಥವಾ 'ವಾರ್ತಾ ಭಾರತಿ' ಬಳಗಕ್ಕೆ ಸೇರಿದ ಯಾರದ್ದೇ ಅಭಿಪ್ರಾಯಗಳಲ್ಲ. ಈ ಕಮೆಂಟ್ ಗಳನ್ನು ಯಾವುದೇ ಸಂದರ್ಭದಲ್ಲಿ ತೆಗೆದುಹಾಕುವ ಹಕ್ಕನ್ನು  ' ವಾರ್ತಾ ಭಾರತಿ' ಕಾದಿರಿಸಿದೆ. 

ಅಶ್ಲೀಲ, ಮಾನಹಾನಿಕರ ಅಥವಾ ಪ್ರಚೋದನಕಾರಿ ಕಮೆಂಟ್ ಗಳನ್ನು ಹಾಗು ಯಾವುದೇ ವ್ಯಕ್ತಿ, ಸಂಸ್ಥೆ , ಸಮುದಾಯಗಳ ವಿರುದ್ಧ ಹಿಂಸೆ ಪ್ರಚೋದಿಸುವಂತಹ ಕಮೆಂಟ್ ಗಳನ್ನು ಹಾಕಬೇಡಿ. ಅಂತಹ ಕಮೆಂಟ್ ಹಾಕಿದವರ ಐಪಿ ಅಡ್ರೆಸ್ ಹಾಗು ಇತರ ವಿವರಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಕೇಳಿದಾಗ  ನೀಡುವುದು 'ವಾರ್ತಾ ಭಾರತಿ' ಗೆ ಕಡ್ದಾ ಯವಾಗಿರುತ್ತದೆ.  ಆ ರೀತಿಯ ಯಾವುದೇ ಕಮೆಂಟ್ ಗಳು ಕಂಡು ಬಂದಲ್ಲಿ ಕೂಡಲೇ ನಮಗೆ ತಿಳಿಸಿ (vbwebdesk@gmail.com) ಅದನ್ನು ತೆಗೆದು ಹಾಕಲು ನೇರವಾಗಿ. ಆರೋಗ್ಯಕರ ಚರ್ಚೆಗೆ ಸಹಕರಿಸಿ.

Back to Top