‘ನೂತನ ವಿವಿ ವಿಲೀನ’ ರದ್ದು ಮಾಡುತ್ತಿಲ್ಲ: ಡಿ.ಕೆ.ಶಿವಕುಮಾರ್

ಬೆಂಗಳೂರು : ಬಿಜೆಪಿ ಸರಕಾರ ಆರಂಭಿಸಿದ್ದ ನೂತನ ವಿವಿಗಳ ಸಾಧಕ-ಬಾಧಕಗಳನ್ನು ಅಧ್ಯಯನ ಮಾಡಿದ ನಂತರ ನಮ್ಮ ಸರಕಾರ ಈ ವಿವಿಗಳನ್ನು ಹಳೆಯ ವಿವಿಗಳ ಜತೆಗೆ ವಿಲೀನ ಮಾಡುತ್ತೇವೆಯೇ ಹೊರತು, ಸಂಪೂರ್ಣವಾಗಿ ರದ್ದು ಮಾಡುತ್ತಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ವಿಪಕ್ಷ ನಾಯಕ ಆರ್.ಅಶೋಕ್ ಪ್ರಸ್ತಾಪಕ್ಕೆ ಪ್ರತಿಕ್ರಿಯಿಸಿದ ಅವರು, ಬಿಜೆಪಿ ಅವಧಿಯಲ್ಲಿ ಡಾ.ಅಶ್ವತ್ಥ್ ನಾರಾಯಣ ಉನ್ನತ ಶಿಕ್ಷಣ ಸಚಿವರಾಗಿದ್ದಾಗ, ಅವರ ಪರಿಕಲ್ಪನೆ ಮೇಲೆ ಹೊಸ ವಿವಿಗಳನ್ನು ಸ್ಥಾಪಿಸಿದ್ದಾರೆ. ನಾವು ಖಾಸಗಿ ವಿವಿ ಮಾಡಬೇಕಾದರೂ ಕೆಲವು ಮಾನದಂಡಗಳನ್ನು ನಿಗದಿ ಮಾಡಿದ್ದೇವೆ ಎಂದರು.
ವಿದ್ಯಾರ್ಥಿಗಳಿಗೂ ವಿವಿಗಳಿಗೂ ಏನು ಸಂಬಂಧ? ವಿದ್ಯಾರ್ಥಿಗಳು ತಾವುಗಳು ವ್ಯಾಸಂಗ ಮಾಡುತ್ತಿರುವ ಅದೇ ಕಾಲೇಜುಗಳಲ್ಲಿ ವ್ಯಾಸಂಗ ಮುಂದುವರಿಸುತ್ತಾರೆ. ಆದರೆ ಮೈಸೂರು ವಿವಿ, ಮಂಡ್ಯ ವಿವಿ, ಚಾಮರಾಜನಗರ ವಿವಿಗಳನ್ನೇ ಉದಾಹರಣೆಯಾಗಿ ತೆಗೆದುಕೊಂಡು ನೋಡುವುದಾದರೆ, ವಿದ್ಯಾರ್ಥಿಗಳು ಮೈಸೂರು ವಿವಿ ಹೆಸರಲ್ಲಿ ಪದವಿ ಪಡೆಯುದಕ್ಕೂ, ಬೇರೆ ಇತರೆ ವಿವಿ ಹೆಸರಲ್ಲಿ ಪದವಿ ಪ್ರಮಾಣಪತ್ರ ಪಡೆಯುವುದಕ್ಕೆ ಎಷ್ಟು ವ್ಯತ್ಯಾಸವಿದೆ ಎಂದು ವಿವರಿಸಿದರು.
ಬಿಎಸ್ವೈ ಪುತ್ರ ಸದನದಲ್ಲಿದ್ದಾರೆ. ಅವರ ಸಹೋದರಿಯ ಪುತ್ರ ವಿದೇಶಕ್ಕೆ ಹೋಗಿ ವಿದ್ಯಾಭ್ಯಾಸ ಮಾಡಲು ಮುಂದಾದಾಗ. ಅವರು ಪಿಇಎಸ್ ಶಿಕ್ಷಣ ಸಂಸ್ಧೆಯಲ್ಲಿ ಓದಿದ್ದರು. ಅದು ಉತ್ತಮ ಸಂಸ್ಥೆಯಾದರೂ ಅದು ಅಧಿಕೃತ ವಿವಿಯಲ್ಲ ಎಂಬ ಕಾರಣಕ್ಕೆ ಅವರಿಗೆ ವಿದೇಶಿ ವಿವಿಯಲ್ಲಿ ಪ್ರವೇಶಾತಿ ನಿರಾಕರಿಸಲಾಗಿತ್ತು. ಎಸ್.ಎಂ.ಕೃಷ್ಣ ವಿದೇಶಾಂಗ ಸಚಿವರಾಗಿದ್ದಾಗ ಅನೇಕ ಪ್ರಯತ್ನಗಳನ್ನು ಮಾಡಿ ಕೊನೆಗೆ ಅಲ್ಲಿ ಪ್ರವೇಶಾತಿ ಸಿಕ್ಕಿತು. ಇದು ಒಂದು ಉದಾಹರಣೆಯಷ್ಟೇ. ಬೆಂಗಳೂರು, ಮೈಸೂರು ವಿವಿಗಳು ಪ್ರತಿಷ್ಠಿತ ವಿವಿಗಳಾಗಿವೆ. ಈ ವಿವಿಗಳ ಜಾರಿ ಕಾರ್ಯಸಾಧುವಲ್ಲ ಎಂದು ವಿಲೀನ ಮಾಡುತ್ತಿದ್ದೇವೆ ಅಷ್ಟೇ. ಈ ವಿಚಾರವಾಗಿ ನಾವು ಸಮಿತಿಯನ್ನು ರಚಿಸಿ ಅಧ್ಯಯನ ನಡೆಸಿದ್ದೇವೆ ಎಂದು ಹೇಳಿದರು.
‘ನಾನು ಶಿಕ್ಷಣದ ಮೇಲೆ ಆಸಕ್ತಿ ಹೊಂದಿರುವವನೆ’ ಎಂದು ಡಿ.ಕೆ.ಶಿವಕುಮಾರ್ ಹೇಳಿದಾಗ. ವಿಪಕ್ಷ ನಾಯಕ ಆರ್.ಅಶೋಕ್ ‘ನಿಮ್ಮ ಡೈಲಾಗ್ ಅನ್ನು ಮತ್ತೊಮ್ಮೆ ಸಂಪೂರ್ಣವಾಗಿ ಹೇಳಿ’ ಎಂದು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ‘ಇದು ಕೇವಲ ಡೈಲಾಗ್ ಅಲ್ಲ. ನೀವು ಕಳುಹಿಸಿದ ತಿಹಾರ್ ಜೈಲಿಂದ ಬಂದ ನಂತರ ನಾನು ಪಕ್ಷದ ಕಚೇರಿಯಲ್ಲಿ ಈ ಮಾತನ್ನು ಹೇಳಿದ್ದೆ. ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣ ತಜ್ಞ, ಆಸಕ್ತಿಯಲ್ಲಿ ನಾನು ರಾಜಕಾರಣಿ. ನಾನು ವಿದ್ಯಾರ್ಥಿಯಾಗಿದ್ದಾಗ ಹೆಚ್ಚು ಓದಲಿಲ್ಲ. ಫೈನಲ್ ಇಯರ್ ಡಿಗ್ರಿ ಮಾಡುವಾಗ ಪಕ್ಷ ನನ್ನನ್ನು ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿತು. ನಂತರ 47ನೆ ವಯಸ್ಸಿಗೆ ಪದವಿ ಮಾಡಿದೆ ಎಂದು ತಿಳಿಸಿದರು.
‘ನನಗೆ ಶಿಕ್ಷಣ ಕ್ಷೇತ್ರದ ಮೇಲೆ ಹೆಚ್ಚು ಆಸಕ್ತಿ ಇದೆ. ಈ ವಿಚಾರದಲ್ಲಿ ನೀವು ಉತ್ತಮ ಸಲಹೆಗಳನ್ನು ಕೊಟ್ಟರೆ ನಾವು ಅದನ್ನು ಪರಿಗಣಿಸುತ್ತೇವೆ. ಈಗ ನಿರ್ಮಿಸಿರುವ ಹೊಸ ವಿವಿಗಳಲ್ಲಿ ಹೋಗಿ ಕೆಲಸ ಮಾಡಲು ಯಾವುದೇ ಪ್ರಾಧ್ಯಾಪಕರು ಮುಂದೆ ಬರುತ್ತಿಲ್ಲ. ಒಬ್ಬರನ್ನು ಉಪಕುಲಪತಿಗಳನ್ನಾಗಿ ಹಾಗೂ ಮತ್ತೊಬ್ಬರನ್ನು ರಿಜಿಸ್ಟ್ರಾರ್ ಮಾಡಿದರೆ ಅದು ವಿಶ್ವ ವಿದ್ಯಾಲಯವಾಗುತ್ತದೆಯೇ? ಎಂದು ಅವರು ಪ್ರಶ್ನಿಸಿದರು.
ನೀವುಗಳು ವಿವಿಯನ್ನು ವಿಭಾಗ ಮಾಡಿದ್ದೀರಿ. ನಾವು ಆ ವಿವಿಗಳನ್ನು ವಜಾಗೊಳಿಸಲು ಆಗುವುದಿಲ್ಲ. ಹೀಗಾಗಿ ನಾವು ಅವುಗಳನ್ನು ಪ್ರಮುಖ ವಿವಿಗಳ ಜತೆ ವಿಲೀನ ಮಾಡುತ್ತಿದ್ದೇವೆ. ನಮ್ಮ ಹಾಗೂ ನಿಮ್ಮ ನಡುವೆ ಇರುವ ವ್ಯತ್ಯಾಸ ಎಂದರೆ ನೀವು ಜನರನ್ನು ಒಡೆಯುತ್ತೀರಿ, ನಾವು ಜನರನ್ನು ಒಟ್ಟುಗೂಡಿಸುತ್ತೇವೆ ಎಂದು ಪ್ರತಿಪಕ್ಷ ಸದಸ್ಯರ ಕಾಲೆಳೆದರು.







